ಕೆಲ ದಿನಗಳ ಹಿಂದೆ ಬಿಜೆಪಿ ನಾಯಕಿ ಹಾಗೂ ಉತ್ತರ ಪ್ರದೇಶದ ಸುಲ್ತಾನ್ ಪುರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೇನಕಾ ಗಾಂಧಿ, ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ತೂರಬ್ಖನಿ ಎಂಬಲ್ಲಿ ಬಹಿರಂಗ ಬೆದರಿಕೆ ಒಡ್ಡಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬಳಿಕ ಚುನಾವಣಾ ಆಯೋಗ ಮೇನಕಾ ಗಾಂಧಿಗೆ `ಪ್ರಚಾರ ನಿಷೇಧ’ ವಿಧಿಸಿತು. ಇದೇ ರೀತಿಯ ನಿಷೇಧ ಇತರ ರಾಜಕಾರಣಿಗಳಿಗೂ ವಿಧಿಸಲಾಗಿದೆ.
ಆದರೆ, ಈ ರಾಜಕಾರಣಿಗಳ ಪೈಕಿ ಮೇನಕಾ ಗಾಂಧಿ ಮಾಡಿದ ಭಾಷಣದ ವಿವರ ಪ್ರತಿಯೊಬ್ಬ ಭಾರತೀಯ ಮತದಾರ ಗಂಭೀರವಾಗಿ ಯೋಚಿಸುವಂತದ್ದು. ತಾನೇ ಗೆಲ್ಲುವುದು ಖಚಿತ ಎಂದ ಮೇನಕಾ, ತನಗೆ ವೋಟ್ ಹಾಕದವರು ಯಾವುದೇ ಸಮಸ್ಯೆಯನ್ನೂ ತನ್ನ ಬಳಿ ತರಬೇಡಿ ಎಂದು ಹೇಳಿದ್ದಲ್ಲದೇ ಒಂದು ಮಹತ್ವಪೂರ್ಣ ರಹಸ್ಯವನ್ನು ಬಾಯ್ತಪ್ಪಿನಿಂದಲೋ ಅಥವಾ ಏನೂ ಆಗದು ಎಂಬ ಧೈರ್ಯದಿಂದಲೋ ಬಹಿರಂಗಗೊಳಿಸಿದರು. “ಈ ಬೂತ್ನಿಂದ 100-50 ವೋಟ್ ಅಷ್ಟೇ ಬಂದಲ್ಲಿ, ಚುನಾವಣೆ ಬಳಿಕ ನನ್ನ ಬಳಿ ಕೆಲಸಕ್ಕಾಗಿ ಬನ್ನಿ ಆಗ ನೋಡ್ತೀವಿ.’’ ಇದಾದ ನಂತರ ಏಪ್ರಿಲ್ 15ರಂದು ಮೇನಕಾ ಗಾಂಧಿ ಅವರ ಇನ್ನೊಂದು ಭಾಷಣದ ವಿಡಿಯೋ ವೈರಲ್ ಆಗಿತ್ತು. ಆ ಭಾಷಣದಲ್ಲಿ ಅವರು, “ಪ್ರತಿ ಬೂತ್ ನಿಂದ ದೊರಕುವ ವೋಟ್ ಆಧಾರದಲ್ಲಿಯೇ ಕ್ಷೇತ್ರದ ಅಭಿವೃದ್ಧಿ ಕಾರ್ಯ ನಡೆಯಲಿದೆ,” ಎಂದಿದ್ದರು.
Women and Child Minister #ManekaGandhi on camera says:
“I am going to win for sure. If Muslims won’t vote for me and then come to ask for work, I will have to think, what’s the use of giving them jobs.”#LokSabhaElections2019 @ECISVEEP pic.twitter.com/BHG5kwjwmQ
— Khabar Bar (@Khabar_Bar) April 12, 2019
ಜಗತ್ತಿನ ಅತ್ಯಂತ ವಿಶಾಲ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಗುಪ್ತ ಮತದಾನ ಕೇವಲ ಮಾತಿನಲ್ಲಷ್ಟೇ ಉಳಿದಿದೆ ಎಂಬುದು ಮೇನಕಾ ಗಾಂಧಿ ಭಾಷಣದಿಂದ ಹೊರಬಿದ್ದ ರಹಸ್ಯ. ಮೇನಕಾ ಗಾಂಧಿ ಬಹಿರಂಗವಾಗಿ ಹೇಳಿದ ಸತ್ಯ ನಮ್ಮ ದೇಶದ ಎಲ್ಲ ರಾಜಕೀಯ ಪಕ್ಷಗಳೂ ‘ಬೂತ್ ಮಟ್ಟದ ಕಾರ್ಯಾಚರಣೆ’ ಎಂಬ ಹೆಸರಿನಲ್ಲಿ ಅನುಸರಿಸುತ್ತಿರುವ ದುರ್ಮಾರ್ಗ.
ಬ್ಯಾಲೆಟ್ ಬಾಕ್ಸ್ನಲ್ಲಿ ಪೇಪರ್ ಬಳಸಿ ಮತದಾನ ನಡೆಯುತ್ತಿದ್ದ ಕಾಲದಲ್ಲಿ ಹಲವಾರು ಬೂತ್ಗಳಲ್ಲಿ ಚಲಾವಣೆಗೊಂಡ ಮತಗಳನ್ನು ಮಿಶ್ರ ಮಾಡಲಾಗುತ್ತಿತ್ತು. ಇದು ಚುನಾವಣಾ ಪ್ರಕ್ರಿಯೆಗಳ ನಿಯಮಾವಳಿಗಳ (Conduct of Election Rules of 1961) ಪ್ರಕಾರ ಅನುಸರಿಲೇಬೇಕಾದ ನಿಯಮವಾಗಿತ್ತು. ಇದರಿಂದಾಗಿ ಚಲಾವಣೆಗೊಂಡ ಮತಗಳು ಮಿಶ್ರಗೊಂಡು, ಯಾವ ಹಳ್ಳಿಯ, ಯಾವ ಬೂತ್ನ ಎಷ್ಟು ಮತದಾರರು ಯಾವ ಪಕ್ಷಕ್ಕೆ ಮತ ಚಲಾವಣೆ ಮಾಡಿದ್ದಾರೆಂಬುದನ್ನು ರಾಜಕೀಯ ಪಕ್ಷಗಳು ನಿಖರವಾಗಿ ತಿಳಿಯಲಾರದಂತೆ ಮಾಡುವ ನಿಯಮವಾಗಿತ್ತು. 2009ರಿಂದ ದೇಶದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಜಾರಿಗೆ ಬಂದಿತು. ಅಂದಿನಿಂದ ರಾಜಕೀಯ ಪಕ್ಷಗಳು ಬೂತ್ ಮಟ್ಟದಲ್ಲಿ ‘ಹೆದರಿಸುವ ರಾಜಕಾರಣ’ಕ್ಕೆ ಇಳಿದವು ಎಂದರೂ ತಪ್ಪಾಗದು. ಯಾಕೆಂದರೆ, ಎಲೆಕ್ಟ್ರಾನಿಕ್ ಮತ ಯಂತ್ರ ಆರಂಭಗೊಂಡ ಸಮಯದಿಂದ ಚುನಾವಣಾ ಆಯೋಗ ಪ್ರತಿ ಯಂತ್ರದಲ್ಲಿರುವ ಮತಗಳ ನಿಖರ ಸಂಖ್ಯೆಯನ್ನು ಸಾರ್ವಜನಿಕಗೊಳಿಸಿದೆ.
ಫಾರ್ಮ್-20 ಮಾಹಿತಿ
ಚುನಾವಣಾ ಆಯೋಗ ಪ್ರತಿ 1,000-1,500 ಜನಸಂಖ್ಯೆಗೆ ತಲಾ ಒಂದು ಎಲೆಕ್ಟ್ರಾನಿಕ್ ಮತಯಂತ್ರದ ವ್ಯವಸ್ಥೆ ಮಾಡುತ್ತದೆ. ಈ ಪೈಕಿ, ಸರಾಸರಿ 200-600 ಮತದಾರರ ವೋಟ್ ಅಡಕವಾಗಿರುತ್ತದೆ. ಪ್ರತಿ ಚುನಾವಣೆ ಬಳಿಕ ಆಯೋಗ ಬಹಿರಂಗಗೊಳಿಸುವ ಫಾರ್ಮ್-20 ಮಾಹಿತಿ ಪ್ರತಿ ಎಲೆಕ್ಟ್ರಾನಿಕ್ ಮತಯಂತ್ರದ ವೋಟಿಂಗ್ ವಿವರ ಒಳಗೊಂಡಿರುತ್ತದೆ. ಇದರಿಂದಾಗಿ ಚುನಾವಣಾ ಕ್ಷೇತ್ರ ಎಷ್ಟೇ ದೊಡ್ಡದಿದ್ದರೂ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಕಾರ್ಯಕರ್ತರಿಗೆ ಪ್ರತಿಯೊಬ್ಬ ಮತದಾರನ ಗುಪ್ತ ಮತದಾನದ ವಿವರ ಸುಲಭವಾಗಿಯೇ ದೊರೆಯುವಂತಾಗಿದೆ. ಇದೇ ಕಾರಣಕ್ಕಾಗಿಯೇ ಮೇನಕಾ ಗಾಂಧಿ ಬಹಿರಂಗವಾಗಿ ಮತದಾರರಿಗೆ ಹೇಳಿದ್ದು, “ನನಗೇ ವೋಟ್ ಹಾಕಿಲ್ಲವಾದರೆ, ಕೆಲಸವೂ ಇಲ್ಲ, ಅಭಿವೃದ್ಧಿಯೂ ಇಲ್ಲ.” ಉಳಿದ ರಾಜಕಾರಣಿಗಳು ಅವರಷ್ಟು ಧೈರ್ಯ ತೋರಿಸಿಲ್ಲ.
ಎಲ್ಲಿ ಬಂತು ಗುಪ್ತ ಮತದಾನ?

ಚುನಾವಣಾ ಪ್ರಕ್ರಿಯೆಗಳ ನಿಯಮಾವಳಿಗಳ (Conduct of Election Rules of 1961) ರೂಲ್ 59A ಪ್ರಕಾರ, ಬ್ಯಾಲೆಟ್ ಪೇಪರ್ಗಳನ್ನು ಮಿಶ್ರ ಮಾಡುವುದು ಕಡ್ಡಾಯ. ಎಲೆಕ್ಟ್ರಾನಿಕ್ ಮತಯಂತ್ರ ಬಳಕೆಗೆ ಬಂದಾಗ ಚುನಾವಣಾ ಆಯೋಗಕ್ಕೆ ಈ ನ್ಯೂನತೆಯ ಬಗ್ಗೆ ಅರಿವಿತ್ತು. ಅದಕ್ಕಾಗಿಯೇ ಒಂದು ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಆಯೋಗ, ಅದಕ್ಕೆ ಟೋಟಲೈಸರ್ (Totaliser) ಎಂದು ಹೆಸರಿಸಿದೆ. ಈ ಯಂತ್ರ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿನ ವೋಟ್ಗಳನ್ನು ಮಿಶ್ರ ಮಾಡುತ್ತದೆ. ಈ ವ್ಯವಸ್ಥೆಗೆ ಕೇಂದ್ರ ಕಾನೂನು ಆಯೋಗ 2015ರಲ್ಲಿ ಸಮ್ಮತಿ ಸೂಚಿಸಿತ್ತಲ್ಲದೆ, ಇದನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕೆಂದು ಶಿಫಾರಸು ಮಾಡಿತು.
ಯಾಕೆ ಇನ್ನೂ ಅಳವಡಿಸಲಾಗಿಲ್ಲ ಟೋಟಲೈಸರ್?
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ.ಮುಕುಲಿಕಾ ಬ್ಯಾನರ್ಜಿ, ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ನೀಡಲಾಗುವ ಪ್ರತಿ ಯಂತ್ರದ, ಪ್ರತಿ ಬೂತ್ನ ವೋಟ್ ಮಾಹಿತಿಯ ದುಷ್ಪರಿಣಾಮಗಳ ಬಗ್ಗೆ ಹಲವು ಲೇಖನಗಳನ್ನು ಬರೆದಿದ್ದಾರೆ. ಭಾರತೀಯ ಚುನಾವಣೆಗಳ ಅಧ್ಯಯನ ಸಂಬಂಧ ಪಶ್ಚಿಮ ಬಂಗಾಳದ ಕೆಲವು ಹಳ್ಳಿಗಳ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಬ್ಯಾನರ್ಜಿ, ಈ ಬಗ್ಗೆ ಪ್ರತಿಧ್ವನಿಯೊಂದಿಗೆ ಮಾತನಾಡಿದರು. ಅವರ ಪ್ರಕಾರ, ಆಡಳಿತಾರೂಢ ಬಿಜೆಪಿ ಸಹಿತ ಎಲ್ಲ ರಾಜಕೀಯ ಪಕ್ಷಗಳೂ ಪ್ರತಿ ಬೂತ್ನ ಮಾಹಿತಿಯ ರುಚಿ ತಿಳಿದಿರುವುದರಿಂದ ಟೋಟಲೈಸರ್ ಜಾರಿಗೆ ಬರುವುದು ವಿಳಂಬವಾಗುತ್ತಿದೆ. “ಈ ಮಾಹಿತಿ ರಾಜಕೀಯ ಪಕ್ಷಗಳಿಗೆ ಚಿನ್ನದ ಗಣಿ. ಇದರಿಂದಲೇ ಬೂತ್ ಮಟ್ಟದ ಕಾರ್ಯಕರ್ತರು ಮತದಾರರಿಗೆ ಆಮಿಷ, ಬೆದರಿಕೆ ಒಡ್ಡುವ ಪ್ರಕರಣಗಳು ಹೆಚ್ಚುತ್ತಿವೆ. ಆಶ್ಚರ್ಯವೆಂದರೆ, ಈ ಬಗ್ಗೆ ಜನರ ಅಭಿಪ್ರಾಯ ಪಡೆಯುವುದಾಗಲೀ ಅಥವಾ ಮಾಹಿತಿ ಹಂಚುವುದಾಗಲೀ ನಡೆಯುತ್ತಲೇ ಇಲ್ಲ. ಚುನಾವಣಾ ಆಯೋಗ ಸಿದ್ಧವಾಗಿದ್ದರೂ ಟೋಟಲೈಸರ್ಗೆ ರಾಜಕೀಯ ಪಕ್ಷಗಳು ಒಪ್ಪುತ್ತಲೇ ಇಲ್ಲ. ನನ್ನ ಅಧ್ಯಯಯನದ ಭಾಗವಾಗಿ 1998ರಿಂದ 2013ವರೆಗೆ ಅನೇಕ ಹಳ್ಳಿಗಳಲ್ಲಿನ ಮತದಾರರನ್ನು ಸಂದರ್ಶಿಸಿದ್ದೇನೆ. ಎಲೆಕ್ಟ್ರಾನಿಕ್ ಮತಯಂತ್ರದ ಬಳಕೆಯ ನಂತರ ಬೂತ್ ಮಟ್ಟದ ಕಾರ್ಯಕರ್ತರ ಬಳಿ ಪ್ರತಿ ಮತದಾರನ ವಿವರವೂ ಲಭ್ಯವಿದೆ. ಮತದಾರ ಕಳೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬುದನ್ನು ನಿರ್ಧರಿಸಿ ಈ ಬಾರಿಯ ಚುನಾವಣೆಯಲ್ಲಿ ಆ ಮತದಾರರನ್ನು ಒಂದೋ ಪುಸಲಾಯಿಸಲಾಗುತ್ತದೆ ಅಥವಾ ಬೆದರಿಸಲಾಗುತ್ತದೆ.’’
ಸುಪ್ರಿಂ ಅಂಗಳದಲ್ಲಿ

ಎಂದಿನಂತೆ ಟೋಟಲೈಸರ್ ವಿಷಯವೂ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. 2017ರಲ್ಲಿ ಟೋಟಲೈಸರ್ ಅನುಷ್ಠಾನ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಆಕ್ಷೇಪ ಸಲ್ಲಿಸಿರುವ ಕೇಂದ್ರ ಸರ್ಕಾರ, ಟೋಟಲೈಸರ್ ಅನುಷ್ಠಾನ ಸಾಧ್ಯವೇ ಇಲ್ಲ ಎಂದಿದೆ. 2019ರ ಲೋಕಸಭಾ ಚುನಾವಣೆಯನ್ನು ಲಕ್ಷ್ಯದಲ್ಲಿರಿಸಿ ಅರ್ಜಿಯ ತುರ್ತು ವಿಚಾರಣೆ ಕೋರಿ 2018ರಲ್ಲಿ ಮನವಿ ಸಲ್ಲಿಸಲಾಯಿತು. ಆದರೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನೊಳಗೊಂಡ ಪೀಠ, ತುರ್ತು ವಿಚಾರಣೆ ಅಗತ್ಯವಿಲ್ಲ ಎಂದು ಮನವಿ ತಳ್ಳಿಹಾಕಿತು.
ಸರ್ಕಾರದ ಪ್ರಕಾರ, ಟೋಟಲೈಸರ್ ಅನುಷ್ಠಾನದಲ್ಲಿ ಯಾವುದೇ ಸಾರ್ವಜನಿಕ ಹಿತವಿಲ್ಲ. ಈ ವಾದವನ್ನು ಸರ್ಕಾರ ಆಧರಿಸಿರುವುದು ಕೇಂದ್ರ ಸಚಿವರನ್ನೊಳಗೊಂಡ ಸಮಿತಿಯೊಂದರ ಶಿಫಾರಸಿನ ಮೇಲೆ. ಅಂದಹಾಗೆ, ಈ ಸಮಿತಿಯ ಪ್ರಮುಖ ಸದಸ್ಯರು; ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ. ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ಗಳ ಮೂಲಕ ಕೋಟಿಗಟ್ಟಲೆ ದೇಣಿಗೆ ನೀಡುವ ಕಾರ್ಪೋರೇಟ್ ಸಂಸ್ಥೆಗಳ ರಹಸ್ಯ ಕಾಪಾಡುವಲ್ಲಿ ಕೇಂದ್ರ ಸರ್ಕಾರಕ್ಕೆ ಇರುವ ಆಸಕ್ತಿ ಪ್ರಜೆಗಳ ಮತದ ರಹಸ್ಯ ಕಾಪಾಡುವಲ್ಲಿ ಹೇಗೆ ಇದ್ದೀತು?