ಪ್ರಧಾನಮಂತ್ರಿ ಕಳ್ಳರಿದ್ದಾರೆ (ಚೌಕೀದಾರ್ ಚೋರ್ ಹೈ) ಎಂದು ತಾವು ಹೇಳದಿರುವುದನ್ನು ತಮ್ಮ ಬಾಯಲ್ಲಿ ಹಾಕಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ನೋಟೀಸ್ ಕೊಟ್ಟ ಮೇಲೆ, ಅವರು ತಮ್ಮ ಹೇಳಿಕೆಗೆ ಅಧಿಕೃತ ವಿಷಾದ ವ್ಯಕ್ತಪಡಿಸಿದ್ದರು. ಇದಲ್ಲದೆ, ಚುನಾವಣಾ ಪ್ರಚಾರದ ವೇಳೆ ಲಂಗು ಲಗಾಮಿಲ್ಲದೆ ಮಾತನಾಡಿ, ಜಾರಿಯಲ್ಲಿ ಇರುವ ಚುನಾವಣಾ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಮಂತ್ರಿ ಮನೇಕಾ ಗಾಂಧಿ ಮತ್ತು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಧುರೀಣ ಅಜಂ ಖಾನ್ ಅವರಿಗೆ ಕೆಲವು ದಿನಗಳ ಪ್ರಚಾರ ನಿಷೇಧವನ್ನು ಚುನಾವಣಾ ಆಯೋಗ ಹೇರಿತು.
ಈ ತರಹದ ಕ್ರಮ ಮತ್ತು ಇಂತಹ ಘಟನೆಗಳು ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ನಡೆದಷ್ಟು ಬಹುಶಃ ಹಿಂದಿನ ಯಾವ ಚುನಾವಣೆಯಲ್ಲಿಯೂ ನಡೆದಿಲ್ಲ ಎನ್ನಬಹುದು. ಸರ್ವೋಚ್ಚ ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳು ತೆಗೆದುಕೊಳ್ಳುವ ಕ್ರಮಗಳಿಂದ ಬಾಯಿ ಚಪಲದ ಪ್ರವೃತ್ತಿಯ ಮೇಲೆ ಕಡಿವಾಣ ಬೀಳಬಹುದು ಎಂಬ ಭಾವನೆ ಮೂಡಿತ್ತು. ಆದರೆ, ಇದರಿಂದ ಏನೂ ಪರಿಣಾಮವಾಗಿಲ್ಲ ಎನ್ನುವುದು ನಂತರ ನಡೆದ ಘಟನೆಗಳಿಂದ ವ್ಯಕ್ತವಾಗುತ್ತದೆ.
ರಾಹುಲ್ ಗಾಂಧಿಯವರ ವಕೀಲರು, “ಕಾಂಗ್ರೆಸ್ ಅಧ್ಯಕ್ಷರು ವ್ಯಕ್ತಪಡಿಸಿದ ವಿಷಾದವು ಸವೋಚ್ಚ ನ್ಯಾಯಾಲಯ ಹೇಳದಿರುವುದನ್ನು ಹೇಳಿದ್ದಕ್ಕೆ ಸೀಮಿತವಾಗಿದೆಯೇ ಹೊರತು ಪ್ರಧಾನಮಂತ್ರಿಗಳ ರಾಫೇಲ್ ಯುದ್ಧ ವಿಮಾನ ಖರೀದಿ ಸಂಬಂಧದ ನಡವಳಿಕೆಯಲ್ಲಿ ‘ಅವರು ಕಳ್ಳರಿದ್ದಾರೆ’ ಎಂದು ಹೇಳುವುದಕ್ಕೆ ಸಂಬಂಧಿಸಿದ್ದಲ್ಲ,” ಎಂದೂ ಹೇಳಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ರಾಹುಲ್ ಗಾಂಧಿಯವರು ಹಳೆಯ ಮಾತಿಗೆ ವಿಷಾದ ವ್ಯಕ್ತಪಡಿಸಿದ ನಂತರ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ‘ಚೌಕಿದಾರ್ ಚೋರ್ ಹೈ’ ಎಂಬ ತಮ್ಮ ಅದೇ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

ಇನ್ನೊಂದು ಕಡೆ ಚುನಾವಣಾ ಅಯೋಗವು ಇನ್ನೊಬ್ಬ ರಾಜಕಾರಣಿ ಮತ್ತು ಹೆಸರಾಂತ ಕ್ರಿಕೆಟಿಗ, ಕಾಂಗ್ರೆಸಿನ ನವಜೋತ್ ಸಿಂಗ್ ಸಿದ್ದು ಅವರ ಚುನಾವಣಾ ಪ್ರಚಾರದ ಮೇಲೂ ನಿಷೇಧ ಹೇರಿದೆ.
ಈಗ ನಡೆಯುತ್ತಿರುವ ಚುನಾವಣೆಯ ಇನ್ನೊಂದು ವೈಶಿಷ್ಟ್ಯವೇನೆಂದರೆ, ವೈಯಕ್ತಿಕೆ ನಿಂದೆ ಹಾಗೂ ಭಾಷೆಯ ಮೇಲೆ ಹಿಡಿತವಿಲ್ಲದ ಅಸಭ್ಯ ಬಳಕೆ. ಈ ದೇಶದ ಪ್ರಧಾನಿಗೆ ರಾಹುಲ್ ಗಾಂಧಿಯವರು ಪದೇಪದೇ ಕಳ್ಳ ಕಳ್ಳ ಎಂದು ಎಡಬಿಡದೆ ಹೇಳುತ್ತಿದ್ದರೆ, ಇದರಿಂದ ಕೆಳ ಹಂತದ ಕಾರ್ಯಕರ್ತರಿಗೆ ಯಾವ ಸಂದೇಶ ಹೋಗುತ್ತದೆ. ರಾಹುಲ್ ಗಾಂಧಿಯವರೂ ಅದೇ ಪದದ ಆಸೆಯಿಂದ ಚುನಾವಣೆ ಕಣಕ್ಕೆ ಧುಮುಕಿದ್ದಾರೆ. ಅದರ ಘನತೆ, ಗಾಂಭೀರ್ಯ ಕಳೆದರೆ ತಾವೂ ತಮಗೆ ಅವಕಾಶ ಬಂದರೆ ಹೇಗೆ ಆ ಪದದಲ್ಲಿ (ಸ್ಥಾನದಲ್ಲಿ) ಕುಳಿತಾರು?
ಇಂತಹ ಪದ ಬಳಕೆ ಕರ್ನಾಟಕದಲ್ಲಿಯೂ ಹಬ್ಬಿದೆ. ಇದರ ಜೊತೆಗೆ ತಮ್ಮ ವಿರೋಧಿ ಧುರೀಣರನ್ನು ಏಕವಚನದಲ್ಲಿ ಸಂಬೋಧಿಸುವಲ್ಲಿಯವರೆಗೂ ಹಬ್ಬಿದೆ. ಲೋಕಸಭೆಯಲ್ಲಿ ವಿರೋಧಿ ಪಕ್ಷದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂತಾದವರು ಪ್ರಧಾನ ಮಂತ್ರಿಯವರನ್ನು ಏಕವಚನದಿಂದ ಕರೆಯುತ್ತಾರೆ. ಬಿಜೆಪಿಯ ಧುರೀಣರಾದ ಯಡಿಯೂರಪ್ಪ, ಈಶ್ವರಪ್ಪ ಮುಂತಾದವರೂ ಏನೂ ಕಡಿಮೆಯಿಲ್ಲ. ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಕಾಲದಲ್ಲಿ ತಮ್ಮ ವಿರೋಧ ಮಾಡುತ್ತಿದ್ದ ಸುಮಲತಾ ಅಂಬರೀಶ್ ಅವರ ಬಗ್ಗೆ ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಪರಿವಾರದವರು ಉಪಯೋಗಿಸಿದ ಭಾಷೆ ಯಾರಿಗೂ ಮರ್ಯಾದೆ ತರುವಂತಹದಲ್ಲ. ಸರ್ವೋಚ್ಚ ನ್ಯಾಯಾಲಯಕ್ಕೆ ಈ ವಿಷಯ ತೆಗೆದುಕೊಂಡು ಹೋಗಿದ್ದಲ್ಲಿ ಉತ್ತರ ಭಾರತದ ರಾಜಕಾರಣಿಗಳಿಗೆ ಹೇರಿದ ಪ್ರಚಾರ ನಿರ್ಬಂಧ ಇಲ್ಲಿಯೂ ಬರುತ್ತಿತ್ತೇನೋ?
ಈ ಬೆಳವಣಿಗೆಗಳು ದೇಶದ ಪ್ರಜಾಪ್ರಭುತ್ವದ ಅಸ್ತಿತ್ವ ಮತ್ತು ಉಳಿಕೆಯ ಮೇಲೆ ಮಾರಕವಾಗುವಂತಹ ವಿಷಯಗಳು. ಮೊದಲನೆಯದಾಗಿ, ವೈಯಕ್ತಿಕ ಟೀಕೆ ಮಾಡುವ, ಕೋಮುಗಳ ನಡುವಿನ ವೈಷಮ್ಯವನ್ನು ಪ್ರಚೋದಿಸುವ ಮತ್ತು ಕೋಮುಗಳ ಹೆಸರಿನಲ್ಲಿ ಮತ ಕೇಳುವ ಪ್ರವೃತ್ತಿಗಳಿಗೆ ತಕ್ಷಣ ತಡೆ ಹಾಕದಿದ್ದರೆ, ದೇಶದಲ್ಲಿ ಪ್ರಜಾಪ್ರಭುತ್ವದ ಬೆನ್ನೆಲುಬಾದ ಚುನಾವಣಾ ಪ್ರಕ್ರಿಯೆ ಇನ್ನಷ್ಟು ಬಿಗಡಾಯಿಸಲಿದೆ. ಇವುಗಳನ್ನು ನಿಯಂತ್ರಿಸಲು ಕಾನೂನಿಗೆ, ಕಾನೂನು ಪ್ರಕಾರ ಸಂವಿಧಾನಾತ್ಮಕವಾಗಿ ಸ್ಥಾಪಿತವಾದ ಸಂಸ್ಥೆಗಳಿಗೆ ಸಾಧ್ಯವಿಲ್ಲವಾದರೆ ನಿಯಂತ್ರಿಸುವರು ಯಾರು?
ಈಗಾಗಲೇ ನಾವು ನೋಡಿದ್ದೇವೆ; ಚುನಾವಣೆಯಲ್ಲಿ ಕಪ್ಪುಹಣ, ಅಕ್ರಮ ಹಣದ ಚಲಾವಣೆ ನಿರ್ಬಂಧಿಸುವುದಕ್ಕೆ ಟಿ.ಎನ್. ಶೇಷನ್ ಅವರ ಕಾಲದಲ್ಲಿ ತೆಗೆದುಕೊಂಡ ಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಅಭ್ಯರ್ಥಿಗಳ ಚುನಾವಣೆ ವೆಚ್ಚದಲ್ಲಿ ಹೇರಿರುವ ನಿರ್ಬಂಧ ಕೇವಲ ಕಾಗದದಲ್ಲಿ ಇವೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಮಾಡುವ ಆಸ್ತಿಪಾಸ್ತಿಗಳ ವಿವರ ಘೋಷಣೆ, ಅವರ ಮೇಲೆ ಇರುವ ಕ್ರಿಮಿನಲ್ ಪ್ರಕಣಗಳ ವಿವರಗಳು ಧೂಳು ತಿನ್ನುತ್ತ ಉಳಿಯುತ್ತವೇ ಹೊರತು ಘೋಷಣೆ ಮಾಡಿರುವ ಅಂಕಿ-ಸಂಖ್ಯೆಗಳ ಸತ್ಯಾಸತ್ಯತೆಯ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದು ಕಾಣಿಸುವುದೇ ಇಲ್ಲ. ಪ್ರತಿ ಚುನಾವಣೆಯ ನಂತರ ಚುನಾಯಿತ ಪ್ರತಿನಿಧಿಗಳ ಆಸ್ತಿಯಲ್ಲಿ ಗಣನೀಯವಾದ ಹೆಚ್ಚಳ ಕಂಡುಬರುತ್ತದೆ. ಈ ಗಳಿಕೆ ನ್ಯಾಯಯುತವಾಗಿ ಆಗಿದೆಯೋ ಅಥವಾ ಅಕ್ರಮವಾಗಿಯೋ ಎನ್ನುವುದೇ ಗೊತ್ತಾಗುವುದಿಲ್ಲ. ಅದನ್ನು ಪರಿಶೀಲಿಸುವ ವ್ಯವಸ್ಥೆಯೂ ಇಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹ ವಯಸ್ಸಿನ ಮಿತಿಯನ್ನು ಇದೀಗ ದಾಟಿರುವ ಕೆಲವರು, ಯಾವ ಘೋಷಿತ ಗಳಿಕೆಯ ಮೂಲವಿಲ್ಲದವರ ಹೆಸರಿನಲ್ಲಿ ಕೋಟಿಗಟ್ಟಲೆ ಹಣವಿರುವುದು ಅವರ ಘೋಷಿತ ಅಸ್ತಿಯ ವಿವರಗಳ ಮೂಲಕ ಕಾಣಿಸುತ್ತದೆ. ಅಷ್ಟು ಹಣ ಇಷ್ಟು ಸಣ್ಣ ವಯಸ್ಸಿನಲ್ಲಿ ಹೇಗೆ ಬರಲು ಸಾಧ್ಯ ಎನ್ನುವುದಕ್ಕೆ ಉತ್ತರ ಕೊಡುವವರು ಯಾರು? ಇವುಗಳನ್ನು ನಿಲ್ಲಿಸುವವರು ಯಾರು ಎನ್ನುವುದಕ್ಕೂ ಉತ್ತರವಿಲ್ಲ. ಎಲ್ಲ ಸಮಸ್ಯೆಗಳಿಗೆ ಜನರು ಸರ್ವೋಚ್ಚ ನ್ಯಾಯಾಲಯ ಮತ್ತು ಚುನಾವಣಾ ಅಯೋಗಗಳ ಮೊರೆಹೋಗಬೇಕಾಗುತ್ತಿದೆ. ಒಂದು ವೇಳೆ ಇವೆರಡೂ ತಮ್ಮ ಕಾರ್ಯನಿರ್ವಹಿಸುವಲ್ಲಿ ವಿಫಲವಾದರೆ ಮುಂದೆ ಏನು ಗತಿ? ಶೇಷನ್ ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನ, ಚುನಾವಣಾ ಆಯೋಗಕ್ಕೆ ಇಷ್ಟು ಅಧಿಕಾರವಿದೆ ಎನ್ನುವುದೇ ಗೊತ್ತಿರಲಿಲ್ಲ. ಅವರ ನಿರ್ಗಮನದ ನಂತರ, ಎಷ್ಟೋ ಆಯುಕ್ತರು ಬಂದರೂ ಚುನಾವಣಾ ಅಯೋಗಕ್ಕೆ ಶೇಷನ್ ಅವರ ಕಾಲದ ಜರ್ಬು, ಕಠಿಣ ಕ್ರಮದ ಖದರು ಬಂದಿಲ್ಲ.
ಕೊನೆಯಲ್ಲಿ, ಸಣ್ಣವರು ತಪ್ಪು ಮಾಡಿದರೆ ಕಿವಿ ಹಿಂಡಿ ಬುದ್ಧಿ ಹೇಳಬಹುದು. ಆದರೆ ಬೇಲಿಯೇ ಎದ್ದು ಹೊಲ ಮೇಯ್ದರೆ, ಹೊಲ ಕಾಯುವವರು ಯಾರು? ಈ ಪ್ರಶ್ನೆ ಈ ಚುನಾವಣೆಯಲ್ಲಿ ಬಂದಿದೆ. ಅದಕ್ಕೆ ಉತ್ತರ ಸದ್ಯದ ವಾತಾವರಣದಲ್ಲಿ ಸಿಗುವುದು ದುಸ್ತರ.
ಅಂಕಣಕಾರರು ಹಿರಿಯ ಪತ್ರಕರ್ತರು