ದಿನದಿಂದ ದಿನಕ್ಕೆ ಕರೋನಾ ಸೋಂಕು ಹೆಚ್ಚುತ್ತಲೇ ಸಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕರೋನಾ ಸೋಂಕು ಇನ್ನೂ ನಿಯಂತ್ರಣದಲ್ಲೇ ಇದೆ ಎಂದು ಎಷ್ಟೇ ಹೇಳಿದರೂ ಸೋಂಕಿತರ ಸಂಖ್ಯೆ ಸರ್ಕಾರದ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಲೆ ಇದೆ. ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬಾರದು ಎಂದು ಶಿಕ್ಷಣ ತಜ್ಞರು ಒತ್ತಾಯ ಮಾಡಿದ್ದರು. ಈ ನಡುವೆ ಪೋಷಕರು ಕೂಡ ಮಕ್ಕಳನ್ನು ಪರೀಕ್ಷೆ ಬರೆಯಲು ಕಳುಹಿಸಲು ಹಿಂದೇಟು ಹಾಕಿದ್ದರೂ ಸರ್ಕಾರಕ್ಕೂ ಮನವಿ ಮಾಡಿಕೊಂಡಿದ್ದರು. ಆದರೂ ಪಟ್ಟು ಬಿಡದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷೆ ನಡೆಸಿಯೇ ತೀರುತ್ತೇವೆ ಎನ್ನುವ ಹಠಕ್ಕೆ ಬಿದ್ದು ಪರೀಕ್ಷೆ ನಡೆಸುತ್ತಿದ್ದಾರೆ. ಆದರೆ, ಇದೀಗ ಸುರೇಶ್ ಕುಮಾರ್ ಲೆಕ್ಕಾಚಾರಗಳು ತಲೆಕೆಳಗಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗುತ್ತಿವೆ.
ಪರೀಕ್ಷೆ ಆರಂಭಕ್ಕೂ ಮುನ್ನ 10ನೇ ತರಗತಿಯ 10 ವಿದ್ಯಾರ್ಥಿಗಳಿಗೆ ಕರೋನಾ ಸೋಂಕು ಇದೆ ಎಂದು ಸ್ವತಃ ಸುರೇಶ್ ಕುಮಾರ್ ವಿವರಿಸಿದ್ದರು. ಆ ಬಳಿಕ ಪರೀಕ್ಷೆಯೂ ಆರಂಭವಾಗಿತ್ತು. ಆದರೆ, ಇದೀಗ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಇವತ್ತು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಕೊಟ್ಟಿರುವ ಸಚಿವ ಸುರೇಶ್ ಕುಮಾರ್, SSLC ಪರೀಕ್ಷೆಯ 3ನೇ ದಿನವಾದ ಇಂದು ಮಹತ್ವದ ದಿನ. ಗಣಿತ ವಿಷಯದಲ್ಲಿ 8 ಲಕ್ಷದ 8 ಸಾವಿದ 650 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಆದರೆ 7 ಲಕ್ಷದ 91 ಸಾವಿರ 987 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲಿ ಕರೋನಾ ಕಂಟೈನ್ಮೆಂಟ್ ಝೋನ್ನಲ್ಲಿ ವಾಸವಾಗಿರುವ 2048 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ನೆರೆ ರಾಜ್ಯಗಳಿಂದ ಬಂದಿರುವ 659 ಮಕ್ಕಳು ಪರೀಕ್ಷೆ ಬರೆಯಬೇಕಿತ್ತು.ಅದರೆ 600 ಮಕ್ಕಳು ಮಾತ್ರ ಬರೆದಿದ್ದಾರೆ ಎಂದಿದ್ದಾರೆ. ಇನ್ನೂ 12,644 ವಿದ್ಯಾರ್ಥಿಗಳ ಪೈಕಿ 12,539 ಮಕ್ಕಳು ಹಾಜರಾಗಿದ್ದರು ಎಂದಿದ್ದಾರೆ. ಹೋಮ್ ಕ್ವಾರಂಟೈನ್ನಲ್ಲಿದ್ದ 57 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು ಎಂದಿರುವ ಸುರೇಶ್ ಕುಮಾರ್, ಕೋವಿಡ್ ಪಾಸಿಟಿವ್ ಇರುವ 25 ವಿದ್ಯಾರ್ಥಿಗಳು ಇದ್ದಾರೆ. ಕರೋನಾ ಸೋಂಕು ಬಂದಿರುವ ವಿದ್ಯರ್ಥಿಗಳಿಗೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ಕೊಡ್ತೇವೆ ಎಂದಿದ್ದಾರೆ.
ಎಲ್ಲಾ ಸರಿ ಎಂದ ಮೇಲೆ ಲೆಕ್ಕಾಚಾರ ತಪ್ಪಿದ್ದು ಎಲ್ಲಿ..?
ಕರೋನಾ ಸೋಂಕು ಮಕ್ಕಳಿಗೆ ಹರಡುತ್ತದೆ ಎಂದು ಭಾವಿಸದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಪರೀಕ್ಷೆ ನಡೆಸಿಯೇ ಸಿದ್ಧ ಎಂದು ರಾಜ್ಯ ಹೈಕೋರ್ಟ್ಗೆ ಮಾಹಿತಿ ನೀಡಿದ್ದರು. ಸರ್ಕಾರ ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಅದೇ ಕಾರಣದಿಂದ ಸಾರ್ವಜಮಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಹೈಕೋರ್ಟ್ ಪರೀಕ್ಷೆ ನಡೆಸಲು ಹಸಿರು ನಿಶಾನೆ ತೋರಿಸಿತ್ತು. ಆ ಬಳಿಕ ಸುಪ್ರೀಂಕೋರ್ಟ್ ಕೂಡ ರಾಜ್ಯ ಸರ್ಕಾರದ ವಾದಕ್ಕೆ ಮನ್ನಣೆ ಕೊಟ್ಟು ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿತ್ತು. ಆದರೀಗ ಮಕ್ಕಳಲ್ಲಿ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಪರೀಕ್ಷೆ ಹಾಲ್ನಲ್ಲೇ ಪತ್ತೆಯಾಯ್ತು ಕರೋನಾ ಪಾಸಿಟಿವ್..!
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯಲ್ಲಿ ಕರೋನಾ ಸೋಂಕು ದೃಢವಾಗಿದೆ. ಕಳೆದ ಇಂಗ್ಲಿಷ್ ಪರೀಕ್ಷೆ ವೇಳೆಯೂ ಹಾಜರಾಗಿದ್ದ ವಿದ್ಯಾರ್ಥಿ, ಇಂದಿನ ಗಣಿತ ಪರೀಕ್ಷೆಯಲ್ಲೂ ಹಾಜರಾಗಿ ಸಾಮಾನ್ಯ ವಿದ್ಯಾರ್ಥಿಗಳ ಜೊತೆಗೆ ಪರೀಕ್ಷೆ ಬರೆಯುತ್ತಿದ್ದ. ಆದರೆ, ಕರೋನಾ ಸೋಂಕು ಇರುವುದು ಗೊತ್ತಾಗುತ್ತಿದ್ದಂತೆ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಬಂದ ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ವಿದ್ಯಾರ್ಥಿಯನ್ನು ಕೋವಿಡ್ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದರು.

ಸೋಂಕು ಇದ್ದರೂ ಪರೀಕ್ಷಾ ಕೇಂದ್ರಕ್ಕೆ ಬಿಟ್ಟಿದ್ದು ಯಾಕೆ..?
ಕರೋನಾ ಸೋಂಕು ಇದ್ದವರು ಪರೀಕ್ಷೆಗೆ ಹಾಜರಾಗುವಂತಿಲ್ಲ ಎಂದು ಸಚಿವರು ಘೋಷಣೆ ಮಾಡಿದ್ದರು. ಆದರೂ ಹಾಸನದ ವಿದ್ಯರ್ಥಿ ಪರೀಕ್ಷೆ ಹಾಜರಾಗಿದ್ದು ಹೇಗೆ..? ಎನ್ನುವ ಪ್ರಶ್ನೆ ಉದ್ಬವವಾಗಿದೆ. ಈ ಪ್ರಶ್ನೆಗೆ ಜಿಲ್ಲಾಡಳಿತ ಸಿದ್ಧ ಉತ್ತರ ಕೊಟ್ಟಿದ್ದು, ವಿದ್ಯಾರ್ಥಿಗೆ ಯಾವುದೇ ರೀತಿಯ ಸೋಂಕಿನ ಗುಣಲಕ್ಷಣ ಇರಲಿಲ್ಲ. ಹಾಗಾಗಿ ಪರೀಕ್ಷೆಗೆ ಅವಕಾಶ ಕೊಡಲಾಗಿತ್ತು ಎಂದು ಹೇಳಿದೆ. ಸೋಂಕಿನ ಲಕ್ಷಣ ಇಲ್ಲದಿದ್ದರೆ ಕರೋನಾ ತಪಾಸಣೆ ನಡೆಸಿದ್ದು ಯಾಕೆ? ಎನ್ನುವ ಪ್ರಶ್ನೆಗೆ ಹಾಸನ ಜಿಲ್ಲಾಡಳಿತವೇ ಕೊಟ್ಟಿರುವ ಉತ್ತರ 16 ವರ್ಷದ ಬಾಲಕನಿಗೆ ಡೇಂಘಿ ಜ್ವರ ಬಂದಿತ್ತು. ಆದರೆ ಹುಷಾರ್ ಆಗಿದ್ದರಿಂದ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು. ಆದರೆ ಕಂಟೈನ್ಮೆಂಟ್ ಝೋನ್ನಿಂದ ಬಂದ ವಿದ್ಯರ್ಥಿಗಳು ಹಾಗೂ ಥರ್ಮಲ್ ಸ್ಕ್ರೀನಿಂಗ್ ವೇಳೆ ಉಷ್ಣತೆ ಹೆಚ್ಚಾಗಿದ್ದರೆ ಪ್ರತ್ಯೇಕವಾಗಿ ಪರೀಕ್ಷೆ ಬರೆಸುವ ನಿರ್ಧಾರ ಮಾಡಲಾಗಿತ್ತು. ಜ್ವರದಿಂದ ಬಳಲಿದ್ದ ವಿದ್ಯಾರ್ಥಿಗೆ ಪರೀಕ್ಷೆ ಕೊಡಿಸಲೇಬೇಕು ಎನ್ನುವುದಾದರೆ ಪ್ರತ್ಯೇಕವಾಗಿ ಕೂರಿಸಿ ಬರೆಸಬಹುದಿತ್ತಲ್ಲವೇ..? ಆದರೆ ಇದೀಗ ಅಮಾಯಕ 19 ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಗುರುವಾರ ಸೇರಿ 2 ದಿನದ ಪರೀಕ್ಷೆಯಲ್ಲಿ ವಿದ್ಯಾರ್ಥಿ ಭಾಗಿಯಾಗಿದ್ದಾನೆ. ಮನೆಯಿಂದ ಬಸ್ನಲ್ಲಿ ಸಂಚಾರ ಮಾಡಿದ್ದಾನೆ ಎನ್ನುವ ಮಾಹಿತಿಯಿದೆ. ಅದೆಷ್ಟು ಜನರನ್ನು ಭೇಟಿ ಮಾಡಿದ್ದಾನೋ ಎನ್ನುವ ಆತಂಕ ಜಿಲ್ಲಾಡಳಿತವನ್ನು ಕಾಡುತ್ತಿದೆ. ಈ ಬಗ್ಗೆ ಮಾತನಾಡಿರುವ ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್, ಮಲ್ಲಿಪಟ್ಟಣದ ಸರ್ಕಾರಿ ಶಾಲೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗೆ ಪಾಸಿಟೀವ್ ಬಂದಿದೆ, ವಿದ್ಯಾರ್ಥಿಗೆ ಅಷ್ಟಾಗಿ ಕರೋನ ಗುಣಲಕ್ಷಣ ಇರಲಿಲ್ಲ. ಜ್ವರದ ಲಕ್ಷಣ ಇರಲಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಇದೀಗ ಪಾಸಿಟಿವ್ ಬಂದಿದೆ. ಪರೀಕ್ಷಾ ಕೇಂದ್ರದಲ್ಲಿದ್ದ 18 ಮಕ್ಕಳು, ಒಬ್ಬರು ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುವುದು ಎಂದಿದ್ದಾರೆ. ಕರೋನ ಸೋಂಕಿತ ವಿದ್ಯಾರ್ಥಿ ಜೊತೆಗೆ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆ ಕೊಡುವ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ.

ಶಿಕ್ಷಣ ಇಲಾಖೆಗೆ ಮಾಹಿತಿ ಕೋರಿ ಪತ್ರ ಬರೆದಿದ್ದೇವೆ ಎಂದಿದ್ದಾರೆ. ಇತ್ತ, ಜೂನ್ 25 ರಂದು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಅರಸೀಕೆರೆ ಪೌಢ ಶಾಲೆಯಲ್ಲಿ ಓರ್ವ ವೀಕ್ಷಕರು ಪರೀಕ್ಷೆ ಕೇಂದ್ರಕ್ಕೆ ಹೋಗಿದ್ದು, ಅಧಿಕ್ಷರ ಕೊಠಡಿಯಲ್ಲಿ ಕುಳಿತು ವಾಪಸ್ ಬಂದಿದ್ದಾರೆ ಎನ್ನಲಾಗಿದೆ. ಆದರೆ ಆ ವೀಕ್ಷಕರಿಗೆ ಕರೋನಾ ಸೋಂಕು ದೃಢಪಟ್ಟಿದ್ದು ಸಾಕಷ್ಟು ಮಂದಿಗೆ ಕರೋನಾ ಭಯ ಶುರುವಾಗಿದೆ. ಸುರೇಶ್ ಕುಮಾರ್ ಹಠ ಹಿಡಿದು ಸಾಧಿಸಲು ಹೊರಟಿದ್ದ ರೈಲಿನ ಹಳಿ ತಪ್ಪಿದೆ. ಒಟ್ಟಾರೆ, ಸುರೇಶ್ ಕುಮಾರ್ ಲೆಕ್ಕಾಚಾರ ತಪ್ಪಾಗಿದೆ ಎನ್ನುವುದನ್ನು ಮಾತ್ರ ಖಂಡಿತವಾಗಿ ಹೇಳಬಹುದಾಗಿದೆ.






