ʼನಮ್ಮಣ್ಣ, ಹಿರಿಯ ಶಾಸಕ ಉಮೇಶ ಕತ್ತಿ ಡೈಮಂಡ್. ಅವರಿಗೆ ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ’ ಎಂದು ಉಮೇಶ್ ಕತ್ತಿ ಸಹೋದರ ರಮೇಶ ಕತ್ತಿ ಹೇಳಿದ್ದಾರೆ.
ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ರಮೇಶ್, ‘ಈ ಬಾರಿ ಬಿಜೆಪಿ ಸರ್ಕಾರ ರಚನೆಯಾಗಲು 17 ಮಂದಿ ಹೊರಗಿನಿಂದ ಬಂದವರು ಕಾರಣ. ಅವರಿಗೆ ಅವಕಾಶ ಕೊಡಬೇಕಿರುವುದರಿಂದ ನಮ್ಮಣ್ಣ ತ್ಯಾಗ ಮಾಡಬೇಕಾಗಿ ಬಂದಿದೆ. ಪಕ್ಷವು ನಮಗೆ ಇಷ್ಟೆಲ್ಲ ಕೊಟ್ಟಾಗ ನಾವೂ ಸ್ವಲ್ಪ ತ್ಯಾಗ ಮಾಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಪಕ್ಷದ ವರಿಷ್ಠರು ಉಮೇಶ್ ಕತ್ತಿಯವರಿಗೆ ಸೂಕ್ತ ಸ್ಥಾನಮಾನ ಕೊಡುತ್ತಾರೆ ಅನ್ನುವ ಭರವಸೆ ನನಗಿದೆ’ ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೇ ವೇಳೆ, ಪ್ರತ್ಯೇಕವಾಗಿ ಉಮೇಶ ಕತ್ತಿ ಕೂಡಾ ಸಚಿವ ಸ್ಥಾನದ ಕುರಿತು ಮಾತನಾಡಿದ್ದರು, ‘ನನ್ನ ಅನುಭವ ಹಾಗೂ ಯೋಗ್ಯತೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುತಿಸುತ್ತಾರೆ. ಸಂಪುಟದಲ್ಲಿ ಸಚಿವ ಸ್ಥಾನ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ. ನಾನೊಬ್ಬ ನುರಿತ ರಾಜಕಾರಣಿ. 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಬಿಎಸ್ ವೈ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ. ಸಚಿವ ಕೊಟ್ಟರೇ ಸಂತೋಷ ಕೊಡದಿದ್ದರೂ ಸಂತೋಷ ಎಂದು ಹೇಳಿದ್ದಾರೆ.
ಸಚಿವ ಸ್ಥಾನಕ್ಕಾಗಿ ನಾನು ಯಾರೊಬ್ಬರ ಬೆನ್ನು ಹತ್ತಿ ಹೋಗಲ್ಲ. ಸಚಿವ ಸ್ಥಾನ ನೀಡಿದರೆ ಕೆಲಸ ಮಾಡಿ ತೋರಿಸುತ್ತೇನೆ. ಇಲ್ಲವಾದಲ್ಲಿ ಶಾಸಕನಾಗೇ ಮುಂದುವರೆಯುತ್ತೇನೆ. ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೇ ಕೆಲಸ ಮಾಡುತ್ತೇನೆ. ದೀಪಾವಳಿ ಮುಗಿದ ಬಳಿಕ ಸಂಪುಟ ವಿಸ್ತರಣೆ ಎಂದಿದ್ದಾರೆ. ಬಿಎಸ್ ಯಡಿಯೂರಪ್ಪ ಮಂತ್ರಿ ಮಾಡುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.