2019ರ ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನಿಂದ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿಗರು ಕವಲು ದಾರಿಯಲ್ಲಿ ನಿಂತಿದ್ದಾರೆ. ಅವರಿಗೆ ಕಾಡುತ್ತಿರುವುದು ತಮ್ಮ ರಾಜಕೀಯ ಅಳಿವು ಉಳಿವಿನ ಪ್ರಶ್ನೆ. ಬಿಜೆಪಿಗೆ ಪ್ರಚಂಡ ಬಹುಮತ ಬಂದಿರುವದರಿಂದ ಇನ್ನು ಐದು ವರ್ಷ ಮತ್ತೆ ಲೋಕಸಭೆ ಚುನಾವಣೆಯ ಮೂಲಕ ರಾಜಕೀಯ ಬಲಾಬಲ ಅಳೆಯುವ ಸಾಧ್ಯತೆ, ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ಥಿರ ಗಳಿಸುವ ಪ್ರಶ್ನೆಗಳು ಉದ್ಭವಿಸುವುದಿಲ್ಲ. ಅಲ್ಲಿಯ ತನಕ ಅವರಿಗೆ ಒಂದು ತರಹದ ರಾಜಕೀಯ ಬರಗಾಲ ತಪ್ಪಿದ್ದಲ್ಲ. ಅಲ್ಲಿಯ ತನಕ ಅವರು ಎನು ಮಾಡಬೇಕು? ಧುರೀಣತ್ವದಲ್ಲಿ ಬದಲಾವಣೆ ಬೇಕೇ, ಬೇಡವೇ? ತಮ್ಮ ಈ ರಾಜಕೀಯ ದುಸ್ಥಿತಿಗೆ ಕಾರಣವೇನು? ಕಾರಣರಾರು? ಮತದಾರರಲ್ಲಿ ವಿಶ್ವಾಸವನ್ನು ಹೇಗೆ ತಿರುಗಿ ಗಳಿಸಲು ಸಾಧ್ಯ? ಅಥವಾ, ಏನೂ ಉಪಯೋಗವಿಲ್ಲವೆಂದು ಈ ಶತಮಾನದ ಇತಿಹಾಸವಿರುವ ಪಕ್ಷವನ್ನು ಇತಿಹಾಸ ಪುಟಕ್ಕೆ ಸೇರಲು ಬಿಡಬೇಕೆ ಎಂಬ ಇತರ ಹತ್ತು ಹಲವಾರು ಸಮಸ್ಯೆಗಳು ಅವರ ಮನಸ್ಸನ್ನು ಕಾಡುತ್ತಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇನೋ ಕಾಂಗ್ರೆಸ್ ಮುಕ್ತ ಭಾರತದ ಕನಸನ್ನು ಕಂಡಿದ್ದರು. ಆದರೆ ಅದು ಇಷ್ಟು ಬೇಗ ನನಸಾದೀತು ಎಂದು ಯಾರೂ ಅಂದುಕೊಂಡಿರಲಿಲ್ಲ. ಸಂಸತ್ತಿನ ಚುನಾವಣೆಯನ್ನು ಅಮೇರಿಕದ ಮಾದರಿಯಲ್ಲಿ, ಅಧ್ಯಕ್ಷರ ಚುನಾವಣೆಯಂತೆ ಪರಿವರ್ತಿಸಿ, ಈ ಚುನಾವಣೆಯನ್ನು ಮೋದಿ ಮತ್ತು ರಾಹುಲ ಗಾಂಧಿಯವರ ನಡುವಿನ ಸೆಣಸಾಟವೆಂದು ಪರಿವರ್ತಿಸಿ, ಬಿಜೆಪಿ ಧುರೀಣತ್ವದ ಎದುರು ಕಾಂಗ್ರೆಸ್ ಧುರೀಣತ್ವ ಪೇಲವ ಎಂಬ ಭಾವನೆ ಮೂಡಿಸಿ, ಚುನಾವಣೆಯಲ್ಲಿ ಸಫಲರಾದರು ಎಂದು ವ್ಯಾಖ್ಯಾನಿಸಬಹುದು. ಆದರೆ ಸ್ವಲ್ಪ ದೀರ್ಘವಾಗಿ ಅಲೋಚನೆ ಮಾಡಿದರೆ. ಕಾಂಗ್ರೆಸ್ ಅವನತಿ ಮೊದಲೇ ಪ್ರಾರಂಭವಾಗಿತ್ತು, ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನವನ್ನು ಮೋದಿ ಮಾಡಿದರು ಅಷ್ಟೇ.
ಕಾಂಗ್ರೆಸನಲ್ಲಿ ವಂಶಪಾರಂಪರ್ಯ ರಾಜಕಾರಣ ಕಾಲಿಟ್ಟದ್ದು ಅಪ್ರತ್ಯಕ್ಷವಾಗಿ ಜವಹರಲಾಲ ನೆಹರು ಕಾಲದಲ್ಲಿ ಮತ್ತು ಪ್ರತ್ಯಕ್ಷವಾಗಿ ಅವರ ಮಗಳು ಇಂದಿರಾ ಗಾಂದಿ ಕಾಲದಲ್ಲಿ. ಅಧಿಕಾರದ ಆಸೆಗಾಗಿ, ಸಿದ್ಧಾಂತದ ತಳಹದಿಯಿಂದ ದೂರವಾಗಿ, ಕಾಂಗ್ರೆಸ್ ಇಂದಿರಾ ಗಾಂಧಿಯವರ ಕಾಲದಿಂದ ವ್ಯಕ್ತಿ ಕೇಂದ್ರಿತ ಮತ್ತು ವ್ಯಕ್ತಿ ಪೂಜಿತ ಪಕ್ಷವೆಂದು ಬೆಳೆಯಿತು. ಇಂದಿರಾ ಗಾಂಧಿಯವರ ನಂತರ ರಾಜೀವ ಗಾಂಧಿ, ನಂತರ ಸೋನಿಯಾ ಗಾಂಧಿ, ರಾಹುಲ ಗಾಂಧಿಯ ತನಕ ನಡೆದು ಬಂದು, ಈಗ ಪ್ರಿಯಾಂಕ ಗಾಂಧಿ ಪ್ರವೇಶಕ್ಕೆ ರಂಗಸಜ್ಜಿಕೆ ತಯಾರು ಮಾಡಲಾಗುತ್ತಿದೆ. ಜನರಿಂದ ದೂರವಾಗಿ ಅವರ ಭಾವನೆಗಳಿಗೆ ಬೆಲೆ ಕೊಡದಂತೆ ಬೆಳೆಯಿತು. ಕಾರ್ಯಕರ್ತರ ಪಡೆಯ ಬದಲು ಸ್ವಾರ್ಥ ಸಾಧಕರ ಮತ್ತು ಹೊಗಳು ಭಟರ ಪಕ್ಷವಾಗಿ ಬೆಳೆಯಿತು. ಪಕ್ಷದ ಚೌಕಟ್ಟನ್ನು ಎಷ್ಟರ ಮಟ್ಟಿಗೆ ಹಾಳುಗೆಡವಿ ಅದು ಗೆದ್ದಲು ತಿನ್ನುವ ಹಾಗೆ ಮಾಡಿದೆ ಎಂದರೆ, ಈ ವಂಶದ ಕುಡಿಗಳು ಇಲ್ಲದಿದ್ದರೆ, ಪಕ್ಷವೇ ಬೆಳೆಯಲಿಕ್ಕಿಲ್ಲ ಎನ್ನುವ ಭಾವನೆ ಮೂಡಿದೆ.
ಇಷ್ಟು ದಿವಸ ಜನರ ಭಾವನೆಗಳಿಗೆ ಸ್ಪಂದಿಸದೇ ತತ್ವ ಸಿದ್ಧಾಂತಗಳಿಗೆ ಬೆಲೆಕೊಡದೇ ವರ್ತಿಸಿದ್ದಕ್ಕೆ ಕಾಂಗ್ರೆಸ್ ಈಗ ಬಹು ದೊಡ್ಡ ಬೆಲೆ ತರುವಂತಹ ಪರಿಸ್ಥಿತಿ ಎದುರಿಸುತ್ತಿದೆ. ಒಂದು ಕಾಲದಲ್ಲಿ ಯಾವ ಎದುರಾಳಿಗಳಿಲ್ಲದೆ ದೇಶಾದ್ಯಂತ ತನ್ನ ಬೇರು ಸ್ಥಾಪಿಸಿದ್ದ ಕಾಂಗ್ರೆಸ್ ಈಗ ದೇಶಾದ್ಯಂತ ನೆಲಕಚ್ಚಿದೆ. ತನ್ನ ಅಳಿದುಳಿದ ಬೇರು ಎಲ್ಲಿವೆ ಎಂದು ರಾವುಗನ್ನಡಿ ಹಿಡಿದುಕೊಂಡು ಹುಡುಕಿದರೂ ಸಿಗದಂತಹ ಪರಿಸ್ಥಿತಿ ಬಂದಿದೆ.
ಕಾಂಗ್ರೆಸ್ ಅವನತಿ ಶುರುವಾದದ್ದು ತಮಿಳುನಾಡಿನಿಂದ. ಲೋಕಸಭೆಯಲ್ಲಿ ಕೆಲವು ಸ್ಥಾನಗಳು ಸಿಕ್ಕಬಹುದು ಎನ್ನುವ ಆಸೆಯಿಂದ ಇಂದಿರಾ ಗಾಂಧಿಯವರ ಕಾಲದಲ್ಲಿ, ಪಕ್ಷ ತಮಿಳು ನಾಡಿನ ಎರಡೂ ದ್ರಾವಿಡ ಪಕ್ಷಗಳಿಗೆ ವಿಧಾನಸಭೆ ಚುನಾವಣೆಯನ್ನು ತಾನು ಸ್ಪರ್ಧಿಸದೇ ದತ್ತು ಕೊಟ್ಟದ್ದರಿಂದ ಕ್ರಮೇಣ ಪಕ್ಷವು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು. ಅವಿಭಜಿತ ಆಂಧ್ರಪ್ರದೇಶ ಒಂದು ಕಾಲಕ್ಕೆ ಕಾಂಗ್ರೆಸಿನ ಭದ್ರಕೋಟೆ. ಯಾರದೋ ಮಾತು ಕೇಳಿ ಆ ರಾಜ್ಯವನ್ನು ಭಾಗ ಮಾಡುವ ನಿರ್ಧಾರ ತೆಗೆದುಕೊಂಡಿದ್ದರಿಂದ ತೆಲಂಗಾಣ ಮತ್ತು ಆಂಧ್ರಗಳಲ್ಲಿ ಕಾಂಗ್ರೆಸ್ ಹೆಸರು ಹೇಳದಂತಾಗಿದೆ. ಕೇರಳದಲ್ಲಿ, ಕಾಂಗ್ರೆಸಿಗೆ ಸ್ವಂತ ಗೆಲ್ಲುವ ಶಕ್ತಿ ಇಲ್ಲದ್ದರಿಂದ ಸಮ್ಮಿಶ್ರ ಸರಕಾರದ ಭಾಗಿದಾರ ನೆಂದು ಕಾಲಕಳೆಯುತ್ತಿದೆ. ಕರ್ನಾಟಕವೂ ಕಾಂಗ್ರೆಸಿನ ಭದ್ರಕೋಟೆ, ಒಂದು ಕಾಲದಲ್ಲಿ. ಬಿಜೆಪಿಯನ್ನು ಲೋಕಸಭೆ ಚುನಾವಣೆಯ ಮೂಲಕ ಸಂಸತ್ತಿನಲ್ಲಿ ಕಟ್ಟಿಹಾಕಬಹುದೆಂಬ ವಿಚಾರದಿಂದ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು, ಇದ್ದ ಶಕ್ತಿಯನ್ನೂ ಕಳೆದು ಕೊಂಡಿದೆ. ಮಾಡಿದ ಸಮ್ಮಿಶ್ರ ಸರಕಾರ ಗೊಂದಲದ ಗೂಡಾಗಿ ಕೊರಳಲ್ಲಿ ಹಾಕಿಕೊಂಡ ಒರಳಂತಾಗಿದೆ. ಹೀಗೆ ದಕ್ಷಿಣದಲ್ಲಿ ಕಾಂಗ್ರೆಸ ಸೊನ್ನೆ.
ದೇಶದ ಬೇರೆ ಭಾಗಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಪಂಜಾಬ್, ರಾಜಸ್ಥಾನ ಮಧ್ಯಪ್ರದೇಶ ಬಿಟ್ಟರೆ ಇನ್ನಾವ ರಾಜ್ಯಗಳಲ್ಲಿ ಕಾಂಗ್ರೆಸ ಸರಕಾರಗಳಿಲ್ಲ. ಕರ್ನಾಟಕ ಮತ್ತು ಕೇರಳದಲ್ಲಿ ಇರುವುದು ಕಾಂಗ್ರೆಸ ಭಾಗವಹಿಸಿರುವ ಸಮ್ಮಿಶ್ರ ಸರಕಾರಗಳು. ಬಂಡುಗಾರಿಕೆ ಕಾಂಗ್ರೆಸಿನ ಬುಡವನ್ನು ಅಲ್ಲಾಡಿಸುತ್ತಿವೆ, ಯಾವಾಗಲಾದರೂ ಈ ರಾಜ್ಯಗಳಲ್ಲಿ ಬದಲಾವಣೆ ಆಗಬಹುದು. ಕೆಲ ರಾಜ್ಯಗಳಲ್ಲಿ ಬರಲಿರುವ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸಿನ ಬುಡ ಮತ್ತಷ್ಟು ಶಿಥಿಲವಾಗಬಹುದು.
ಈಗ ಕೊನೆಗೊಂಡ ಲೋಕಸಭೆ ಚುನಾವಣೆಯಲ್ಲಿ, ಕಾಂಗ್ರೆಸಿಗೆ ಅಧಿಕೃತ ವಿರೋಧಿ ಪಕ್ಷವಾಗುವಷ್ಟೂ ಸ್ಥಾನಗಳೂ ಬಂದಿಲ್ಲ. ಹೀಗಾಗುತ್ತಿರುವುದು ಎರಡನೆಯ ಬಾರಿ. ಕಳೆದ ಚುನಾವಣೆಯಲ್ಲಿಯೂ ಇದೇ ಪರಿಸ್ಥಿತಿ ಬಂದಿತ್ತು. ಅಧಿಕಾರವೆಂಬ ಪ್ರಾಣವಾಯುವಿನ ಮೇಲೆ ಜೀವಿಸಿರುವ ಕಾಂಗ್ರೆಸಿಗೆ ಅಧಿಕಾರವಿಲ್ಲದೇ ಇನ್ನೈದು ವರ್ಷಗಳ ರಾಜಕೀಯವಾಗಿ ಕಾಲ ಕಳೆಯುವದೇ ದುಸ್ತರವಾಗಿದೆ. ಇಂತಹ ಶೋಚನೀಯ ಪರಿಸ್ಥಿತಿಯಲ್ಲಿ ಮುಂದಿನ ಲೋಕಸಭೆ ಚುನಾವಣೆಯ ಹೊತ್ತಿಗೆ, ಈ ಪಕ್ಷವು, ಇರಬಹುದೇ, ನಶಿಸಿ ಹೋಗಬಹುದೇ ಆಥವಾ ಹೊಸ ರೂಪ, ಧುರೀಣ ಮತ್ತು ಸಿದ್ದಾಂತಗಳೊಡನೆ ತಲೆ ಎತ್ತ ಬಹುದೇ? ಎನ್ನುವ ಹತ್ತು ಹಲವಾರು ಪ್ರಶ್ನೆಗಳು ಎಲ್ಲ ರಾಜ್ಯಗಳಲ್ಲಿ, ಎಲ್ಲ ಸ್ಥರಗಳಲ್ಲಿ ಕಾಂಗ್ರೆಸಿನ ಒಳಗೆ ಚರ್ಚೆಯಾಗುತ್ತಲಿವೆ. ಧುರೀಣರಲ್ಲಿರುವ ಹೆಪ್ಪುಗಟ್ಟಿದ್ದ ವೈಮನಸ್ಸು ಬಹಿರಂಗವಾಗಿ ಅಭಿವ್ಯಕ್ತವಾಗುತ್ತಿದೆ. ಎಲ್ಲರೂ ಅವರವರ ರಾಜಕೀಯ ಉಳಿವಿನ ಬಗೆಗೆ ಚಿಂತಾಕುಲರಾಗಿದ್ದಾರೆ.
ಈಗ ಕಾಂಗ್ರೆಸ ಹೇಗೆ ಚೇತರಿಸಿಕೊಂಡು ಮತ್ತು ಮೊದಲಿನಂತೆ ಮತದಾರರ ವಿಶ್ವಾಸ ಗಳಿಸಿ, ಬಿಜೆಪಿಗೆ ಮತ್ತು ನರೇಂದ್ರ ಮೋದಿಯವರಿಗೆ ರಾಜಕೀಯ ಸವಾಲು ಕೊಟ್ಟೀತು?
ಮೊದಲನೆಯದಾಗಿ, ಪಕ್ಷಕ್ಕೆ ರಾಹುಲ್ ಗಾಂಧಿಯವರ ಬದಲಾಗಿ ಹೊಸ ಅಧ್ಯಕ್ಷರನ್ನು ತಂದು ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಪುನಃ ಪ್ರತಿಷ್ಠಾಪಿಸುವುದು. ಇದು ಹೇಳುವದು ಸುಲಭ. ಮಾಡುವುದು ಕಷ್ಟ. ನೆಹರು-ಗಾಂಧಿ ಕುಟುಂಬದ ಹೊರಗಿನವರು ಯಾರಾದರೂ ಅಧ್ಯಕ್ಷಪದಕ್ಕೆ ಏರುವುದು ಮತ್ತು ಅಂತಹ ಜವಾಬ್ದಾರಿಯನ್ನು ನಿರ್ವಹಿಸವುದನ್ನು ಊಹಿಸುವುದೂ ಕಷ್ಟ. ಹಿಂದೆ ಕಾರಣಾಂತರಗಳಿಂದ ಈ ಪದಕ್ಕೆ ಏರಿದ ಮಾಜಿ ಪ್ರಧಾನಿ ಪಿ. ನರಸಿಂಹ ರಾವ್, ಮತ್ತು ಸೀತಾರಾಮ ಕೇಸರಿ ಅವರು ಪಟ್ಟ ಪಡಿಪಾಟಲು, ಸಹಿಸಿದ ಕಷ್ಟ, ಮತ್ತು ಯಾವ ರೀತಿಯಲ್ಲಿ ಅವರು ಪದತ್ಯಾಗ ಮಾಡುವ ವಾತಾವರಣ ನಿರ್ಮಾಣ ಮಾಡಲಾಯಿತು ಎನ್ನುವ ನೆನಪು ಇನ್ನೂ ಹಚ್ಚ ಹಸಿರಾಗಿದೆ. ಮೇಲಾಗಿ, ಗಾಂಧಿ ಕುಟುಂಬದವರ ಹೆಸರಿದ್ದರೆ ಪಕ್ಷಕ್ಕೆ ಮತ ಬರುತ್ತದೆ ಎಂಬ ಭಾವನೆ ಇನ್ನೂ ಕೆಲವು ಧುರೀಣರು ಎನ್ನಿಸಿಕೊಳ್ಳುವವರ ಮನಸ್ಸಿನಲ್ಲಿ ಕುಳಿತಿದೆ. ಕಳೆದ ಮತ್ತು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇದು ಸಿಧ್ಧವಾಗದಿದ್ದರೂ, ಅವರನ್ನು ಹುದ್ದೆಯಿಂದ ಇಳಿ ಎಂದು ಹೇಳುವ ಧೈರ್ಯ ಮಾಡುವವರು ಯಾರು? ಮತ್ತು ಆ ಕುರ್ಚಿಯಲ್ಲಿ ಕೂಡುವ ಧೈರ್ಯ ಮಾಡುವವರು ಯಾರು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎನ್ನುವ ಪ್ರಶ್ನೆಗಳು ಬರುತ್ತವೇ.
ರಾಹುಲ ಗಾಂಧಿಯವರೇ ಸ್ವತ: ತಾವು ಈ ಪದವಿಯಲ್ಲಿ ಮುಂದುವರಿಯಲು ಬಯಸುವುದಿಲ್ಲ ಎಂದು ಹೇಳಿದ್ದಾರೆ ಎಂದರೆ, ಬಹಳ ಮಂದಿ ಹೇಳುತ್ತಾರೆ ಇದು ಬರೀ ನಾಟಕ ಮಾತ್ರ. ರಾಹುಲ ಗಾಂಧಿ ತಮ್ಮ ನಿರ್ಧಾರ ಪುನ: ಪರಿಶೀಲಿಸಬೇಕು ಮತ್ತು ವಾಪಸ್ಸು ಬರಬೇಕೆನ್ನುವ ಒಕ್ಕೊರಲಿನ ಕೂಗು ಈಗಾಗಲೇ ನೆಹರು-ಗಾಂಧಿ ಮನೆತನದ ಸಮೀಪವರ್ತಿ ಗುಂಪಿನವರು ಶುರುಮಾಡಿದ್ದಾರೆ. ಅದರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಲೋಕಸಭೆ ಚುನಾವಣೆಯಲ್ಲಿ ಪರಾಭವ ಗೊಂಡ ವೀರಪ್ಪ ಮೊಯ್ಲಿಯವರೂ ಇದ್ದಾರೆ.
ಕಾಲ ಬದಲಾಗಿದೆ. ಮತದಾರರೂ ಬದಲಾಗಿದ್ದಾರೆ. ಅವರಿಗೆ ಹಿಂದಿನವರಂತೆ ಗಾಂಧಿ ನೆಹರು ಮನೆತನದ ಮೋಹವಿಲ್ಲ, ಮತ್ತು ಧುರೀಣತ್ವದ ತುಲಾನಾತ್ಮಕ ದೃಷ್ಟಿಯಲ್ಲಿ, ಮೋದಿಯವರಿಗಿದ್ದ ಆಕರ್ಷಣೆ ರಾಹುಲ ಗಾಂಧಿಯವರಿಗೆ ಇಲ್ಲ ಎಂಬ ಕಟುಸತ್ಯವನ್ನು ಈಗಿನ ಗಾಂಧಿ ಹಿಂಬಾಲಕರಿಗೆ ಯಾರು ಹೇಳಬೇಕು? ಇದು ಈ ಪಕ್ಷ ಅವನತಿಯತ್ತ ಸಾಗುವ ಕುರುಹೇ?
ಅಂಕಣಕಾರರು ಹಿರಿಯ ಪತ್ರಕರ್ತರು