ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಸಾಗಿದೆ. 31 ಲಕ್ಷ ಗಡಿ ದಾಟಿರುವ ಕರೋನಾ ಸೋಂಕಿಗೆ ಸಿಲುಕಿರುವ ಜನ ಪ್ರಾಣ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ, ಸೋಂಕಿನ ವಿರುದ್ಧ ಆರೋಗ್ಯ ಸಿಬ್ಬಂದಿ ಜೊತೆ ಸೆಣಸಾಡುತ್ತಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವವರ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗನ್ನೇ ತೊರೆದು ಕೆಲಸ ಮಾಡುತ್ತಿದ್ದಾರೆ.
ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ ಗಳು, ಹೌಸ್ ಕೀಪಿಂಗ್ ಮಹಿಳೆಯರು, ರೋಗಿಗಳ ಸಹಾಯಕರು (ವಾರ್ಡ್ ಬಾಯ್ಸ್) ಸೇರಿದಂತೆ ಸಾಕಷ್ಟು ಜನರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಗಳು ಸೇರಿದಂತೆ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಬಹುತೇಕ ಜನ ಸರ್ಕಾರಿ ನೌಕರರಲ್ಲ. ಬರುವ ಸಣ್ಣ ಸಂಬಳಕ್ಕಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಕರೋನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಜನರಿಗೇ ಇದೀಗ ಆತಂಕ ಎದುರಾಗಿದೆ.
ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ 50 ಜನ ಆರೋಗ್ಯ ಸಿಬ್ಬಂದಿ ಪುರುಷ ಶುಶ್ರೂಷಕರಲ್ಲಿ ಕರೋನಾ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿತ್ತು. ಇದ್ರಿಂದ 50 ಜನರಲ್ಲಿ ಕರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಇದನ್ನು ಕೇಂದ್ರ ಆರೋಗ್ಯ ಇಲಾಖೆಯಿಂದಲೇ ಮಾಹಿತಿ ನೀಡಲಾಗಿತ್ತು. ಇನ್ನೂ ದೆಹಲಿಯ ಆಸ್ಪತ್ರೆಗಳಲ್ಲಿ ಕರೋನಾ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ಕಳೆದ ಭಾನುವಾರ ಒಂದೇ ದಿನ ಆರೋಗ್ಯ ಸೇವೆ ಸಲ್ಲಿಸುತ್ತಿರುವ 51 ಜನರಲ್ಲಿ ಸೋಂಕು ಪತ್ತೆಯಾಗಿದೆ. ರೋಹಿಣಿಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಒಟ್ಟು 32 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಗಜೀವನರಾಮ್ ಆಸ್ಪತ್ರೆಯಲ್ಲಿ 19 ನರ್ಸ್ ಗಳಲ್ಲೂ ಕರೋನಾ ಪಾಸಿಟಿವ್ ಬಂದಿದೆ.
ಏಮ್ಸ್ ಆಸ್ಪತ್ರೆಯ ನರ್ಸ್ ಹಾಗೂ ಆಕೆಯ ಇಬ್ಬರು ಮಕ್ಕಳಲ್ಲೂ ಸೋಂಕು ಕಾಣಿಸಿಕೊಂಡಿದೆ. ಇನ್ನೂ ಸಫ್ದರ್ಜಂಗ್ ಆಸ್ಪತ್ರೆ ಹಾಗೂ ಸರ್ದಾರ್ ಪಟೇಲ್ ಆಸ್ಪತ್ರೆ ವೈದ್ಯರಲ್ಲೂ ಕರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಈ ಘಟನೆ ದೇಶಾದ್ಯಂತ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ದೆಹಲಿಯಲ್ಲಿ 100 ಮಂದಿ ಕರೋನಾ ಸೋಂಕಿಗೆ ತುತ್ತಾಗಿದ್ದಾರೆ, ಮುಂಬೈನಲ್ಲಿ 50ಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗಿದ್ದಾರೆ. ಕೊಲ್ಕತ್ತಾದಲ್ಲೂ ಕರೋನಾ ಸೋಂಕಿನಿಂದ ವೈದ್ಯರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದ್ದು, ಹೃದ್ರೋಗ (ಕಾರ್ಡಿಯಾಲಜಿ) ವಿಭಾಗದಲ್ಲಿ ಬಂದ್ ಮಾಡಲಾಗಿದೆ. ಕರ್ನಾಟಕದಲ್ಲೂ ಕೆಲವೊಂದು ಸಣ್ಣಪುಟ್ಟ ಆಸ್ಪತ್ರೆಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಆದರೆ, ವೈದ್ಯರಿಗೆ ಸ್ವಯಂ ರಕ್ಷಣಾ ಕಿಟ್ ಕೊಡಲಾಗಿದೆ. ಆದರೂ ಸೋಂಕು ಹರಡುತ್ತಿರುವುದು ವೈದ್ಯಲೋಕವನ್ನು ಬೆಚ್ಚಿ ಬೀಳಿಸಿದೆ. ಇತ್ತೀಚಿಗೆ ಚೀನಾದಿಂದ ಬಂದಿದ್ದ PPE (Personal protective equipment)ಗಳು ದೋಷಪೂರಿತ ಎನ್ನುವ ವರದಿಗಳು ಬಂದಿದ್ದು, ಚಿಕಿತ್ಸೆ ನೀಡುತ್ತಿರುವ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಯಲ್ಲಿ ಆತಂಕವನ್ನು ಉಂಟು ಮಾಡಿದೆ.
ಸಾರ್ವಜನಿಕರ ರಕ್ಷಣೆಗೆ ಭಾರತ ಸರ್ಕಾರ ಸೇರಿದಂತೆ ಎಲ್ಲಾ ರಾಜ್ಯಗಳು ಕೋಟಿ ಕೋಟಿ ಹಣವನ್ನು ಕರೋನಾ ಎಂಬ ಹೊಳೆಯಲ್ಲಿ ಹರಿಬಿಟ್ಟಿವೆ. ಆದರೆ ವೈದ್ಯರಿಗೆ ಸಿಗಬೇಕಿದ್ದ ರಕ್ಷಣೆ ಮಾತ್ರ ಸಿಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ವೈದ್ಯರು ಕರೋನಾ ಸೋಂಕಿಗೆ ತುತ್ತಾದರೆ, ಸಾಮಾನ್ಯ ಮನುಷ್ಯರಿಗೆ ಚಿಕಿತ್ಸೆ ಕೊಡುವುದು ಯಾರು..? ಎಂಬ ಬಗ್ಗೆಯೂ ಯಾರೂ ಚಿಂತನೆ ಮಾಡಿಲ್ಲ. ಹೌದು, ವೈದ್ಯರು ಸೋಂಕಿಗೆ ತುತ್ತಾದರೆ ಮತ್ತಷ್ಟು ರೋಗಿಗಳಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹರಡುವ ಸಾಧ್ಯತೆ ದಟ್ಟವಾಗಿದೆ. ಅಥವಾ ಒಂದು ವೇಳೆ ವೈದ್ಯರಿಗೆ ಸೋಂಕು ಕಾಣಿಸಿಕೊಂಡಿದೆ ಎನ್ನುವ ಕಾರಣಕ್ಕೆ ಆಸ್ಪತ್ರೆಗಳನ್ನೇ ಬಂದ್ ಮಾಡುತ್ತಾ ಹೋಗುವುದಾದರೆ ಮುಂದಿನ ದಿನಗಳಲ್ಲಿ ಕರೋನಾ ಸೋಂಕಿತರ ಜೊತೆಗೆ ಬೇರೆ ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಕೊಡುವುದು ಯಾರು..?
ಅದಕ್ಕಾಗಿಯೇ ಕರೋನಾ ವೈದ್ಯರನ್ನು ರಕ್ಷಣೆ ಮಾಡುವ ಕೆಲಸವನ್ನೂ ಮಾಡಬೇಕಿದೆ. ಪ್ರತಿ ತಿಂಗಳಿಗೊಮ್ಮೆಯಾದರೂ ಕರೋನಾ ಸೋಂಕಿನ ತಪಾಸಣೆ ಮಾಡಿಸಬೇಕಿದೆ. ಇಲ್ಲದಿದ್ದರೆ ಸಮಾಜ ಕಣ್ಣುಗಳಾಗಿರುವ ವೈದ್ಯರು ಕರೋನಾ ಸೋಂಕಿಗೆ ತುತ್ತಾಗುತ್ತಲೇ ಮುಂದುವರಿದರೆ ಇಡೀ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.