ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡು ಆರು ವರುಷಗಳು ಸಂದವು. ಇದೇ ಸಮಯದಲ್ಲಿ ಕರೋನಾ ದೇಶದೊಂದಿಗೆ ಸೇರಿಕೊಂಡಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಐಕಾನ್ಗಳಾದ ಮಹಾತ್ಮಾ ಗಾಂಧಿ, ಸರದಾರ್ ವಲ್ಲಭಬಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರೀ, ಪಿವಿ ನರಸಿಂಹ ರಾವ್ ಹಾಗೂ ಪ್ರಣಬ್ ಮುಖರ್ಜಿ ಇವರಲ್ಲಿ ಯಾರದರೂ ಒಬ್ಬರ ಹಂತವನ್ನ ಮೋದಿ ತಲುಪುತ್ತಾರೆ ಅನ್ನೋ ಕುತೂಹಲವಿತ್ತು. ಆದರೆ ಕೊನೆ ಪಕ್ಷ ಕರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಾದರೂ ಮನಮೋಹನ್ ಸಿಂಗ್ ಅವರ ಸಲಹೆ ಪಡೆಯಬಹುದಿತ್ತು.
ಆದರೆ ಪ್ರಧಾನಿ ಮೋದಿ ಹಾಗೂ ಅವರ ಭಾರತೀಯ ಜನತಾ ಪಕ್ಷದ ಸಹೋದ್ಯೋಗಿಗಳು ದೇಶದ ಈ ಸ್ಥಿತಿಗೆ ಜವಹರಲಾಲ್ ನೆಹರೂ ಅವರೇ ಕಾರಣ ಎಂದು ನಂಬಿ ಕೂತಿದ್ದಾರೆ. ಆದರೆ ಮೋದಿ ಅವರೇನಾದರೂ ನೆಹರೂ ಅವರು ಬರೆದ ರಾಷ್ಟ್ರ ನಿರ್ಮಣ ಕುರಿತಾದ ಪುಸ್ತಕಗಳ ಒಂದು ಪುಟ ತಿರುವಿದರೂ ಅದರಲ್ಲೊಂದಿಷ್ಟು ಸಲಹೆ ಪಡೆಯಬಹುದಿತ್ತು.
ನೆಹರೂ ಅವರ ಪ್ರಥಮ ಕ್ಯಾಬಿನೆಟ್ ಸಭೆಯಲ್ಲಿ ಮೂವರು ಪ್ರಮುಖರು ಸಲಹೆಗಾರರಿದ್ದರು. ಆರ್ಥಿಕ ಸಚಿವರಾಗಿದ್ದ ಆರ್ಕೆ ಷಣ್ಮುಖಂ ಚೆಟ್ಟಿ, ಕೈಗಾರಿಕಾ ಸಚಿವ ಶ್ಯಾಮ ಪ್ರಸಾದ್ ಮುಖರ್ಜಿ ಹಾಗೂ ಕಾನೂನು ಸಚಿವ ಡಾ. ಬಿಆರ್ ಅಂಬೇಡ್ಕರ್ ಇವರಿದ್ದರು. ಇವರಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ದೇಶದ ಅಬಿವೃದ್ಧಿಗಾಗಿ ಉತ್ತಮ ಗುರಿಯನ್ನೇ ಹೊಂದಿದ್ದರು. ಆದರೆ ಇಂತಹ ಅವಕಾಶ ಮೋದಿ ಅವರಿಗೆ ಇತ್ತಾದರೂ ಮೋದಿ ಅವರು ರಾಜಕೀಯಕ್ಕಿಂತಲೂ ದೇಶವೇ ಮುಖ್ಯ ಅನ್ನೋ ಸಂದೇಶ ಯಾಕಾಗಿ ನೀಡಿಲ್ಲ? ಅನ್ನೋದು ಸಹಜವಾದ ಪ್ರಶ್ನೆ.
ಭಾನುವಾರ (ಮೇ 31) ʼಮನ್ ಕೀ ಬಾತ್ʼ ನಲ್ಲಿ ಮಾತಾಡಿದ್ದ ಪ್ರಧಾನಿ ಮೋದಿ ಅವರು, ಮನೋಸ್ಥೈರ್ಯ ಹೆಚ್ಚಿಸುವ ಸಾಧನೆಗಳನ್ನ, ಸ್ಫೂರ್ತಿ ತುಂಬುವ ಕಥೆಗಳನ್ನ ಹಾಗೂ ಅವರ ರಾಜಕೀಯ ಯಶಸ್ವಿನ ಹಾಗೂ ವೈಫಲ್ಯಗಳ ಕುರಿತು ಹಾಗೂ ವಲಸೆ ಕಾರ್ಮಿಕರ ಕುರಿತು ಮಾತನಾಡಿದರು. ಆದರೆ ದೇಶದ ಒಂದು ವರ್ಗ ತುಂಬಾ ಕಾತರದಿಂದ ಕಾದಿದ್ದು, ಕರೋನಾ ಆರ್ಥಿಕ ಸಂಕಷ್ಟದಿಂದ ಪಾರಾಗಲು ನರೇಂದ್ರ ಮೋದಿ ಅವರು ಯಾವ ಕ್ರಮ ಅನುಸರಿಸುತ್ತಾರೆ ಎಂದು. ಏಕೆಂದರೆ ಈಗಾಗಲೇ ಘೋಷಿಸಿರುವ ʼಆತ್ಮನಿರ್ಭರ ಭಾರತʼ 2014ರಲ್ಲಿ ಘೋಷಿಸಿರುವ ʼಮೇಕ್ ಇನ್ ಇಂಡಿಯಾʼದ 2020 ರ ವರ್ಸನ್ ನಂತಿದೆ.
20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಅನ್ನೇ ಬಿಜೆಪಿ ರಾಜಕಾರಣಿಗಳು ಆರ್ಥಿಕ ಉತ್ತೇಜನೆಯ ಪ್ಯಾಕೇಜ್ ಎನ್ನುತ್ತಿದ್ದಾರೆ. ಆದರೆ ಅರ್ಥಶಾಸ್ತ್ರ ಗೊತ್ತಿರದ ಅವರಿಗೆ ಇದೆಲ್ಲವೂ ಸುಲಭವಾಗಿ ಅರ್ಥವಾಗದು. ಕರೋನಾ ಪೂರ್ವದಲ್ಲಿಯೇ ಇದ್ದ ಆರ್ಥಿಕ ಕುಸಿತದ ಬಗ್ಗೆ ಮಾತಾಡಿರುವವರ ವಿರುದ್ಧ ಇದೇ ಬಿಜೆಪಿ ನಾಯಕರು ವಾಗ್ದಾಳಿಯೂ ನಡೆಸಿದ್ದರು. ಆದರೆ ಈ ಹಿಂದೆ ದೇಶ ಆರ್ಥಿಕ ಕುಸಿತಕ್ಕೊಳಗಾದಾಗಲೆಲ್ಲ ಚೇತರಿಕೆ ಕಂಡಿದೆ. 1990 ರ ಅವಧಿಯಲ್ಲಿ ಪಿವಿ ನರಸಿಂಹ ರಾವ್ ಸಮಯದಲ್ಲಿ ಹಣಕಾಸು ಸಚಿವರಾಗಿ, 2007-08 ರ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಮನಮೋಹನ್ ಸಿಂಗ್ ಅವರು ಆರ್ಥಿಕ ಕುಸಿತದ ವಿರುದ್ಧ ಯಶಸ್ವಿಯಾಗಿ ಭಾರತವನ್ನ ಮೇಲಕ್ಕೆತ್ತಿದವರು.
ಸದ್ಯ ಮೋದಿ ಕ್ಯಾಬಿನೆಟ್ ಸಚಿವರಲ್ಲಿ ಯಾರಿಗೂ ಆತ್ಮಸ್ಥೈರ್ಯ ಕಾಣುತ್ತಿಲ್ಲ. ಹಣಕಾಸು ಸಚಿವರಿಗಂತೂ ಆತ್ಮವಿಶ್ವಾಸವೇ ಇಲ್ಲದಂತಾಗಿದೆ. ಅಥವಾ ಅವರ policy-making ನಲ್ಲಿ ಎಡವುತ್ತಿದ್ದಾರೆ. ಮಾತ್ರವಲ್ಲದೇ ಬಜೆಟ್ ಪೂರ್ವಭಾವಿ ಪ್ರಧಾನ ಮಂತ್ರಿ ಸಭೆಯಲ್ಲೂ ನಿರ್ಮಲಾ ಸೀತರಾಮನ್ ಅನುಪಸ್ಥಿತಿ ಅಚ್ಚರಿ ಮೂಡಿಸಿತ್ತು. ಅಲ್ಲದೇ ಲಾಕ್ಡೌನ್ ಘೋಷಿಸುವ ಮುನ್ನ ಆರ್ಥಿಕ ಸಚಿವರ ಜೊತೆ ನರೇಂದ್ರ ಮೋದಿ ಅವರು ಚರ್ಚಿಸಿದಂತಿಲ್ಲ. ಏಕೆಂದರೆ ಆರ್ಥಿಕ ಪುನಶ್ಚೇತನಕ್ಕೆ ಬೇಕಾದ ಟಾಸ್ಕ್ ಫೋರ್ಸ್ ಗಳನ್ನ ರಚಿಸುತ್ತಲೇ ಲಾಕ್ಡೌನ್ ಘೋಷಿಸಬೇಕಾಗಿತ್ತು. ಆದರೆ ಅದು ಹಾಗಾಗಲಿಲ್ಲ.
ಇದು ಮೋದಿ ನೇತೃತ್ವದ ಸರಕಾರದಲ್ಲಿ ನಿರ್ಮಲಾ ಸೀತರಾಮನ್ ಮಾತ್ರವಲ್ಲ, ಈ ಹಿಂದೆ ಆರ್ಥಿಕ ಸಚಿವರಾಗಿದ್ದ ಅರುಣ್ ಜೇಟ್ಲಿಗೂ ಇಂತಹದ್ದೇ ಜಟಿಲತೆ ಎದುರಾಗಿತ್ತೇನೋ.. ಏಕೆಂದರೆ 2016 ರಲ್ಲಿ 500, 1000 ಮುಖಬೆಲೆ ನೋಟುಗಳ ಮೌಲ್ಯ ಅಪಮೌಲ್ಯಗೊಳಿಸುತ್ತಿದ್ದರೆ ಅದನ್ನೂ ಪ್ರಧಾನ ಮಂತ್ರಿಗಳೇ ದೇಶದ ಮುಂದಿಟ್ಟಿದ್ದರು. ಆದರೆ ಹಣಕಾಸು ಸಚಿವರಾಗಿ ಅರುಣ್ ಜೇಟ್ಲಿ ಪಾತ್ರ ಎಷ್ಟರ ಮಟ್ಟಿಗೆ ಇತ್ತು ಅನ್ನೋದು ಇದುವರೆಗೂ ಗೊತ್ತಾಗಿಲ್ಲ. ಆ ನಂತರ ಹೊಸ ನೋಟ್ಗಳು ಬಿಡುಗಡೆ ಸಂದರ್ಭದಲ್ಲೂ ಪ್ರಧಾನ ಮಂತ್ರಿಗಳೇ ಘೋಷಣೆ ಮಾಡುತ್ತಾರೆ. ಹೆಸರಿಗಷ್ಟೇ ಅರುಣ್ ಜೇಟ್ಲಿ ಅವರನ್ನ ಉಲ್ಲೇಖಿಸುತ್ತಾರೆ.
ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಮೋದಿ ಸೂಕ್ತ ಸಲಹೆಗಳನ್ನ ಪಡೆಯಬೇಕಿತ್ತು. ಅದರಲ್ಲೂ ಮನಮೋಹನ್ ಸಿಂಗ್ ರಂತಹ ಆರ್ಥಿಕ ತಜ್ಞರ ಸಲಹೆ ಅಗತ್ಯವೆನಿಸುತ್ತಿತ್ತು. ಆದರೆ ಮೋದಿ ಅವರು ಅಂತಹ ಪ್ರಯತ್ನಕ್ಕೆ ಕೈ ಹಾಕಲಿಲ್ಲ. ಮನಮೋಹನ್ ಸಿಂಗ್ ಕಾಂಗ್ರೆಸ್ ನಾಯಕರಾದರೂ ಪಕ್ಷದ ಮಟ್ಟಿಗೆ ಐಕಾನ್ ಅನ್ನೋ ಹಾಗೆ ಬಿಂಬಿತವಾಗಿಲ್ಲ. ಸ್ವತಃ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ವೀಡಿಯೋ ಕಾನ್ಫರೆನ್ಸ್ ನಲ್ಲೂ ಮಾಜಿ ಪ್ರಧಾನಿ ಮಂತ್ರಿ ಅವರ ಜೊತೆ ಚರ್ಚೆ ನಡೆಸಿರಲಿಲ್ಲ. ಅರ್ಥಶಾಸ್ತ್ರಜ್ಞರಾದ ಅಭಿಜಿತ್ ಬ್ಯಾನರ್ಜಿ, RBI ಮಾಜಿ ಗವರ್ನರ್ ರಘುರಾಂ ರಾಜನ್ ಅವರ ಜೊತೆಗೆ ಚರ್ಚಿಸಿರುವ ರಾಹುಲ್ ಗಾಂಧಿ ಅವರಿಗೆ ಮನಮೋಹನ್ ಸಿಂಗ್ ಹೆಚ್ಚಾದರೇ? ಅನ್ನೋ ಪ್ರಶ್ನೆ ಉದ್ಭವಿಸುತ್ತದೆ. ಇದು ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ಸ್ವೀಕರಿಸಿದ ರೀತಿಯೇ ಇರಬಹುದು.
ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮನಮೋಹನ್ ಸಿಂಗ್ ಅವರನ್ನ ಆರ್ಥಿಕ ಸಲಹೆಗಾಗಿ ಬಳಸಿಕೊಂಡಿದ್ದರೆ, ಅವರು ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನ ಹೊಡೆದು ಉರುಳಿಸಿದಂತಾಗುತ್ತಿತ್ತು.
ಮೊದಲನೆಯದಾಗಿ, ಮನಮೋಹನ್ ಸಿಂಗ್ ಅವರಿಂದ ಯಾರೂ ಸಲಹೆ ಪಡೆಯದ ಹೊತ್ತಲ್ಲಿ ಪ್ರಧಾನಿ ಮೋದಿ ಅಂತಹ ಪ್ರಯತ್ನಕ್ಕೆ ಮುಂದಾಗುವ ಮೂಲಕ ವಿಭಿನ್ನವಾಗಿ ಗುರುತಿಸಿಕೊಳ್ಳಬಹುದಿತ್ತು. ಇನ್ನು ಎರಡನೆಯದಾಗಿ, ಕಾಂಗ್ರೆಸ್ ಬಿಜೆಪಿ ವಿರುದ್ಧ ನಡೆಸುತ್ತಿದ್ದ ಆರ್ಥಿಕ ಅಸಮರ್ಪಕತೆಯ ವಾಗ್ದಾಳಿಗೂ ಬ್ರೇಕ್ ಬಿದ್ದಂತಾಗಿ ಮೋದಿ ವಿರುದ್ಧ ಧ್ವನಿ ಎತ್ತದಂತಾಗುತ್ತಿತ್ತು. ಕಾರಣ ಮನಮೋಹನ್ ಸಿಂಗ್ ಅವರ ಸಲಹೆಯಿಂದಾಗಿ ಸಾಧಕ-ಬಾಧಕಗಳೆಲ್ಲವೂ ಅವರಿಗೇ ಸಲ್ಲುತ್ತಿತ್ತು. ಇದರಿಂದಾಗಿ ಈ ಗೇಮ್ ನಲ್ಲಿ ಮೋದಿ ಸೋಲಿಸಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ.
ಮೂರನೆಯದಾಗಿ, ಇಂತಹ ಸಂದಿಗ್ಧ ಸಮಯದಲ್ಲಿ ಮೋದಿ ತಮ್ಮ ರಾಜಕೀಯ ಭಿನ್ನತೆ ಮರೆತು ಎದುರಾಳಿ ಪಕ್ಷದವರಿಂದಲೇ ಸಲಹೆ ಪಡೆಯುತ್ತಿದ್ದರೆ ದೇಶದ ಮಟ್ಟಿಗೆ ಅವರು ಇನ್ನೊಬ್ಬ ಬಲಿಷ್ಠ ನಾಯಕನಾಗಿ ಗುರುತಿಸುವಂತಾಗುತ್ತಿತ್ತು. ಇದು ಭವಿಷ್ಯದಲ್ಲೂ ಮೋದಿ ಕೈ ಹಿಡಿಯುತ್ತಿತ್ತು. ಆದರೆ ಮೋದಿ ಅಂತಹ ಅವಕಾಶಗಳನ್ನೆಲ್ಲ ಕೈ ಚೆಲ್ಲಿದ್ದಾರೆ. ಜೊತೆಗೆ ವಿಪಕ್ಷಗಳ ಬಾಯಿಗೆ ಸುಲಭ ತುತ್ತಾಗುತ್ತಲೇ ಇದ್ದಾರೆ.
ಒಂದು ವೇಳೆ ಮನಮೋಹನ್ ಸಿಂಗ್ ಅವರೇನಾದರೂ ಮೋದಿ ಜೊತೆ ಕೆಲಸ ಮಾಡಲು ಮುಂದಾಗಿದ್ದರೆ ಅದರಿಂದಲೂ ಮೋದಿ ಸರಕಾರಕ್ಕೇ ಲಾಭವಿತ್ತು. ಇಂತಹ ಸಂದಿಗ್ಧತೆ ಸಮಯದಲ್ಲೂ ಕಾಂಗ್ರೆಸ್ ರಾಷ್ಟ್ರದ ಪರ ನಿಲ್ಲದೇ ಕೇವಲ ರಾಜಕೀಯವಾಗಿ ಟೀಕಿಸುವುದರಲ್ಲೇ ನಿರತವಾಗಿದೆ ಅನ್ನೋ ಒಂದು ಪದ ಸಾಕಿತ್ತು ಬಿಜೆಪಿಗೆ ಮತ್ತಷ್ಟು ಬಲ ತುಂಬಲು.
ಆದರೆ ಇಂತಹ ಯಾವುದೇ ಲೆಕ್ಕಚಾರಗಳು ನರೇಂದ್ರ ಮೋದಿ ಯಾಕಾಗಿ ಮಾಡಿಲ್ಲ ಅನ್ನೋ ಕುತೂಹಲವಿದೆ. ಒಂದೋ ಏಕಚಕ್ರಾಧಿಪತ್ಯ ರೀತಿ ದೇಶವನ್ನು ಆಳಬೇಕೆಂಬ ಮೋದಿ ಕನಸಿಗೆ ಇದು ಅಡ್ಡಿಯಾಗುತ್ತೆ ಅನ್ನೋ ಭಾವನೆಯೋ ಅಥವಾ ವಿಪಕ್ಷವನ್ನ ದೂರವೇ ಇಡಬೇಕು ಅನ್ನೋ ನಿರ್ಧಾರವೋ ಒಟ್ಟಿನಲ್ಲಿ ಮನಮೋಹನ್ ಸಿಂಗ್ ರಂತಹ ಆರ್ಥಿಕ ತಜ್ಞರನ್ನ ಹತ್ತಿರ ಕರೆಸಿಕೊಂಡಷ್ಟು ಅಂತಹ ಪಕ್ಷಗಳಿಗೆ ಲಾಭವೇ ಜಾಸ್ತಿ.. ಇದೇ ಕಾರಣಕ್ಕಾಗಿ ಜವಹರಲಾಲ್ ನೆಹರೂ ಅವರಿಂದ ಒಂದಿಷ್ಟು ಅನುಭವದ ಪಾಠವನ್ನು ಮೋದಿ ಕಲಿಯಬೇಕಿತ್ತು ಅನ್ನೋ ಮಾತು ಹೆಚ್ಚು ಪ್ರಸ್ತುತ ಎನಿಸಿಕೊಳ್ಳುತ್ತದೆ.