ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಜೈನ್ ಸಮುದಾಯದವರ ‘ಗಣೇಶ ಬಾಗ್’ ಕಟ್ಟಡದಲ್ಲಿ ಕಾರ್ಯಕ್ರಮವೊಂದರ ಕುರಿತು, ಸಮುದಾಯದವರು ಹಿಂದಿ ಭಾಷೆಯಲ್ಲಿದ್ದ ಬ್ಯಾನರ್ ಹಾಕಿದ್ದರು. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬ್ಯಾನರ್ ಹರಿದು ಹಾಕಿದ್ದರಿಂದ ಆರು ಮಂದಿಯನ್ನು, ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರನ್ನು ಬಂಧಿಸಿರುವುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದ್ದು, ಟ್ವಿಟರ್ ನಲ್ಲಿ #ReleaseKannadaActivists ಎಂಬ ಹ್ಯಾಶ್ ಟ್ಯಾಗ್ ಮೂಲಕ ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಲಾಗುತ್ತಿದೆ. ಈ ಬಗ್ಗೆ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರ ಟ್ವೀಟ್ ವಿವಾದವನ್ನು ಇನ್ನಷ್ಟು ತೀಕ್ಷ್ಣವಾಗಿಸಿದೆ.
ಏನಿದು ಘಟನೆ?
ಬ್ಯಾನರ್ ಒಂದರಲ್ಲಿ ಮುಂದಿನ ಒಂದು ತಿಂಗಳ ಕಾಲ ನಡೆಯುವ ಕಾರ್ಯಕ್ರಮದ ವಿವರ ಹಿಂದಿಯಲ್ಲಿ ಮುದ್ರಿತವಾಗಿತ್ತು. ಇದನ್ನು ಕಂಡ ಕೆಲವು ಕನ್ನಡಪರ ಹೋರಾಟಗಾರರು, ಸಾರ್ವಜನಿಕ ಪ್ರದೇಶದಲ್ಲಿ ಹಿಂದಿ ಬ್ಯಾನರ್ ಕಟ್ಟಿದ್ದಕ್ಕೆ ಪ್ರಶ್ನಿಸಿ, ಆಕ್ರೋಶಗೊಂಡು ಬ್ಯಾನರ್ ಹರಿದಿದ್ದರು. ಘಟನೆ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆ, ‘ಗಣೇಶ್ ಬಾಗ್’ ಟ್ರಸ್ಟಿ ತ್ರಿಲೋಕಚಂದ್ರ ತಕ್ಷಣ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದರು. ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಬಿ. ಹರೀಶ್ ಕುಮಾರ್, ಪದಾಧಿಕಾರಿಗಳಾದ ಮಂಜು, ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆಯ ಅಂಜನಪ್ಪ, ರಕ್ಷಣಾ ಸೇನೆಯ ರಮೇಶ್ ಗೌಡ ಹಾಗೂ ಕರುನಾಡ ಸೇವಕರು ವೇದಿಕೆಯ ಮಾದೇಶ್ ಗೌಡ ಸೇರಿ ಒಟ್ಟು ಆರು ಮಂದಿಯನ್ನು ಪೋಲಿಸರು ಬಂಧಿಸಿದರು.
ಪೊಲೀಸರ ದಾಳಿ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಭಾನುವಾರ ಆನಂದ್ ರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. “ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಹಿಂದಿ ಭಾಷೆಯ ಬ್ಯಾನರ್ ಹರಿದ ವಿಚಾರವನ್ನಿಟ್ಟುಕೊಂಡು ದಾಳಿ ನಡೆಸಿದ ಪೋಲಿಸರ ಕಾರ್ಯ ಸರಿಯಲ್ಲ,’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇಷ್ಟೊಂದು ಆಕ್ರೋಶ ಬೇಕಿತ್ತೇ?
ಜೈನ ಸಮುದಾಯ ಬ್ಯಾನರ್ ನಲ್ಲಿ ಹಿಂದಿ ಭಾಷೆಯಲ್ಲಿ ತಮ್ಮ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಾಕಿದ್ದರೇ ವಿನಃ, ಯಾವುದೇ ಸ್ಥಿರ ಬೋರ್ಡ್ ಗಳನ್ನು ಬಳಸಿಲ್ಲ ಎನ್ನುವುದು ಇಲ್ಲಿ ಗಮನಾರ್ಹ ಅಂಶ. ಸಾಮಾನ್ಯವಾಗಿ, ತಮ್ಮ ಸಮುದಾಯದ ಕಾರ್ಯಕ್ರಮದ ಆಚರಣೆಗೆ ಹೊರ ರಾಜ್ಯದಲ್ಲಿರುವ ಬಂಧು-ಮಿತ್ರರು ಸಹ ಆಗಮಿಸುವುದು ಇರುವುದರಿಂದ ಹಿಂದಿ ಭಾಷೆಯಲ್ಲಿ ಅವರೆಲ್ಲರನ್ನು ಬ್ಯಾನರ್ ಮೂಲಕಆಹ್ವಾನಿಸಿರಬಹುದು. ಆದರೆ ಆ ಸ್ಥಳದಲ್ಲಿ ಹಾಕಿದ್ದ ಬ್ಯಾನರ್ ಸ್ಥಿರವಾಗಿದ್ದರೆ ಅದು ಒಪ್ಪುವಂತಹ ಅಲ್ಲ. ರಾಜ್ಯದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆಯಾಗಬೇಕೆನ್ನುವ ಈಗ ಬಂಧನಕ್ಕೊಳಗಾದ ಹೋರಾಟಗಾರರನ್ನು ಸೇರಿಸಿ ಉಳಿದೆಲ್ಲರ ಅಭಿಪ್ರಾಯವೂ ಒಪ್ಪದಕ್ಕದ್ದು. ಇದರಲ್ಲಿ ಎರಡು ಮಾತಿಲ್ಲ. ಹಾಗೆಯೇ, ಕೆಲವೊಂದು ಸಂದರ್ಭವನ್ನು ನೋಡಿಕೊಂಡು ಅನ್ಯರ ಸಂಸ್ಕೃತಿಯನ್ನು ಗೌರವಿಸುವುದು ಕೂಡ ಕನ್ನಡಿಗರ ಧರ್ಮ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೋಲಿಸರ ಕರ್ತವ್ಯ ಹೌದು. ಆದರೆ ಕಾರ್ಯಕರ್ತರನ್ನು ಜಾಮೀನು ರಹಿತ ಸೆಕ್ಷನ್ ಗಳ ಅಡಿಯಲ್ಲಿ ಬಂಧಿಸಿರುವುದು ವಿಷಾದನೀಯ.
ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಸರಿಯೇ
“ಹಿಂದಿ ಬ್ಯಾನರ್ ವಿಷಯವಾಗಿ ಕೆಲ ರೌಡಿಗಳು, ಜೈನ ಸಹೋದರರ ಮೇಲೆ ದಾಳಿ ಮಾಡಿದ್ದಕ್ಕೆ ತುಂಬಾ ನೋವಾಗುತ್ತಿದೆ” ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಗೆ, ವಿರೋಧದ ಪ್ರತಿಕ್ರಿಯೆಗಳು ಇನ್ನೂ ಹೆಚ್ಚುತ್ತಲೇ ಇವೆ. ಇದರ ನಂತರ ಮತ್ತೊಂದು ಟ್ವೀಟ್ ಮಾಡಿದ ತೇಜಸ್ವಿ ಸೂರ್ಯ “ಪಂಪ, ಪೊನ್ನ, ರನ್ನ ಕನ್ನಡ ಸಾಹಿತ್ಯದ ರತ್ನಗಳು. ಇವರೆಲ್ಲಾ ಜೈನ ಸಮುದಾಯಕ್ಕೆ ಸೇರಿದವರು. ಕರ್ನಾಟಕದಲ್ಲಿರುವ ಜೈನ ಸಮುದಾಯದ ಬಗ್ಗೆ ಇಂದಿನ ಯುವಜನತೆ, ಇತಿಹಾಸ ತಿಳಿದುಕೊಂಡು ನಿತ್ಯದ ಸಂವಹನದಲ್ಲಿ ಕನ್ನಡ ಬಳಸಬೇಕು. ಅಲ್ಲದೆ, ಬೆಂಗಳೂರಿನಲ್ಲಿ ಉರ್ದು ಬಳಕೆ ಮಾಡಿದರೆ ಯಾರೂ ಕೇಳುವುದಿಲ್ಲ.” ಎಂದಿದ್ದರು. ಇದಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮುದಾಯದವರ ನಡುವಿನ ತಾರತಮ್ಯವನ್ನು, ಘರ್ಷಣೆಯನ್ನು ಹೆಚ್ಚಿಸುವಂತಿರುವ ತೇಜಸ್ವಿ ಟ್ವೀಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತ್ ಪೊನ್ನಾಥಪುರ ಎಂಬವರು ಮುಸಲ್ಮಾನರು, ಜೈನಸಮುದಾಯದವರೊಂದಿಗಿನ ಬೆಂಗಳೂರು ನಗರದ ಸಂಬಂಧದ ಕುರಿತು ಹೀಗೆ ಹೇಳಿದ್ದಾರೆ ”ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿಗೆ ವಲಸೆ ಬಂದಿರುವ ಜೈನರು-ಮಾರ್ವಾಡಿಗಳ ಜೊತೆಗೆ ಇಲ್ಲಿನ ದೀರ್ಘಕಾಲದ ಸ್ಥಳೀಯರಾದ ಮುಸಲ್ಮಾನರನ್ನು ಹಾಗೂ ಅವರ ಕೆಲ ಬಡಾವಣೆಗಳನ್ನು ಹೋಲಿಸುವುದೇ ಸರಿಯಲ್ಲ ಹಾಗೂ ಅದು ದುರುದ್ದೇಶದಿಂದ ಕೂಡಿರುವಂತದ್ದು! ಸದಾ ಕೈ ಮಾಡಿ ತೋರಿಸಲಾಗುವ ಮುಸಲ್ಮಾನ ಬಡಾವಣೆಗಳು ಆ ಸ್ವರೂಪ ಪಡೆಯಲು ಕಾರಣ ಕೆಂಪೇಗೌಡನ ಕಾಲದಿಂದ ಬ್ರಿಟಿಷರ ಕಾಲದವರೆಗೂ ಜಾರಿಯಲ್ಲಿದ್ದ ಜಾತಿ-ಮತ ಕೇಂದ್ರಿತ ಬಡಾವಣೆಗಳ ಪಾಲಿಸಿ. ಈಗಲೂ ಅವು ಬಡ ಹಾಗೂ ಕೆಳ ಮಧ್ಯಮ ವರ್ಗದ ಮುಸಲ್ಮಾನರ ಬಡಾವಣೆಗಳಾಗಿ ಮುಂದುವರೆದಿವೆ. ಇವರಿಗೆ ಬೇರೆಡೆ ಸಲೀಸಾಗಿ ಮನೆ ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ಆಗದಿರುವುದರಿಂದ ಅವರ ಬಡಾವಣೆಗಳಲ್ಲೇ ಮುಂದುವರಿಯುವ ಅನಿವಾರ್ಯತೆಯೂ ಇದೆ! ಅವರ ಪ್ರಮುಖ ಭಾಷೆಯಾದ ಉರ್ದು ಹಿಂದಿನಿಂದಲೂ ಕಾಣಿಸಿಕೊಂಡು ಬಂದಿದೆ. ಬೆಂಗಳೂರು ಎಂದಿಗೂ ಎಲ್ಲ ಭಾಷೆ, ಧರ್ಮ, ಸಂಸ್ಕೃತಿಗಳ ನೆಲೆಬೀಡಾಗಿಯೇ ಇರುವುದು. ಇಲ್ಲಿನ ಮುಖ್ಯವಾಹಿನಿ ಈ ಎಲ್ಲವನ್ನೂ ಒಳಗೊಂಡ ಕನ್ನಡ ಕೇಂದ್ರಿತ ಸಂಸ್ಕೃತಿಯಾಗಿದೆ.”
ಇನ್ನೊಂದೆಡೆ, ಸಂಸದ, ಸಚಿವ ಹಾಗೂ ಹಿರಿಯ ರಾಜಕಾರಣಿ ಸದಾನಂದ ಗೌಡ ಕನ್ನಡ ಹೋರಾಟಗಾರರ ದುಡುಕು ವರ್ತನೆಯನ್ನು ಖಂಡಿಸಿದ್ದು ಸರಿಯೆ. ಆದರೆ, ಅವರೂ ಕೂಡ ಹಿಂದಿ ಬ್ಯಾನರ್ ಕಿತ್ತು ಹಾಕಿದ್ದನ್ನು `ಶಾಂತಿಪ್ರಿಯ ಜೈನ ಸಮುದಾಯದ ಮೇಲೆ ನಡೆಸಿದ ದಾಳಿ’ ಎಂದು ಹೇಳುವ ಮೂಲಕ ತೇಜಸ್ವಿಯ ಹಾದಿಯನ್ನೇ ತುಳಿದಿದ್ದಾರೆ. ಸದಾನಂದ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದು, “ಕನ್ನಡಿಗರದ್ದು ಯಾವತ್ತೂ ಕಟ್ಟಿ ಕೊಡುವ ಮನಸ್ಥಿತಿ ಹೊರತು ಕೆಡಹುವ ಮನಸ್ಥಿತಿಯಲ್ಲ ಅನ್ನುವುದು ಆ ಕಿಡಿಗೇಡಿಗಳಿಗೆ ತಿಳಿಯದ್ದು ವಿಪರ್ಯಾಸ. ಅದನ್ನು ಬಿಟ್ಟು ಶಾಂತಿಪ್ರಿಯ ಜೈನ ಸಮುದಾಯದ ಮೇಲೆ ನಡೆಸಿದ ನೈತಿಕ ದಾಳಿ ಎಷ್ಟು ಸರಿ? ಅವರ ಧಾರ್ಮಿಕ ಭಾವನೆಗೆ ಘಾಸಿ ಉಂಟು ಮಾಡಿದ್ದು ಎಷ್ಟು ಸರಿ ? ಹಿಂದಿ ಭಾಷೆಯ ನಾಮ ಫಲಕ ಹಾಕಿದ ಕಾರ್ಯಕ್ರಮ ಸಂಘಟಕರನ್ನು ಸಂಪರ್ಕಿಸಿ ಗಮನ ಸೆಳೆಯಬೇಕಿತ್ತು ಮತ್ತು ತತ್ ಕ್ಷಣ ಸರಿ ಪಡಿಸಿಕೊಳ್ಳುವಂತೆ ಸೂಚಿಸಬೇಕಿತ್ತು. ಕನ್ನಡದ ವಿಷಯದಲ್ಲಿ ಕನ್ನಡಿಗರ ಮಾತನ್ನು ಧಿಕ್ಕರಿಸುವ ಮನಸ್ಥಿತಿ, ಧೈರ್ಯ ಯಾರಿಗಾದರೂ ಕರ್ನಾಟಕದಲ್ಲಿ ಇದೆಯಾ? ಕಾನೂನು ತನ್ನ ಕೆಲಸ ಮಾಡೇ ಮಾಡುತ್ತೆ. ಚಳುವಳಿ ಮಾಡಿ ತಪ್ಪೆಸಗಿದವರನ್ನು ಸರಿದಾರಿಗೆ ತರುವುದು ಕನ್ನಡಿಗ ಮನಸ್ಥಿತಿ. ದಾಳಿ ಮಾಡುವುದು ಕಿಡಿಗೇಡಿಗಳ ಕೆಲಸ.”
ಈ ನಡುವೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಟ್ವಿಟ್ಟರ್ ನಲ್ಲಿ ಒತ್ತಾಯಿಸುತ್ತಿದ್ದಾರೆ.
ಕನ್ನಡ ಹೋರಾಟಕ್ಕೆ ಧರ್ಮ ಮತ್ತು ರಾಜಕೀಯದ ಬಣ್ಣ ಬಳಿದು ಪೊಲೀಸರ ಮೂಲಕ ಕನ್ನಡ ಹೋರಾಟಗಾರರನ್ನು ಹತ್ತಿಕ್ಕುವ ರಾಜ್ಯ ಸರ್ಕಾರದ ನಡೆ ಖಂಡನೀಯ.
ಬಂಧಿತ ಕನ್ನಡ ಹೋರಾಟಗಾರರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ.#ReleaseKannadaActivists— Siddaramaiah (@siddaramaiah) August 19, 2019
ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲವೆಂದು ಭಾವೋದ್ವೇಗದಿಂದ ಹೋರಾಟ ಮಾಡುವುದು ತಪ್ಪಲ್ಲ.
ಅವರು ಯಾವ ರೀತಿಯ ಹಾನಿ ಮಾಡದಿದ್ದರೂ ಅವರನ್ನು ರೌಡಿ, ಕಿಡಿಗೇಡಿಗಳೆಂದೆಲ್ಲ ಅವಮಾನಿಸಿ, ಜಾಮೀನು ರಹಿತ ಮೊಕ್ಕದ್ದಮ್ಮೆ ದಾಖಲಿಸಿರುವುದು ನಾಡದ್ರೋಹಿ ಕೆಲಸ. ಸರ್ಕಾರ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. #ReleaseKannadaActivists— Dr. G Parameshwara (@DrParameshwara) August 19, 2019
ಮಾನ್ಯ ಮುಖ್ಯಮಂತ್ರಿಗಳೇ ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಿಸಿರುವ ಮೊಕದ್ದಮೆಯನ್ನು ಹಿಂಪಡೆಯಿರಿ. ನಿಮ್ಮ ಪೌರುಷವನ್ನು ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯದ ಪಾಲಿನ ನೆರವಿನ ಹಣವನ್ನು ಪಡೆದುಕೊಂಡು ಬರುವುದರಲ್ಲಿ ತೋರಿಸಿ.#ReleaseKannadaActivists
— H D Kumaraswamy (@hd_kumaraswamy) August 19, 2019
ರಾಜ್ಯದಲ್ಲಿ ಸಾಹಿತಿಗಳು, ಹೋರಾಟಗಾರರು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕೆಂದು ಸಾಕಷ್ಟು ಹೋರಾಟ ಮಾಡಿ ಜೈಲಿಗೆ ಸೇರಿದ್ದಾರೆ. ತಾಯ್ನುಡಿ ಹೆತ್ತ ತಾಯಿಗೆ ಸಮ ಎಂಬುದುಎಲ್ಲರ ಭಾವ. ಹೀಗಿರುವಾಗ ತಾಯಿನಾಡಿನಲ್ಲಿ ಇಂತಹ ಪರೋಕ್ಷ ಹೇರಿಕೆಯನ್ನು ಸಹಿಸಿಕೊಂಡು ಕೂರುವುದು ಹೇಗೆ? ನಾಡಿನ ಭಾಷೆ, ತಾಯಿ ಭಾಷೆ ಉಳಿಸುವ ಸಲುವಾಗಿ ಹೋರಾಟ ಮಾಡುವವರಿಗೆ ಹಿಂಸಾಚಾರಕ್ಕೆ ಇಳಿಯದಂತೆ ತಡೆಯುವುದು ಸರಿ. ಆದರೆ, ನಮ್ಮ ನಾಡಿನ ಸಂಸದರೇ ಕನ್ನಡ ಪರ ಹೋರಾಟಗಾರರನ್ನು ರೌಡಿಗಳೆಂದು ಕರೆಯುವ ಮಟ್ಟಕ್ಕೆಇಳಿಯಬಾರದು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕಾರ್ಯಕರ್ತರನ್ನು ಬಂಧಿಸಿರುವ ಕುರಿತು “ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ನಿನ್ನೆ ನಡೆದ ಘಟನೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಹೊರತು ಕನ್ನಡ ಪರ ಹೋರಾಟಗಾರರನ್ನು ಗುರಿಯಾಗಿಸಿಕೊಂಡು ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ನಮ್ಮ ಸರ್ಕಾರ ಕನ್ನಡ ಹಾಗೂ ಕನ್ನಡಿಗರ ಹಿತರಕ್ಷಣೆಗೆ ಬದ್ಧವಾಗಿದೆ. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ”ಎಂದಿದ್ದಾರೆ. ಏನೇ ಆದರೂ, ಸರ್ಕಾರ ಬಂಧಿಸಿರುವ ಕನ್ನಡ ಸಂಘಟನೆಗಳ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಕನ್ನಡ ಭಾಷೆಯನ್ನೂ ಬಳಸುವ ಬಗ್ಗೆ ಅನ್ಯ ಭಾಷಿಕರಲ್ಲಿ ಇನ್ನಷ್ಟು ಹೆಚ್ಚಿನ ಅರಿವು ಅಗತ್ಯ.