ಡಿ. ಕೆ. ಶಿವಕುಮಾರ್… ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್. ಪಕ್ಷ ತನಗೆ ವಹಿಸಿದ ಜವಾಬ್ದಾರಿ ನಿರ್ವಹಿಸಲು ಏನೇ ಅಡ್ಡಿ ಎದುರಾದರೂ ಲೆಕ್ಕಿಸದೆ ಮುನ್ನುಗ್ಗಿ ಗುರಿ ಸಾಧಿಸುವ ಛಾತಿ ಹೊಂದಿರುವ ನಾಯಕ. ಈ ಕಾರಣಕ್ಕಾಗಿಯೇ ಪಕ್ಷದ ವರಿಷ್ಠರ ಮೆಚ್ಚುಗೆಗೂ ಪಾತ್ರರಾದವರು. ಇಂತಹ ಶಿವಕುಮಾರ್ ಅತ್ಯಂತ ಚಾಣಾಕ್ಷ ರಾಜಕಾರಣಿಗಳ ಸಾಲಿನಲ್ಲೂ ನಿಲ್ಲುತ್ತಾರೆ ಎಂಬುದಕ್ಕೆ ಉದಾಹರಣೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಚುನಾವಣೆ ವೇಳೆ ಅವರು ನೀಡಿದ ಹೇಳಿಕೆ ಮತ್ತು ಎಚ್. ಡಿ. ದೇವೇಗೌಡರ ಕುಟುಂಬ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ರಾಜಕೀಯ ಸಮರದಲ್ಲಿ ನಡೆದುಕೊಳ್ಳುತ್ತಿರುವ ರೀತಿ.
ಕರ್ನಾಟಕದಲ್ಲಿ ರಾಜಕೀಯವಾಗಿ ಮೇಲೇರಬೇಕಾದರೆ ಪಕ್ಷದ ವರಿಷ್ಠರ ಕೃಪಾಕಟಾಕ್ಷಕ್ಕಿಂತ ಜಾತಿಯ ಬೆಂಬಲ, ಅದರಲ್ಲೂ ಪ್ರಮುಖ ಜಾತಿ, ಸಮುದಾಯಗಳ ಬೆಂಬಲ ಬೇಕು ಎಂಬುದು ಸ್ಪಷ್ಟ. ಅಲ್ಲೊಂದು, ಇಲ್ಲೊಂದು ನಾಯಕರು ಜಾತಿ, ಧರ್ಮ ಮೀರಿ ಮುಂಚೂಣಿಗೆ ಬಂದರಾದರೂ ಅವರು ಹೆಚ್ಚು ಕಾಲ ತಮ್ಮ ನಾಯಕತ್ವ ಉಳಿಸಿಕೊಳ್ಳಲಿಲ್ಲ. ಆದರೆ, ಜಾತಿ, ಸಮುದಾಯಗಳ ಬೆಂಬಲದೊಂದಿಗೆ ನಾಯಕರಾಗಿ ಹೊರಹೊಮ್ಮಿದವರು ದೀರ್ಘ ಕಾಲ ನಾಯಕತ್ವವನ್ನು ಕಾಪಾಡಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯದ ಎಚ್. ಡಿ. ದೇವೇಗೌಡ, ಹಿಂದುಳಿದ ಸಮುದಾಯದ ಕುರುಬ ಜನಾಂಗಕ್ಕೆ ಸೇರಿದ ಸಿದ್ದರಾಮಯ್ಯ, ಲಿಂಗಾಯತ ಸಮುದಾಯದ ಬಿ. ಎಸ್. ಯಡಿಯೂರಪ್ಪ ಕಣ್ಣ ಮುಂದಿರುವ ಉದಾಹರಣೆಗಳು. ಚುನಾವಣೆಗಳಲ್ಲಿ ಪಕ್ಷ ಸೋತರೂ ಜಾತಿಯ ಕಾರಣದಿಂದ ಅವರು ಮಾತ್ರ ಜನನಾಯಕರಾಗಿಯೇ ಇರುವಂಥವರು.

ಈ ರಾಜಕೀಯ ಸೂಕ್ಷ್ಮ ಅರಿತೇ ಶಿವಕುಮಾರ್ ಎಚ್ಚರಿಕೆಯಿಂದ ದೃಢ ಹೆಜ್ಜೆಗಳನ್ನು ಹಾಕುತ್ತಿದ್ದಾರೆ. ದಶಕಗಳ ಹಿಂದೆ ಒಕ್ಕಲಿಗರ ನಾಯಕ ಎನಿಸಿಕೊಂಡಿದ್ದ ಎಸ್. ಎಂ. ಕೃಷ್ಣ ಗರಡಿಯಲ್ಲಿ ಪಳಗಿದ ಶಿವಕುಮಾರ್ ಅವರು ಕೃಷ್ಣ ಅವರ ರಾಜಕೀಯ ಪಟ್ಟುಗಳನ್ನು ಬಲ್ಲವರು. ಜಾತಿಯಲ್ಲಿ ಒಕ್ಕಲಿಗರೂ ಆಗಿರುವುದರಿಂದ ಶಿವಕುಮಾರ್ ಸಹಜವಾಗಿಯೇ ಒಕ್ಕಲಿಗ ನಾಯಕನಾಗಿ ಹೊರಹೊಮ್ಮುವ ಕನಸು ಕಾಣುತ್ತಿದ್ದವರು. ಆದರೆ, ಎಚ್. ಡಿ. ದೇವೇಗೌಡ ಅವರು ಆ ಸ್ಥಾನವನ್ನು ಅಲಂಕರಿಸಿರುವುದರಿಂದ ಆಸೆ ಕೈಗೂಡುತ್ತಿಲ್ಲ. ಈ ಮಧ್ಯೆ ದೇವೇಗೌಡರ ಕುಟುಂಬದೊಂದಿಗೆ ಬದ್ಧ ವೈರತ್ವ ಇದ್ದುದರಿಂದ ಒಕ್ಕಲಿಗ ಸಮುದಾಯದವರು ಶಿವಕುಮಾರ್ ಅವರನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳಲಿಲ್ಲ. ಇದರಿಂದಾಗಿಯೇ ತಮ್ಮ ನಾಯಕತ್ವವನ್ನು ಒಕ್ಕಲಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಹಳೇ ಮೈಸೂರು ಭಾಗಕ್ಕೆ ವಿಸ್ತರಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ.
ಇದೆಲ್ಲದರಿಂದ ಎಚ್ಚೆತ್ತುಕೊಂಡಿರುವ ಶಿವಕುಮಾರ್ ಇದೀಗ ಜಾತಿ ಬೆಂಬಲದೊಂದಿಗೆ ಜನನಾಯಕನಾಗುವತ್ತ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಜನನಾಯಕನಾಗಲು ಕೇವಲ ಜಾತಿ ಬೆಂಬಲ ಮಾತ್ರ ಇದ್ದರೆ ಸಾಲದು. ನಾಯಕತ್ವದಲ್ಲಿ ತಮಗಿಂತ ಮುಂಚೂಣಿಯಲ್ಲಿರುವವರನ್ನು ಬದಿಗೆ ಸರಿಸಬೇಕು ಎಂಬುದೂ ಶಿವಕುಮಾರ್ ಅವರಿಗೆ ಗೊತ್ತಿದೆ. ಅದಕ್ಕಾಗಿ ತಮ್ಮ ಪಕ್ಷದವರೇ ಆಗಿರುವ ಸಿದ್ದರಾಮಯ್ಯ ಅವರನ್ನು ಹಣಿಯುವ ಪ್ರಯತ್ನದೊಂದಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಸಂಬಂಧಿಸಿದಂತೆ ದೇವೇಗೌಡ ಮತ್ತು ಕುಟುಂಬದವರನ್ನು ಸಮರ್ಥಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಆ ಮೂಲಕ ವರಿಷ್ಠರಿಗೆ ಸಿದ್ದರಾಮಯ್ಯ ಅವರಿಗೆ ಪ್ರತಿಕೂಲವಾಗುವ ಸಂದೇಶವನ್ನು ತಲುಪಿಸುತ್ತಿದ್ದಾರೆ. ಡಿ. ಕೆ. ಶಿವಕುಮಾರ್ ಅವರ ಈ ಚಾಣಾಕ್ಷ ರಾಜಕಾರಣಕ್ಕೆ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಬಳಿಕ ಚಾಲನೆ ಸಿಕ್ಕಿದೆ.

ವೀರಶೈವ-ಲಿಂಗಾಯತ, ಒಕ್ಕಲಿಗರ ಬೆಂಬಲ ಪಡೆಯುವ ಯತ್ನ
ಬಿಜೆಪಿಯ ಮತಬ್ಯಾಂಕ್ ಆಗಿದ್ದ ವೀರಶೈವ-ಲಿಂಗಾಯತ ಧರ್ಮವನ್ನು ಒಡೆದು ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪಿಸುವ ಪ್ರಕ್ರಿಯೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಆರಂಭವಾಗಿತ್ತು. ಸಚಿವ ಸಂಪುಟದಲ್ಲಿ ಈ ಕುರಿತ ನಿರ್ಣಯ ಕೈಗೊಂಡಾಗ ಶಿವಕುಮಾರ್ ಕೂಡ ಇದ್ದರು. ಆಗೆಲ್ಲಾ ಮೌನವಾಗಿದ್ದ ಶಿವಕುಮಾರ್, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಬಳಿಕ ತಮ್ಮ ವರಸೆ ಬದಲಿಸಿದರು. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ 2018ರ ಅಕ್ಟೋಬರ್ ತಿಂಗಳಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ಪ್ರತಿಕ್ರಿಯಿಸಿದ್ದ ಶಿವಕುಮಾರ್, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ನಾವು (ಕಾಂಗ್ರೆಸ್) ಹಸ್ತಕ್ಷೇಪ ಮಾಡಬಾರದಿತ್ತು. ಹಸ್ತಕ್ಷೇಪ ಮಾಡಿದ್ದು ನಮ್ಮ ಸರ್ಕಾರ ಮಾಡಿದ ಅಪರಾಧ ಎಂದು ಜನರೆದುರು ಕೈಮುಗಿದು ಕ್ಷಮಾಪಣೆ ಕೇಳಿದ್ದರು.
ಅಂದರೆ, ಶಿವಕುಮಾರ್ ಅವರ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಸೋಲಲು ಲಿಂಗಾಯತ ಪ್ರತ್ಯೇಕ ಧರ್ಮ ವಿವಾದವೂ ಒಂದು ಕಾರಣ. ಇದಕ್ಕೆ ಪೂರಕವಾಗಿ ವೀರಶೈವ-ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಸಾಕಷ್ಟು ನಷ್ಟ ಅನುಭವಿಸಿತ್ತು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಮಾತನಾಡಿದ ಶಿವಕುಮಾರ್ ಅವರ ಈ ಹೇಳಿಕೆಯ ಹಿಂದೆ ಹಲವು ಉದ್ದೇಶಗಳಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ.
ಪ್ರಸ್ತುತ ರಾಜ್ಯ ಕಾಂಗ್ರೆಸ್ ನಲ್ಲಿ ಶಿವಕುಮಾರ್ ಅವರಿಗೆ ಇರುವ ಬೆದರಿಕೆ ಎಂದರೆ ಅದು ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ಮತ್ತು ಲಿಂಗಾಯತ ಸಮುದಾಯಕ್ಕೆ ಸೇರಿದ ಎಂ. ಬಿ. ಪಾಟೀಲ್. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಮುಂಚೂಣಿಯಲ್ಲಿದ್ದವರು ಈ ಇಬ್ಬರು. ಪ್ರತ್ಯೇಕ ಧರ್ಮ ವಿವಾದಕ್ಕೆ ಇವರಿಬ್ಬರನ್ನೇ ಹೊಣೆ ಮಾಡಿದರೆ ಆಗ ವೀರಶೈವ-ಲಿಂಗಾಯತ ಸಮುದಾಯ ಇವರಿಬ್ಬರ ವಿರುದ್ಧ ಮಾತ್ರ ತಿರುಗಿ ಬಿದ್ದು ಕಾಂಗ್ರೆಸ್ ಪಕ್ಷವನ್ನು ಕ್ಷಮಿಸುತ್ತದೆ. ಇದಕ್ಕೆ ಪೂರಕವಾಗಿ ಪ್ರತ್ಯೇಕ ಧರ್ಮಕ್ಕೆ ವಿರೋಧ ವ್ಯಕ್ತಪಡಿಸಿದ್ದ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬೆಂಬಲ ಗಿಟ್ಟಿಸಬಹುದು. ಜತೆಗೆ ಈ ಸಮುದಾಯದ ನಾಯಕರಾಗಿರುವ ಯಡಿಯೂರಪ್ಪ ಅವರು ವೈಯಕ್ತಿಕವಾಗಿ ತಮಗೆ ಆತ್ಮೀಯರಾಗಿರುವುದರಿಂದ ಸಮುದಾಯ ತಮ್ಮ ಬಗ್ಗೆ ಮೃದು ಧೋರಣೆ ತೋರಬಹುದು. ಇದರಿಂದ ವೀರಶೈವ ಲಿಂಗಾಯತ ಸಮುದಾಯದವರು ಹೆಚ್ಚಾಗಿರುವ ಪ್ರದೇಶಗಳಲ್ಲಿ ತಾವು ನಾಯಕರಾಗಿ ಬೆಳೆಯಲು ಅವಕಾಶವಾಗುತ್ತದೆ ಎಂಬುದು ಶಿವಕುಮಾರ್ ಅವರ ಯೋಚನೆಯಾಗಿದೆ.
ಇನ್ನು ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವವರು ಒಕ್ಕಲಿಗ ಸಮುದಾಯದವರು. ಪ್ರಸ್ತುತ ದೇವೇಗೌಡರನ್ನು ಈ ಸಮುದಾಯದ ರಾಜಕೀಯ ನಾಯಕ ಎನ್ನಲಾಗುತ್ತಿದೆ. ಈ ಪಟ್ಟ ಅಲಂಕರಿಸಲು ಸಾಕಷ್ಟು ಕಸರತ್ತು ನಡೆಸಿದರೂ ದೇವೇಗೌಡರ ಕಡು ವಿರೋಧಿ ಎಂಬ ಕಾರಣಕ್ಕೆ ಸಮುದಾಯದವರು ತನ್ನನ್ನು ಒಪ್ಪಿಕೊಳ್ಳಲಿಲ್ಲ ಎಂಬುದು ಶಿವಕುಮಾರ್ ಗೆ ಗೊತ್ತು. ಆ ಕಾರಣಕ್ಕಾಗಿಯೇ ದೇವೇಗೌಡರ ಕುಟುಂಬ ಮತ್ತು ಸಿದ್ದರಾಮಯ್ಯ ನಡುವಿನ ರಾಜಕೀಯ ದ್ವೇಷದ ಆರೋಪಗಳ ವಿಚಾರದಲ್ಲಿ ಅವರು ದೇವೇಗೌಡರ ಕುಟುಂಬದ ಕಡೆ ವಾಲಿದಂತೆ ಮಾತನಾಡುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದವರು ದೇವೇಗೌಡರ ನೇತೃತ್ವದ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಹಳೇ ಮೈಸೂರು ಭಾಗದಲ್ಲಿ ಆ ಪಕ್ಷ ಹೆಚ್ಚು ಸ್ಥಾನ ಪಡೆಯಲು ಕಾರಣರಾಗಿದ್ದರು. ಹೀಗಾಗಿ ದೇವೇಗೌಡರ ಪರ ನಿಂತರೆ ಒಕ್ಕಲಿಗ ಸಮುದಾಯ ತಮ್ಮೊಂದಿಗಿರುತ್ತದೆ. ಇದರಿಂದ ಹಳೇ ಮೈಸೂರು ಭಾಗದಲ್ಲಿ ತಮ್ಮ ಪ್ರಭಾವ ಎನ್ನಷ್ಟು ಹೆಚ್ಚಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಶಿವಕುಮಾರ್ ಇದ್ದಾರೆ.

ಒಟ್ಟಾರೆ ಟಾರ್ಗೆಟ್ ಸಿದ್ದರಾಮಯ್ಯ
ಲಿಂಗಾಯತ ಪ್ರತ್ಯೇಕ ಧರ್ಮ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸ್ಫೋಟದ ಜಗಳ ಎರಡೂ ವಿಚಾರದಲ್ಲೂ ಶಿವಕುಮಾರ್ ಅವರ ಪ್ರಮುಖ ಟಾರ್ಗೆಟ್ ಸಿದ್ದರಾಮಯ್ಯ. ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡಬೇಕಾದರೆ ಬಹುಸಂಖ್ಯಾತ ಮೇಲ್ವರ್ಗಗಳ ಬೆಂಬಲ ಅಗತ್ಯ. ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಸಿದರೆ ಬಹುಸಂಖ್ಯಾತ ವೀರಶೈವ-ಲಿಂಗಾಯತರು ತಮ್ಮ ಬಗ್ಗೆ ಮೃದು ಧೋರಣೆ ಹೊಂದುತ್ತಾರೆ. ದೇವೇಗೌಡರ ಪರ ನಿಂತರೆ ಒಕ್ಕಲಿಗ ಸಮುದಾಯದವರು ತಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಉತ್ತರ ಕರ್ನಾಟಕ ಮತ್ತು ಹಳೇ ಮೈಸೂರು ಭಾಗಗಳಲ್ಲಿ ಹಿಂದುಳಿದ ಸಮುದಾಯದ ಸಾಕಷ್ಟು ಮಂದಿ ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತ ನಾಯಕರು ಹೇಳಿದ ಮಾತು ಕೇಳುತ್ತಾರೆ. ಹೀಗಿರುವಾಗ ಈ ಎರಡೂ ಸಮುದಾಯಗಳು ತಮ್ಮ ಬೆಂಬಲಕ್ಕಿದ್ದರೆ ಒಂದಷ್ಟು ಹಿಂದುಳಿದ ವರ್ಗದವರೂ ತಮ್ಮತ್ತ ಬರಬಹುದು. ಆಗ ಸಿದ್ದರಾಮಯ್ಯ ಅವರ ಪ್ರಾಬಲ್ಯ ಕಡಿಮೆಯಾಗುತ್ತದೆ. ಇನ್ನು ಪಕ್ಷದ ಕಾರಣಕ್ಕಾಗಿ ದಲಿತರು ಮತ್ತು ಮುಸ್ಲಿಮರ ಬೆಂಬಲ ಪಡೆದರೆ ತಾವೂ ಕೂಡ ಜನನಾಯಕನಾಗಿ ಮೆರೆಯಬಹುದು ಎಂಬುದು ಶಿವಕುಮಾರ್ ಅವರ ತಂತ್ರಗಾರಿಕೆ. ಇದರ ಫಲಿತಾಂಶಕ್ಕೆ ಕಾದು ನೋಡಬೇಕು.