ಅಕ್ಟೋಬರ್ 15 ಭಾರತೀಯ ಇತಿಹಾಸದಲ್ಲಿ ಬಹಳ ವಿಶೇಷ ದಿನ. 1931 ರ ಈ ದಿನದಂದು ಭಾರತವನ್ನು ಕ್ಷಿಪಣಿ ಮತ್ತು ಪರಮಾಣು ಶಕ್ತಿಯನ್ನಾಗಿ ಮಾಡಿದ ಮಾಜಿ ಅಧ್ಯಕ್ಷ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ರಾಮೇಶ್ವರಂನಲ್ಲಿ ಜನಿಸಿದರು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಕನಸನ್ನು ಕಂಡ ಒಬ್ಬ ಮಹಾನ್ ವಿಜ್ಞಾನಿ, ದೇಶದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಎಂದು ಪರಿಗಣಿಸಲ್ಪಟ್ಟ ಡಾ. ಎ ಪಿ ಜೆ ಅಬ್ದುಲ್ ಕಲಾಂ ವಿಜ್ಞಾನಿ, ರಾಷ್ಟ್ರಪತಿ, ಸಮರ್ಪಿತ ಶಿಕ್ಷಕ ಮತ್ತು ಶಿಕ್ಷಣತಜ್ಞನಾಗಿ ಬಹುಮುಖಿ ಪಾತ್ರಗಳನ್ನು ನಿರ್ವಹಿಸಿದವರು.
ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಣದ ಮೇಲಿದ್ದ ಪ್ರೀತಿಯನ್ನು ಗುರುತಿಸಿ, ವಿಶ್ವಸಂಸ್ಥೆಯು ಅವರ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಅಕ್ಟೋಬರ್ 15 ಅನ್ನು ವಿಶ್ವ ವಿದ್ಯಾರ್ಥಿಗಳ ದಿನವೆಂದು ಘೋಷಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಕನಸು ಕಾಣಿರಿ, ಆ ಕನಸುಗಳು ಆಲೋಚನೆಗಳಾಗಿ ರೂಪಾಂತರಗೊಳ್ಳುತ್ತವೆ. ಮತ್ತು ಆಲೋಚನೆಗಳು ಕ್ರಿಯೆಗೆ ಕಾರಣವಾಗುತ್ತವೆ. ನೀವು ವಿಫಲವಾದರೂ ಅಂದುಕೊಂಡಿದ್ದನ್ನು ಎಂದಿಗೂ ಕೈಬಿಡಬೇಡಿ ಏಕೆಂದರೆ ವಿಫಲತೆ ಕಲಿಕೆಯ ಮೊದಲ ಮೆಟ್ಟಿಲು” ಎಂದ ಅಬ್ದುಲ್ ಕಲಾಂ ಅವರ ವಿದ್ಯಾರ್ಥಿಗಳ ಮೇಲಿನ ಪ್ರೀತಿಯು ಅವರ ಮಾತಿನಲ್ಲಿ, ಕ್ರಿಯೆಯಲ್ಲಿ ಪ್ರತಿಫಲವಾಗುತ್ತಿದ್ದವು.
ಕಲಾಂ ದೇಶದ ನಾಗರಿಕ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದರು ಮತ್ತು ಮಿಲಿಟರಿ ಕ್ಷಿಪಣಿ ಅಭಿವೃದ್ಧಿ ಪ್ರಯತ್ನಗಳನ್ನು ಕೈಗೊಂಡರು. ದೇಶದ ಬಾಹ್ಯಾಕಾಶ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಅವರ ಹೆಗ್ಗುರುತು ಸಾಧನೆಗಳು ಅವರಿಗೆ ‘ಭಾರತದ ಕ್ಷಿಪಣಿ ಮನುಷ್ಯ’ ಎಂಬ ಬಿರುದನ್ನು ತಂದುಕೊಟ್ಟವು.
1960 ರಲ್ಲಿ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಮುಗಿಸಿದ ನಂತರ, ಕಲಾಂ ಅವರು ಭಾರತೀಯ ಸೈನ್ಯಕ್ಕಾಗಿ ಹೆಲಿಕಾಪ್ಟರ್ ಅನ್ನು ವಿನ್ಯಾಸಗೊಳಿಸಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯಲ್ಲಿ ವಿಜ್ಞಾನಿ ಮತ್ತು ವಿಜ್ಞಾನ ನಿರ್ವಾಹಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಲಾಂ ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ, ಡಿಆರ್ಡಿಒ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ, ಭಾರತದ ಪೋಖ್ರಾನ್- II ಪರಮಾಣು ಪರೀಕ್ಷೆಗಳಲ್ಲಿ ಕಲಾಂ ಪ್ರಮುಖ ಪಾತ್ರ ವಹಿಸಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಲ್ಲಿ ತಮ್ಮ ವೃತ್ತಿ ಜೀವನವನ್ನು ಮುಂದುವರೆಸಿದ ಕಲಾಂ 2002 ರಿಂದ ಐದು ವರ್ಷಗಳ ಕಾಲ ಭಾರತದ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮಾನವ ಜೀವಗಳನ್ನು ಉಳಿಸುವಲ್ಲಿ ರಕ್ಷಣಾ ಮತ್ತು ಏರೋಸ್ಪೇಸ್ ತಂತ್ರಜ್ಞಾನದ ಅನ್ವಯಿಕೆಗಳನ್ನು ಪರಿಶೋಧಿಸಿದ ಕಲಾಂ 1994 ರಲ್ಲಿ, ಶಸ್ತ್ರಚಿಕಿತ್ಸಾ ದರ್ಜೆಯ ಸ್ಟೇನ್ಲೆಸ್ ಸ್ಟೀಲ್ನಿಂದ ಸ್ಟೆಂಟ್ ತಯಾರಿಸಿದ್ದು ಭಾರತದಲ್ಲಿ ಹೊಸ ತಲೆಮಾರಿನ ಸ್ಟೆಂಟ್ಗಳ ಉತ್ಪಾದನೆಗೆ ದಾರಿಮಾಡಿಕೊಟ್ಟಿತು.
ರಾಷ್ಟ್ರಪತಿಯಾಗಿ ಅಧಿಕಾರವದಿ ಪೂರ್ಣಗೊಳಿಸಿದ ಕಲಾಂ ತಾವು ಹೆಚ್ಚು ಇಷ್ಟಪಡುವದ ಬೋಧನೆ ಮತ್ತು ಬರವಣಿಗೆ ಕ್ಷೇತ್ರಕ್ಕೆ ಮರಳಿದರು. ʼವಿಂಗ್ಸ್ ಆಫ್ ಫೈರ್: ಆನ್ ಆಟೋಬಯಾಗ್ರಫಿʼ ಮತ್ತು ʼಇಗ್ನೈಟೆಡ್ ಮೈಂಡ್ಸ್: ಅನ್ಲೀಶಿಂಗ್ ದಿ ಪವರ್ ಇನ್ ಇಂಡಿಯಾʼ ಅವರು ಬರೆದ ಅತ್ಯಂತ ಜನಪ್ರಿಯ ಪುಸ್ತಕಗಳು. ವೀಣೆಯನ್ನು ನುಡಿಸಲು ಕಲಿತ ಅವರು ತಮಿಳಿನಲ್ಲಿ ಕವನವನ್ನೂ ಬರೆಯುವ ಅಭ್ಯಾಸ ಹೊಂದಿದ್ದರು.
ಅಬ್ದುಲ್ ಕಲಾಂ ರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಭಾರತ್ ರತ್ನ (1997 ರಲ್ಲಿ) ಪದ್ಮಭೂಷಣ್ (1981 ರಲ್ಲಿ) ಮತ್ತು ಪದ್ಮವಿಭೂಷಣ (1990 ರಲ್ಲಿ) ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ದೊರೆತಿವೆ.
ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಗ್ಗುರುತುಗಳು
1. ಡಾ. ಎ ಪಿ ಜೆ ಅಬ್ದುಲ್ ಕಲಾಂ ಅನೇಕ ಪರಮಾಣು ಪರೀಕ್ಷೆಗಳ ನೇತೃತ್ವ ವಹಿಸಿದ್ದರು. ಅಂದಿನ ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ, ಪೋಖ್ರಾನ್- II ಪರಮಾಣು ಪರೀಕ್ಷೆಗಳ ಮುಖ್ಯಸ್ಥರಾಗಿ ಡಾ. ಕಲಾಂ ಪ್ರಮುಖ ಪಾತ್ರ ವಹಿಸಿದರು
2. ಜುಲೈ 1992 ರಿಂದ ಡಿಸೆಂಬರ್ 1999 ರವರೆಗೆ ಡಾ ಕಲಾಂ ಅವರ ಮೇಲ್ವಿಚಾರಣೆಯಲ್ಲಿ ನಡೆದ ಪರಮಾಣು ಪರೀಕ್ಷೆಗಳು ಭಾರತವನ್ನು ಪರಮಾಣು ಶಕ್ತಿಯನ್ನಾಗಿ ಮಾಡಿತು.
3. ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರು ಭಾರತದ ಎರಡು ಪ್ರಮುಖ ವಿಜ್ಞಾನ ಸಂಶೋಧನಾ ಸಂಸ್ಥೆಗಳಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೇತೃತ್ವ ವಹಿಸಿದ್ದರು.
4. ‘ಸ್ಥಳೀಯ ಮಾರ್ಗದರ್ಶಿ ಕ್ಷಿಪಣಿಗಳ’ ಅಭಿವೃದ್ಧಿ ಮತ್ತು ಕಾರ್ಯಾಚರಣೆಯಲ್ಲಿ ಪ್ರವರ್ತಕ ಕೆಲಸ ಮಾಡಿದ ಹೆಗ್ಗಳಿಕೆಗೆ ಡಾ. ಕಲಾಂ ಪಾತ್ರರಾಗಿದ್ದಾರೆ – (AGNI and PRITHVI)
5. ಅಗ್ನಿ ಮತ್ತು ಪೃಥ್ವಿ ಅವರ ಕೆಲಸಕ್ಕಾಗಿ, ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ‘ಭಾರತದ ಕ್ಷಿಪಣಿ ಮನುಷ್ಯ’ ಎಂದು ಪ್ರೀತಿಯಿಂದ ಕರೆಯಲಾಯಿತು.
6. ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವನ್ನು (SLV) ಅಭಿವೃದ್ಧಿಪಡಿಸುವ ಯೋಜನೆ.
7. ಡಾ. ಕಲಾಂ ಅವರು ಇಸ್ರೋದಲ್ಲಿ ಸ್ಥಳೀಯ ಉಪಗ್ರಹ ಉಡಾವಣಾ ವಾಹನದ ಅಭಿವೃದ್ಧಿಗೆ ಯೋಜನಾ ನಿರ್ದೇಶಕರಾಗಿ 10 ವರ್ಷಗಳ ಕಾಲ ಕೆಲಸ ಮಾಡಿದರು
8. ಜುಲೈ 1980 ರಲ್ಲಿ, ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಮಾರ್ಗದರ್ಶನದಲ್ಲಿ, ಭಾರತದ ಎಸ್ಎಲ್ವಿ -3 ರೋಹಿಣಿ ಉಪಗ್ರಹವನ್ನು ಭೂಮಿಯ ಸಮೀಪ ಕಕ್ಷೆಯಲ್ಲಿ ಯಶಸ್ವಿಯಾಗಿ ನಿಯೋಜಿಸಿ, ಭಾರತವನ್ನು ವಿಶೇಷ ಬಾಹ್ಯಾಕಾಶ ಕ್ಲಬ್ನ ಸದಸ್ಯ ರಾಷ್ಟ್ರವನ್ನಾಗಿ ಮಾಡಿದರು.
9. ಭಾರತದ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಭಿವೃದ್ಧಿಗೆ ಡಾ. ಕಲಾಂ ಯೋಜನೆಗಳನ್ನು ನಿರ್ದೇಶಿಸಿದರು. ಯಶಸ್ವಿ ಎಸ್ಎಲ್ವಿ ಕಾರ್ಯಕ್ರಮದ ಹಿಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಭಿವೃದ್ಧಿಗಾಗಿ ಅವರು ಡೆವಿಲ್ ಮತ್ತು ವೇಲಿಯಂಟ್ ಯೋಜನೆಗಳ ನೇತೃತ್ವ ವಹಿಸಿದ್ದರು.
10. ಎಪಿಜೆ ಅಬ್ದುಲ್ ಕಲಾಂ ಅವರು ಆರೋಗ್ಯ ಕ್ಷೇತ್ರಕ್ಕೆ ಭಾರಿ ಕೊಡುಗೆ ನೀಡಿದ್ದಾರೆ. ಎಲ್ಲರಿಗೂ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡಲು ಅವರು ಶ್ರಮಿಸಿದರು. ಡಾ. ಕಲಾಂ ಅವರು ಹೃದ್ರೋಗ ತಜ್ಞ ಸೋಮಾ ರಾಜು ಅವರೊಂದಿಗೆ ಕೆಲಸ ಮಾಡಿದರು ಮತ್ತು ಕಡಿಮೆ ವೆಚ್ಚದ ಪರಿಧಮನಿಯ ‘ಕಲಾಂ-ರಾಜು ಸ್ಟೆಂಟ್’ ಅನ್ನು ಅಭಿವೃದ್ಧಿಪಡಿಸಿದರು.
ಜುಲೈ 27, 2015 ರಂದು ಐಐಎಂ ಶಿಲ್ಲಾಂಗ್ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿರುವಾಗ ವೇದಿಕೆಯಲ್ಲೇ ಹೃದಯ ಸ್ತಂಭನದಿಂದಾಗಿ ಕುಸಿದು ಬಿದ್ದು ನಿಧನರಾದರು. ಇವರ ಅಗಲಿಕೆ ಭಾರತೀಯ ವಿಜ್ಞಾನ ರಂಗಕ್ಕೆ ಮತ್ತು ಪ್ರತಿಯೊಬ್ಬ ಭಾರತೀಯನಿಗೂ ತುಂಬಲಾರದ ನಷ್ಟವಾಗಿದೆ.