ದಶಕಗಳ ಹೋರಾಟ, ಗುಡ್ಡವನ್ನು ಕೊಳ್ಳೆ ಹೊಡೆದಾರು ಎಂಬ ತೊಳಲಾಟಕ್ಕೆ ಕೊನೆಗೂ ಸಿಕ್ಕಿತು ಮುಕ್ತಿ. ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಖ್ಯಾತಿ ಹೊಂದಿದ ಕಪ್ಪತಗುಡ್ಡವು ಈಗ ವನ್ಯಜೀವಿ ಧಾಮ ಆಯಿತು. ಈಗ ಈ ಗಿರಿಗೆ 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಲ ಬಂದಿದ್ದು, ಇಲ್ಲಿನ ಪರಿಸರಪ್ರಿಯರಲ್ಲಿ ಹಾಗೂ ಗದುಗಿನ ಭಾಗದ ಜನರಲ್ಲಿ ಖುಷಿ ತಂದಿದೆ. ಅನೇಕ ಪರಿಸರ ಪ್ರೇಮಿಗಳು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಾಗೂ ಕೆಲ ಮಠದ ಶ್ರೀಗಳು ಕಪ್ಪತಗುಡ್ಡದ ಉಳಿವಿಗಾಗಿ ನಿರಂತರ ಹೋರಾಟ ಮಾಡಿದ್ದಾರೆ. ಗದುಗಿನ ಲಿಂ. ತೋಂಟದ ಸಿದ್ದಲಿಂಗ ಸ್ವಾಮಿಗಳು ಮತ್ತು ಮುಂಡರಗಿಯ ಅನ್ನದಾನೀಶ್ವರ ಸ್ವಾಮಿಗಳು ಈ ಹೋರಾಟದ ಮುಂಚೂಣಿಯಲ್ಲಿದುದನ್ನು ಸ್ಮರಿಸಬಹುದು. ಇಲ್ಲಿನ ಗಿರಿಗಳಲ್ಲಿ ಇರುವ ಅಮೂಲ್ಯವಾದ ಸಸ್ಯಗಳನ್ನು ಹಾಗೂ ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಈಗ ಬಲ ಬಂದಂತಾಗಿದೆ. ಕಪ್ಪತಗುಡ್ಡದ 24,415.73 ಹೆಕ್ಟರ್ ಪ್ರದೇಶವನ್ನು ವನ್ಯಧಾಮ ಎಂದು ಸರಕಾರ ಘೋಷಿಸಿದೆ.
ಘೋಷಣೆ ಬಂದ ತಕ್ಷಣ ಗದಗ ನಗರದಲ್ಲಿ ಅನೇಕರು ಸಂಭ್ರಮಾಚರಣೆ ಮಾಡಿದರು. ಗದುಗಿನ ಪರಿಸರ ಪ್ರೇಮಿಗಳ ಸಂಘಗಳು ಸಿಹಿ ಹಂಚಿ ಸಂಭ್ರಮಿಸಿದರೆ, ಶ್ರೀ ರಾಮಸೇನೆ ಮತ್ತಿತರ ಸಂಘಟನೆಗಳು ಗದುಗಿನ ಮಧ್ಯಭಾಗವಾದ ಹುಯಿಲಗೋಳ ನಾರಾಯಣ ರಾವ್ ವೃತ್ತದಲ್ಲಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ನರೇಗಲ್ನ ಗ್ರೀನ್ ಆರ್ಮಿ ತಂಡದ ಸದಸ್ಯರು ಸಿಹಿ ಹಂಚಿದರು. ಸಾಮಾಜಿಕ ಜಾಲತಾಣಗಳನ್ನು ಪರಸ್ಪರರನ್ನು ಅಭಿನಂದಿಸಿದರು. ಒಟ್ಟಾರೆ ಈ ಘೋಷಣೆ ಗದಗ ಮತ್ತು ಉತ್ತರ ಕರ್ನಾಟಕದ ಜನರಿಗೆ ಸಿಕ್ಕ ಜಯ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.
ಏನಿದು ಮತ್ತು ಹೇಗೆ ಉಪಯೋಗ?
ಇಷ್ಟು ದಿನ ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ಜನರು, ಕುರಿಗಾಹಿಗಳು, ದನ ಮೇಯಿಸುವವರು ಹಾಗೂ ಔಷಧೀಯ ಸಸ್ಯ ಹಾಗೂ ಇನ್ನಿತರ ಗಿಡಗಳನ್ನು ಕಿತ್ತುಕೊಳ್ಳುವವರು ಓಡಾಡುತ್ತಿದ್ದರು. ಇನ್ನು ಮೇಲೆ ಹಾಗಿಲ್ಲ. ಘೋಷಿತ ಅರಣ್ಯ ಪ್ರದೇಶದ ಭಾಗದಲ್ಲಿ ಇನ್ನು ಮುಂದೆ ಕಾಲಿಡುವ ಹಾಗಿಲ್ಲ.
1) ಕಪ್ಪತಗುಡ್ಡದ ಪ್ರದೇಶದಲ್ಲಿ ಕಾಲಿಡುವುದು, ಮರ ಕಡಿಯುವುದು, ಕಟ್ಟಿಗೆ ಆರಿಸುವುದು ಹಾಗೂ ಕಟ್ಟಿಗೆಯ ನೆಪದಲ್ಲಿ ಸಸ್ಯ ಹಾಗೂ ಹಣ್ಣು, ಹೂವುಗಳನ್ನು ಕೀಳುವ ಹಾಗಿಲ್ಲ.
2) ಈ ಪ್ರದೇಶದಲ್ಲಿ ಸ್ಫೋಟಕ ವಸ್ತುಗಳನ್ನು ತರುವ ಹಾಗಿಲ್ಲ. ಅಂದರೆ, ಬೆಂಕಿ ಪೊಟ್ಟಣವೂ ಸಹ ಇಲ್ಲಿರಬಾರದು. ಇದಾದ ಮೇಲೆ ಗುಡ್ಡಕ್ಕೆ ಬೆಂಕಿ ಕಡಿಮೆಯಾಗಬಹುದು.
3) ಗುಡ್ಡದ ಸಂರಕ್ಷಣೆಗಾಗಿ ಒಂದು ವಿಶೇಷ ಸಮಿತಿ ರಚನೆಯಾಗಲಿದೆ. ಅದು ‘ಎಕೋ ಡೆವೆಲಪ್ಮೆಂಟ್ ಕಮಿಟಿ’ ಹೆಸರಿನಲ್ಲಿದ್ದು, ಅದರಲ್ಲಿ ಪ್ರತ್ಯೇಕ ಆರ್.ಎಫ್.ಒ., ಇ.ಸಿ.ಎಫ್.ಒ ಹಾಗೂ ಮತ್ತಿತರ ಅರಣ್ಯ ಅಧಿಕಾರಿಗಳಿರುತ್ತಾರೆ.
3) ಈ ಸಮಿತಿಯಲ್ಲಿ ಗುಡ್ಡದ ಹತ್ತಿರವಿರುವ ಗ್ರಾಮಸ್ಥರು ಸದಸ್ಯರಾಗಿ ಗುಡ್ಡದ ರಕ್ಷಣೆ ಮಾಡಲು ಬದ್ಧರಾಗಿರುತ್ತಾರೆ.
4) ಸ್ಥಳೀಯರಿಗೆ ಗಾರ್ಡ್ ಹಾಗೂ ಇನ್ನಿತರ ಉದ್ಯೋಗಗಳೂ ದೊರೆಯುತ್ತವೆ.

ಇಷ್ಟು ದಿನ ಏನಾಗುತ್ತಿತ್ತು?
ಕಪ್ಪತಗುಡ್ಡವನ್ನು ಹಾಳುಮಾಡಲು ದೊಡ್ಡ ಕಾರಣಗಳು ಗಣಿಗಾರಿಕೆ ಹಾಗೂ ಪವನ ವಿದ್ಯುತ್ ಸ್ಥಾವರಗಳಾದರೆ, ಇಲ್ಲಿ ನವಿಲು ಹಾಗೂ ಇನ್ನಿತರ ಸಣ್ಣ ಪ್ರಾಣಿ ಪಕ್ಷಿಗಳ ಬೇಟೆಯಾಡಿ ಅಲ್ಲಿಯೇ ಬೇಯಿಸಿ ತಿನ್ನುವುದು, ಸಸ್ಯಗಳನ್ನು ಕಿತ್ತುಕೊಂಡು ಹೋಗುವುದು, ಕಟ್ಟಿಗೆಗಾಗಿ ಗಿಡಗಳನ್ನು ಕಡಿಯುವುದು. ದನಕರು, ಕುರಿಗಳನ್ನು ಅಮೂಲ್ಯ ಸಸ್ಯ ಸಂಪತ್ತು ಇದ್ದಲ್ಲಿ ಮೇಯಿಸಲು ಬಿಡುವುದು ಸಣ್ಣ ಸಣ್ಣ ಕಾರಣಗಳು.
ಕೆಲವು ಪಡ್ಡೆ ಹುಡುಗರು ಈ ಅಮೂಲ್ಯ ಗಿರಿಯ ಕೆಲ ಭಾಗಗಳನ್ನು ತಮ್ಮ ಮೋಜಿನ ತಾಣಗಳನ್ನಾಗಿ ಮಾಡಿಕೊಂಡಿದ್ದಾರೆ. ಅರಣ್ಯ ಸಿಬ್ಬಂದಿಗಳ ಕಣ್ತಪ್ಪಿಸಿ ಹೇಗೆ ಗುಡ್ಡದೊಳಗೆ ನುಸುಳಬೇಕು ಎಂಬುದು ಕೆಲವರಿಗೆ ಚೆನ್ನಾಗಿ ಗೊತ್ತು. ಕಳೆದ ಕೆಲ ವರ್ಷಗಳಿಂದ ಗುಡ್ಡದಲ್ಲಿ ಕುರಿ ಹಾಗೂ ಕೋಳಿಗಳನ್ನು ಬೇಯಿಸಿ ತಿನ್ನುವವರು ಹೆಚ್ಚಾಗಿದ್ದಾರೆ. ಇದೇ ಕಾರಣದಿಂದಾಗಿ ನೂರಾರು ನವಿಲುಗಳು ಈ ಜಾಗವನ್ನು ಬಿಟ್ಟು ಬೇರೆ ಕಡೆಗೆ ಹಾರಿ ಹೋಗಿವೆ.
ಗುಡ್ಡದ ಅಂಚಿನಲ್ಲಿ ವಾಸಿಸುವವರು ಬಗರ್ಹುಕುಂ ವ್ಯವಸಾಯ ಮಾಡುತ್ತಿದ್ದು, ತಾವೆ ಆ ಪ್ರದೇಶದಲ್ಲಿ ಕಳೆದ ಆರು ದಶಕಗಳಿಂದ ಇದ್ದೇವೆ. ಆದ್ದರಿಂದ ಆ ಭೂಮಿಗೆ ತಮಗೆ ಸೇರಬೇಕು ಎಂದು ಹಠ ಹಿಡಿದವರೂ ಇದ್ದಾರೆ.
ಸಂಚಾರಿ ಕುರಿಗಾಹಿಗಳು ಮಹಾರಾಷ್ಟ್ರ ಹಾಗೂ ಇನ್ನಿತರ ರಾಜ್ಯಗಳಿಂದ ಬಂದು ಪ್ರತಿ ವರ್ಷ ಮೂರು ನಾಲ್ಕು ತಿಂಗಳು ಗುಡ್ಡದಲ್ಲಿ ತಮ್ಮ ಕುರಿಗಳನ್ನು ಮೇಯಿಸಿ ವಾಪಸ್ಸು ಹೋಗುವುದನ್ನು ಪರಿಪಾಠವನ್ನಾಗಿ ಮಾಡಿಕೊಂಡಿದ್ದಾರೆ. ಇಲ್ಲಿ ಅಮೂಲ್ಯ ಸಸ್ಯಗಳಿವೆ ಎಂದು ಹೇಳಿದರೂ ಮೊಂಡುತನ ಪ್ರದರ್ಶಿಸುವ ಇವರಿಗೆ ಹೇಳುವವರು ಯಾರೂ ಇಲ್ಲ.
ಮೂಢನಂಬಿಕೆಗಿನ್ನು ಆಸ್ಪದವಿಲ್ಲ
ಗುಡ್ಡದ ಅಂಚಿನ ಜನರು ಪ್ರತಿ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ತಿಂಗಳಿನಲ್ಲಿ ಗುಡ್ಡದ ಒಣ ಹುಲ್ಲಿಗೆ ಬೆಂಕಿ ಹಚ್ಚುವುದನ್ನು ರೂಢಿಸಿಕೊಂಡಿದ್ದಾರೆ. ಒಣ ಹುಲ್ಲು ಸುಟ್ಟರೆ ಮಳೆ ಚೆನ್ನಾಗಿ ಬರುತ್ತದೆ ಎಂಬ ಮೂಢ ನಂಬಿಕೆ ಒಂದೆಡೆಯಾದರೆ, ತಮ್ಮನ್ನು ಗುಡ್ಡದ ಅಂಚಿನಿಂದ ಓಡಿಸಿಬಿಟ್ಟಾರೆ ಎಂಬ ಭಯದಿಂದ ಈ ರೂಢಿಯನ್ನು ಬೆಳೆಸಿಕೊಂಡಿದ್ದಾರೆ.
ನಕಲಿ ವೈದ್ಯರಿಂದ ಲೂಟಿಯಾಗಿದೆ ಈ ಗುಡ್ಡ
ಅನೇಕ ನಕಲಿ ವೈದ್ಯರು ಸಂಶೋಧನೆಯ ಹೆಸರಿನಲ್ಲಿ ಇಲ್ಲಿರುವ ಅಮೂಲ್ಯ ಸಸ್ಯ ಸಂಪತ್ತನ್ನು ಕೊಳ್ಳೆ ಹೊಡೆದಿದ್ದಾರೆ ಎಂಬ ವಿಷಯವೂ ಆತಂಕ ತರುವಂತದ್ದಾಗಿತ್ತು. ಈ ವೈದ್ಯರು ಇಲ್ಲಿನ ಕೆಲ ಸಸ್ಯಗಳನ್ನು ಅಪಾರ ಪ್ರಮಾಣದಲ್ಲಿ ವಿದೇಶಕ್ಕೂ ಸಾಗಿಸಿದ್ದಾರೆ. ಉದಾಹರಣೆಗೆ ಇಲ್ಲಿಯ ಸೀತಾಫಲ ಹಣ್ಣು. ಈ ಸೀತಾಫಲದಲ್ಲಿ ಕ್ಯಾನ್ಸರ್ ಗುಣ ಮಾಡುವ ಶಕ್ತಿಯಿದ್ದು ಅಮೇರಿಕ ಮೂಲದ ಕಂಪೆನಿಯೊಂದು ಇಲ್ಲಿ ದಶಕಗಳ ಕಾಲ ಸೀತಾಫಲದ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿತ್ತು. ಇದು ಇಲ್ಲಿಯ ಅನೇಕ ಅಧಿಕಾರಿಗಳಿಗೂ ಗೊತ್ತಿದ್ದು, ಅವರೆಲ್ಲರೂ ಮೂಕರಾಗಿದ್ದು ಮಾತ್ರ ವಿಷಾದನೀಯ. ಕೆಲ ಕನ್ನಡಪರ ಸಂಘಟನೆಗಳು ಇದರ ವಿರುದ್ಧ ಸಿಡಿದೆದ್ದ ಮೇಲೆ ಸಸ್ಯ ಸಂಪತ್ತು ಲೂಟಿಯಾಗುವುದು ಕಡಿಮೆಯಾಗಿದೆ ಎಂದು ಹೇಳಬಹುದು..ಆದರೆ ನಿಂತಿಲ್ಲ ಎನ್ನುವುದು ಮಾತ್ರ ನಗ್ನ ಸತ್ಯ.
ಸಂತಸ, ಸಂಭ್ರಮಾಚರಣೆ
ಗದಗ ಜಿಲ್ಲೆಯ ಅರಣ್ಯ ಅಧಿಕಾರಿ ಸೋನಲ್ ವೃಷ್ನಿ ಪ್ರಕಾರ, “ವನ್ಯಜೀವಿ ಧಾಮ ಘೋಷಣೆ ನಿಜಕ್ಕೂ ಸಂತಸ ತಂದಿದೆ. ನಮಗೆ 1972 ರ ವನ್ಯ ಜೀವಿ ಕಾಯ್ದೆ ಬಲ ತರಲಿದೆ. ಧಶಕಗಳ ಕಾಲ ಹೋರಾಡಿದ ಜನರೆಲ್ಲರಿಗೂ ನಮ್ಮ ಇಲಾಖೆಯ ಪರವಾಗಿ ಅಭಿನಂದನೆಗಳು. ಇನ್ನು ಕಪ್ಪತಗುಡ್ಡದ ಹಸಿರಾಗಿ ಕಂಗೊಳಿಸಲಿದೆ. ಇದಕ್ಕೆ ಸುತ್ತಮುತ್ತಲಿನ ಹಳ್ಳಿಯ ಜನರ ಸಹಕಾರವೂ ನಮಗೆ ಬೇಕು.”
ಮುಂಡರಗಿಯ ಅನ್ನದಾನೀಶ್ವರ ಮಠದ ಸ್ವಾಮಿಗಳು ಹೇಳುವುದು ಹೀಗೆ, “ಕಪ್ಪತಗುಡ್ಡ ವನ್ಯಜೀವಿ ಧಾಮ ಆಗಬೇಕೆಂಬುದು ಬಹು ದಿನದ ಬೇಡಿಕೆಯಾಗಿತ್ತು. ಈ ಘೋಷಣೆ ಇಲ್ಲಿಯ ಪ್ರಾಣಿ ಮತ್ತು ಔಷಧೀಯ ಸಸ್ಯಗಳ ಸಂರಕ್ಷಣೆ ಅಗತ್ಯವಾಗಿತ್ತು. ಕಪ್ಪತಗುಡ್ಡ ಸಮೃದ್ಧಿಯಾದರೆ ಈ ಭಾಗದಲ್ಲಿ ಮಳೆ ಚೆನ್ನಾಗಿ ಬರುತ್ತದೆ.”
ಶ್ರೀ ರಾಮ ಸೇನೆಯ ಧಾರವಾಡ ವಿಭಾಗದ ರಾಜು ಖಾನಪ್ಪನವರ ಪ್ರಕಾರ, “ಸಂಪೂರ್ಣ ಕಪ್ಪತಗುಡ್ಡವನ್ನು ಏಕೆ ವನ್ಯ ಜೀವಿ ಧಾಮ ವೆಂದು ಘೋಷಿಸಿಲ್ಲ. ಈ ಮೂಲಕ ಗಣಿ ಲೂಟಿ ಹೊಡೆಯುವವರಿಗೆ ಪರ್ಯಾಯ ಮಾರ್ಗ ಮಾಡಿಕೊಟ್ಟಂತಾಗುವುದಿಲ್ಲವೇ. ಈ ಬಗ್ಗೆ ಎರಡನೇ ಹಂತದ ಹೋರಾಟಕ್ಕೂ ಹಲವು ಸಂಘಟನೆಗಳು ಸಾಥ ನೀಡಲಿವೆ.”
ಕಪ್ಪತಗುಡ್ಡದ ಬಗ್ಗೆ ಒಂದಿಷ್ಟು
ಗದಗಿನ ಬಿಂಕದಕಟ್ಟಿ ಗ್ರಾಮದಂಚಿನಿಂದ ಆರಂಭವಾಗುವ ಕಪ್ಪತಗುಡ್ಡವು ಮುಂಡರಗಿ ತಾಲೂಕಿನ ಶಿಂಗಟಾಲೂರಿನ ವರೆಗೆ ಚಾಚಿಕೊಂಡಿದೆ. ಈ ಗುಡ್ಡವು ಒಟ್ಟು 63 ಕಿಮಿಗಳಷ್ಟು ಉದ್ದವಿದ್ದು, 32,346.524 ಹೆಕ್ಟರ್ ನಷ್ಟು ವಿಸ್ತಾರವಾಗಿದೆ. ಕೆಂಪು ಮಿಶ್ರಿತ ಮಣ್ಣಿನಿಂದ ಕೂಡಿರುವ ಈ ಗುಡ್ಡದ ಒಡಲಲ್ಲಿ ಹೆಮಟೈಟ್, ಲಿಮೋನೈಟ್, ತಾಮ್ರ, ಕ್ಯಾಲ್ಸಿಯಂ, ಮ್ಯಾಂಗನಿಸ್ ಮತ್ತು ಚಿನ್ನ ಸೇರಿದಂತೆ ಹಲವು ಖನಿಜಗಳಿವೆ. ಇಲ್ಲಿ 300 ಕ್ಕೂ ಅಧಿಕ ಜಾತಿಯ ಔಷಧೀಯ ಸಸ್ಯಗಳಿದ್ದು ಚಿರತೆ, ಕರಡಿ, ತೋಳ, ನರಿ, ಪುನುಗ ಬೆಕ್ಕು, ಕಾಡು ಕುರಿ, ಚುಕ್ಕೆ ಜಿಂಕೆ, ಮುಳ್ಳು ಹಂದಿ, ಸಾರಂಗ ಹಾಗೂ 13 ಸಾವಿರಕ್ಕೂ ಹೆಚ್ಚು ನವಿಲುಗಳಿವೆ.
ಗದಗ್ ಜಿಲ್ಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಕವಲುಕವಲಾಗಿ ಹರಡಿಕೊಂಡಿರುವ ಚಿಕ್ಕ-ದೊಡ್ಡ ಗುಡ್ಡದ ಸಾಲುಗಳೇ ಕಪ್ಪತಗುಡ್ಡಗಳು. ಅದರಲ್ಲೊಂದು ಸರಣಿ ಮುಂಡರಗಿ ತಾಲೂಕಿನ ಸಿಂಗಟಾಲೂರು ಕ್ಷೇತ್ರದ ವರೆಗೂ ಚಾಚಿಕೊಂಡಿದೆ. ಡೋಣಿ ಗ್ರಾಮದಿಂದ 4 ಕಿ.ಮೀ.ಗಳಷ್ಟು ಅಂತರದಲ್ಲಿ ಬೃಹದಾಕಾರದ ಶಿಖರಗಳನ್ನೊಳಗೊಂಡ ಬೆಟ್ಟಗಳ ಸಮುಚ್ಚಯ ಮಾತ್ರವೇ ಕಪ್ಪತಗುಡ್ಡ ಎಂಬುದು ಪ್ರತೀತಿ. ಆದರೆ ಬಹುತೇಕರಿಗೆ ಇದು ಗೊತ್ತಿಲ್ಲ. ಬಿಂಕದಕಟ್ಟಿಯಿದ ಶಿಂಗಟಾಲೂರಿನ ವರೆಗೆ ಇರುವ ಗಿರಿಗಳ ಸಮುಚ್ಚಯವೆಲ್ಲ ಕಪ್ಪತಗುಡ್ಡವೇ. ಹಿಂದಕ್ಕೆ ಬಹು ಸಂಖ್ಯೆಯಲ್ಲಿ ಪಾರಿವಾಳಗಳ ನೆಲೆ ಇದಾಗಿದ್ದರಿಂದ ಕಪೋತಗಿರಿ ಎಂಬುದು ವಾಡಿಕೆಯಲ್ಲಿರುವ ಹೆಸರು. ಕಪ್ಪತಮಲ್ಲಯ್ಯ ಹಾಗೂ ನಂದಿವೇರಿ ಬಸವಣ್ಣ ಇಲ್ಲಿನ ಅಧಿದೇವತೆಗಳು.
ಕಪ್ಪತಗುಡ್ಡ ಖನಿಜ ಸಂಪತ್ತಿನ ಆಗರ. ಹಿಂದೊಮ್ಮೆ ಅಮೂಲ್ಯ ಹಾಗೂ ಅಪರೂಪದ ನೂರಾರು ಔಷಧೀಯ ಸಸ್ಯಗಳ ಬೀಡಾಗಿ, ಗಿಡಮರಗಳಿಂದ ತುಂಬಿಕೊಂಡು, ಪಶುಪಕ್ಷಿಗಳ ಸಂಕುಲ, ಕಲರವದ ಮಾರ್ಧನದೊಂದಿಗೆ ಪ್ರಕೃತಿಯ ರಮ್ಯ ನಿಗೂಢತೆ, ಚೆಲುವು-ಸೌಂದರ್ಯ-ಭವ್ಯತೆಯಿಂದ ಮನಪುಲಕಿಸುವ ಠಾವಾಗಿ, ತನ್ನೆಲ್ಲ ವಿಸ್ಮಯ-ಲಾಲಿತ್ಯವನ್ನು ಬೀಗುತ್ತ ಮಾನವ ಸಂವೇಗಗಳಿಗೆ ಮಾಧುರ್ಯದ ರಸಭಕ್ಷ್ಯವನ್ನುಣಿಸುತ್ತಿದ್ದ ಈ ಬೆಟ್ಟ ಪ್ರದೇಶವು ಕಳೆದ ಆರೆಂಟು ದಶಕಗಳಲ್ಲಿ ಮಾನವರ ಧಾಷ್ಟ್ರ್ಯಭರಿತ ಶೋಷಣೆಗೀಡಾಗಿ ಬೆತ್ತಲು ಗುಡ್ಡವಾಗಿ ರಣರಣಿಸಿ ಕಂಗೆಟ್ಟು ಕಳೆದ ಶತಮಾನದ ಕೊನೆಯಲ್ಲಿ ತನ್ನ ವಿಕೃತಿಯ ಪರಾಕಾಷ್ಠೆಯನ್ನು ತಲುಪಿ ನಗ್ನತೆಯ ಅಭಿಶಾಪದಿಂದ ಬರಡಾಗಿ, ಹಸಿರಿನ ಉಸಿರಿನಿಂದ ವಂಚಿತವಾಗಿ, ನೀರಿನ ಬರದಿಂದಾಗಿ ಪ್ರಾಣಿಪಕ್ಷಿಗಳಿಗೂ ಬೇಡವಾಗಿ ಮಾನವ ದೌರ್ಜನ್ಯಕ್ಕೆ ಶರಣಾಗಿ ಸೋತು ಸೊರಗಿತ್ತು. ನಂತರ ಅದು ಹಸರೀಕರಣಗೊಂಡಿದ್ದು ವಿಸ್ಮಯವೇ ಸರಿ!
ಯಾವ ಯಾವ ಸಸ್ಯಗಳುಂಟು?
ಆಲ, ಅಂಕೇರಿ, ಅಮತಬಳ್ಳಿ, ಅರಳಿ, ಅಮಟೆ, ಅನಂತ ಮೂಲ, ಅಜವಾನ, ಅತ್ತಿ ಅಡಸೋಗಿ, ನಕರಿಸೊಪ್ಪು, ಚಿತ್ರಮೂಲ, ಸಂಜೀವಿನಿ, ಕಾಡು ಬದಾಮಿ, ರಕ್ತ ಚಂದನ ಕಾರಿ, ಕಕ್ಕಿ ಕವಳೆ, ಕಣಗಲ, ಬಸವನಪಾದ, ಹನಮ ಹಸ್ತ, ಕಾಡಿಗ್ಗರಗ, ಉತ್ತಾರಾಣಿ, ಕಾಡನಿಂಬೆ, ಗಜಗಕಾಸರಕ್, ಕೇಶ ಕೆಜೋರಾ, ಕರ್ಪೂರ, ಲೋಬಾನ, ಕರಿ ಲೆಕ್ಕ, ಬಿಳಿಯಕ್ಕ, ಗುಲಗಂಜಿ, ಚೊಗಚಿ, ಗೊರಂಟೆ, ತೇಗ, ತಪಸಿ, ಪಾಷಾಣ ಬೇದಿ, ಪಾರಿಜಾತ, ಪುಷ್ಕರ ಮೂಲ, ಬಕುಲಾಬಾಲಿ, ರುದ್ರಾಕ್ಷಿ ಸಪ್ತ ವರ್ಣ, ಮೂಚ ಪತ್ತಿ, ಶಂಕಪುಷ್ಪ ಹೊಗ್ಗೂಳ, ಹಿರೇಮದ್ದು, ಹಿಪ್ಪಲ ಸೊನಕ್ಕೆ, ಶಿಖಕಲ್ಲಿ ಸಬ್ಬಸಗಿ, ಪಚಗ, ಕಾಡು ಸಬ್ಬಸಗಿ, ಹೊಂಗೆ, ಬೇವು, ಹುಣಸಿ, ನೆಲ್ಲಿ, ತಪಸಿ, ಬಿಲ್ವಪತ್ರಿ, ಆಂಜನ, ಮುತ್ತಲ, ಬಳವಲ, ಬಾರಿ, ಅರಳಿ, ಬಸರಿ, ಬನ್ನಿ ಮುಂತಾದುವು.