ಅಭಿವೃದ್ಧಿ ಹೊಂದದೇ ಕೊರಗುತ್ತಿರುವ ಹೊಸನಗರವನ್ನು ಜನಸಂಖ್ಯೆಯ ಆಧಾರದಲ್ಲಿ ವಿಧಾನಸಭಾ ಕ್ಷೇತ್ರ ಮರುವಿಂಗಡಣೆ ಹೆಸರಲ್ಲಿ 2008ರಲ್ಲಿ ಹರಿದು ಹಂಚಲಾಗಿದೆ. ದಶಕದ ನಂತರವೂ ಕೊರಗುತ್ತಿರುವ ತಾಲೂಕಿನ ಪುನಶ್ಚೇತನಕ್ಕೆ ಹಿರಿಯ ಹಾಗೂ ಕಿರಿಯ ತಲೆಮಾರುಗಳು ಟೊಂಕ ಕಟ್ಟಿ ನಿಂತಿವೆ. ಹೊಸನಗರ ವಿಧಾನಸಭಾ ಕ್ಷೇತ್ರದ ಹಕ್ಕೊತ್ತಾಯಕ್ಕೆ ಈ ಭಾಗದ ಸಾಮಾಜಿಕ ಕಾರ್ಯಕರ್ತ ಹಾಗೂ ವಿಶಿಷ್ಟ ಶೈಲಿಯ ಹೋರಾಟಗಾರ ರಿಪ್ಪನ್ಪೇಟೆಯ ಟಿ ಆರ್ ಕೃಷ್ಣಪ್ಪ ಮುಂದಾಳತ್ವ ವಹಿಸಿದ್ದು, ಯುವಜನತೆಯನ್ನು ಎಚ್ಚರಿಸಿದ್ದಾರೆ.
2008ರಲ್ಲಿ ಹೊಸನಗರ ತಾಲೂಕನ್ನು ತೀರ್ಥಹಳ್ಳಿ ಹಾಗೂ ಸಾಗರ ವಿಧಾನಸಭಾ ಕ್ಷೇತ್ರಗಳಿಗೆ ವಿಂಗಡಿಸಲಾಯ್ತು. ಕಳೆದ ವರ್ಷ ಕಿಮ್ಮನೆ ರತ್ನಾಕರ್ ಹಾಗೂ ಕಾಗೋಡು ತಿಮ್ಮಪ್ಪನವರಿಂದ ನುಣುಚಿಕೊಂಡಿರುವ ತಾಲೂಕು ಈಗ ಆರಗ ಜ್ಞಾನೇಂದ್ರ ಹಾಗೂ ಹರತಾಳು ಹಾಲಪ್ಪನವರ ಮಧ್ಯೆ ಸಿಲುಕಿಕೊಂಡಿದೆ. ಕ್ಷೇತ್ರ ಹಂಚಿಕೆಯ ನಂತರ ಎರಡು ಶಾಸಕರ ಮಧ್ಯೆ ಈ ತಾಲೂಕು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಲಾಡ್ಜ್ ರೂಂಗಳ ತರಹ ಪಕ್ಷದ ಕಚೇರಿಗಳನ್ನು ಮಾಡಿಕೊಂಡು ವಿಸಿಟಿಂಗ್ ಪ್ರೊಫೆಸರ್ಗಳ ತರಹ ಬರುವ ಶಾಸಕರಿಂದ ಅಭಿವೃದ್ಧಿ ಅಸಾಧ್ಯ ಎಂಬುದು ಇಲ್ಲಿನ ಜನರ ಅಳಲು.
ಹಿರಿಯ ಪತ್ರಕರ್ತರೊಬ್ಬರು ಮಾತನಾಡುತ್ತ, ಹೊಸನಗರದ ಈ ದುಸ್ಥಿತಿಗೆ ಕಾರಣ ಅಲ್ಲಿನ ರಾಜಕಾರಣಿಗಳು ಕಾರಣ ಎನ್ನುತ್ತಾರೆ. “ಕೆಲವು ರಾಜಕಾರಣಿಗಳು ಹಾಗೂ ಶಾಸಕರನ್ನಾಗಿ ಪಡೆದಿದ್ದೇ ನಮ್ಮ ದುರಾದೃಷ್ಟ. ಅಂದು ನನ್ನ ಗಮನಕ್ಕೆ ಬಂದಂತೆ ಕ್ಷೇತ್ರ ಮರುವಿಂಗಡಣೆಯಲ್ಲಿ ಸೊರಬದ ಹೆಚ್ಚು ಭಾಗಗಳನ್ನು ಸಾಗರಕ್ಕೆ ಸೇರಿಸಬೇಕಿತ್ತು. ಆದರೆ ಅದೆಲ್ಲಾ ಬಂಗಾರಪ್ಪನವರ ರಾಜಕೀಯದಿಂದ ಅದಲು ಬದಲಾಗಿ ನಾವು ಸೇರಿಕೊಂಡೆವು. ಶರಾವತಿ ಹಿನ್ನೀರು ಇಡೀ ತಾಲೂಕನ್ನೇ ಮುಳುಗಿಸಿದೆ. ವಾರಾಹಿ, ಚಕ್ರಾದಂತಹ ಸಣ್ಣಪುಟ್ಟ ಜಲಾಶಯಗಳೆಲ್ಲಾ ನಮ್ಮಲ್ಲೇ ಇವೆ. ಲಕ್ಷಾಂತರ ಮಂದಿ ಕೊಡಚಾದ್ರಿ ಚಾರಣಕ್ಕೆ ಬರುತ್ತಾರೆ, ಪ್ರವಾಸಿಗರ ಸ್ವರ್ಗದಂತಿರುವ ಹೊಸನಗರ ವಿಧಾನಸಭಾ ಕ್ಷೇತ್ರವಾಗಿರದೇ ಅಸ್ತಿತ್ವವನ್ನೇ ಕಳೆದುಕೊಂಡಿದೆ, ರಾಜ್ಯದಲ್ಲೇ ಅತೀಹೆಚ್ಚು ಮಳೆಬೀಳುವ ಪ್ರದೇಶ ಎಂದು ಖ್ಯಾತಿಯಾಗಿರುವ ಹುಲಿಕಲ್ನಲ್ಲಿ ಬೇಸಿಗೆ ಬಂತೆಂದರೆ ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ಈ ಭಾಗ ತೀರ್ಥಹಳ್ಳಿ-ಆ ಭಾಗ ಸಾಗರದ ಮಧ್ಯೆ ಕನಿಷ್ಟ ಸೌಲಭ್ಯಗಳಿರದ ಪಟ್ಟಣ ಹೊಸನಗರವನ್ನು ನೋಡಿ ರೋಸಿ ಹೋಗಿದ್ದೇವೆ. ಮುಂದಿನ ಕ್ಷೇತ್ರ ಪುನರ್ವಿಂಗಡನೆ ಸಮಯದಲ್ಲಾದರೂ ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆಯಾಗಲಿ ಎಂಬುದು ನಮ್ಮ ಕೋರಿಕೆ,’’ ಎನ್ನುತ್ತಾರೆ.
ಇದೆಲ್ಲವೂ ನಿಜ, ಮುಳುಗಡೆಯಾದವರನ್ನೆಲ್ಲ ಒಕ್ಕಲೆಬ್ಬಿಸಿದ ಮೇಲೆ ಜನರೆಲ್ಲಿ? ಭೌಗೋಳಿಕವಾಗಿ ಬೃಹದಾಕಾರವಾಗಿರುವ ಹೊಸನಗರ ಕ್ಷೇತ್ರ ಪುನರ್ವಿಂಗಡಣೆ ಕಾಯ್ದೆಯ ಪರಿಮಿತಿಯಲ್ಲಿ ನಗಣ್ಯವಾಗಿಯೇ ಕಾಣುತ್ತದೆ. ಮಳೆಗಾಲದಲ್ಲಿ ಮನೆಯಲ್ಲೇ ಬಂಧಿಯಾಗಿಸುವಷ್ಟು, ಹಗಲಲ್ಲೂ ರಸ್ತೆ ಕಾಣದ ಚಳಿ, ಬೇಸಿಗೆಯಲ್ಲಿ ವಿಪರೀತ ಸೆಕೆ, ಅಡಕೆ ತೋಟಗಳನ್ನ ಬಿಟ್ಟರೆ, ಘಟ್ಟ ಗುಡ್ಡಗಳ ಮೇಲಿನ ಮನೆಗಳು ಅಷ್ಟೇ.. ಮತ್ತೇನೂ ಕಾಣಲು ಸಾಧ್ಯವಿಲ್ಲ. ತೀರಾ ಇತ್ತೀಚೆಗೆ ಹೊಸನಗರ ಪಟ್ಟಣದಲ್ಲೊಂದು ಬಸ್ ನಿಲ್ದಾಣ, ಅದಕ್ಕೆ ಹೊಂದಿಕೊಂಡಂತೆ ಹೆದ್ದಾರಿಗಳ ಅಭಿವೃದ್ಧಿಯಾಗಿದೆ.
ಅರವತ್ತು ದಾಟಿದ ಸಾಮಾಜಿಕ ಹೋರಾಟಗಾರ ಕೃಷ್ಣಪ್ಪ ರಿಪ್ಪನ್ಪೇಟೆಯವರು, ಯಾವುದಾದರೂ ಹೋರಾಟ ಆರಂಭಿಸಿದರೆ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣುವವರೆಗೂ ಬಿಡದ ಜಾಯಮಾನ ಉಳ್ಳವರು. ಸುತ್ತಮುತ್ತಲಿನ ಅರಣ್ಯವಾಸಿಗಳು, ಅಧಿಕಾರ ಶಾಹಿಗಳ ಕಿರುಕುಳ, ಸರ್ಕಾರದ ಯೋಜನೆಯ ವೈಫಲ್ಯತೆಯ ಬಗ್ಗೆ ತಲೆಕಳಗಾಗಿ ನಿಂತು ಪ್ರತಿಭಟಿಸಿ ಸಮಸ್ಯೆಗಳ ಗಮನ ಸೆಳೆದವರು. ಈಗ ಇಂತಹದ್ದೇ ಹೋರಾಟಕ್ಕೆ ಕೈ ಹಾಕಿದ್ದಾರೆ.

ಕೆಲವು ದಿನಗಳ ಹಿಂದೆ ಹೊಸನಗರ ವಿಧಾನಸಭೆ ಪುನಃ ಬೇಕು ಎಂಬ ಹೋರಾಟದ ರೂಪು ರೇಷೆಗಳನ್ನು ತಾಲೂಕಿನ ಎಲ್ಲಾ ಗ್ರಾಮಪಂಚಾಯತಿಗಳ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟರು. ಇಲ್ಲಿನ ಹಿರಿ ಕಿರಿ ರಾಜಕಾರಣಿಗಳಿಗೆ ಪಕ್ಷ ಮರೆತು ತಾಲೂಕು ರಚನೆ ಹೋರಾಟಕ್ಕೆ ಸಹಾಯ ಮಾಡಲು ಮನವಿ ಮಾಡಿಕೊಂಡರು. ಹೊಸನಗರ ಮಾರುಕಟ್ಟೆಯಲ್ಲಿ ಏಕಾಂಗಿಯಾಗಿ ಒಂದು ಗುಟುರು ಹಾಕಿದ್ದರು. ಇಡೀ ಹೊಸನಗರ ಜನರು, ಅದರಲ್ಲೂ ಯುವಕರು, ಇವರ ಹೋರಾಟಕ್ಕೆ ಆಸರೆಯಾಗತೊಡಗಿದರು. ಫೇಸ್ ಬುಕ್, ವಾಟ್ಸ್ ಆಪ್ಗಳಲ್ಲಿ ಹೊಸನಗರದ ಅಭಿವೃದ್ಧಿಗೆ ವಿಧಾನಸಭಾ ಕ್ಷೇತ್ರ ಬೇಕು ಎಂದು ಕರೆ ನೀಡಿದ್ದಾರೆ. ಈ ಹೋರಾಟ ಇಷ್ಟು ಬೇಗ ವ್ಯಾಪಿಸುತ್ತೆ ಎಂಬುದರ ಅರಿವೂ ಕೃಷ್ಣಪ್ಪನವರಿಗೆ ಇದ್ದಹಾಗೆ ಕಾಣುತ್ತಿರಲಿಲ್ಲ, ಆದರೆ ಚುನಾವಣಾ ನೀತಿ ಸಂಹಿತೆಗಳ ತಾಕಲಾಟದಲ್ಲಿ ಕೊಂಚ ವಿಶ್ರಾಂತಿ ತೆಗೆದುಕೊಂಡಿದ್ದು, ಇದೀಗ ಮತ್ತೆ ಪುನಃ ಹೋರಾಟ ಮುಂದುವರಿಸಿ ಸ್ವತಂತ್ರ್ಯ ದಿನಾಚರಣೆಯ ಹಿಂದಿನ ದಿನ ಸೈಕಲ್ ಜಾಥಾ ಮೂಲಕ ಬೆಂಗಳೂರು ತಲುಪಿ ಮುಖ್ಯಮಂತ್ರಿಗಳಿಗೆ ಮನವಿ ನೀಡಲಿದ್ದಾರೆ.
ತಜ್ಞರ ಪ್ರಕಾರ, ಜನಸಂಖ್ಯೆ ಆಧಾರದ ಮೇಲೆ ಹರಿದು ಹಂಚಿರುವ ಹೊಸನಗರ ವಿಧಾನಸಭೆ ಮುಂದೆಂದೂ ಪುನರ್ ರಚನೆ ಆಗೋದೇ ಇಲ್ಲ. ಜನಸಂಖ್ಯೆ ಪ್ರಮಾಣವೂ ಏರಿಕೆಯಾಗುತ್ತಿಲ್ಲವಾದ್ದರಿಂದ ಮುಂದೊಂದು ದಿನ ಭದ್ರಾವತಿಯನ್ನೂ ಶಿವಮೊಗ್ಗಕ್ಕೆ ಸೇರಿಸಿದರೆ ಯಾವುದೇ ಆಶ್ಚರ್ಯವಿಲ್ಲ.
ಈ ಹಿಂದೆ, ಕಾಂಗ್ರೆಸ್ನಿಂದ ಶಿರ್ನಾಳಿ ಚಂದ್ರಶೇಖರ್, ಸ್ವಾಮಿರಾವ್ ( ಎರಡು ಬಾರಿ) ಜಿಡಿ ನಾರಾಯಣಪ್ಪ ಹಾಗೂ ಬಿಜೆಪಿಯಿಂದ ಆಯನೂರು ಮಂಜುನಾಥ್ ವಿಧಾನಸಭೆಗೆ ಆರಿಸಿಬಂದಿದ್ದರು. ಕ್ಷೇತ್ರ ಹಂಚಿಕೆ ಸಂದರ್ಭದಲ್ಲೂ ವಿರೋಧಿಸುವ ಗಟ್ಟಿ ನಿಲುವು ಹಾಗೂ ರಾಜಕಾರಣವೇ ಇಲ್ಲವಾಯ್ತು. ಮೂವತ್ತು ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ತಾಲೂಕು ಪ್ರಕೃತಿ ಸಂಪನ್ನವಾಗಿದೆ. ಹಳ್ಳ, ಜರಿ ತೊರೆ, ಜಲಪಾತಗಳ ವೈಭವವನ್ನು ಹೊಂದಿದೆ. ಅರಣ್ಯ ಇಲಾಖೆ ಹಾಗೂ ಕೆಪಿಸಿ ಇಲಾಖೆ ಭೂಮಿ ಮೇಲಿನ ಹಕ್ಕನ್ನೇ ಕಸಿದುಕೊಂಡಿದೆ. ಸಾಲದು ಎಂಬಂತೆ ಎರಡೆರಡು ಶಾಸಕರ ನಡುವೆ ಬಡವಾಗಿರುವ ಅಭಿವೃದ್ಧಿ, ಮೊದಲ ಬಾರಿಗೆ ಹೊಸನಗರದ ಯುವ ಸಮೂಹವನ್ನೇ ಹೋರಾಟಕ್ಕೆ ಅಣಿಮಾಡಿದೆ. ಆ ಶಾಸಕರೊಂದಿಗೆ ಒಮ್ಮೆ ಈ ಶಾಸಕರೊಂದಿಗೊಮ್ಮೆ ಸಭೆ ಮಾಡಲು ತಾಲೂಕು ಅಧಿಕಾರಿಗಳಿಗೂ ಕಷ್ಟವೇ.
ಕೃಷ್ಣಪ್ಪನವರು ಈ ತಿಂಗಳ ಅಂತ್ಯದಿಂದ ಸಮರೋಪಾದಿಯಲ್ಲಿ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ, ಇವರ ಹಿಂದೆ ಹೊಸನಗರ ಜನರ ಶಕ್ತಿ ಸೇರಿಕೊಂಡರೆ ಮುಂದೆ ಕ್ಷೇತ್ರ ಪುನರ್ ವಿಂಗಡಣೆ ಸಮಯದಲ್ಲಾದರೂ ಹೊಸನಗರ ವಿಧಾನಸಭೆ ಉದಯಿಸಬಹುದು ಎನ್ನೋ ಆಶಾಭಾವನೆ ಇಲ್ಲಿನ ಜನರದ್ದು.