ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ರಾಜಕಾರಣಿ ಎ ಎಚ್ ವಿಶ್ವನಾಥ್ ಅವರು ಸಚಿವರಾಗಲು ಅನರ್ಹ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ.
ಶಾಸಕಾಂಗ ಪರಿಷತ್ತಿನ ಸದಸ್ಯರಾಗಿರುವ (MLC) ವಿಶ್ವನಾಥ್, ಸಂವಿಧಾನದ 164 (1) (b) ಮತ್ತು 361 (B) ವಿಧಿಯ ಅಡಿ ಅನರ್ಹಗೊಂಡಿದ್ದು, 2021ರ ಮೇ ಯಲ್ಲಿ ವಿಧಾನ ಪರಿಷತ್ ಅವಧಿ ಪೂರ್ಣಗೊಳ್ಳುವವರೆಗೂ ಸಚಿವರಾಗಲು ಅರ್ಹರಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠ ಆದೇಶಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದಾಗ್ಯೂ, ಆರ್ ಶಂಕರ್ ಹಾಗೂ ಎನ್ ನಾಗರಾಜ್(MTB) ಅವರು 164 (1) (b) ಮತ್ತು 361 (B) ವಿಧಿಯ ಅಡಿ ಅನರ್ಹವಾಗಿಲ್ಲದ್ದರಿಂದ ಅವರಿಗೆ ಈ ಮಧ್ಯಂತರ ಆದೇಶ ಅನ್ವಯಿಸುವುದಿಲ್ಲ ಎಂದಿದೆ. ಹಾಗಾಗಿ ಆರ್ ಶಂಕರ್ ಹಾಗೂ ಎಂಟಿಬಿ ನಾಗರಾಜ್ ಅವರು ಸದ್ಯ ನಿರಾಳರಾಗಿದ್ದಾರೆ.
ಸಚಿವ ಸಂಪುಟಕ್ಕೆ ಮಂತ್ರಿಗಳನ್ನು ನಾಮನಿರ್ದೇಶನ ಮಾಡುವ ಬಗ್ಗೆ ರಾಜ್ಯಪಾಲರಿಗೆ ಶಿಫಾರಸು ಮಾಡುವಾಗ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವನಾಥರ ಅನರ್ಹತೆಯ ವಿಷಯವನ್ನು ಗಣನೆಗೆ ತೆಗೆದುಕೊಳ್ಳಬೇಕು. ಒಂದು ವೇಳೆ ಮುಖ್ಯಮಂತ್ರಿಯವರು ವಿಶ್ವನಾಥ್ ಹೆಸರನ್ನು ಶಿಫಾರಸ್ಸು ಮಾಡಿದರೂ, ರಾಜ್ಯಪಾಲರು ತನ್ನ ಆದೇಶವನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಪಕ್ಷಾಂತರದ ಹಿನ್ನೆಲೆಯಲ್ಲಿ ಅನರ್ಹಗೊಂಡಿದ್ದ ವಿಶ್ವನಾಥ್ ಮತ್ತು ನಾಗರಾಜ್ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. ಇವರನ್ನು ಸಚಿವರನ್ನಾಗಿಸುವ ಏಕೈಕ ಉದ್ದೇಶದಿಂದ ಹಿಂಬಾಗಿಲ ಮೂಲಕ ಎಂಎಲ್ಸಿಗಳನ್ನಾಗಿ ನೇಮಕ ಮಾಡಲಾಗಿದೆ” ಎಂದು ಅರ್ಜಿದಾರ ಪರ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದಾರೆ.












