ರಾಜ್ಯಪಾಲ ವಜೂಭಾಯಿ ವಾಲಾ ಅವರು ಶುಕ್ರವಾರ ಎರಡು ಬಾರಿ ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಗಡುವು ವಿಧಿಸಿ ಪತ್ರ ಬರೆದಿರುವುದು ವಿಭಿನ್ನ ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. ಮೊದಲ ಬಾರಿ 15 ಶಾಸಕರ ರಾಜಿನಾಮೆ ಉಲ್ಲೇಖಿಸಿ ಮೈತ್ರಿ ಸರ್ಕಾರಕ್ಕೆ ಬಹುಮತದ ಕೊರತೆಯಿದೆ ಎಂಬರ್ಥದಲ್ಲಿ ಪತ್ರ ಬರೆದಿರುವ ರಾಜ್ಯಪಾಲರು ಎರಡನೇ ಪತ್ರದಲ್ಲಿ ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಇದರಿಂದ ಕ್ರೋಧಗೊಂಡಿರುವ ಆಡಳಿತ ಪಕ್ಷ ಜೆಡಿಎಸ್, ರಾಜ್ಯಪಾಲರು ತಮ್ಮ ವ್ಯಾಪ್ತಿ ಮೀರಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಸಾಂವಿಧಾನಿಕ ಚೌಕಟ್ಟಿನಲ್ಲಿ ವರ್ತಿಸುವಂತೆ ಸೂಚಿಸಬೇಕು ಎಂದು ಸುಪ್ರೀಂಕೋರ್ಟ್ ಗೆ ತಕರಾರು ಸಲ್ಲಿಸಿದೆ. ಮುಖ್ಯಮಂತ್ರಿಗೆ ರಾಜ್ಯಪಾಲರು ವ್ಯಾಪ್ತಿ ಮೀರಿ ಪತ್ರ ಬರೆದಿದ್ದಾರೆಯೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾಗಿ ನೇಮಕವಾದ ರಾಜ್ಯಪಾಲರು ಪಕ್ಷಾತೀತವಾಗಿ ವರ್ತಿಸದೆ, ಹಲವು ಬಾರಿ ತಮ್ಮ ಸ್ಥಾನಮಾನಗಳನ್ನು ದುರ್ಬಳಕೆ ಮಾಡಿಕೊಂಡಿರುವ ನಿದರ್ಶನಗಳು ಸ್ವಾತಂತ್ರ್ಯ ನಂತರದಿಂದ ಹೇರಳವಾಗಿವೆ. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿಯವರ ಕಾಲದಲ್ಲಿಯೂ ರಾಜ್ಯಪಾಲರ ಕಚೇರಿ ದುರ್ಬಳಕೆಯಾದ ನಿದರ್ಶನಗಳೂ ಸಾಕಷ್ಟು ಇವೆ.
ರಾಜ್ಯಪಾಲರಾಗಿ ನೇಮಕಗೊಳ್ಳುವ ಬಹುತೇಕರು ಪೂರ್ವಾಶ್ರಮದಲ್ಲಿ ರಾಜಕಾರಣಿಯಾಗಿದ್ದವರು. ಇಂಥವರು ರಾಜಭವನದಂಥ ಸಾಂವಿಧಾನಿಕ ಸಂಸ್ಥೆ ಪ್ರವೇಶಿಸಿದ ನಂತರ ನಿಪ್ಪಕ್ಷಪಾತವಾಗಿ ನಡೆದುಕೊಳ್ಳಬೇಕಾಗುತ್ತದೆ. ಆದರೆ, ರಾಜ್ಯಪಾಲರು ರಾಜಕೀಯ ಪಕ್ಷವೊಂದರ ವಕ್ತಾರರಂತೆ ವರ್ತಿಸುವುದು, ಸಾಂವಿಧಾನಿಕವಾಗಿ ಸ್ಥಾಪಿತಗೊಂಡ ಸರ್ಕಾರವನ್ನು ಪಿತೂರಿ ನಡೆಸಿ ಪತನಗೊಳಿಸುವುದು, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಂಡು ಕೇಂದ್ರದಲ್ಲಿ ಸ್ಥಾಪಿತವಾದ ಸರ್ಕಾರದ ರಾಜಕೀಯ ಸಿದ್ಧಾಂತಕ್ಕೆ ಪೂರಕವಾಗಿ ನಿರ್ಣಯ ಕೈಗೊಳ್ಳುವುದು, ತಮ್ಮ ಮಾತೃ ಪಕ್ಷದ ಸಿದ್ಧಾಂತಗಳು ಹಾಗೂ ವೈಯಕ್ತಿಕ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದರ ಮೂಲಕ ರಾಜಭವನದ ಘನತೆಯನ್ನು ಮಣ್ಣು ಪಾಲು ಮಾಡಿರುವ ಘಟನೆಗಳು ಸ್ವಾತಂತ್ರ್ಯದ ನಂತರ ಒಟ್ಟು 19 ಬಾರಿ ನಡೆದಿವೆ.
1952-2014ರ ವರೆಗೆ 62 ವರ್ಷಗಳಲ್ಲಿ 13 ಬಾರಿ ರಾಜ್ಯಪಾಲರು ವ್ಯಾಪ್ತಿ ಮೀರಿ ಅಥವಾ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ವರ್ತಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ 6 ವರ್ಷಗಳಲ್ಲಿ ಕನಿಷ್ಠ 6 ಬಾರಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ವಿವಿಧ ರಾಜ್ಯಗಳ ಬಿಜೆಪಿ ನೇಮಿಸಿದ ರಾಜ್ಯಪಾಲರು ನಡೆದುಕೊಂಡಿದ್ದಾರೆ.
ಮೇಘಾಲಯ: ಅತ್ಯಂತ ವಿವಾದಿತ ಮೇಘಾಲಯ ರಾಜ್ಯಪಾಲ ತತಾಗತ್ ರಾಯ್ ಅವರು ತಮ್ಮ ಸ್ಥಾನದ ಮಹತ್ವವನ್ನು ಮರೆತು ಹಲವು ಬಾರಿ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಅವರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ. “ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನೆಯ ಮೇಲಿನ ಉಗ್ರರ ದಾಳಿಗೆ ಕಾಶ್ಮೀರಿಗಳು ಕಾರಣ. ಆದ್ದರಿಂದ ಕಾಶ್ಮೀರದ ಮಂದಿಗೆ ಆರ್ಥಿಕ ಬಹಿಷ್ಕಾರ ಹಾಕಬೇಕು” ಎಂದು ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ತ್ರಿಪುರದ ರಾಜ್ಯಪಾಲರಾಗಿದ್ದ ರಾಯ್ ಅವರು ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಬಿಜೆಪಿಯು ಜಯದ ಉನ್ಮಾದದಲ್ಲಿ ಎಡಪಂತೀಯ ಚಿಂತಕರಾದ ಲೆನಿನ್, ಸ್ಟಾಲಿನ್ ಪ್ರತಿಮೆಗಳನ್ನು ಬಿಜೆಪಿ ಕಾರ್ಯಕರ್ತರು ಧ್ವಂಸ ಮಾಡಿದ್ದರು. ಇದನ್ನು ರಾಯ್ ಸಮರ್ಥಿಸುವ ಮೂಲಕ ಭಾರಿ ಟೀಕೆಗೆ ಗುರಿಯಾಗಿದ್ದರು. ಆನಂತರ ಅವರನ್ನು ಮೇಘಾಲಯಕ್ಕೆ ವರ್ಗಾಯಿಸಲಾಗಿತ್ತು.
ರಾಜಸ್ಥಾನ: ಇತ್ತೀಚೆಗೆ 2019ರ ಲೋಕಸಭಾ ಚುನಾವಣೆಗೂ ಮುನ್ನ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರು “ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನನಗೂ ಸೇರಿದಂತೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಹಂಬಲವಾಗಿದೆ” ಎನ್ನುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಇವರ ವಿರುದ್ಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ವರದಿ ಸಲ್ಲಿಸಲಾಯಿತಾದರೂ ಯಾವುದೇ ಕ್ರಮವಾಗಲಿಲ್ಲ.
ಉತ್ತರಾಖಂಡ: 2016ರಲ್ಲಿ ಉತ್ತರಾಖಂಡದ ಹರೀಶ್ ರಾವತ್ ನೇತೃತ್ವದ ಸರ್ಕಾರವನ್ನು ರಾಜ್ಯಪಾಲ ಕೆ ಕೆ ಕೌಲ್ ಅಮಾನತು ಮಾಡಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದರು. ಇದನ್ನು ಪುರಸ್ಕರಿಸಿದ್ದ ಮೋದಿ ಸರ್ಕಾರವು ರಾಷ್ಟ್ರಪತಿ ಆಡಳಿತ ಹೇರಿತ್ತು. ಆದರೆ, ಕೇಂದ್ರ ಸರ್ಕಾರದ ನಿರ್ಧಾರವನ್ನು ವಜಾಗೊಳಿಸಿ ಉತ್ತರಾಖಂಡ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಅವರ ಪೀಠವು ಆದೇಶ ಹೊರಡಿಸಿತ್ತು. ಇದರಿಂದ ಮೋದಿ ಸರ್ಕಾರ ತೀವ್ರ ಮುಜುಗರಕ್ಕೆ ಈಡಾಗಿತ್ತು. ಆನಂತರದಲ್ಲಿ ನ್ಯಾಯಮೂರ್ತಿ ಜೋಸೆಫ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಕೊಲಿಜಿಯಂ ನಿರ್ಧಾರವನ್ನು ಕೇಂದ್ರ ಸರ್ಕಾರ ಹಲವು ಬಾರಿ ತಳ್ಳಿಹಾಕಿತ್ತು. ಅಂತಿಮವಾಗಿ ಕೊಲಿಜಿಯಂ ನಿರ್ಧಾರಕ್ಕೆ ಸರ್ಕಾರ ತಲೆಬಾಗಲೇಬೇಕಾಯಿತು.
ಅರುಣಾಚಲ ಪ್ರದೇಶ: 2016ರಲ್ಲಿ ಅರುಣಾಚಲ ಪ್ರದೇಶದಲ್ಲೂ ರಾಜ್ಯಪಾಲ ಜೆ ಪಿ ರಾಜಖೋವಾ ಸಲಹೆ ಮೇರೆಗೆ ತರಾತುರಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ ಮೋದಿ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಹಿಂಪಡೆಯುವಂತೆ ಮಾಡಿತು.
ಗೋವಾ: 2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. 40 ಸ್ಥಾನಗಳ ವಿಧಾನಸಭೆಯಲ್ಲಿ 17 ಸ್ಥಾನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದ್ದರೂ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನ 10 ಶಾಸಕರನ್ನು ತನ್ನತ್ತ ಸೆಳೆದು ಅವರಿಗೆ ಬಿಜೆಪಿ ಅಧಿಕಾರ ಹಂಚಿಕೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಮಣಿಪುರ: 2017ರಲ್ಲಿ 60 ಸದಸ್ಯ ಬಲದ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ಹೊರಬೀಳಲಿಲ್ಲ. 28 ಸ್ಥಾನ ಗೆದ್ದ ಕಾಂಗ್ರೆಸ್ ಅತಿದೊಡ್ಡ ಪಕ್ಷ ಎನಿಸಿದರೂ ಸಾಮಾಜಿಕ ನ್ಯಾಯದ ಅಡಿ ಕಾಂಗ್ರೆಸ್ ಅನ್ನು ಸರ್ಕಾರ ರಚಿಸಲು ಆಹ್ವಾನಿಸದ ರಾಜ್ಯಪಾಲೆ ನಜ್ಮಾ ಹೆಫ್ತುಲ್ಲಾ ಬಿಜೆಪಿ ಮೈತ್ರಿ ಸರ್ಕಾರ ರಚಿಸಲು ಅನುವು ಮಾಡಿಕೊಟ್ಟಿದ್ದರು. ಮೋದಿ ಸರ್ಕಾರದಲ್ಲಿ ನಜ್ಮಾ ಸಚಿವರಾಗಿದ್ದವರು.
ಬಿಹಾರ: 2017ರಲ್ಲಿ ಬಿಹಾರದಲ್ಲಿಯೂ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರು ಕಾಂಗ್ರೆಸ್-ಆರ್ ಜೆಡಿ ಮಹಾಮೈತ್ರಿಯಿಂದ ಹೊರಬಂದು ಬಿಜೆಪಿ ಜತೆ ಸಖ್ಯ ಬೆಳೆಸಿ ಸರ್ಕಾರ ರಚಿಸಿದ ಜೆಡಿಯುನ ನಿತೀಶ್ ಕುಮಾರ್ ಪರವಾಗಿ ನಿಂತರು. ಬಿಹಾರ ವಿಧಾನಸಭೆಯಲ್ಲಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಆರ್ ಜೆಡಿಗೆ ಅವಕಾಶ ನಿರಾಕರಿಸಲಾಯಿತು.
ಮೇಘಾಲಯ: 2018ರ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿಯೂ 50 ಸ್ಥಾನಗಳ ಪೈಕಿ 21 ಸ್ಥಾನ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಬಂದ ಕಾಂಗ್ರೆಸ್ ಅನ್ನು ಕೈಬಿಟ್ಟು 19 ಸ್ಥಾನ ಗೆದ್ದ ಕೊನಾರ್ಡ್ ಸಂಗ್ಮಾ ನೇತೃತ್ವದ ಎನ್ ಪಿಪಿಗೆ ಸರ್ಕಾರ ರಚಿಸಲು ರಾಜ್ಯಪಾಲ ಗಂಗಾ ಪ್ರಸಾದ್ ಅವಕಾಶ ಮಾಡಿಕೊಟ್ಟರು. ಕೇವಲ ಎರಡು ಸ್ಥಾನ ಗೆದ್ದ ಬಿಜೆಪಿಯು ಸಮ್ಮಿಶ್ರ ಸರ್ಕಾರದ ಭಾಗವಾಗಿದೆ.
ಕಳೆದ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ತಕ್ಷಣ ಬಿಜೆಪಿಗೆ ಸಾಮಾಜಿಕ ನ್ಯಾಯ ನೆನಪಾಗಿತ್ತು. 224 ವಿಧಾನಸಭಾ ಸ್ಥಾನಗಳ ಪೈಕಿ 104 ಸ್ಥಾನ ಗೆದ್ದು ದೊಡ್ಡಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯ ಬಿ ಎಸ್ ಯಡಿಯೂರಪ್ಪನವರನ್ನು ಆಹ್ವಾನಿಸಿ, ಸರ್ಕಾರ ರಚಿಸಲು ಅವಕಾಶ ನೀಡಿದ್ದ ವಜೂಭಾಯಿ ವಾಲಾ ಅವರು ವಿಶ್ವಾಸಮತ ಸಾಬೀತುಪಡಿಸಲು ಬಿಎಸ್ವೈಗೆ 15 ದಿನಗಳ ಕಾಲಾವಕಾಶ ನೀಡಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸರ್ವೋಚ್ಚ ನ್ಯಾಯಾಲಯ ಬಿ ಎಸ್ ಯಡಿಯೂರಪ್ಪನವರಿಗೆ 24 ಗಂಟೆಯೊಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಆದೇಶಿಸಿತ್ತು.