ಐಪಿಎಲ್ ಕ್ರಿಕೆಟ್ ಪ್ರೇಮಿಗಳಿಗೆ ರಸದೌತನ ನೀಡುವ ಕ್ರೀಡಾಕೂಟವಾದರೆ, ಕ್ರಿಕೆಟ್ನಲ್ಲಿ ಸಾಧನೆ ಮಾಡಲು ಬಯಸುವ ಯುವ ಪ್ರತಿಭೆಗಳಿಗೆ ಇದೊಂದು ಸುವರ್ಣಾವಕಾಶ. ಈ ಅವಕಾಶವನ್ನು ಯಶಸ್ವಿಯಾಗಿ ಬಳಸಿಕೊಳ್ಳುವಲ್ಲಿ ಯುವ ಆಟಗಾರರು ಸಫಲರಾಗುತ್ತಿದ್ದಾರೆ. ಅದರಲ್ಲೂ ಅಂಡರ್-19 ಕ್ರಿಕೆಟ್ನಲ್ಲಿ ಆಡಿ ಮಿಂಚಿದಂತಹ ವೇಗದ ಬೌಲರ್ಗಳು ಐಪಿಎಲ್ನಲ್ಲಿಯೂ ತಮ್ಮ ಕರಾಮತ್ತು ಮುಂದುವರೆಸುತ್ತಿದ್ದಾರೆ.
ಬುಧವಾರ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ನಡುವಿನ ಪಂದ್ಯ, ಭಾರತದ ಭವಿಷ್ಯದ ವೇಗಿಗಳಿಗೆ ಉತ್ತಮ ವೇದಿಕೆಯಾಗಿತ್ತು. KKRನ ಶಿವಂ ಮವಿ ಮತ್ತು ಕಮಲೇಶ್ ನಾಗರಕೋಟಿ ಅವರಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿತ್ತು. ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಲ್ಲಿ ಇಬ್ಬರೂ ಸಫಲರಾಗಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವೇಗಿಗಳಿಗೆ ತಮ್ಮ ಫಾರ್ಮ್ ಕಂಡುಕೊಳ್ಳುವುದು ಹಾಗೂ ಅದನ್ನು ಮುಂದುವರಸುವುದು ಕಷ್ಟದ ಕೆಲಸ. ಭಾರತ ಕ್ರಿಕೆಟ್ ತಂಡದಲ್ಲಿ ವೇಗಿಗಳದ್ದೇ ಸಮಸ್ಯೆ. ಸದ್ಯಕ್ಕಂತೂ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆದರೆ, ವೇಗಿಗಳು ಆಗಾಗ್ಗೆ ಗಾಯಗೊಂಡು ಪಂದ್ಯಗಳಿಂದ ಹೊರಗುಳಿಯುವುದು ಅವರ ಫಾರ್ಮ್ಗೆ ಧಕ್ಕೆ ಉಂಟುಮಾಡುತ್ತದೆ.
ಬುಮ್ರಾ, ಶಮಿ ಮತ್ತು ಭುವನೇಶ್ವರ್ ಹೊರತುಪಡಿಸಿ ಭಾರತದಲ್ಲಿ ಇತರ ವೇಗಿಗಳಿದ್ದರೂ, ಅವರಲ್ಲಿ ಬಹುತೇಕರು ಅತ್ಯಂತ ದುಬಾರಿ ಬೌಲರ್ಗಳು. ವಿಕೆಟ್ ಪಡೆದರೂ, ಅತೀ ಹೆಚ್ಚು ರನ್ಗಳನ್ನು ಕೈಚೆಲ್ಲುತ್ತಿರುವುದು ಭಾರತೀಯ ತಂಡಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಇಂತಹ ಸಂದರ್ಭದಲ್ಲಿ ಮವಿ ಮತ್ತು ನಾಗರಕೋಟಿ ಭಾರತದ ಭವಿಷ್ಯದ ವೇಗಿಗಳಾಗಲು ನಾವೇನು ಕಮ್ಮಿಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ಶಿವಂ ಮವಿ ನಿನ್ನೆ ತಾವು ಎಸೆದ ನಾಲ್ಕು ಓವರ್ಗಳಲ್ಲಿ ಕೇವಲ 20 ರನ್ ನೀಡಿ ಎರಡು ವಿಕೆಟ್ ಕಬಳಿಸಿದ್ದಾರೆ. ಇನ್ನು ನಾಗರಕೋಟಿ ಎರಡು ಓವರ್ಗಳಲ್ಲಿ 13 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ಶೈಲಿ ಮತ್ತು ಸ್ವಿಂಗ್ ಇವರ ಪ್ರಮುಖ ಅಸ್ತ್ರಗಳು.
ಈವರೆಗೆ ಮವಿ ಐಪಿಎಲ್ನಲ್ಲಿ ಒಟ್ಟು 12 ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದಾರೆ. ಸತತವಾಗಿ ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಇವರು ಭಾರತದ ಅಂಡರ್ 19 ತಂಡ 2018ರಲ್ಲಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂಪೂರ್ಣ ಟೂರ್ನಿಯಲ್ಲಿ 4.12ರ ಉತ್ತಮ ಎಕಾನಮಿ ರೇಟ್ ಹೊಂದಿದ್ದ ಮವಿ ಒಟ್ಟು ಒಂಬತ್ತು ವಿಕೆಟ್ ಪಡೆದಿದ್ದರು.
ಇನ್ನು ಕಮಲೇಶ್ ನಾಗರಕೋಟಿ ಕೂಡಾಉತ್ತಮ ಫಾರ್ಮ್ನಲ್ಲಿದ್ದು, ಇವರೂ ಕೂಡಾ ಭಾರತದ ಭವಿಷ್ಯದ ವೇಗಿ ಎಂದೇ ಹೇಳಬಹುದು. ಸರಾಸರಿಯಾಗಿ ಗಂಟೆಗೆ 140 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಇವರು ಕೂಡಾ ಅಂಡರ್ 19 ವಿಶ್ವಕಪ್ ತಂಡದಲ್ಲಿ ಆಡುವಾಗ 3.48ರ ಎಕಾನಮಿಯೊಂದಿಗೆ ಒಂಬತ್ತು ವಿಕೆಟ್ ಪಡೆದಿದ್ದರು.
ಭಾರದಲ್ಲಿ ಮಧ್ಯಮ-ವೇಗಿಗಳ ಕೊರತೆಯಿಲ್ಲದಿದ್ದರೂ, ವೇಗಿಗಳ ಕೊರತೆ ಸದಾ ಕಾಡುತ್ತಲೇ ಇರುತ್ತದೆ. ಭಾರತೀಯ ಪಿಚ್ಗಳಲ್ಲಿ ಮಧ್ಯಮ ವೇಗಿಗಳು ಉತ್ತಮ ನಿರ್ವಹಣೆ ತೋರಿದರೂ, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ನಂತಹ ಪಿಚ್ಗಳಲ್ಲಿ ಮಧ್ಯಮ ವೇಗಿಗಳು ವಿಫಲರಾಗಿರುವ ಸಂದರ್ಭಗಳು ಸಾಕಷ್ಟಿವೆ. ಈ ನಿಟ್ಟಿನಲ್ಲಿ ಶಿವಂ ಮವಿ ಮತ್ತು ನಾಗರಕೋಟಿ ಅವರ ವೇಗವನ್ನು ಮತ್ತಷ್ಟು ಬೆಳೆಸಿದಲ್ಲಿ ಭಾರತದ ಭವಿಷ್ಯದ ಕ್ರಿಕೆಟ್ ತಂಡದ ಪ್ರಮುಖ ವೇಗಿಗಳಾಗುವುದರಲ್ಲಿ ಸಂಶಯವಿಲ್ಲ. ಇನ್ನು ಈಗಿರುವ ಪ್ರಮುಖ ವೇಗಿಗಳು ಗಾಯಾಳಾದಾಗ ಅವರ ಸ್ಥಾನವನ್ನು ಸಮರ್ಥವಾಗಿ ತುಂಬುವ ವಿಶ್ವಾಸವಿದೆ.