ಲಡಾಖ್ ಗಡಿಭಾಗದಲ್ಲಿ ಭಾರತ ಚೀನಾ ಸೈನ್ಯದ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಪದೇ ಪದೇ ಭಾರತದೊಂದಿಗೆ ಗಡಿ ಕ್ಯಾತೆ ಎತ್ತುತ್ತಿರುವ ಚೀನಾ, ಕಳೆದ ಕೆಲವು ದಿನಗಳಿಂದ ಭಾರತವನ್ನು ವಿನಾ ಕಾರಣ ಪ್ರಚೋದಿಸುತ್ತಿದೆ.
ಚೀನಾದೊಂದಿಗೆ ಸಂಘರ್ಷದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಪ್ರಧಾನಿ ಮೋದಿ ಸರ್ವ ಪಕ್ಷ ಸಭೆ ಕರೆದಿದ್ದಾರೆ.
ಆದರೆ ಇದೀಗ ಭಾರತದ ಆಜ್ತಕ್ ಸುದ್ದಿ ಸಂಸ್ಥೆಯ ನಿರೂಪಕಿ ಭಾರತೀಯ ಸೇನೆಯ ವಿರುದ್ಧ ಹೇಳಿಕೆ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಶ್ವೇತಾ ಸಿಂಗ್ ಕ್ಷಮೆ ಕೇಳಬೇಕೆಂದು ಟ್ವಿಟರ್ ಬಳಕೆದಾರರು ಆಗ್ರಹಿಸಿ #SenaSeMaafiMaangoAajTak ಎಂದು ಟ್ವಿಟರಿನಲ್ಲಿ ಹ್ಯಾಷ್ಟ್ಯಾಗ್ ಟ್ರೆಂಡ್ ಶುರು ಮಾಡಿದ್ದಾರೆ.
ಚೀನಾ-ಭಾರತ ನಡುವಿನ ಸಂಘರ್ಷಕ್ಕೆ ಕುರಿತಂತೆ ಆಜ್ತಕ್ ಚಾನೆಲ್ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮದ ನಡುವೆ ಮೋದಿ ಆಡಳಿತದ ಕೇಂದ್ರ ಸರ್ಕಾರವನ್ನು ರಕ್ಷಿಸಲು, ಗಡಿಯಲ್ಲಿ ನಡೆದ ಸಂಘರ್ಷವನ್ನು ಸೇನೆಯ ವೈಫಲ್ಯದಂತೆ ಬಿಂಬಿಸಿದ್ದಾರೆಂಬ ಆರೋಪ ಕೇಳಿಬರುತ್ತಿದೆ.
ವೈರಲ್ ಆಗಿರುವ ವೀಡಿಯೋ ತುಣುಕಲ್ಲಿ, ಗಡಿಯಲ್ಲಿ ನಡೆದ ಸಂಘರ್ಷಕ್ಕೆ ಸೇನೆಯೇ ಹೊಣೆಯಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಬಾರದು ಎಂದಿದ್ದಾರೆ. ವೀಡಿಯೋ ವೈರಲ್ ಆಗಿರುವ ಬೆನ್ನಿಗೆ ನಿರೂಪಕಿಯ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದೆ. “ನೀವು ಈ ಸಮಯದಲ್ಲಾದರೂ ಸರ್ಕಾರದ ಪರ ಮಾತನಾಡದೆ, ದೇಶದ ಪರ ಮಾತನಾಡಬೇಕೆಂದು ನಾವು ಬಯಸುತ್ತೇವೆ” ಎಂದು ಟ್ವೀಟ್ ಬಳಕೆದಾರರೊಬ್ಬರು ಆಗ್ರಹಿಸಿದ್ದಾರೆ.
ತನ್ನ ವಿರುದ್ಧದ ಆರೋಪವನ್ನು ತಿರಸ್ಕರಿಸಿರುವ ನಿರೂಪಕಿ, ಕೇವಲ ಹತ್ತು ಸೆಕಂಡ್ ವೀಡಿಯೋವನ್ನು ವೈರಲ್ ಮಾಡುವುದರಿಂದ ಸತ್ಯಾವಸ್ಥೆ ಗೊತ್ತಾಗುವುದಿಲ್ಲ. ಪೂರ್ತಿ ವೀಡಿಯೋ ಹಾಕಲು ಭಯವೇ ಎಂದು ಟ್ವೀಟ್ ಮಾಡಿದ್ದಾರೆ.