ರಾಜ್ಯ ಸರ್ಕಾರದ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಕ್ರಮ ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆ ಇತ್ತೀಚೆಗೆ ನಡೆದ ಬಹುತೇಕ ಪ್ರತಿಭಟನೆಗಳ ಪೈಕಿ ಸಮಯೋಚಿತವಾದದ್ದು. ಇದಕ್ಕೂ ಮಿಗಿಲಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳುವಲ್ಲಿ ಪ್ರೇರೇಪಿಸಿರುವ ಪ್ರತಿಭಟನೆ ಇದು.
ಕೇಂದ್ರದಲ್ಲಿ ಯುಪಿಎ-2 ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮುತುವರ್ಜಿಯಿಂದ ಭೂಸ್ವಾಧೀನ ಕಾಯ್ದೆಗೆ ಮಹತ್ವದ ತಿದ್ದುಪಡಿ ತರಲಾಗಿತ್ತು. ತಿದ್ದುಪಡಿ ನಂತರದ ಕಾಯ್ದೆ – ಭೂಸ್ವಾಧೀನ, ಪುನರ್ವಸತಿ, ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (The Right to Fair Compensation and Transparency in Land Acquisition, Rehabilitation and Resettlement Act – LARR) 2013ರಲ್ಲಿ ಅಸ್ತಿತ್ವಕ್ಕೆ ಬಂತು. ಇದರ ಪ್ರಕಾರ, ಭೂ ಸ್ವಾಧೀನಕ್ಕೂ, ಅದರಲ್ಲೂ ರೈತರ ಭೂಮಿ, ಮೊದಲು ಭೂ ಮಾಲಿಕರ ಒಪ್ಪಿಗೆ ಅತ್ಯಗತ್ಯ ಎಂಬ ಮಹತ್ವದ ಅಂಶವನ್ನು ಸೇರ್ಪಡೆಗೊಳಿಸಲಾಗಿತ್ತು. ಇದಲ್ಲದೇ ಈ ತಿದ್ದುಪಡಿಯಲ್ಲಿ ಭೂಮಾಲೀಕರ (ರೈತರ) ಪರವಾದ ಹಲವು ಅಂಶಗಳನ್ನು ಸೇರ್ಪಡೆಗೊಳಿಸಲಾಗಿತ್ತು.
2014ರಲ್ಲಿ ಎನ್ ಡಿ ಎ ಸರ್ಕಾರ ಅಧಿಕಾರಕ್ಕೇರಿತು. ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ನರೇಂದ್ರ ಮೋದಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಮೂಲ ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆಗೆ ಚಾಲನೆ ನೀಡಿತು. ಆದರೆ, ಇದರ ವಿರುದ್ಧ ಆರಂಭಗೊಂಡ ಉಗ್ರ ಹೋರಾಟಕ್ಕೆ ಬಗ್ಗಿದ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹಿಂಪಡೆಯಿತು. ಆದರೆ, ವಾಮ ಮಾರ್ಗ ಇದ್ದೇ ಇತ್ತಲ್ಲ. ಬಿಜೆಪಿ ಅಧಿಕಾರದಲ್ಲಿರುವ ಅನೇಕ ರಾಜ್ಯಗಳಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆ. ಅದರಂತೆ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಛತ್ತೀಸ್ ಘಡ ರಾಜ್ಯಗಳು ಕಾಯ್ದೆಗೆ ತಿದ್ದುಪಡಿ ತಂದವು.
ಕರ್ನಾಟಕದಲ್ಲಿ ಆದದ್ದೇನು?

2019 ಫೆಬ್ರವರಿ ತಿಂಗಳಲ್ಲಿ ತಿದ್ದುಪಡಿ ಮಸೂದೆಯನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಯಾವುದೇ ಚರ್ಚೆಗೂ ಒಳಪಡಿಸದೇ ಅಂಗೀಕರಿಸಿತು. ವಿಪರ್ಯಾಸವೆಂದರೆ, 2013 ರಲ್ಲಿ ಯುಪಿಎ ಸರ್ಕಾರ ರೈತರ ಒಪ್ಪಿಗೆ ಇಲ್ಲದೇ ಭೂ ಸ್ವಾಧೀನ ಮಾಡಲಾಗದು ಎಂದು ಕಾಯ್ದೆ ತಂದಿದ್ದರೆ, ರಾಜ್ಯ ಸರ್ಕಾರ ಕನಿಷ್ಟ ರೈತ ಸಂಘಗಳಿಂದಲೂ ಸಲಹೆ ಕೇಳದೆ, ಚರ್ಚೆ ನಡೆಸದೇ ತಿದ್ದುಪಡಿ ಮಸೂದೆ ಜಾರಿಗೆ ತಂದು ಬಿಟ್ಟಿದೆ.
ರಾಜ್ಯ ಸರ್ಕಾರದ ತಿದ್ದುಪಡಿಗಳಲ್ಲಿ ಬಹು ಮುಖ್ಯವಾದದ್ದು; 2013ರ ಕಾಯ್ದೆಯಿಂದ ಕೆಲವು ಯೋಜನೆಗಳಿಗೆ ವಿನಾಯಿತಿ ನೀಡಿದ್ದು. ಅವುಗಳೆಂದರೆ, ರಾಷ್ಟ್ರೀಯ ಭದ್ರತೆ, ರಕ್ಷಣಾ ಮಹತ್ವದ ಪ್ರಾಜೆಕ್ಟ್ ಗಳು, ನೀರಾವರಿ, ಕುಡಿಯುವ ನೀರಿನ ಪ್ರಾಜೆಕ್ಟ್ ಗಳು, ಮೂಲಸೌಕರ್ಯಕ್ಕೆ ಸಂಬಂಧಪಟ್ಟ ಪ್ರಾಜೆಕ್ಟ್ ಗಳು – ಶಿಕ್ಷಣ, ಆಸ್ಪತ್ರೆ, ವಸತಿ, ಸರ್ಕಾರಿ, ಅರೆ ಸರ್ಕಾರಿ ಅಥವಾ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದ ಕೈಗಾರಿಕಾ ಪ್ರಾಜೆಕ್ಟ್ ಗಳು.
ಇಷ್ಟೂ ಪ್ರಾಜೆಕ್ಟ್ ಗಳು ವಿನಾಯಿತಿಯಲ್ಲಿ ಸೇರಿದ ಮೇಲೆ ಇನ್ನೇನು ಬಾಕಿ ಉಳಿದಿದೆ ಎಂದು ಪ್ರತಿಭಟನಾಕಾರರು ಪ್ರಶ್ನಿಸುತ್ತಿರುವುದು ಸರಿಯಾಗಿಯೇ ಇದೆ. ಇದಲ್ಲದೇ ಇನ್ನೂ ಹಲವು ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಅವುಗಳಲ್ಲಿ ಮಹತ್ವವಾದದ್ದು ಹೀಗಿವೆ:
ಹೆಚ್ಚಿನ ವಿಚಾರಣೆ ಇಲ್ಲ: ತನ್ನ ಮುಂದೆ ಹಾಜರಾದ, ಭೂಮಿಯಲ್ಲಿ ಆಸಕ್ತಿಯುಳ್ಳ ಎಲ್ಲಾ ವ್ಯಕ್ತಿಗಳು, ಜಿಲ್ಲಾಧಿಕಾರಿಯು ಐತೀರ್ಪಿನಲ್ಲಿ ಸೇರಿಸಬೇಕಾದ ವಿಷಯಗಳ ಕುರಿತು ಲಿಖಿತದಲ್ಲಿ ಒಪ್ಪಿದ್ದಾರೆಂದು ಮನಗಂಡರೆ, ಜಿಲ್ಲಾಧಿಕಾರಿ ಮತ್ತಷ್ಟು ವಿಚಾರಣೆಯನ್ನು ಮಾಡದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಐತೀರ್ಪು ನೀಡಬಹುದು.
ಸ್ವಯಂಪ್ರೇರಿತ ಸ್ವಾಧೀನತೆ: ಯಾವುದೇ ಪ್ರದೇಶದಲ್ಲಿ ಭೂಮಿಯ ಅಗತ್ಯವಿದೆ ಎಂದು ರಾಜ್ಯ ಸರ್ಕಾರಕ್ಕೆ ಕಂಡುಬಂದಾಗಲೆಲ್ಲಾ, ಒಪ್ಪಿಕೊಂಡ ಯಾವುದೇ ಭೂಮಾಲಿಕನೊಂದಿಗೆ ಭೂಮಿ ಮಾರಾಟದ ಒಪ್ಪಂದವನ್ನು ಮಾಡಿಕೊಳ್ಳಬಹುದು.
ಈ ಎರಡೂ ಅಂಶಗಳಿಂದ, ಮೊದಲಿನ ಕಾಯ್ದೆಯಲ್ಲಿನ ಭೂಸ್ವಾಧೀನಕ್ಕೂ ಮೊದಲು 80% ಭೂಮಾಲಿಕರ ಒಪ್ಪಿಗೆ ಅಗತ್ಯ ಎಂಬ ಅಂಶವನ್ನು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ನಿವಾರಿಸಿದೆ. ಅಂದರೆ, ಯಾವುದಾದರೂ ಕೆಲವು ಭೂಮಾಲಿಕರನ್ನು `ಹೇಗಾದರೂ’ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡಿದರಾಯಿತು, ಮತ್ತೆ ಉಳಿದ ರೈತರು ಒಪ್ಪದೇ ನಿರ್ವಾಹವಿಲ್ಲದಂತಾಗುತ್ತದೆ.
ಪುನರ್ವಸತಿ ಬದಲು ಇಡಿಗಂಟು: 2013ರ ಕಾಯ್ದೆಯನ್ವಯ ಪುನರ್ವಸತಿ ಹಾಗೂ ಪುನರ್ವ್ಯವಸ್ಥೆ ಬದಲಾಗಿ ನಿಯಮಗಳಂತೆ ಇಡಿಗಂಟು (lump-sum) ಪಾವತಿಸುವ ಹೊಸ ಅಂಶವನ್ನು ಸೇರಿಸಲಾಗಿದೆ. ಅಂದರೆ, ಇನ್ನು ಮುಂದೆ ಈ ಕಾಯ್ದೆಯ ಮೂಲಭೂತ ಅಂಶವಾದ `ಪುನರ್ವಸತಿ ಹಾಗೂ ಪುನರ್ವ್ಯವಸ್ಥೆಯನ್ನೇ’ ರಾಜ್ಯ ಸರ್ಕಾರ ಅನುಸರಿಸದೆಯೇ ಇರುವ ಅಧಿಕಾರ ಹೊಂದಿದೆ. ಇದೂ ಕೂಡ ಮೇಲೆ ಹೇಳಿದಂತೆ, ಒಬ್ಬಿಬ್ಬರಿಗೆ lump-sum ಕೊಟ್ಟರೆ, ಉಳಿದವರು ಪುನರ್ವಸತಿ ಹಾಗೂ ಪುನರ್ವ್ಯವಸ್ಥೆ ಏನೂ ಇಲ್ಲದ ಆ ಒಪ್ಪಂದಕ್ಕೆ ಸಮ್ಮತಿಸುತ್ತಾರೆ.
ಸರ್ಕಾರಿ ಅಧಿಕಾರಿಗಳ ಹಿತ ಮಾತ್ರ ಅಬಾಧಿತ: ರೈತರ, ಭೂ ಮಾಲಿಕರ ಹಿತ ಕಾಪಾಡುವುದನ್ನು ಕೊನೆಯ ಆದ್ಯತೆಯಾಗಿಸಿಕೊಂಡಿರುವ ಸರ್ಕಾರ ತನ್ನ ಅಧಿಕಾರಿಗಳು ತಪ್ಪು ಮಾಡಿದಲ್ಲಿ ಅನುಸರಿಸಬೇಕಾದ ಕಾನೂನು ಪ್ರಕ್ರಿಯೆಯನ್ನು ಸ್ಪಷ್ಟವಾಗಿ ನಮೂದಿಸಿದೆ.

ಈ ಹಿಂದೆ ಅನೇಕ ಭೂ ಸ್ವಾಧೀನ ಪ್ರಕ್ರಿಯೆಗಳಲ್ಲಿ ಸರ್ಕಾರಿ ಅಧಿಕಾರಿಗಳು ಕೋಟಿಗಟ್ಟಲೆ ಪರಿಹಾರ ಹಣವನ್ನು ಅನರ್ಹ ವ್ಯಕ್ತಿಗಳಿಗೆ ಪಾವತಿಸಿರುವ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲೇ ಬಾಕಿ ಉಳಿದಿದೆ. ಸರ್ಕಾರಕ್ಕೆ ವಸೂಲಾಗಬೇಕಿರುವ ಇಂತಹ ಹಣ ಇನ್ನೂ ಸರ್ಕಾರಿ ಖಜಾನೆ ಸೇರಿಲ್ಲ. ಹೀಗಿರುತ್ತಾ, ಸರ್ಕಾರ ತನ್ನ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವುದನ್ನು ಬಿಟ್ಟು, ತಿದ್ದುಪಡಿ ಕಾಯ್ದೆಯಲ್ಲಿ ರಕ್ಷಣೆ ನೀಡಿದೆ.
ನೂತನ ತಿದ್ದುಪಡಿ ಹೀಗಿದೆ: “ಯಾವುದೇ ಪ್ರಕರಣದ ಅಡಿಯಲ್ಲಿ ಉಚ್ಛ ನ್ಯಾಯಾಲಯ ಅಥವಾ ಕಾನೂನು ವ್ಯವಹಾರಗಳಲ್ಲಿನ ಇತರ ಯಾವುದೇ ಪ್ರಾಧಿಕಾರವು, ಈ ಅಧಿನಿಯಮದ ಅಡಿಯಲ್ಲಿ ಯಾವೊಬ್ಬ ವ್ಯಕ್ತಿಗೆ ಹಣವನ್ನು ತಪ್ಪಾಗಿ ಪಾವತಿ ಮಾಡಲಾಗಿದೆ ಎಂದು ಮನಗಂಡಲ್ಲಿ, ರಾಜ್ಯ ಸರ್ಕಾರ ಅಥವಾ ಅದರ ಪ್ರಾಧಿಕೃತ ಅಧಿಕಾರಿ ಅಥವಾ ಜಿಲ್ಲಾಧಿಕಾರಿಯು ಅದನ್ನು ಭೂ ಕಂದಾಯದ ಬಾಕಿಯಂತೆ ವಸೂಲು ಮಾಡತಕ್ಕದ್ದು.’’ ಅಂದರೆ, ಆ ಅಧಿಕಾರಿ ನಿವೃತ್ತರಾದರೂ, ಅನರ್ಹರ ಪಾಲಾದ ಸರ್ಕಾರದ ಹಣ ವಸೂಲಾತಿ ಮರೀಚಿಕೆಯೆಂದೇ ಅರ್ಥ. ಇದು ಈ ಮೊದಲೂ ಅನುಷ್ಟಾನದಲ್ಲಿದ್ದ ಕಾನೂನು. ಇದಲ್ಲದೇ, ಈ ಕಾನೂನಿಡಿಯಲ್ಲಿ ಸರ್ಕಾರಿ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವ ಮೊದಲು ಸಿಆರ್ ಪಿಸಿ (CrPC) ಸೆಕ್ಷನ್ 197 ರಂತೆ ಪೂರ್ವಾನುಮತಿ ಕಡ್ಡಾಯ ಎಂದು ಕೂಡ ಹೇಳಿದೆ.
ಕಾಂಗ್ರೆಸ್ ಈಗೇನು ಮಾಡಲಿದೆ?
ಎನ್ ಡಿ ಎ ಸರ್ಕಾರ ಅಧಿಕಾರಕ್ಕೆ ಬಂದೊಡನೆ, ಬಿಜೆಪಿ ತನ್ನ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ 2013 ರ ಕಾಯ್ದೆಯ ತಿದ್ದುಪಡಿಗೆ ಮುಂದಾದಾಗ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳಿಗೆ ಒಂದು ಕಟ್ಟಪ್ಪಣೆ ನೀಡಿದ್ದರು. ಅದೇನೆಂದರೆ, ಯಾವ ಕಾರಣಕ್ಕೂ ರೈತರ ಹಿತದೃಷ್ಟಿಯಿಂದ ಯುಪಿಎ ಸರ್ಕಾರ ಜಾರಿಗೆ ತಂದ ಕಾಯ್ದೆಯನ್ನು ತಿದ್ದುಪಡಿ ಮಾಡಬಾರದು. ನಂತರ, ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್ (ರಾಜಸ್ಥಾನ), ಭೂಪೇಶ್ ಬಘೇಲ್ (ಛತ್ತೀಸ್ ಘಡ್) ಹಾಗೂ ಕಮಲ್ ನಾಥ್ (ಮಧ್ಯ ಪ್ರದೇಶ) ರಿಗೆ ರಾಹುಲ್ ಪತ್ರ ಬರೆದು, ಈ ತಿದ್ದುಪಡಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದರು. ವಿಪರ್ಯಾಸವೆಂದರೆ, ಇಷ್ಟೆಲ್ಲಾ ಕಾಳಜಿಯನ್ನು ತಮ್ಮ ಪಕ್ಷದ ರಾಷ್ಟ್ರಾಧ್ಯಕ್ಷ ತೋರುತ್ತಿದ್ದರೂ, ಅತಿ ಹೆಚ್ಚು ಶಾಸಕರನ್ನು ಸಮ್ಮಿಶ್ರ ಸರ್ಕಾರದಲ್ಲಿ ಹೊಂದಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ಏನೂ ಮಾಡಲಾಗಲಿಲ್ಲ. ರೈತರ ಸರ್ಕಾರ, ರೈತರ ಸಾಲ ಮನ್ನಾ ಮಾಡುವ ಸರ್ಕಾರ ಎಂದೆಲ್ಲ ಸ್ವಯಂ ಪ್ರಚಾರ ಗಿಟ್ಟಿಸಿಕೊಳ್ಳುವ ಕಾಂಗ್ರೆಸ್ ಹಾಗೂ ಜೆಡಿಎಸ್ ರೈತರ ಪ್ರತಿಭಟನೆಯನ್ನು ಹೇಗೆ ಹತ್ತಿಕ್ಕುತ್ತದೆ ಎಂದು ಕಾದು ನೋಡಬೇಕು.