ರಾಜಕೀಯ ಹಪಾಪಿತನಕ್ಕೆ ಒಂದು ಮಿತಿ ಇರುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಅದು ಎಲ್ಲೆ ಮೀರುತ್ತಿದೆ. ಮತದಾರರಿಗೆ ಅದರಿಂದ ನಾಚಿಕೆಯಾಗುತ್ತಿದೆಯೇ ಹೊರತು, ಅವರ ಮತದಿಂದ ವಿಧಾನಸೌಧದಲ್ಲಿ ಕುಳಿತು ರಾಜ್ಯದ ಆಡಳತ ಜವಾಬ್ದಾರಿ ಹೊತ್ತಿರುವ ಶಾಸಕರಿಗೆ ಅದರ ಅರಿವು ಆಗುತ್ತಿಲ್ಲ ಎನ್ನುವುದು ಬಹಳ ಶೋಚನೀಯ ವಿಷಯವಾಗಿದೆ.
ಈಗ ಆಡಳಿತ ನಡೆಸುತ್ತಿರುವ ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ಸರಕಾರದ ಕಾರ್ಯವೈಖರಿ ಮತ್ತು ಅವರನ್ನು ಸರಿದಾರಿಗೆ ತರುವ ಉತ್ತರದಾಯಿತ್ವ ಹೊತ್ತಿರುವ ಪ್ರಮುಖ ವಿರೋಧಿ ಪಕ್ಷ ಭಾಜಪವು ತನ್ನ ಗುರುತರ ಜವಾಬ್ದಾರಿ ನಿರ್ವಹಿಸುವ ರೀತಿಯನ್ನು ನೋಡಿದರೆ, ಕರ್ನಾಟಕದ ವಿದ್ಯಮಾನಗಳ ಅರಿವು ಇರುವ ಯಾರಿಗಾದಾದರೂ ವಿಷಾದವಾಗದೆ ಇರದು.
2018ರ ವಿಧಾನಸಭೆ ಚುನಾವಣೆಗಳಲ್ಲಿ, ಯಾವ ಪಕ್ಷಕ್ಕೂ ಬಹುಮತ ಬರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವುದು ಎಲ್ಲರಿಗೂ ಅರಿವಿದ್ದ ಸಂಗತಿ. ಎರಡನೆಯ ಮತ್ತು ಮೂರನೆಯ ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳು ಒಂದು ಚುನಾವಣೋತ್ತರ ಮೈತ್ರಿ ಮಾಡಿ ಭಾಜಪವನ್ನು ಅಧಿಕಾರದಿಂದ ದೂರ ಇಡಬೇಕೆಂಬ ನೆವದಿಂದ ಸರಕಾರ ರಚಿಸಿದ ಔಚಿತ್ಯ ಒಂದು ಕಡೆ ಇರಲಿ. ಆದರೆ, ಯಾವುದೇ ಕಾರಣದಿಂದ ಸರಕಾರ ರಚಿಸಿದ ಮೇಲೆ ಒಳ್ಳೆಯ ಆಡಳಿತ ಕೊಡುವ ಮೂಲಭೂತ ಜವಾಬ್ದಾರಿಯಿಂದ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳಗಳು ವಿಮುಖರಾಗಬೇಕೇ? ಅದೇ ರೀತಿ ಯಾವುದೋ ರಾಜಕೀಯ ತಂತ್ರದಿಂದ ತಾವು ಅಧಿಕಾರ ಏರಲಿಕ್ಕೆ ಆಗದಿದ್ದರೆ ಭಾಜಪವು ತಾನು ಪ್ರಬಲ ವಿರೋಧಿ ಪಕ್ಷವಾಗಿ ಕಾರ್ಯನಿರ್ವಹಿಸುವುದನ್ನು ಮರೆತುಬಿಡಬೇಕೇ?
ಈಗ ಮೈತ್ರಿ ಸರಕಾರ ಬಂದು ಒಂದು ವರ್ಷವಾಗಿದೆ. ಮಳೆಯ ಅಭಾವದಿಂದ ಬರಗಾಲದ ಬವಣೆಯಿಂದ ಕರ್ನಾಟಕ ಪರಿತಪಿಸುತ್ತಿದೆ. ಜನ ಗುಳೇ ಹೋಗುತ್ತಿದ್ದಾರೆ. ಗ್ರಾಮೀಣ ಜನಗಳಿಗೆ ಸರಕಾರಿ ಯೋಜನೆಯೆಡೆಗೆ ಉದ್ಯೋಗ ಸಿಗುತ್ತಿಲ್ಲ. ಕುಡಿಯುವ ನೀರಿನ ಅಭಾವವಿದೆ. ದನಕರುಗಳಿಗೆ ಮೇವು ಇಲ್ಲ. ಪರಿಸ್ಥಿತಿ ಕೈಮೀರುತ್ತಿದೆ.
ಆದರೆ, ಕರ್ನಾಟಕದ ಸರಕಾರದ, ಶಾಸಕರ ಮತ್ತು ವಿರೋಧಿ ಪಕ್ಷದವರ ಗಮನ ಆ ಕಡೆ ಇಲ್ಲ. ಅವರೆಲ್ಲ ಮೈತ್ರಿ ಸರಕಾರದ ಅಳಿವು ಉಳಿವಿನ ಬಗೆಗೆ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರ ಹಂಚುವಿಕೆ ಗಡಿಬಿಡಿಯಲ್ಲಿ ಜಾ.ದಳ ಮತ್ತು ಕಾಂಗ್ರೆಸ್ಗಳು ತೊಡಗಿದ್ದರೆ ಭಾಜಪವು, ಮುಖ್ಯಮಂತ್ರಿ ಕುರ್ಚಿ ಎಂದು ಖಾಲಿಯಾಗುತ್ತದೆಯೋ ಎನ್ನುವುದರಲ್ಲಿ ಮಗ್ನವಾಗಿದೆ. ಯಾರೊಬ್ಬರಿಗೂ ಜನಗಳ ಬವಣೆ ನೋಡಲು, ಅದಕ್ಕೆ ಪರಿಹಾರ ಕಂಡುಹಿಡಿಯುವುದಕ್ಕೆ ವ್ಯವಧಾನವೇ ಇಲ್ಲ.
ಯಾರೋ ಮೊದಲ ಬಾರಿಗೆ ವಿಧಾನಸಭೆಗೆ ಕಾಲಿಡುತ್ತಿರುವ ಸದಸ್ಯರು ಇಂತಹ ವರ್ತನೆಯಲ್ಲಿ ತೊಡಗಿದ್ದರೆ, ಅವರು ಬಾಲಿಶ ಎಂದು ಕರೆಯಬಹುದಿತ್ತು. ಆದರೆ, ಮಾಜಿ ಪ್ರಧಾನಮಂತ್ರಿ, ಮಾಜಿ ಮುಖ್ಯಮಂತ್ರಿ ಮೊದಲಾದ ಹಿರಿಯರೇ ಈ ರೀತಿ ವರ್ತಿಸಿದರೆ, ಉಳಿದವರಿಗೆ ಹೇಳುವವರು ಯಾರು? ಶಿಕ್ಷಕರೇ ದುರ್ವರ್ತನೆಯಲ್ಲಿ ತೊಡಗಿದ್ದರೆ ವಿದ್ಯಾರ್ಥಿಗಳನ್ನು ಸುಧಾರಿಸುವವರು ಯಾರು?
ಮಾಜಿ ಪ್ರಧಾನಮಂತ್ರಿ ಶ್ರೀ ದೇವೇಗೌಡರು ದೇಶದಲ್ಲಿಯೇ ಅತ್ಯಂತ ಹಿರಿಯ ರಾಜಕಾರಣಿ, ಅವಕಾಶವಿದ್ದರೆ ಇನ್ನೊಮ್ಮೆ ಆ ಪಟ್ಟಕ್ಕೆ ಏರಲು ಸಿಧ್ಧರಾಗಿದ್ದವರು. ಅವರಿಗೆ ತಮ್ಮ ಮಗ ಕುಮಾರಸ್ವಾಮಿಯ ಮುಖ್ಯಮಂತ್ರಿಯ ಸ್ಥಾನಕ್ಕೆ ಭಂಗ ಬರಬಾರದೆಂಬುದರಲ್ಲಿ ಆಸಕ್ತಿಯೇ ಹೊರತು, ಬರಗಾಲದ ಪರಿಸ್ಥಿತಿಯನ್ನು ಅರಿತು ಜನರಿಗೆ ಪರಿಹಾರ ಒದಗಿಸುವುದರಲ್ಲಿ ಅಲ್ಲ. ಬಹುಶಃ ಅವರ ಕಣ್ಣಿಗೆ/ಕಿವಿಗೆ ಜನರ ಗೋಳು ತಲುಪಿಲ್ಲವೆಂದು ಕಾಣಿಸುತ್ತದೆ. ಅವರು ಬರದ ಪರಿಸ್ಥಿತಿಯನ್ನು ಹೀಗೆ ನಿರ್ವಹಿಸಬೇಕು ಎಂದು ತಮ್ಮ ಅನುಭವದಿಂದ ಹೇಳಿದರೆ, ಅದನ್ನು ಮೀರುವ ಧಾಷ್ಟ್ರ್ಯತೆ ಕುಮಾರಸ್ವಾಮಿಯವರಿಗೆ ಇರುವ ಹಾಗೆ ಕಾಣುವದಿಲ್ಲ. ತಮ್ಮ ಸಣ್ಣ ಮಗನಿಗೆ ವಿಪುಲ ರಾಜಕೀಯ ಸಲಹೆ ಕೊಡುವ ಅವರು, ಬರದ ನಿರ್ವಹಣೆಯ ಬಗೆಗೆ ತೆಗೆದುಕೊಳ್ಳಬಹುದಾದ ಆಡಳಿತಾತ್ಮಕ ಸಲಹೆ ಏನೂ ಕೊಟ್ಟಂತಿಲ್ಲ.
ಇನ್ನು, ಸಿದ್ದರಾಮಯ್ಯವರು. ಮುಖ್ಯಮಂತ್ರಿಯಾಗಿದ್ದವರು. ನೈಸರ್ಗಿಕ ವಿಕೋಪವನ್ನು ಹೇಗೆ ಎದುರಿಸಬೇಕೆನ್ನುವುದು ಅವರಿಗೆ ಗೊತ್ತಿಲ್ಲದ ವಿಷಯವಲ್ಲ. ಮೇಲಾಗಿ, ಈಗ ಅವರು ಮೈತ್ರಿ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷರು ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ಧುರೀಣರು. ಅವರ ಅವರ ಹಳೆಯ ರಾಜಕೀಯ ವೈರಿ ದೇವೇಗೌಡರ ತಂತ್ರಗಳಿಗೆ ಪ್ರತಿತಂತ್ರ ರೂಪಿಸುವುದಲ್ಲಿ ವ್ಯಯವಾಗುತ್ತಿದೆಯೇ ಹೊರತು ಜನರ ಸಮಸ್ಯೆಗಳಿಗೆ ಮೈತ್ರಿ ಸರಕಾರ ಸ್ಪಂದಿಸುವದರಲ್ಲಿ ಇಲ್ಲ. ಅವರ ಮತಕೇತ್ರವಾದ ಬಾದಾಮಿಯಲ್ಲಿಯೂ ಬರದ ಛಾಯೆ ಇಣುಕಿದೆ. ಅದರ ಕಡೆಗೂ ಅವರು ತಮ್ಮ ಗಮನವನ್ನು ಹರಿಸಿದಂತಿಲ್ಲ. ಅವರಿಗೆ ತಮಗೆ ರಾಜಕೀಯ ಪುನರುಜ್ಜೀವನ ಕೊಟ್ಟ ಉತ್ತರ ಕರ್ನಾಟಕದ ಬಾದಾಮಿಯ ನೆನಪೂ ಇರಲಿಕ್ಕಿಲ್ಲವೇನೋ?
ಹೋಗಲಿ, ವಿರೋಧಪಕ್ಷವಾದ ಶ್ರೀಯಡಿಯೂರಪ್ಪನವರ ಭಾಜಪವೂ ತನ್ನ ಪಾತ್ರ ನಿರ್ವಹಿಸಿ, ಮಲಗಿರುವ ಆಧಿಕಾರರೂಢ ಪಕ್ಷವನ್ನು ಎಬ್ಬಿಸುವ ಕೆಲಸವನ್ನು ಮಾಡುತ್ತಿದೆಯೇ? ಅದೂ ಕಾಣುವುದಿಲ್ಲ. ವಿರೋಧಿ ಪಕ್ಷದವರಿಗೆ ಕೂಡ ಮೈತ್ರಿ ಪಕ್ಷದ ಜಾಡ್ಯವೇ ಹಿಡಿದಿದೆ. ಅವರ ಕಣ್ಣೆಲ್ಲವೂ ಕುರ್ಚಿಯ ಕಡೆಗೆ. ಎಂದು ಮೈತ್ರಿ ಪಕ್ಷಗಳ ಸರಕಾರದ ಪತನವಾದೀತೋ, ಎಂದು ತಾವು ಕುಳಿತುಕೊಳ್ಳಬಹುದೋ ಎನ್ನುವ ಹಗಲುಗನಸು ಕಾಣುವುದರಲ್ಲಿ ಮಗ್ನವಾಗಿರುವ ಅವರಿಗೆ ರಾಜ್ಯದಲ್ಲಿ ವ್ಯಾಪಿಸಿರುವ ಬರ, ಕುಡಿಯುವ ನೀರಿನ ಸಮಸ್ಯೆ, ದನಕರುಗಳ ಮೇವಿನ ಅಭಾವದಿಂದ ಅನುಭವಿಸುತ್ತಿರುವ ಸಂಕಟ, ಕೆಲಸವಿಲ್ಲದೆ ಗುಳೆ ಹೋಗುತ್ತಿರುವ ಜನಗಳತ್ತ ನೋಡಲೂ ಸಮಯಾವಕಾಶವಿಲ್ಲ.
ಮುಖ್ಯಮಂತ್ರಿ ಕುಮಾರಸ್ವಾಮಿಯವರ ವರ್ತನೆಯೂ ವಿಚಿತ್ರ. ತಾವು ಮುಖ್ಯಮಂತ್ರಿ ಆಗಿರುವುದು ಜನರ ಮೇಲೆ ಒಂದು ತರಹದ ಉಪಕಾರ ಮಾಡಲಿಕ್ಕೆ ಎನ್ನುವ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ. ಮಾತುಮಾತಿಗೆ ರೇಗುತ್ತಾರೆ, ಟೀಕೆ-ಟಿಪ್ಪಣಿಗಳನ್ನು ಸಹಿಸುವುದಿಲ್ಲ. ಮಂಡ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮಗನ ಸೋಲನ್ನು ಮನಸಿಗೆ ಹಚ್ಚಿಕೊಂಡು ಕೆಲಸ ಮಾಡುವುದನ್ನು ಮರೆತಿದ್ದಾರೆ. ಒಂದು ಮಾತನ್ನು ಅವರು ಮರೆತಿದ್ದಾರೆ. ಮತದಾರರು ಅವರನ್ನು ಆಳಲು ಕೆರೆದಿಲ್ಲ. ತಮಗೆ ಜನಮತವಿಲ್ಲದಿದ್ದರೂ ಒಂದು ಕೃತ್ರಿಮ ಬಹುಮತವನ್ನು ಕಾಂಗ್ರೆಸ್ ಜೊತೆಗೆ ಸೃಷ್ಟಿಸಿ ತಾವೇ ಅಧಿಕಾರಕ್ಕೆ ಬಂದಿದ್ದಾರೆ.
ಆದರೂ ಬರ ನಿರ್ವಹಣೆ ಕಾರ್ಯದಲ್ಲಿ ಅವರು ಸಂಪೂರ್ಣ ಎಡವಿದ್ದಾರೆ. ತಮ್ಮ ರಾಜಕೀಯ ಲೆಕ್ಕಾಚಾರ ಸರಿ ಹೊಂದಿಸುವುದಕ್ಕಾಗಿ ಜನರ ಕಷ್ಟಕ್ಕೆ ಸ್ಪಂದಿಸುವುದನ್ನು ಅಲಕ್ಷಿಸಿದ್ದಾರೆ. ಬರ ನಿರ್ವಹಣೆ ಕಾರ್ಯವು ಸರಕಾರದಲ್ಲಿ ಇದ್ದವರಿಗೆ ಹೊಸದಲ್ಲ. ದೇವರಾಜ ಅರಸರ ಕಾಲದಿಂದಲೂ ಒಂದು ತರಹದ ವ್ಯವಸ್ಥೆ ಕರ್ನಾಟಕದಲ್ಲಿ ಜಾರಿಯಲ್ಲಿದೆ. ಜಿಲ್ಲೆ ಮಟ್ಟದಲ್ಲಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಅಧ್ಯಕ್ಷತೆಯಲ್ಲಿ, ಪರಿಶೀಲನೆ ಮತ್ತು ಆಡಳಿತಾತ್ಮಕವಾಗಿ ಒಬ್ಬೊಬ್ಬ ಇಲಾಖಾ ಕಾರ್ಯದರ್ಶಿಯನ್ನು ನೋಡಲ್ ಆಧಿಕಾರಿ ಎಂದು ನೇಮಕ ಮಾಡಿ, ಎರಡು ಸ್ತರಗಳಲ್ಲಿ ಪರಿಸ್ಥಿತಿಯ ಪರಿಶೀಲನೆ ಮಾಡಲಾಗುತ್ತಿದೆ. ಇಂತಹದೇ ಒಂದು ಸಮಾನಾಂತರ ಪರಿಶಿಲನೆ ವ್ಯವಸ್ಥೆ ರಾಜ್ಯ ಮಟ್ಟದಲ್ಲಿಯೂ ಇದೆ. ಇದನ್ನು ಈಗಿನ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ಏಕೆ ಕಾರ್ಯಗತ ಮಾಡಲಿಲ್ಲ? ರಾಜಕೀಯ ಸಮಸ್ಯೆಗಳಲ್ಲಿ ತಮಗೆ ವೇಳೆ ಸಿಗದಿದ್ದರೆ, ರಾಜ್ಯ ಮಟ್ಟದಲ್ಲಿ ನೋಡಲ್ ಕಾರ್ಯದರ್ಶಿಗಳ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮಟ್ಟದಲ್ಲಿ ಪರಿಶೀಲನೆಯನ್ನು ಏಕೆ ಮಾಡಿಸಿ ವರದಿಗಳನ್ನು ತರಿಸಿ, ಅವುಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬಹುದಿತ್ತು. ಇಲ್ಲವೇ, ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಮಟ್ಟದಲ್ಲಿ ಬೆಂಗಳೂರಿನಲ್ಲಿಯೇ ಸಭೆ ನಡೆಸಲೂ ಸಾಧ್ಯವಿತ್ತು. ಇವು ಯಾವುವೂ ಆಗಲಿಲ್ಲ.
ಕೆಲವು ವರ್ಷಗಳ ಹಿಂದೆ ಇಂತಹದೊಂದು ಪರಿಸ್ಥಿತಿ ಬಂದಾಗ ಅಂದಿನ ಮುಖ್ಯಮಂತ್ರಿಗಳು, ಕಂದಾಯ ಮತ್ತು ಗ್ರಾಮೀಣ ಅಭಿವೃದ್ದಿ ಮಂತ್ರಿಗಳನ್ನು ಕಳಿಸಿ, ಜಿಲ್ಲೆಯ ಪರಿಸ್ಥಿತಿಯನ್ನು ಪರಿಶೀಲಿಸಿ, ಕೇಂದ್ರ ಸರಕಾರದ ನರೆವಿಗಾಗಿ ಕಾಯದೆ, ವಿವಿಧ ಕಾರ್ಯಕ್ರಮಗಳಿಗೆ ಇದ್ದ ರಾಜ್ಯ ಸರಕಾರದ ಹಣವನ್ನೇ ಬರ ಪರಿಹಾರ ಕಾಮಗಾರಿಗಳಿಗೆ ವಿನಿಯೋಗಿಸಲು ಅಡತಡೆಯಾದ ಆಡಳಿತಾತ್ಮಕ ತೊಂದರೆಗಳನ್ನು ನಿವಾರಿಸಿದುದು ಇನ್ನೂ ನೆನಪಿನಲ್ಲಿದೆ. ಆದರೆ, ಈಗ ಒಬ್ಬ ಮಂತ್ರಿಯಾದರೂ ಬೇರೆ ಜಿಲ್ಲೆಗಳಿಗೆ ಬಿಡಿ, ತಮ್ಮ ಜಿಲ್ಲೆಗಳಲ್ಲಿನ ಬರ ಸಮಸ್ಯೆಯನ್ನು ಪರಿಹರಿಸಲೂ ಪ್ರಯತ್ನ ಮಾಡಿಲ್ಲ, ಮಾಡುತ್ತಿಲ್ಲ. ಬರ ನಿವಾರಣೆ ಕಾರ್ಯವನ್ನು ರೂಪಿಸಿ ಅನುಷ್ಠಾನಗೊಳಿಸುವುದು ಮುಖ್ಯವಾಗಿ ಕಂದಾಯ ಮಂತ್ರಿ ಆರ್ ವಿ ದೇಶಪಾಂಡೆಯವರ ಹೊಣೆ. ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕಾಂಗ ಧುರೀಣ ಸಿದ್ದರಾಮಯ್ಯನವರೇ ಸುಮ್ಮನಿರುವಾಗ ಅವರಾದರೂ ಏನು ಮಾಡಿಯಾರು?
ಈಗ ಬೇಕಾಗಿರುವುದು ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದ ಕಾರ್ಯಕ್ರಮವಲ್ಲ, ಬದಲಿಗೆ ಪ್ರತಿ ಜಿಲ್ಲೆಯಲ್ಲಿಯೂ ಅವರು ಬರನಿರ್ವಹಣೆ ಕಾರ್ಯಕ್ರಮದ ಪರಿಶೀಲನೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಹೆಸರಿನಲ್ಲಿ ಬರದ ಸಮಸ್ಯೆಯ ವಿಚಾರವೂ ನಡೆಯುತ್ತಿಲ್ಲ. ಅದರ ಬದಲು, ರಾಯಚೂರು ಜಿಲ್ಲೆಯ ಗ್ರಾಮ ವಾಸ್ತವ್ಯದ ಪ್ರವಾಶಸದಲ್ಲಿ, ಜನರು ತಮ್ಮ ಸಮಸ್ಯೆ ಮುಖ್ಯಮಂತ್ರಿಗಳಿಗೆ ವಿವರಿಸಲು ಬಂದಾಗ, “ಮೋದಿಗೆ ಮತ, ಕೆಲಸಕ್ಕೇ ನಾವಾ?” ಎಂದು ವ್ಯಂಗ್ಯವಾಗಿ ಮಾತನಾಡಿ ಕಳಿಸಿದ್ದಾರೆ. ಎಂತಹ ವಿಪರ್ಯಾಸ?
ಅಂಕಣಕಾರರು ಹಿರಿಯ ಪತ್ರಕರ್ತರು