ಮಂದಾರ ಎಂಬ ಊರು ರಾಮಾಯಣ ಮಹಾಕಾವ್ಯಕ್ಕಾಗಿ ಹೆಸರುವಾಸಿ. ಮಂದಾರ ರಾಮಾಯಣ ಬರೆದವರು ಮಂದಾರ ಕೇಶವಭಟ್ಟರು. ಇದು ತುಳು ಭಾಷೆಯ ಮಹಾಕಾವ್ಯ. ವಿಶ್ವದ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳಲ್ಲಿ ಇದೂ ಒಂದು. ಇಂದು ಅಂತಹ ಮಂದಾರ ಎಂಬ ನಾಡನ್ನು ಮಂಗಳೂರು ಮಹಾನಗರದ ಘನತ್ಯಾಜ್ಯ ರಾಕ್ಷಸ ಕಬಳಿಸಿದ್ದಾನೆ. ಮಳೆ ನೀರಿನ ಪ್ರವಾಹ ಒಂದೆರಡು ದಿನಗಳಲ್ಲಿ ತಗ್ಗಬಹುದು. ಕಸ ಪ್ರವಾಹದ ಸಮಸ್ಯೆ ಶಾಶ್ವತ. ಇಲ್ಲಿನ ಮೂವತ್ತು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಮಂದಾರ ಕೇಶವ ಭಟ್ಟರು ಇರುತ್ತಿದ್ದ ಮನೆ ಕೂಡ ಖಾಲಿ ಮಾಡಲಾಗಿದೆ.
ಮಂಗಳೂರು ಮಹಾನಗರದ ಕಸ ಸುರಿಯುವ ಜಾಗವೇ ವಾಮಂಜೂರು ಸಮೀಪದ ಪಚ್ಚನಾಡಿ. ಸುಮಾರು ಐವತ್ತು ವರ್ಷಗಳಿಗೂ ಹಿಂದಿನಿಂದಲೂ ಪಚ್ಚನಾಡಿಯಲ್ಲಿ ಕಸ ಸುರಿಯಲಾಗುತ್ತಿದೆ. ಈಗೀಗ ಸುತ್ತಮುತ್ತಲಿನ ಪುರಸಭೆ, ಪಟ್ಟಣ ಪಂಟಾಯತುಗಳ ಘನತ್ಯಾಜ್ಯಗಳನ್ನು ಇಲ್ಲಿ ಸುರಿಯಲಾಗುತ್ತಿದೆ.
ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಗೆ ಪಚ್ಚನಾಡಿಯ ಡಂಪ್ ಯಾರ್ಡಿನಲ್ಲಿ ಶೇಖರವಾಗಿದ್ದ ಹಲವು ಲಕ್ಷ ಟನ್ ಕಸ ನಿಧಾನವಾಗಿ ಕೆಳಭಾಗದಲ್ಲಿ ಇರುವ ಮಂದಾರ ಎಂಬ ಊರಿಗೆ ಜರಿದು ಬಿದ್ದಿದೆ. ಹಲವಾರು ವರ್ಷಗಳ ಹಳೆಯ ಕೊಳೆತು ನಾರುತ್ತಿರುವ, ಮಿಥೇನ್ ಅನಿಲ ಹೊರ ಸೂಸುವ, ಅಸಾಧ್ಯ ವಾಸನೆಯ ಕಸದ ಪ್ರವಾಹವು ಹಲವು ಮನೆಗಳನ್ನು, ಹತ್ತು ಸಾವಿರಕ್ಕೂ ಹೆಚ್ಚು ಅಡಕೆ ಮರಗಳಿದ್ದ ತೋಟಗಳನ್ನು, ಜಾನುವಾರು ಕೊಟ್ಟಿಗೆಗಳನ್ನು ಅಪೋಶನ ತೆಗೆದುಕೊಂಡಿದೆ. ಕೆಲವರ ಮನೆ ಉಳಿದುಕೊಂಡಿದ್ದರೂ ಈ ಪರಿಸರದಲ್ಲಿ ವಾಸಿಸಲಾಗದಂತಹ ಅಸಹನೀಯ ವಾತಾವರಣ ನಿರ್ಮಾಣವಾಗಿದೆ.
ಈ ಹಿಂದೆ ವಾಮಂಜೂರು ಪರಿಸರದಲ್ಲಿ ಜನಜೀವನ ಸಹನೀಯವಾಗಿತ್ತು ಎಂದಲ್ಲ. ಡಂಪ್ ಯಾರ್ಡಿನ ವಾಸನೆ ಊರೆಲ್ಲ ಹರಡುತ್ತಿತ್ತು. ಇದೂ ಸಾಲದು ಎಂಬಂತೆ ಕೆಲವೊಮ್ಮೆ ರಾಸಾಯನಿಕ ಪ್ರಕ್ರಿಯೆಯಿಂದ ಉಂಟಾಗುವ ಬೆಂಕಿಯಿಂದ ಹಲವಾರು ದಿನಗಳು ಊರೆಲ್ಲ ದಟ್ಟ ಹೊಗೆ ಹರಡುತ್ತಿತ್ತು. ಇತ್ತೀಚೆಗೆ ಹೊಗೆಯ ಸಮಸ್ಯೆ ಹೆಚ್ಚಾಗಿತ್ತು. ಪಚ್ಚನಾಡಿಯ ಅರ್ಧ ಕಿಲೋ ಮೀಟರ್ ಪರಿಸರದಲ್ಲಿ 1250ಕ್ಕಿಂತ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕಳೆದ ಎರಡು ದಶಕಗಳಿಂದ ಪರಿಸರದ ಜನತೆ ವಿವಿಧ ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಕಡಲತಡಿಯಲ್ಲಿ ಮಂಗಳೂರು ಮಹಾನಗರ ಚಾಚಿಕೊಂಡಿದ್ದರೆ, ಡಂಪಿಗ್ ಯಾರ್ಡ್ ಇರುವ ವಾಮಂಜೂರು ಪ್ರದೇಶ ಮಂಗಳೂರು – ಸೋಲ್ಹಾಪುರ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಮಂಗಳೂರು ನಗರದಿಂದ ಬಹು ಎತ್ತರದಲ್ಲಿ ಇರುವ ಗುಡ್ಡದ ತುದಿಯ ಬಯಲು ಪ್ರದೇಶ. ಸುಮಾರು 79 ಎಕರೆ ವಿಸ್ತಾರವಾಗಿರುವ ಡಂಪಿಂಗ್ ಯಾರ್ಡ್ ಇದಾಗಿದೆ. ಆರುವತ್ತು ವರ್ಷಗಳ ಹಿಂದೆ ಇದೊಂದು ಕೆರೆಯಾಗಿತ್ತು. ಮಂಗಳೂರು ನಗರ ದೊಡ್ಡದಾಗುತ್ತಿದ್ದಂತೆ ಕೆರೆಯ ಸುತ್ತಲೂ ಕಸ ಸುರಿಯಲಾಗುತಿತ್ತು. ಕ್ರಮೇಣ ಕೆರೆ ಮಾಯವಾಗಿ ಶಾಶ್ವತ ಡಂಪಿಂಗ್ ಯಾರ್ಡ್ ಆಯ್ತು. ಈಗ ಇದನ್ನು ಡಂಪಿಂಗ್ ಯಾರ್ಡ್ ಎಂದು ಕರೆಯುವಂತಿಲ್ಲ. 2000ರಲ್ಲಿ ಬಂದ ಘನತ್ಯಾಜ್ಯ ವಿಲೇವಾರಿ ಕಾನೂನು ಪ್ರಕಾರ ಇದನ್ನು ಲ್ಯಾಂಡ್ ಫಿಲ್ ಸೈಟ್ ಎಂದು ಮರು ನಾಮಕರಣ ಮಾಡಲಾಗಿದೆ. ಕಾನೂನು ಬಂದು ಎರಡು ವರ್ಷಗಳು ಕಳೆದು ಘನತ್ಯಾಜ್ಯ ವಿಲೇವಾರಿ ಸಂಬಂಧಪಟ್ಟಂತೆ ಕಾನೂನು ಪ್ರಕಾರ ವ್ಯವಸ್ಥೆ ಬರಲು ಬರೊಬ್ಬರಿ ಹತ್ತು ವರ್ಷಗಳು ಬೇಕಾಯಿತು. ಈಗಿರುವ ಲ್ಯಾಂಡ್ ಫಿಲ್ ಸೈಟ್ ಇಳಿಜಾರು ಪ್ರದೇಶದಲ್ಲಿ ಇದೆ. ಆದುದರಿಂದಲೇ ಈ ಸಮಸ್ಯೆ ತಲೆದೋರಿದೆ.
ದಿನನಿತ್ಯ 250 ಟನ್ ಘನತ್ಯಾಜ್ಯ ಇಲ್ಲಿಗೆ ಬರುತ್ತಿತ್ತು, ಅದನ್ನು ಗೊಬ್ಬರವಾಗಿ ಸಂಸ್ಕರಣೆ ಮಾಡಿದ ನಂತರ ಉಳಿದಿರುವ ತ್ಯಾಜ್ಯವನ್ನು ಲ್ಯಾಂಡ್ ಫಿಲ್ ಸೈಟಿನಲ್ಲಿ ಹೂಳಬೇಕು. ಇದು ಈಗಿನ ವ್ಯವಸ್ಥೆ. ಈಗ ಕಸದ ಪ್ರವಾಹ ಬಂದಿರುವುದು ಕಳೆದ ಹಲವರು ದಶಕಗಳಿಂದ ಹಾಕಿರುವ ರಾಶಿಯಿಂದ.
ಹೊಸ ಕಾನೂನು ಬಂದ ನಂತರ ಪೇರಿಸಲಾದ ಹಳೆಯ ಕಸದ ಮೇಲೆ ಒಂದು ರೀತಿಯ ಕವರ್ ಮಾಡಲಾಗಿತ್ತು. ಸ್ಥಳೀಯರು ಆಪಾದಿಸುವಂತೆ ಇದರ ಮೇಲೆಯೇ ಮತ್ತೆ ಕಸ ಪೇರಿಸದ ಪರಿಣಾಮ ಮಳೆ ಪ್ರಮಾಣದ ಹೆಚ್ಚಳದಿಂದ ಕಸದ ರಾಶಿ ನಿಧಾನವಾಗಿ ಕೆಳಭಾಗದ ಮಂದಾರ ಊರಿಗೆ ಜರಿದು ಬಂದಿದೆ.
ಯಾರೂ ಕಲ್ಪಿಸದಂತಹ ರೀತಿಯಲ್ಲಿ ತ್ಯಾಜ್ಯ ರಾಶಿ ಮಂದಾರ ಎಂಬ ಊರಿಗೆ ನುಗ್ಗಿದೆ. ಅದೂ ಹಲವು ಲಕ್ಷ ಟನ್ ಪ್ರಮಾಣದಲ್ಲಿ. ಕೇವಲ ಕಸ ಮಾತ್ರವಲ್ಲದೆ ಅದರೊಂದಿಗೆ ಕೊಳಚೆಗಿಂತಲೂ ಕೆಟ್ಟದಾದ ಕಪ್ಪು ನೀರು ಹರಿದು ಬರುತ್ತಿದೆ.. ಕಸದ ಪ್ರವಾಹ ಮಂದಾರ ಪ್ರದೇಶದ ಜನರನ್ನು ಅತಂತ್ರಗೊಳಿಸಿದೆ. ಹಚ್ಚ ಹಸಿರಿನ ಕೃಷಿ ಪ್ರದೇಶ ಈಗ ಹಳೆಯ ಯಾವ ಕುರುಹನ್ನು ಉಳಿಸಿಕೊಂಡಿಲ್ಲ. ಸುಮಾರು ಎರಡು ಕಿ.ಮೀ. ಉದ್ದಕ್ಕೆ ಪ್ರವಾಹದ ರೀತಿಯಲ್ಲಿ ಹರಿದು ಬಂದಿರುವ ತ್ಯಾಜ್ಯ ರಾಶಿ ಬಿದ್ದಿದೆ. ಮುನ್ನೂರು ಕುಟುಂಬಗಳನ್ನು ಕುಡುಪು ಗ್ರಾಮದಲ್ಲಿ ಸಿದ್ಧವಾಗಿರುವ ಗೃಹ ಮಂಡಳಿಯ ಬಡಾವಣೆಗೆ ಸ್ಥಳಾಂತರಿಸಲಾಗಿದೆ. ಇವರಲ್ಲಿ ಬೀಡಿ ಕಟ್ಟುವ, ಹೈನುಗಾರಿಕೆಯೊಂದಿಗೆ ಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿ ಜೀವನ ಮಾಡುವ ಸಣ್ಣ ಕೃಷಿಕರು, ಕೂಲಿಕಾರ್ಮಿಕರು, ಉದ್ಯೋಗಿಗಳು ಸೇರಿದ್ದಾರೆ.

ಪಚ್ಚನಾಡಿ ಡಂಪಿಂಗ್ ಯಾರ್ಡ್ ಕುರಿತು ಸುಸ್ಥಿರ ಘನತ್ಯಾಜ್ಯ ನಿರ್ವಹಣೆಗಾಗಿ ಮಂಗಳೂರು ಮಹಾನಗರಪಾಲಿಕೆ ಹಲವು ಪವರ್ ಪಾಯಿಂಟ್ ಪ್ರಸಂಟೇಶನ್ (ಪಿಪಿಟಿ) ಮಾಡಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಘನತ್ಯಾಜ್ಯ ಕಾನೂನು ಬಂದು ಎರಡು ದಶಕಗಳಾದರು ಮಂಗಳೂರು ಮಹಾನಗರ ಪಾಲಿಕೆ ಬದಲಿ ಲ್ಯಾಂಡ್ ಫಿಲ್ ಸೈಟ್ ಹುಡುಕುವ ಕೆಲಸ ಮಾಡಿಲ್ಲ. ವೈಜ್ಞಾನಿಕ ಮತ್ತು ಕಾನೂನು ಪ್ರಕಾರ ಘನತ್ಯಾಜ್ಯ ವಿಲೇವಾರಿ ಆಗುತ್ತಿರಲಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ, ವಾಮಂಜೂರು ಪರಿಸರದ ಜನತೆ ನಿರಂತರವಾಗಿ ಧ್ವನಿ ಎತ್ತುತ್ತಿದ್ದರು, ಅಧಿಕಾರಿಗಳಾಗಲಿ, ಆಳುವವರಾಗಲಿ ಕ್ಯಾರೇ ಅಂದಿಲ್ಲ. ಈಗ ಆಗ ಬಾರದ್ದು ಆಗಿ ಹೋಗಿದೆ. ಜಿಲ್ಲಾಡಳಿತ ಸಂತ್ರಸ್ತರಿಗೆ ಬದಲಿ ಕೃಷಿ ಜಮೀನು ಮಂಜೂರು ಮಾಡಬೇಕಾಗಿದೆ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಇಲ್ಲಿನ ಸಮಸ್ಯೆಗೆ ಇನ್ನಷ್ಟೇ ಪರಿಹಾರ ಹುಡುಕಬೇಕಾಗಿದೆ.
ಸ್ಥಳೀಯರ ಪ್ರಕಾರ ಉಳ್ಳಾಲ ಹಾಗೂ ಬಂಟ್ವಾಳ ದಿಂದ ಪ್ರತಿದಿನ ಸುಮಾರು 50 ಟನ್ನಷ್ಟು ಕಸವನ್ನು ಸಂಸ್ಕರಣೆ ನಡೆಸದೆ ನೇರವಾಗಿ ಡಂಪಿಂಗ್ ಯಾರ್ಡ್ನಲ್ಲಿ ಸುರಿಯಲಾಗುತ್ತಿದೆ. ಪ್ರತಿದಿನ ಸುಮಾರು 100 ಟನ್ ಕಸವನ್ನು ಯಾರ್ಡ್ನಲ್ಲಿ ತಂದು ಸುರಿಯಲಾಗುತ್ತಿದೆ. ಹೀಗೆ ಕಳೆದ ಸುಮಾರು 10 ವರ್ಷಗಳಿಗೂ ಅಧಿಕ ಸಮಯದಿಂದ ಸುರಿಯಾದ ಲಕ್ಷಗಟ್ಟಲೆ ಟನ್ ಕಸ ಡಂಪಿಂಗ್ ಯಾರ್ಡ್ನಲ್ಲಿದೆ. ಪಚ್ಚನಾಡಿ ಮಂಗಳೂರಿನ ಜ್ವಲಂತ ಉದಾಹರಣೆ ಆಗಿದ್ದು, ಇನ್ನಾದರು ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.