ಕರ್ನಾಟಕದ ಚಾಣಕ್ಯರೆಂದೇ ಖ್ಯಾತರಾದ ಮಾನ್ಯ ಶ್ರೀ ದೇವೇಗೌಡರ ಜೊತೆಗಿನ ರಾಜಕೀಯ ಸಖ್ಯ ಧೃತರಾಷ್ಟ್ರನ ಆಲಿಂಗನಕ್ಕೆ ಸಮವೆಂದು ರಾಜ್ಯದ ರಾಜಕಾರಣದ ಏಳುಬೀಳುಗಳ ಅರಿವಿದ್ದ ಹಿರಿಯರು ಈಗಲೂ ಹೇಳುತ್ತಾರೆ.
ರಾಜಕಾರಣ ಬಿಟ್ಟು ಬೇರೆ ಹವ್ಯಾಸ ಅರಿಯದ ಅವರಿಗಿರುವ ರಾಜಕೀಯ ಡಾವು ಪೇಚುಗಳ ಒಳನೋಟ, ಕೌಶಲ್ಯ ಮತ್ತು ಹಿಡಿತ ಬಹುಶಃ ಅವರ ತಲೆಮಾರಿನ ಕರ್ನಾಟಕದ ಯಾವ ರಾಜಕಾರಣಿಗಳಿಗೂ ಇಲ್ಲವೆಂಬುದಕ್ಕೆ ಅವರ ಐದು ದಶಕದ ಯಶಸ್ವೀ ರಾಜಕಾರಣವೇ ಸಾಕ್ಷಿ. ರಾಜಕಾರಣದಲ್ಲಿ ಶಾಶ್ವತವಾಗಿರುವುದು ರಾಜಕೀಯ ಹಿತಾಸಕ್ತಿಯೇ ಹೊರತು ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲವೆಂಬ ನಾಣ್ಣುಡಿಯು ಅವರಿಗೆ ಹೇಳಿ ಮಾಡಿಸಿದಂತಿದೆ. ಅವರು ಯಾವುದನ್ನೂ ಯಾವ ಕಾಲಕ್ಕೂ ಮರೆಯುವುದಿಲ್ಲ ಮತ್ತು ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಯಾರ ಜೊತೆಗೂ ಹಂಚಿಕೊಳ್ಳುವುದಿಲ್ಲ.
ಅವರು ಆಡಿದ ಆಟಕ್ಕೆ ಅವರ ಒಂದು ಕಾಲದ ಒಡನಾಡಿಗಳಾಗಿದ್ದ ರಾಜಕೀಯ ಮಿತ್ರರು (ದಿ.ರಾಮಕೃಷ್ಣ ಹೆಗಡೆ, ದಿ.ಎಸ್.ಆರ್. ಬೊಮ್ಮಾಯಿ, ದಿ.ಜೆ.ಎಚ್ ಪಟೇಲ್ ಮೊದಲಾದವರು, ಕಿರಿಯ ಸಹೊದ್ಯೋಗಿಗಳಾದ ದಿ.ಎಂ.ಪಿ.ಪ್ರಕಾಶ, ಪಿ.ಜಿ.ಆರ್. ಸಿಂಧ್ಯಾ ಮೊದಲಾದವರು. ಹೇಳ ಹೆಸರಿಲ್ಲದಂತೆ ಹೋದರೆ, ಅವರ ಜೊತೆಗಿದ್ದ ಸಿದ್ದರಾಮಯ್ಯನವರಿಗೆ ಸೂಕ್ತ ಸ್ಥಾನಮಾನ ಸಿಕ್ಕಿದ್ದು ಕಾಂಗ್ರೆಸ್ಸಿನಲ್ಲಿಯೇ ಹೊರತು, ಶ್ರೀ ಗೌಡರಿಂದಲ್ಲ. ಶ್ರೀ ದೇವೇಗೌಡರು ಮಾತ್ರ ತಮ್ಮ 86ನೇ ವಯಸ್ಸಿನಲ್ಲಿಯೂ, ರಾಷ್ಟ್ರದ-ರಾಜ್ಯದ ರಾಜಕಾರಣದಲ್ಲಿ ಕ್ರಿಯಾಶೀಲರಾಗಿದ್ದಾರೆ. ಇನ್ನೂ ಬರಬಹುದಾದ ರಾಜಕೀಯ ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಮೆಲುಕು ಹಾಕುತ್ತಲೇ ಇರುತ್ತಾರೆ. “ನಾನು ಫೀನಿಕ್ಸ್ ಹಕ್ಕಿಯಂತೆ ಬೂದಿಯಿಂದ ಎದ್ದುಬರುತ್ತೇನೆ,” ಎಂದು ಸಂಸತ್ತಿನಲ್ಲಿ ತಮ್ಮ ವಿರುದ್ಧ ತಂದಿದ್ದ ಅವಿಶ್ವಾಸ ಗೊತ್ತುವಳಿಯ ಮೇಲೆ ಮಾತನಾಡುತ್ತಿರುವಾಗ ಹೇಳಿದ್ದರು. ಅದು ಕರ್ನಾಟಕದ ಮಟ್ಟಿಗೆ ನಿಜವಾಗುತ್ತಿದೆ, ರಾಷ್ಟ್ರ ಮಟ್ಟದಲ್ಲಿ ಇನ್ನೂ ಆಗಬೇಕಾಗಿದೆ.
ಇಲ್ಲಿಯ ತನಕ ಆದ ಎರಡು ಆಲಿಂಗನಗಳಲ್ಲಿ ಸ್ವಕೀಯರು ಸವಿ ಉಂಡಿದ್ದಾರೆ. ರಾಜಕೀಯ ಎದುರಾಳಿಗಳು ರುಚಿ ನೋಡಿದ್ದಾರೆ. ಮೂರನೆಯ ಅವಕಾಶ ಈಗ ಬಂದಿದೆ. ಅದರಲ್ಲಿ ಯಾರು, ಏನು ಮತ್ತು ಎಂತಹ ಪಾಠ ಕಲಿಯುತ್ತಾರೆ ನೋಡಬೇಕಾಗಿದೆ.
ಶ್ರೀ ಗೌಡರ ಮೊದಲ ಆಲಿಂಗನದ ಸವಿ ಉಂಡವರು ಸ್ವಕೀಯರೇ, ತಮ್ಮ ಪಕ್ಷದವರೇ. ಇದು ಆದದ್ದು 1983-1999ರ 16 ವರ್ಷದ ಅವಧಿಯಲ್ಲಿ ನಡೆದ ನಾಲ್ಕು ವಿಧಾನಸಭೆ ಚುನಾವಣೆಗಳ ಕಾಲದಲ್ಲಿ. ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಕರ್ನಾಟಕದಲ್ಲಿ ವಿರೋಧಿ ಪಕ್ಷಗಳು ಜನತಾ ಪಕ್ಷದ ಹೆಸರಿನಲ್ಲಿ ಕಾಂಗ್ರೆಸನ್ನು ಗದ್ದುಗೆಯಿಂದ ಇಳಿಸಿದ್ದು 1983ರಲ್ಲಿ. ಇದೇ ಪ್ರಯೋಗ ರಾಷ್ಟ್ರೀಯ ಮಟ್ಟದಲ್ಲಾಗಿ, ಜನತಾದಳವೆಂದು ನಾಮಕರಣವಾದ ನಂತರ 1985ರಲ್ಲಿ ನಡೆದ ಚುನಾವಣೆಯಲ್ಲಿ, ಇನ್ನೊಂದು ಸಫಲತೆಯನ್ನೂ ಗಳಿಸಿತು. 1989ರಲ್ಲಿ ಒಳಜಗಳದ ಮೂಲಕ ಅಧಿಕಾರ ಕಳೆದುಕೊಂಡ ಮೇಲೆ ಜನತಾದಳ ಮತ್ತೆ ತಲೆ ಎತ್ತಿದ್ದು ಐದು ವರ್ಷದ ನಂತರ 1994ರಲ್ಲಿ. ನಂತರ ನಡೆದ ಬೆಳವಣಿಗೆಗಳಿಂದ ದಳವು ಛಿದ್ರಛಿದ್ರವಾಗಿ, ಕೊನೆಗೆ 1999ರ ನಂತರ ಅವಸಾನ ಹೊಂದಿತು. ಹಳೆಯ ಪ್ರಯೋಗದ ಪಳೆಯುಳಿಕೆಗಾಗಿ ಗೌಡರ ಜಾತ್ಯತೀತ ಜನತಾದಳ ಇನ್ನೂ ಉಳಿದಿದೆ. ಅದರ ಪ್ರಭಾವ ವಲಯ, ಹಳೆಯ ಮೈಸೂರು ಪ್ರದೇಶದ ಕೆಲ ಜಿಲ್ಲೆಗಳಿಗೆ ಸೀಮಿತವಾಗಿದೆ. ಉತ್ತರ ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನ ಸಫಲವಾಗಿಲ್ಲ.
ಉಚ್ಛ್ರಾಯತೆಯ ಓಘದಲ್ಲಿದ್ದ ಜನತಾದಳವನ್ನು ಅವಸಾನದತ್ತ ತಳ್ಳಿದ್ದು ಪಕ್ಷದಲ್ಲಿ ಬೆಳೆಯುತ್ತಿದ್ದ ಆಂತರಿಕ ಭಿನ್ನಾಭಿಪ್ರಾಯ ಮತ್ತು ವ್ಯಕ್ತಿತ್ವ ಘರ್ಷಣೆಗಳು. ಮೊದಲ ಬಾಣ ಹೊಡೆದವರು ದೇವೇಗೌಡರು. ದಳವನ್ನು ತ್ಯಜಿಸಿ, ತಮ್ಮದೇ ಪ್ರತ್ಯೇಕ ಪಕ್ಷವನ್ನು ಸ್ಥಾಪಿಸಿದ ಅವರು, ರಾಮಕೃಷ್ಣ ಹೆಗಡೆ ನಂತರ ಬಂದ ಜನತಾದಳದ ಬೊಮ್ಮಾಯಿ ನೇತೃತ್ವದ ಸರಕಾರವನ್ನು 1988ರಲ್ಲಿ ಕೆಡವಿದರು. 1989ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಹೀನಾಯವಾದ ಸೋಲುಂಡು ದೇವೇಗೌಡರು ರಾಜಕೀಯವಾಗಿ ಮೂಲೆಗುಂಪಾಗುವ ಪರಿಸ್ಥಿತಿ ಬಂದಾಗ, ಅವರ ರಾಜಕೀಯ ಜೀವನಕ್ಕೆ ಪುನಶ್ಚೇತನ ಕೊಟ್ಟವರು ರಾಮಕೃಷ್ಣ ಹೆಗಡೆಯವರು. ಗೌಡರನ್ನು ಜನತಾದಳಕ್ಕೆ ಮರಳಿ ಕರೆದುಕೊಂಡು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಲ್ಲದೆ, 1994ರ ಚುನಾವಣೆ ಗೆದ್ದ ನಂತರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಮತ್ತೆ ಎರಡು ವರ್ಷದಲ್ಲಿ ವಿರೋಧಿಪಕ್ಷದ ಸಂಯುಕ್ತ ರಂಗದ ಪ್ರಧಾನಿಯಾಗಿ ದಿಲ್ಲಿಗೆ 1996ರಲ್ಲಿ ಹಾರಿದರು ಎನ್ನುವುದು ಇತಿಹಾಸ.
ತಮ್ಮ ರಾಜಕೀಯ ಜೀವನ ಚಿಗುರಲು ನೆರವಾದ ಹೆಗಡೆಯವರನ್ನು ಗೌಡರು ಪಕ್ಷದಿಂದ ಹೊರಹಾಕಿದರು; ಪಕ್ಷ ಮತ್ತೆ ಇಭ್ಭಾಗವಾಯಿತು ಹೆಗಡೆ-ಜೆ.ಎಚ್ ಪಟೇಲ ನೇತೃತ್ವದ ಜನತಾ ದಳ (ಸಂಯುಕ್ತ) ರಾಜ್ಯ ಸರಕಾರ ನಡೆಸಿದರೆ, ಗೌಡರ ಜನತಾ ದಳ (ಜಾತ್ಯತೀತ) ಹೊರಗುಳಿಯಿತು. ಮೂರು ಬಾರಿ 1983, 1985, 1994 ಕಾಂಗ್ರೆಸನ್ನು ಮಣ್ಣು ಮುಕ್ಕಿಸಿದ ಜನತಾದಳ, ತಾನೇ ಕ್ರಮೇಣ ಮಣ್ಣು ಮುಕ್ಕಿತು. ಹೆಗಡೆಯವರ ನಿಧನದ ನಂತರ ಜನತಾದಳ (ಸಂಯುಕ್ತ) ಚೇತರಿಸಿಕೊಳ್ಳಲಿಲ್ಲ. ಅನೇಕ ಕಾರ್ಯಕರ್ತರು ಭಾಜಪದ ಕಡೆ ವಾಲಿದರೆ, ಜಾತ್ಯತೀತ ಜನತಾದಳ ತನ್ನ ಹಿಂದಿನ ಅವತಾರದ ಪಳೆಯುಳಿಕೆಯಾಗಿ, ಹಳೆಯ ಮೆಸೂರು ಪ್ರದೇಶದ ಕೆಲ ಜಿಲ್ಲೆಗಳಿಗೆ ಸೀಮಿತವಾಗಿ, ಉತ್ತರ ಕರ್ನಾಟಕದಲ್ಲಿ ನೆಲೆ ಕಾಣದೆ ಉಳಿಯಿತು.
ಇದೆಲ್ಲ ರಾಜಕೀಯ ಬೆಳವಣಿಗೆಗಳಲ್ಲಿ ದಾಳ ಉರುಳಿಸಿದವರು ಗೌಡರು. ರಾಜಕೀಯ ಲಾಭ/ಅಧಿಕಾರ ಸಿಕ್ಕದ್ದು ಮುಖ್ಯವಾಗಿ ಅವರಿಗೆ (ಮೊದಲು ಮುಖ್ಯಮಂತ್ರಿ ಸ್ಥಾನ, ನಂತರ ಪ್ರಧಾನಮಂತ್ರಿ ಪಟ್ಟ), ಅಮುಖ್ಯವಾಗಿ ಕಾಂಗ್ರೆಸಿಗೆ (ರಾಜ್ಯದಲ್ಲಿ ಅಧಿಕಾರ). ಇದರಲ್ಲಿ ಕಮರಿದ್ದು ತೃತೀಯ ರಂಗದ ಕನಸು ಮತ್ತು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಿದ ಅವರ ಕರ್ನಾಟಕದಲ್ಲಿನ ಸಹೋದ್ಯೋಗಿಗಳ ಶ್ರಮ. ಕಾಂಗ್ರೆಸಿನ ಅಂದಿನ ಅಧ್ಯಕ್ಷ ಸೀತಾರಾಮ ಕೇಸರಿಯವರು ಸಂಯುಕ್ತ ರಂಗದ ಕೇಂದ್ರ ಸರಕಾರಕ್ಕೆ ಕೈ ಕೊಡದಿದ್ದರೆ, ಗೌಡರ ಪ್ರಧಾನಮಂತ್ರಿ ಹುದ್ದೆ ಬರೀ ಹನ್ನೊಂದು ತಿಂಗಳಿಗೆ ಮುಗಿಯುತ್ತಿರಲಿಲ್ಲವೇನೋ.
ಶ್ರೀ ಗೌಡರ ಎರಡನೆ ರಾಜಕೀಯ ಆಲಿಂಗನ ನಡೆದದ್ದು 2004ರ ವಿಧಾನ ಸಭೆ ಚುನಾವಣೆಯ ನಂತರ; ಯಾರಿಗೂ ಬಹುಮತ ಸಿಗದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ. 224 ಸದಸ್ಯರ ವಿಧಾನಸಭೆಯಲ್ಲಿ 79 ಸ್ಥಾನ ಪಡೆದ ಭಾಜಪವು ಬಹುಮತವಿಲ್ಲದ ಬಹುದೊಡ್ಡ ಪಕ್ಷವಾದರೆ, ಕಾಂಗ್ರೆಸ್ (65) ಮತ್ತು ಜಾತ್ಯತೀತ ಜನತಾದಳ (58) ಎರಡನೆಯ ಮತ್ತು ಮೂರನೆಯ ಸ್ಥಾನಗಳಿಂದ ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಅತಂತ್ರ ಪರಿಸ್ಥಿತಿ ನಿವಾರಿಸಲು ಅಪ್ಪ ದೇವೇಗೌಡ ಮತ್ತು ಮಗ ಕುಮಾರಸ್ವಾಮಿ ಆಡಿದ ಪ್ರತ್ಯೇಕ ರಾಜಕೀಯ ಆಟಗಳಿಂದಾಗಿ, ದಳವು ಕಾಂಗ್ರೆಸ್ ಮತ್ತು ಭಾಜಪಗಳೊಡನೆ ಎರಡು ಸಮ್ಮಿಶ್ರ ಸರಕಾರಗಳಲ್ಲಿ ಭಾಗವಹಿಸಿ, ಅತಿ ಹೆಚ್ಚಿನ ರಾಜಕೀಯ ಲಾಭ ಪಡೆಯಿತು. ಮೂರನೆ ಸ್ಥಾನ ಪಡೆದ ದಳ ಪೂರ್ತಿ ಅವಧಿಯವರೆಗೆ ಅಧಿಕಾರವನ್ನು ಎರಡೂ ಸಮ್ಮಿಶ್ರ ಸರಕಾರಗಳಲ್ಲಿ ಅನುಭವಿಸಿದ್ದಲ್ಲದೆ, ಭಾಜಪದೊಡಗಿನ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಪದವಿಯನ್ನು ಪಡೆಯಲು ಶಕ್ತವಾಯಿತು. ಕಾಂಗ್ರೆಸಿನೊಡನೆ ಅಧಿಕಾರ ಹಂಚಿಕೆಯಲ್ಲಿ ವ್ಯವಸ್ಥೆ ಮಾಡುವದರಲ್ಲಿ ಶ್ರೀ ದೇವೇಗೌಡರು ಮುತುವರ್ಜಿ ವಹಿಸಿದರೆ, 20 ತಿಂಗಳ ನಂತರ ಆ ಸರಕಾರವನ್ನು ಮನೆಗೆ ಕಳಿಸಿ, ತಮ್ಮ ಹಿರಿತನದಲ್ಲಿ ಭಾಜಪದೊಡನೆ ಸರಕಾರ ಮಾಡಿದವರು ಶ್ರೀ ಕುಮಾರಸ್ವಾಮಿಯವರು. ತಮಗೆ ಗೊತ್ತಿಲ್ಲದೆ ತನ್ನ ಮಗ ತಮ್ಮ ವಿರುದ್ದ ಬಂಡು ಎದ್ದಿದ್ದು ಎಂದು ಶ್ರೀ ಗೌಡರು ಹೇಳಿದರೇನೋ ನಿಜ. ಅದನ್ನು ಬಹಳ ಮಂದಿ ನಂಬಲಿಲ್ಲವೆಂಬುದು ಎಲ್ಲರಿಗೆ ಹೊತ್ತಿರುವ ಸತ್ಯ. ಉಳಿದ ಅವಧಿಯನ್ನು ಸಮಾನವಾಗಿ ಹಂಚಿಕೊಳ್ಳಬೇಕು ಮತ್ತು ಅಧಿಕಾರಾವಧಿ ಮುಗಿದ ನಂತರ ಭಾಜಪಕ್ಕೆ ಅಧಿಕಾರ ವರ್ಗಾಯಿಸಬೇಕೆಂಬ ಕರಾರು ಪಾಲಿಸದಿದ್ದಕ್ಕೆ ಕರ್ನಾಟಕದಲ್ಲಿ ನಾಲ್ಕು ವರ್ಷದ ನಂತರ 2008ರಲ್ಲಿ ಚುನಾವಣೆ ಮತ್ತೆ ಬಂದಿತು.
ಈತ್ತೀಚಿನ ವಿಧಾನಸಭೆ ಮತ್ತು ಈಗ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮಾಡಿಕೊಂಡ ಚುನಾವಣಾ ಮೈತ್ರಿಯು ಶ್ರೀ ದೇವೇಗೌಡರ ಆಲಿಂಗನ ರಾಜಕೀಯ ನಾಟಕದ ಮೂರನೆಯ ಅಂಕ. ಭಾಜಪವನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಭೂತವನ್ನು ಎಬ್ಬಿಸಿ, ಚುನಾವಣೋತ್ತರ ಮೈತ್ರಿಯ ಹೆಸರಿನಲ್ಲಿ ತಮ್ಮ ಮಗ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಈಗ ಲೋಕಸಭಾ ಚುನಾವಣೆಯಲ್ಲಿ ತಮಗೆ ಹೆಚ್ಚಿನ ಸ್ಥಾನವನ್ನು ಪಡೆಯುವ ಹುಕಿಯಲ್ಲಿ ಇದ್ದಾರೆ. ಕರ್ನಾಟಕದಲ್ಲಿನ ಸಿದ್ದರಾಮಯ್ಯನವರನ್ನು ಒಳಗೊಂಡು ಬಹುತೇಕ ಧುರೀಣರು ಜಾ.ದಳಕ್ಕೆ ಹೆಚ್ಚಿನ ಸ್ಥಾನ ಬಿಟ್ಟುಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೊಡನೆ ನೇರ ಸಂಪರ್ಕ ಸಾಧಿಸಿ, ಶ್ರೀ ಗೌಡರು ತಮ್ಮ ಕಾರ್ಯ ಸಾಧಿಸುವ ಹವಣಿಕೆಯಲ್ಲಿ ಇದ್ದಾರೆ. ತಮ್ಮ ಜೊತೆಗೆ ಈ ಬಾರಿ ತಮ್ಮ ಇಬ್ಬರು ಮೊಮ್ಮಕ್ಕಳ ರಾಜಕೀಯ ಅರಂಗೇಟ್ರಂ ತಯಾರಿಯಲ್ಲಿ ಇದ್ದಾರೆ. ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೆ ಬರಬಾರದೆಂದು ಪ್ರಯತ್ನಿಸುತ್ತಿರುವ ವಿರೋಧಿ ಪಕ್ಷಗಳ ‘ತುಕಡೇ ತುಕಡೇ’ (ಚಿಂದಿ ಚಿಂದಿ) ಮಹಾಘಟಬಂಧನದಲ್ಲಿ ಭಾವಿ ಪ್ರಧಾನಿ ಪಟ್ಟದ ಕನಸು ಕಾಣುತ್ತಿರುವವರಲ್ಲಿ ಅತಿ ದೊಡ್ಡ ವ್ಯಕ್ತಿತ್ವವುಳ್ಳವರು ನಿರ್ವಿವಾದವಾಗಿ ಮಾನ್ಯ ದೇವೇಗೌಡರು ಮಾತ್ರ, ಅವರು ಕಾಯುತ್ತಿರುವುದು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಎಷ್ಟು ಸ್ಥಾನ ಬರಬಹುದು ಎಂದಲ್ಲ. ಬದಲಿಗೆ, ಸರಿಯಾದ ಅವಕಾಶಕ್ಕಾಗಿ. ಏಕೆಂದರೆ, ಬಹಳ ಜಾಣತನದ ದಾಳ ಉರುಳಿಸಿ, ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಮೂಲಕ ರಾಜ್ಯದ ನಾಯಕರ ಹೆಗಲ ಮೇಲೆ ಹಾಕಿದ್ದಾರೆ. ಅವರ ಕನಸು ಎಷ್ಟರಮಟ್ಟಿಗೆ ನನಸಾಗಬಹುದು ಎನ್ನುವುದು ಮತದಾರರನ್ನು ಅವಲಂಬಿಸಿದೆ, ಕಾಯ್ದು ನೋಡಬೇಕಷ್ಟೆ.
ಅಂಕಣಕಾರರು ಹಿರಿಯ ಪತ್ರಕರ್ತರು