ಕೋವಿಡ್-19 ಸೋಂಕಿನಿಂದಾಗಿ ದೇಶದ ಬರೋಬ್ಬರಿ 15.80 ಲಕ್ಷ ಮಂದಿ ಬಾಧಿತರಾಗಿರುವಾಗ ಪ್ರಧಾನಿ ಮೋದಿಯವರು “ಮಾರಕ ಸಾಂಕ್ರಾಮಿಕದ ನಿರ್ವಹಣೆಯ ವಿಷಯದಲ್ಲಿ ಭಾರತ ಇತರೆಲ್ಲಾ ದೇಶಗಳಿಗಿಂತ ಬಹಳಷ್ಟು ಮುಂದಿದೆ” ಎಂದಿದ್ದಾರೆ. ಜಗತ್ತಿನಾದ್ಯಂತ ಕರೋನಾ ಸೋಂಕಿನ ಮಹಾ ಬಿಕ್ಕಟ್ಟು ಎದುರಿಸುತ್ತಿರುವ ದೇಶಗಳ ಪೈಕಿ ಭಾರತ ಯಾವ ಮಾನದಂಡದಲ್ಲೂ ಆಶಾದಾಯಕ ಸಾಧನೆ ಮಾಡಿಲ್ಲ ಎಂಬುದನ್ನು ಅಂಕಿಅಂಶಗಳು ಸಾರಿ ಹೇಳುತ್ತಿರುವಾಗಲೂ, ಲಾಕ್ ಡೌನ್ ಸೃಷ್ಟಿಸಿದ ಹಾಹಾಕಾರ ಮತ್ತು ಆರೋಗ್ಯ ವ್ಯವಸ್ಥೆಯ ಹೀನಾಯ ಸ್ಥಿತಿಯ ನಡುವೆಯೂ ಪ್ರಧಾನಿಯವರ ಈ ಮಾತು ಈಗ ವ್ಯಾಪಕ ಟೀಕೆ ಮತ್ತು ಅಪಹಾಸ್ಯಕ್ಕೆ ಕಾರಣವಾಗಿದೆ.
ಜಗತ್ತಿನಲ್ಲಿಯೇ ಅತ್ಯಂತ ದೀರ್ಘಾವಧಿಯ ಮತ್ತು ಜನಸಂಖ್ಯಾ ದೃಷ್ಟಿಯಿಂದ ಅತ್ಯಂತ ದುಷ್ಪರಿಣಾಮಕಾರಿಯಾದ ನೂರು ದಿನಗಳ ಲಾಕ್ ಡೌನ್ ಹೇರಿಕೆಯ ಬಳಿಕವೂ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಇಳಿಕೆಯ ಬದಲು, ಆಘಾತಕಾರಿ ಏರಿಕೆ ದಾಖಲಾಗಿದೆ. ಸೋಂಕಿತರ ಚಿತ್ರಣದ ಗ್ರಾಫ್ ತಗ್ಗುವ ಬದಲು ಗಗನಮುಖಿಯಾಗಿ ಏರುತ್ತಲೇ ಸಾಗಿದೆ. ಮತ್ತೊಂದು ಕಡೆ ಲಾಕ್ ಡೌನ್ ನಿಂದಾಗಿ ಕುಸಿದ ಆರ್ಥಿಕತೆ, ಬಸವಳಿದ ಬದುಕು ಸ್ವತಂತ್ರ ಭಾರತದ ಇತಿಹಾಸದಲ್ಲೇ ಕಂಡುಕೇಳರಿಯದ ಪ್ರಮಾಣದ ಹಸಿವು, ಬಡತನ, ನಿರುದ್ಯೋಗ, ಹಾಹಾಕಾರವನ್ನು ಸೃಷ್ಟಿಸಿದೆ. ಕನಿಷ್ಟ ರಾಜ್ಯ ಸರ್ಕಾರಗಳಿಗೆ ಕೊಡಬೇಕಾದ ತೆರಿಗೆ ಬಾಕಿ ಪಾಲು ಕೊಡಲಾಗದ ಮಟ್ಟಿಗೆ ದೇಶದ ಖಜಾನೆ ಖಾಲಿಯಾಗಿದೆ. ಹೀಗೆ ಕಟು ವಾಸ್ತವಗಳು ದಿನ ಬೆಳಗಾದರೆ ಮುಖಕ್ಕೆ ರಾಚುತ್ತಿರುವಾಗಲೂ ದೇಶದ ಅಧಿಕಾರದ ಚುಕ್ಕಾಣಿ ಹಿಡಿದವರು ಹೀಗೆ ಹಸೀ ಸುಳ್ಳುಗಳನ್ನು ಹೇಳಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ವರಸೆ, ನಿರೀಕ್ಷೆಯಂತೆ ಅಪಹಾಸ್ಯ, ವಿಡಂಬನೆ, ವ್ಯಂಗ್ಯದ ಪ್ರತಿಕ್ರಿಯೆಗೆ ತುತ್ತಾಗಿದೆ.
ಹಾಗೆ ನೋಡಿದರೆ, ಕಣ್ಣೆದುರಿನ ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾದ ಕಟು ವಾಸ್ತವಕ್ಕೆ ಬೆನ್ನು ತಿರುಗಿಸಿ, ತಮಗೆ ಬೇಕಾದ, ತಮಗೆ ಅನುಕೂಲಕರವಾದ ಆಯ್ದ ಮಾಹಿತಿ, ತಿರುಚಿದ, ತಪ್ಪು ವ್ಯಾಖ್ಯಾನದ ಮಾಹಿತಿಯನ್ನು ಮುಂದಿಟ್ಟು ಸೋಲನ್ನೇ ಸಾಧನೆ ಎಂದು, ವೈಫಲ್ಯವನ್ನೇ ಹೆಗ್ಗಳಿಕೆ ಎಂದು ಬಿಂಬಿಸುವುದು ಈ ಸರ್ಕಾರ ಮತ್ತು ಅದರ ಚುಕ್ಕಾಣಿ ಹಿಡಿದವರ ಹಳೆಯ ಚಾಳಿ. ಇದು ಹೊಸದೇನಲ್ಲ. ಆದರೆ, ಜೀವ ಕಂಟಕ ಸಾಂಕ್ರಾಮಿಕವೊಂದು ದೇಶದ ಜನರನ್ನು ಸಾವು-ಬದುಕಿನ ಸಂದಿಗ್ದತೆಗೆ ದೂಡಿರುವ ಹೊತ್ತಿನಲ್ಲೂ, ಕಟುಸತ್ಯವನ್ನು ಒಪ್ಪಿಕೊಂಡು ವಾಸ್ತವದ ಪರಿಸ್ಥಿತಿ ಎದುರಿಸುವ ಪ್ರಾಮಾಣಿಕತೆ ತೋರದೆ, ಈಗಲೂ ಕಟ್ಟುಕತೆಗಳಲ್ಲಿ ಜನರ ವಿವೇಚನೆಯನ್ನು ಮರೆಮಾಚುವುದು ದುರಂತ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸೂಕ್ತ ಮತ್ತು ಸಕಾಲಿಕ ಮುಂಜಾಗ್ರತೆ, ಮುಂಚಿತವಾಗಿ ಸೋಂಕು ತಡೆಯ ಕ್ರಮಗಳು ಮತ್ತು ಲಾಕ್ ಡೌನ್ ನಂತಹ ಕ್ರಮಕ್ಕೆ ಮುನ್ನ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಹಾಗೂ ತಳಮಟ್ಟದ ಪರಿಣಾಮಗಳ ಗ್ರಹಿಕೆಯ ವಿಷಯದಲ್ಲಿ ಆದ ವೈಫಲ್ಯಗಳ ಜೊತೆಗೆ ನೂರು ದಿನಗಳ ಅವಧಿಯ ಲಾಕ್ ಡೌನ್ ವೇಳೆ ದೇಶದ ಆಸ್ಪತ್ರೆಗಳು, ವೈದ್ಯಕೀಯ ಸೌಲಭ್ಯ ಮತ್ತು ಸಿಬ್ಬಂದಿ ಸಂಪನ್ಮೂಲ ಹೆಚ್ಚಳದ ವಿಷಯದಲ್ಲಿ ಸರ್ಕಾರ ಎಡವಿದ ಪರಿಣಾಮವೇ ಇಂದಿನ ಈ ವ್ಯಾಪಕ ಸೋಂಕಿಗೆ ಕಾರಣ ಎಂಬುದು ತಳ್ಳಿಹಾಕಲಾಗದ ವಾಸ್ತವ. ಆದರೆ, ಅಂತಹ ವೈಫಲ್ಯಗಳನ್ನು ಮರೆಮಾಚಲು ಪ್ರಧಾನಿಗಳು ಮತ್ತು ಅವರ ಸರ್ಕಾರ ಆಯ್ಕೆಮಾಡಿಕೊಳ್ಳುವುದು ಸಾಂಕ್ರಾಮಿಕದ ವಿಷಯದಲ್ಲಿ ಭಾರತಕ್ಕಿಂತ ಹೆಚ್ಚು ಸಾವು-ನೋವು ಕಂಡ ಮತ್ತು ಅತ್ಯಂತ ತೀವ್ರಗತಿಯ ಸೋಂಕು ಏರಿಕೆ ಕಂಡ ಕೆಲವು ದೇಶಗಳನ್ನು. ಅಲ್ಲಿನ ವಾತಾವರಣ, ಜನರ ರೋಗನಿರೋಧಕ ಶಕ್ತಿ ಮತ್ತು ಸ್ಥಳೀಯ ಸರ್ಕಾರಗಳ ತಪ್ಪು ನಿರ್ಧಾರಗಳಿಂದಾಗಿ ಸಾಂಕ್ರಾಮಿಕದ ಆರಂಭದ ದಿನಗಳಲ್ಲಿ ಯುರೋಪಿನ ಕೆಲವು ದೇಶಗಳಲ್ಲಿ ಭಾರತಕ್ಕಿಂತ ಹೆಚ್ಚು ತೀವ್ರವಾಗಿ ಸೋಂಕು ಹರಡಿದ್ದು ಮತ್ತು ಸಾವುಗಳು ಸಂಭವಿಸಿದ್ದು ನಿಜವೇ. ಆದರೆ, ಅದಕ್ಕೆ ಕಾರಣವಾದ ಅಂಶಗಳನ್ನು ಮರೆತು ಕೇವಲ ತೀವ್ರತೆಯೊಂದನ್ನೇ ಗಮನದಲ್ಲಿಟ್ಟುಕೊಂಡು ನಮ್ಮನ್ನು ನಾವು ಸಮರ್ಥಿಸಿಕೊಳ್ಳಲಾಗದು ಎಂಬುದು ವೈಜ್ಞಾನಿಕ ಮನೋಧರ್ಮ.
ಆದರೆ, ಮೋದಿಯವರು ತಮ್ಮ ಅನುಕೂಲಕ್ಕಾಗಿ, ಹೆಗ್ಗಳಿಕೆಗಾಗಿ ಅಂತಹ ವಾಸ್ತವಾಂಶಗಳನ್ನು ಮರೆತು, ಬೇರೆಯದೇ ಚಿತ್ರ ನೀಡಿದ್ದಾರೆ ಎಂಬುದು ಜಾಗತಿಕ ಮಟ್ಟದಲ್ಲಿ ಸದ್ಯದ ಅಂಕಿಅಂಶಗಳನ್ನು ಗಮನಿಸಿದರೆ ತಿಳಿಯದೇ ಇರದು. ಸದ್ಯ ಸೋಂಕಿತರ ಸಂಖ್ಯೆ, ಸೋಂಕಿನಿಂದ ಮೃತಪಟ್ಟವರ ಸಂಖ್ಯೆ, ಪ್ರತಿ ಮಿಲಿಯನ್(ಹತ್ತು ಲಕ್ಷ) ಜನಸಂಖ್ಯೆಗೆ ಸೋಂಕಿತರು ಮತ್ತು ಮೃತರ ಪ್ರಮಾಣ ಮುಂತಾದ ವಾಸ್ತವಿಕ ಅಂಕಿಅಂಶಗಳನ್ನು ಮುಂದಿಟ್ಟುಕೊಂಡು ಭಾರತದ ಸಾಧನೆಯನ್ನು ಅಳೆದರೆ, ಪ್ರಧಾನಿ ಮತ್ತು ಅವರ ಸರ್ಕಾರದ ಸ್ವಯಂಪ್ರಶಂಸೆಯ ಅಸಲಿಯತ್ತು ಅರಿವಾಗುತ್ತದೆ.
ಸದ್ಯದ ಅಂಕಿಅಂಶಗಳ ಪ್ರಕಾರ, ಕರೋನಾ ಸೋಂಕಿತ ಜಗತ್ತಿನ 213 ದೇಶಗಳ ಪೈಕಿ, ಅತ್ಯಂತ ಅಪಾಯಕಾರಿ ಸ್ಥಾನದಲ್ಲಿರುವ ದೇಶ ಮೊದಲು, ಅತಿ ಕಡಿಮೆ ಸೋಂಕಿತರನ್ನು, ಮರಣ ಪ್ರಮಾಣವನ್ನು ಹೊಂದಿರುವ ದೇಶ ಕೊನೆಯಲ್ಲಿ ಎಂಬ ಆಧಾರದ ಮೇಲೆ ಪಟ್ಟಿ ಮಾಡಿದರೆ, ಭಾರತ ಎಲ್ಲಿ ನಿಲ್ಲುತ್ತದೆ ಎಂಬುದನ್ನು ನೋಡೋಣ;
213 ದೇಶಗಳ ಪೈಕಿ ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತ ಸದ್ಯ ಮೂರನೇ ಸ್ಥಾನದಲ್ಲಿದೆ. ಅಂದರೆ; ಅಮೆರಿಕ ಮತ್ತು ಬ್ರಿಜಿಲ್ ಹೊರತುಪಡಿಸಿ ನಂತರದ ಸ್ಥಾನದಲ್ಲಿ ನಾವಿದ್ದೇವೆ. ಸಕ್ರಿಯ ಪ್ರಕರಣಗಳ ವಿಷಯದಲ್ಲಿಯೂ ನಮ್ಮದು ಮೊದಲ ಸ್ಥಾನಕ್ಕೆ ಇನ್ನೆರಡೇ ಮೆಟ್ಟಿಲು ಬಾಕಿ. ಹಾಗೇ ಕರೋನಾ ಸಾವಿನ ವಿಷಯದಲ್ಲಿ ಕೂಡ ನಾವು ಆರನೇ ಸ್ಥಾನದಲ್ಲಿದ್ದೇವೆ. ಪ್ರತಿ ಮಿಲಿಯನ್ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿತರ ಪ್ರಮಾಣದಲ್ಲಿ ಕೂಡ ನಾವು 99 ನೇ ಸ್ಥಾನದಲ್ಲಿದ್ದು, ಪ್ರತಿ ಮಿಲಿಯನ್ ಜನಸಂಖ್ಯೆಗೆ ಹೋಲಿಸಿದರೆ ಸಾವಿನ ಪ್ರಮಾಣದಲ್ಲಿ ಕೂಡ 98ನೇ ಸ್ಥಾನದಲ್ಲಿದ್ದೇವೆ. ಈ ವಿಷಯದಲ್ಲಿ ಕಡುಬಡತನದ ಇಥಿಯೋಫಿಯಾ, ನೈಜೀರಿಯಾ ಮತ್ತು ಅತ್ಯಂತ ಜನದಟ್ಟಣೆಯ ಬಾಂಗ್ಲಾ, ಇಂಡೋನೇಷ್ಯಾ, ವಿಯೆಟ್ನಾಂಗಳು ನಮಗಿಂತ ಉತ್ತಮ ಮಟ್ಟದಲ್ಲಿ ಇವೆ.
ಅಲ್ಲದೆ, ಜಾಗತಿಕ ಮಟ್ಟದಲ್ಲಿ ಇತರ ಸೋಂಕಿತ ದೇಶಗಳೊಂದಿಗಿನ ನಮ್ಮ ಪರಿಸ್ಥಿತಿಯ ತಾಳೆ ಒಂದು ಕಡೆಯಾದರೆ, ಮತ್ತೊಂದು ಕಡೆ ನಮ್ಮದೇ ದೇಶದಲ್ಲಿ ಪ್ರತಿ ನಿತ್ಯ ವರದಿಯಾಗುವ ಹೊಸ ಪ್ರಕರಣಗಳ ಏರುಗತಿ ಮತ್ತು ಅದರೊಂದಿಗೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣದ ನಡುವಿನ ವ್ಯತ್ಯಾಸವನ್ನು ಗಮನಿಸಿದರೂ, ನಾವು ನಿಜಕ್ಕೂ ಪ್ರಧಾನಿಯವರಂತೆ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವಷ್ಟರ ಮಟ್ಟಿಗಾದರೂ ಸಮಾಧಾನಕರ ಪರಿಸ್ಥಿತಿಯಲ್ಲಿದ್ದೇವೆಯೇ ಎಂಬುದು ತಿಳಿಯದಿರದು.
ಜುಲೈ 30 ರ ಮಾಹಿತಿಯಂತೆ; ಕಳೆದ 24 ತಾಸುಗಳಲ್ಲಿ ವರದಿಯಾದ ಹೊಸ ಪ್ರಕರಣಗಳ ಪ್ರಮಾಣ 52,123. ಅದೇ ಅವಧಿಯಲ್ಲಿ ರೋಗಮುಕ್ತರಾದವರ ಪ್ರಮಾಣ 32,553. ಅಂದರೆ, ಪ್ರತಿನಿತ್ಯ ಹೊಸದಾಗಿ ಸೋಂಕಿತರಾಗುವವರ ಪ್ರಮಾಣ ಮತ್ತು ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣದ ನಡುವೆ ಬರೋಬ್ಬರಿ 20 ಸಾವಿರದಷ್ಟು ವ್ಯತ್ಯಾಸವಿದೆ. ಇದು ಆತಂಕಕಾರಿ ಸಂಗತಿಯೋ? ಅಥವಾ ಹೆಮ್ಮೆಪಡುವ ಸಾಧನೆಯೋ ಎಂಬುದನ್ನು ನೀವೇ ಅಂದಾಜಿಸಿ.
ಹಾಗೆಯೇ, ಸೋಂಕಿನ ತೀವ್ರತೆಯನ್ನು ಅಂದಾಜಿಸುವಾಗ ಪರಿಗಣಿಸುವ ಮತ್ತೊಂದು ಮಾನದಂಡ, ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು ತೆಗೆದುಕೊಳ್ಳುವ ಅವಧಿ. ಜಗತ್ತಿನಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ದೇಶಗಳ ಪೈಕಿ ಸೋಂಕು ದುಪ್ಪಟ್ಟಾಗಲು ತೆಗೆದುಕೊಳ್ಳುವ ಕಾಲಾವಧಿಯ ಪಟ್ಟಿಯಲ್ಲಿ ಕೂಡ ನಾವು ದಕ್ಷಿಣ ಆಫ್ರಿಕಾದ ನಂತರದ ಸ್ಥಾನದಲ್ಲಿದ್ದೇವೆ. ಅಂದರೆ, ಸೋಂಕು ದುಪ್ಪಟ್ಟಾಗುವ ಅವಧಿ 19 ದಿನಗಳ ಮೂಲಕ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದ್ದರೆ, ಆ ಅವಧಿ ಕೇವಲ 21 ದಿನಗಳ ಮೂಲಕ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಅತಿ ಹೆಚ್ಚು ಪ್ರಕರಣಗಳಿರುವ ಅಮೆರಿಕದಲ್ಲಿ ಈ ಅವಧಿ 41 ದಿನಗಳಾಗಿದ್ದರೆ, ಬ್ರಿಜಿಲ್ ನಲ್ಲಿ 33 ದಿನಗಳು. ಅಂದರೆ; ನಾವು ಸೋಂಕಿನ ವಿಷಯದಲ್ಲಿ ಎಷ್ಟು ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ ಎಂದು ಊಹಿಸಬಹುದು.
ಈ ಮೇಲಿನ ಎಲ್ಲಾ ಅಂಶಗಳಲ್ಲಿ ನಾವು ಅಪಾಯಕಾರಿ ಸ್ಥಿತಿಯಲ್ಲೇ ಇದ್ದೇವೆ ಎಂಬ ವಾಸ್ತವ ಕಣ್ಣಿಗೆ ರಾಚುತ್ತಿದೆ. ಆದರೆ, ಅದಕ್ಕಿಂತ ಆಘಾತಕಾರಿ ಸಂಗತಿ ಎಂದರೆ; ಕರೋನಾ ಸೋಂಕಿನ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ನಮ್ಮ ಆಸುಪಾಸಿನಲ್ಲಿರುವ ದೇಶಗಳಿಗೆ ಹೋಲಿಸಿದರೆ, ನಮ್ಮ ವೈರಾಣು ಪರೀಕ್ಷೆಯ ಪ್ರಮಾಣ ಮತ್ತು ಪರೀಕ್ಷೆಯ ಫಲಿತಾಂಶಕ್ಕೆ ತೆಗೆದುಕೊಳ್ಳುವ ಕಾಲಾವಧಿ. ಹೌದು, ಈವರೆಗೆ ಗಮನಿಸಿದ ಮಾಹಿತಿ, ವಿಶ್ಲೇಷಣೆಗಳೆಲ್ಲವೂ ನಿಂತಿರುವುದು ಅಧಿಕೃತವಾಗಿ ಸರ್ಕಾರವೇ ಬಿಡುಗಡೆ ಮಾಡುತ್ತಿರುವ ಸೋಂಕಿನ ಕುರಿತ ಅಂಕಿಅಂಶಗಳ ಮೇಲೆ. ಆ ಸರ್ಕಾರಿ ಅಂಕಿಅಂಶಗಳು ಅವಲಂಬಿಸಿರುವುದು ನಿತ್ಯ ದೇಶಾದ್ಯಂತ ನಡೆಸುವ ಸೋಂಕಿ ಪತ್ತೆ ಪರೀಕ್ಷೆಗಳ ಮೇಲೆ. ಆದರೆ ಸರ್ಕಾರ ಕೂಡ ತಳ್ಳಿ ಹಾಕಲಾಗದ ವಾಸ್ತವವೇನೆಂದರೆ; ನಾವು ಈವರೆಗೂ ನಿರೀಕ್ಷಿತ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸುತ್ತಿಲ್ಲ ಮತ್ತು ನಿಗದಿತ ಅವಧಿಯಲ್ಲಿ ಪರೀಕ್ಷೆಯ ಫಲಿತಾಂಶ ನೀಡುವ ಮೂಲಕ ಸೋಂಕು ಹರುಡುವಿಕೆ ತಡೆಯುವುದು ಕೂಡ ನಮಗೆ ಸಾಧ್ಯವಾಗಿಲ್ಲ!
ಸದ್ಯ ಜಾಗತಿಕವಾಗಿ ಅತಿ ಹೆಚ್ಚು ಪ್ರಕರಣಗಳಿರುವ ಅಮೆರಿಕದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಸರಾಸರಿ 1,71,245 ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಭಾರತದಲ್ಲಿ ಈ ಪ್ರಮಾಣ ಕೇವಲ 13,171! ಇನ್ನು ಸೋಂಕಿತರ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರಿಜಿಲ್ ನಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 59,250 ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಕೊಲಂಬಿಯಾದಂತಹ ಪುಟ್ಟ ರಾಷ್ಟ್ರದಲ್ಲಿ ಕೂಡ ಮಿಲಿಯನ್ ಜನರಿಗೆ 29,511 ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಇನ್ನು ಸೋಂಕಿತರ ಪ್ರಮಾಣದಲ್ಲಿ ವಿಶ್ವ ಮಟ್ಟದಲ್ಲಿ ಭಾರತದ ನಂತರದ ಸ್ಥಾನದಲ್ಲಿರುವ ರಷ್ಯಾ(8.34 ಲಕ್ಷ)ದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಬರೋಬ್ಬರಿ 1,88,911 ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ!
ಅಂದರೆ; ಜಾಗತಿಕವಾಗಿ ನಮ್ಮ ಆಸುಪಾಸಿನಲ್ಲಿರುವ ಯಾವ ದೇಶದೊಂದಿಗೂ ಹೋಲಿಸಲಾಗದಷ್ಟು ಕನಿಷ್ಟ ಸಂಖ್ಯೆಯಲ್ಲಿ ನಾವು ನಿತ್ಯ ವೈರಾಣು ಪರೀಕ್ಷೆಗಳನ್ನು ನಡೆಸುತ್ತಿರುವಾಗಲೇ ಸೋಂಕಿನ ಪ್ರಮಾಣ ಇಷ್ಟೊಂದು ಇದೆ ಎಂದರೆ; ಒಂದು ವೇಳೆ ಇತರ ದೇಶಗಳ ಪ್ರಮಾಣದಲ್ಲಿ ಪರೀಕ್ಷೆ ನಡೆಸಿದರೆ ನಮ್ಮ ಸೋಂಕಿತರ ಸಂಖ್ಯೆ ಎಷ್ಟು ಪಟ್ಟು ಹೆಚ್ಚಾಗಬಹುದು?
ಹಾಗಾದರೆ, ನಾವು ಹೀಗೆ ಹೆಗ್ಗಣ ಒಳಗಿದೆ. ಅದು ಒಳಗೇ ಸತ್ತು ನಾರುತ್ತಿದೆ ಎಂದು ಗೊತ್ತಿದ್ದರೂ, ಅದನ್ನು ಹೊರತೆಗೆದು ದುರ್ನಾತವನ್ನು, ಮುಖಭಂಗವನ್ನು ಎದುರಿಸಿ ಅದರಿಂದ ನಿಜವಾಗಿಯೂ ಪಾರಾಗುವ ಯತ್ನ ಮಾಡದೆ, ಸತ್ತ ಹೆಗ್ಗಣವನ್ನು ಒಳಗೇ ಬಚ್ಚಿಟ್ಟು, ಮೇಲೆ ಸುವಾಸನೆಯ ಮಣ್ಣು ಮೆತ್ತಿ ಆಹ್ಲಾದಕರ ನಗೆ ಬೀರುತ್ತಾ, ನಮ್ಮ ಬೆನ್ನನ್ನು ನಾವೇ ಮತ್ತೆ ಮತ್ತೆ ಚಪ್ಪರಿಸಿಕೊಳ್ಳುತ್ತಾ, ಹೇಳಿದ ಸುಳ್ಳುಗಳನ್ನೇ ಮತ್ತೆ ಮತ್ತೆ ಮೆಲುಕು ಹಾಕುತ್ತಾ ಸುಖಿಸುವ ಹಪಾಹಪಿಯಲ್ಲೇ ಮುಳುಗೋಣವೆ?.