ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಂತೆ ಉತ್ತರ ಕರ್ನಾಟಕದ ಬೆಳಗಾವಿ/ಧಾರವಾಡ ಜಿಲ್ಲೆಯ ಜನರಿಗೆ ನಮ್ಮ ರಾಜ್ಯದ್ದೇ ಅದ ಮಹಾದಾಯಿ ನದಿಯ ನೀರಿನ ಉಪಯೋಗ ಮಾಡಿಕೊಳ್ಳುವ ಯೋಗ ಬರುವುದಿಲ್ಲವೆಂದು ಕಾಣಿಸುತ್ತಿದೆ. ಹತ್ತಿ ಬೆಳೆಗೆ ಇರುವಂತೆ ಇದಕ್ಕೆ ಕುತ್ತೂ ಜಾಸ್ತಿ. ಒಂದು ದೊಡ್ಡ ಕುತ್ತಿನಿಂದ ಪಾರಾದೆವು ಎಂದು ನಿಟ್ಟುಸಿರು ಬಿಡುವುದರ ಒಳಗೆ ಇನ್ನೊಂದು ಕುತ್ತು ಎದುರಾಗಿದೆ.
ಕರ್ನಾಟಕದ ಖಾನಾಪುರದ ಬಳಿ ಹುಟ್ಟಿ, ಪಶ್ಚಿಮಕ್ಕೆ ಹರಿದು, ಪಶ್ಚಿಮ ಘಟ್ಟದಿಂದ ಕೆಳಗೆ ಹರಿದು, ಗೋವಾ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುವ ಮಹಾದಾಯಿ ಒಂದು ಅಂತಾರಾಜ್ಯ ನದಿ. ಅದರ ನೀರಿನ ಉಪಲಬ್ಧಿಯ ಅಂದಾಜಿನಂತೆ ಹರಿದು ಹೋಗುವ ಸುಮಾರು 200 ಟಿಎಂಸಿಎಫ್ಟಿ (ಸಾವಿರ ದಶಲಕ್ಷ ಘನ ಅಡಿ) ನೀರನ್ನು ಎರಡೂ ರಾಜ್ಯಗಳು ನೀರಾವರಿಗಾಗಲೀ, ಜಲವಿದ್ಯುತ್ ಉತ್ಪಾದನೆಯಾಗಲೀ ಬಳಸದೆ, ಎಲ್ಲ ನೀರೂ ಸಮುದ್ರಕ್ಕೆ ಹರಿದುಹೋಗುತ್ತಿದೆ.
ಈ ನೀರಿನಿಂದ ಜಲವಿದ್ಯುತ್ ಉತ್ಪಾದಿಸುವ ಯೋಜನೆ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಕೊರತೆಯಿಂದ ನೀರಾವರಿಗೆ ಆಗಿರುವ ಸಮಸ್ಯೆ ನಿವಾರಣೆ, ಮಲಪ್ರಭಾ ನದಿ ದಂಡೆಯಲ್ಲಿರುವ ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಉಂಟಾಗುವ ನೀರಿನ ಕೊರತೆಯನ್ನು ನಿವಾರಣೆ, ಬೆಳೆಯುತ್ತಿರುವ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಮಲಪ್ರಭಾ ಅಣೆಕಟ್ಟೆಯಿಂದ ಪೂರೈಸಲಾಗುತ್ತಿರುವ ನೀರಿನ ಪೂರೈಕೆಯಲ್ಲಿ ಹೆಚ್ಚಳ… ಮುಂತಾದ ಪ್ರಸ್ತಾವನೆಗಳು ಎರಡು-ಮೂರು ದಶಕಗಳಿಂದ ಗೋವಾ ಸರಕಾರದ ವಿರೋಧದಿಂದ ನೆನೆಗುದಿಗೆ ಬಿದ್ದಿವೆ. ಮುಖ್ಯ ನದಿಯ ಗೊಡವೆಗೆ ಹೋಗದೆ, ಅದರ ಉಪನದಿಗಳಾದ ಕಳಸಾ ಮತ್ತು ಬಂಡೂರಿಗಳ ನೀರನ್ನಾದರೂ ನಮ್ಮ ಕಡೆಗೆ ತಿರುಗಿಸಿ, ಮಲಪ್ರಭಾ ನದಿಯ ಮೂಲಕ ಅಣೆಕಟ್ಟೆಗೆ ಹರಿಸಿ, ತಮಗಿದ್ದ ಸಮಸ್ಯೆಯನ್ನು ಬಗೆಹರಿಸಬಹುದು ಎನ್ನುವ ವಿಚಾರ ಚಾಲನೆಗೆ ಬಂದದ್ದು 2000ನೇ ಇಸವಿಯಲ್ಲಿ ಕಾಂಗ್ರೆಸಿನ ಎಸ್.ಎಂ.ಕೃಷ್ಣ ಸರಕಾರ ಬಂದಾಗ.
ಗೋವಾ ಸರಕಾರ ವಿರೋಧ ಮಾಡಿ ಕಲ್ಲು ಹಾಕಿದುದನ್ನು ಪರೋಕ್ಷವಾಗಿ ಬೆಂಬಲಿಸಿದ್ದು ಅಂದು ಕೇಂದ್ರದಲ್ಲಿದ್ದ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ. ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ನೀತಿಯೂ ಹಿಂದಿನ ಸರ್ಕಾರಕ್ಕಿಂತ ಭಿನ್ನವಾಗಿರಲಿಲ್ಲ. ಅಂತಾರಾಜ್ಯ ನದಿ ನೀರಿನ ಹಂಚಿಕೆಗೆ ರಚಿತವಾದ ನ್ಯಾಯಾಧಿಕರಣಕ್ಕೆ ಈ ವಿವಾದ ಒಪ್ಪಿಸಿದರೂ, ಅದರ ತೀರ್ಪು ಬಂದದ್ದು 2018 ಆಗಸ್ಟ್ನಲ್ಲಿ. ಕರ್ನಾಟಕ 7.5 ಟಿಎಂಸಿಎಫ್ಟಿ ನೀರು ಕೇಳಿದ್ದರೆ, ನ್ಯಾಯಾಧೀಕರಣ ಕೊಟ್ಟದ್ದು ಬರಿ ನಾಲ್ಕು ಟಿಎಂಸಿಎಫ್ಟಿ ಮಾತ್ರ. ನದಿ ಕಣಿವೆಯಲ್ಲಿ ಸಿಗುವ ನಮ್ಮ ನೀರಿನಿಂದಲೇ ಜಲವಿದ್ಯುತ್ ಯೋಜನೆ ಮಾಡಲು ಅನುಮತಿ ಕೊಟ್ಟಿದ್ದು ಬೇರೆ ವಿಷಯ.
ಇಲ್ಲಿ ಸಮಸ್ಯೆ ಬಂದದ್ದು ಬರೀ ಕೇಂದ್ರ ಸರಕಾರದ ವಿಳಂಬ ಧೋರಣೆಯಿಂದಲ್ಲ. ಕರ್ನಾಟಕದಲ್ಲಿ ಕಾಲಕಾಲಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯುವ ಎಲ್ಲ ಪಕ್ಷಗಳ ಸರಕಾರಗಳೂ ಮಹಾದಾಯಿ ನೀರಿನ ಹಂಚಿಕೆ ವಿಷಯದಲ್ಲಿ ರಾಜಕೀಯ ಮಾಡಿವೆ. ಉದ್ದೇಶಪೂರ್ವಕವಾಗಿಯೋ ಎಂಬಂತೆ ಕೆಲವು ತಪ್ಪು ದಾರಿಗಳನ್ನು ಹಿಡಿಯಲಾಗಿದೆ. ಪ್ರತಿ ಚುನಾವಣೆಯಲ್ಲಿಯೂ ಈ ವಿವಾದದ ನೆರವಿನಿಂದ ಪುಢಾರಿಗಳು ತಲೆ ಎತ್ತಿ, ತಮ್ಮ-ತಮ್ಮ ರಾಜಕೀಯ ಪೋಷಕರ ಮಾತಿನಂತೆ ಕುಣಿದು, ಅವರ ರಾಜಕೀಯ ವಿರೋಧಿಗಳನ್ನು ಪೇಚಿನಲ್ಲಿ ಸಿಕ್ಕಿಸುವ ಪ್ರಯತ್ನ ಮಾಡಿದ್ದಾರೆ ಮತ್ತು ರೈತರ ಹೆಸರಿನಲ್ಲಿ ರಾಜಕೀಯ ಪ್ರೇರಿತ ಚಳವಳಿಗಳನ್ನು ಮಾಡಿಸಿದ್ದಾರೆ.
ಕಳಸಾ ಬಂಡೂರಿ ಎಂಬ ರಾಜಕೀಯ ನಾಟಕ ಶುರುವಾಗಿದ್ದು 2000ನೇ ಇಸವಿಯ ಚುನಾವಣೆ ನಂತರದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಬಂದಾಗ. ಮಹದಾಯಿ ನದಿಯ ಗೊಡವೆಗೆ ಹೋಗದೆ, ನಮ್ಮಲ್ಲಿಯೇ ಹರಿಯುವ ಅದರ ಉಪನದಿಗಳಾದ, ಒಂದಕ್ಕೊಂದು ಹತ್ತಿರವಿರದ ಕಳಸಾ-ಬಂಡೂರಿಗಳನ್ನು ಏಕೆ ಮಲಪ್ರಭಾ ನದಿಗೆ ತಿರುಗಿಸಿ ಉಪಯೋಗ ಮಾಡಿಕೊಳ್ಳಬಾರದು ಎನ್ನುವ ವಿಚಾರ ಮಾಡಿ, ಮೊದಲ ಕ್ರಮ ತೆಗೆದುಕೊಂಡವರು ಅಂದಿನ ಜಲಸಂಪನ್ಮೂಲ ಮಂತ್ರಿ ಎಚ್.ಕೆ.ಪಾಟೀಲ್. ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಕಾಯದರ್ಶಿಗಳಿಂದ, ‘ತಾತ್ವಿಕ ಅನುಮತಿ’ ಪಡೆಯುವಲ್ಲಿಯೂ ಯಶಸ್ವಿಯಾದರು. ನೀರಾವರಿಗಾಗಿ ಬವಣೆ ಪಡುತ್ತಿರುವ ರೈತರಿಗೆ ನೀರಿನ ಅವಶ್ಯಕತೆ ಇರುವಾಗ, ಹುಬ್ಬಳ್ಳಿ-ಧಾರವಾಡಕ್ಕೆ ಹೆಚ್ಚಿನ ನೀರು ಪೂರೈಕೆ ಮಾಡುವ ಹೆಸರಿನಲ್ಲಿ ಏಕೆ ಕೇಂದ್ರ ಸರಕಾರದ ಅನುಮತಿಯನ್ನು ರಾಜ್ಯ ಸರಕಾರ ಕೇಳಿತು ಎನ್ನುವದು ಗೂಢವಾಗಿಯೇ ಉಳಿಯಿತು. (ಏಕೆಂದರೆ ಸರ್ವೋಚ್ಚ ನ್ಯಾಯಾಲಯದ ಪ್ರಕಾರ, ಕುಡಿಯುವ ನೀರಿನ ಯೋಜನೆಗಳಿಗೆ ಯಾರ ಅನುಮತಿಯೂ ಅಗತ್ಯವಿಲ್ಲ). ರಾಜ್ಯ ಸರಕಾರ ಬಾಯಿಬಿಟ್ಟು ಹೇಳದಿದ್ದರೂ, ತಮ್ಮ ಸಲುವಾಗಿಯೇ ಈ ಯೋಜನೆಯನ್ನು ತಯಾರಿಸಲಾಗಿದೆ ಎಂದು ಭಾವಿಸಿ ರೈತರು ಸಂತೋಷ ಪಟ್ಟು ನೀರಿಗಾಗಿ ಚಾತಕಪಕ್ಷಿಯಂತೆ ಕಾಯಲು ಶುರುಮಾಡಿ, ಕೊನೆಗೆ ಚಳವಳಿಯ ಹಾದಿ ಹಿಡಿದರು.
ಕೆಲ ರಾಜಕೀಯ ಕಾರಣಗಳಿಗಾಗಿ ಮುಖ್ಯಮಂತ್ರಿ ಕೃಷ್ಣರವರು ಜಲಸಂಪನ್ಮೂಲ ಖಾತೆಯನ್ನು ಪಾಟೀಲರಿಂದ ಹಿಂತೆಗೆದುಕೊಂಡು, ಹಿರಿಯ ಮಂತ್ರಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಕೊಟ್ಟಾಗ ಈ ಯೋಜನೆ ಬಗೆಗೆ ಸರಕಾರದ ಆಸಕ್ತಿ ಗಣನೀಯವಾಗಿ ಕಡಿಮೆಯಾಗಿ, ಹಾಗೆಯೇ ಅದು ಸರಕಾರಗಳು ಬದಲಾದರೂ ಮುಂದುವರಿದು ಪರಿಸ್ಥಿತಿ ಸುಧಾರಿಸಲೇ ಇಲ್ಲ. ಅಂದಿನಿಂದ ಅಧಿಕಾರದ ಚುಕ್ಕಾಣಿ ಹಿಡಿದ ಯಾವ ಮುಖ್ಯಮಂತ್ರಿಗಳೂ ನೀರಾವರಿ ಮಂತ್ರಿಗಳೂ ಈ ಯೋಜನಾ ಪ್ರದೇಶವನ್ನು ನೋಡಿಲ್ಲ. ಪ್ರಗತಿ ಆಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿಲ್ಲ. ಕಾಲಕಾಲಕ್ಕೆ ಚಳವಳಿ ಮಾಡುತ್ತಿದ್ದ ರಾಜಕೀಯ ಮುಖಂಡರು ಈ ಪ್ರದೇಶಕ್ಕೆ ಭೇಟಿ ಕೊಟ್ಟಿಲ್ಲ. ಈ ಯೋಜನೆಯನ್ನು ಕೈಗೊಂಡದ್ದು ರೈತರಿಗಾಗಿ ಅಲ್ಲ. ಹುಬ್ಬಳ್ಳಿ-ಧಾರವಾಡ ಮೊದಲಾದ ಪಟ್ಟಣ ಪ್ರದೇಶಗಳಿಗೆ ನೀರು ಪೂರೈಸುವುದಕ್ಕಾಗಿ ಎಂದು ಯಾವ ಸರಕಾರವೂ ಹೋರಾಡುತ್ತಿದ್ದ ರೈತರಿಗೆ ಹೇಳಿಲ್ಲ. ವಿವಾದವನ್ನು ಪರಿಹರಿಸಲು ರಚನೆಯಾದ ನ್ಯಾಯಾಧಿಕರಣದ ಮುಂದೆಯೂ ರೈತರಿಗೆ ನೀರಾವರಿಗಾಗಿ ನೀರಿನ ಅವಶ್ಯಕತೆ ಇದೆಯೆಂದು ಹೇಳಲಿಲ್ಲ. ಇವರು ಹೇಳಲಿಲ್ಲವೆಂದು ನ್ಯಾಯಾಧಿಕರಣವೂ ಎನೂ ಹೇಳಲಿಲ್ಲ.
ಕಳಸಾದಲ್ಲಿ ನೀರು ಸಂಗ್ರಹ ಮಾಡಿ ಅದನ್ನು ಹರಿಸಲು ವ್ಯವಸ್ಥೆ ಮಾಡಿದ್ದು, ಗೋವಾ ಸರಕಾರ ಮಾಡಿದ ತಕರಾರಿನ ಅನ್ವಯ ಅದಕ್ಕೆ ತಡೆಗೋಡೆಯನ್ನು ರಾಜ್ಯ ಸರಕಾರ ಕಟ್ಟಿದೆ. ಬಂಡೂರಿಯಲ್ಲಿ ಕೆಲಸವೇ ಶುರುವಾಗಿಲ್ಲ.
ನ್ಯಾಯಾಧಿಕರಣದ ತೀರ್ಪು ಕಳೆದ ಆಗಸ್ಟ್ನಲ್ಲಿ ಹೊರಬಿದ್ದಾಗ ಇನ್ನಾದರೂ ನೀರು ಬಂದೀತೆಂದು ಹಂಬಲಿಸಿದ್ದ ಜನರಿಗೆ ಕೆಲ ಆಘಾತಗಳು ಎದುರಾಗಿವೆ. ಅದರ ಅನುಷ್ಠಾನಕ್ಕೆ ಅಗತ್ಯವಾಗಿ ಬೇಕಾದ ಆ ತೀರ್ಪನ್ನುಕೇಂದ್ರ ಸರಕಾರ ನೋಟಿಫೈ ಮಾಡಿಲ್ಲ ಮತ್ತು ಆಗುತ್ತಿರುವ ವಿಳಂಬದ ಬಗ್ಗೆ ರಾಜ್ಯದ ಸಮ್ಮಿಶ್ರ ಸರ್ಕಾರ ತಲೆಯೇ ಕೆಡಿಸಿಕೊಂಡಿಲ್ಲ.
ಇಲ್ಲಿಯತನಕ ಜನರು ತಿಳಿದುಕೊಂಡಿದ್ದು, ಕಳಸಾ-ಬಂಡೂರಿ ಕಾರ್ಯ ಮುಗಿದರೆ ಅಲ್ಲಿಂದ ನೀರು ತರಲು ಸುಲಭ. ಆದರೆ, ಅವುಗಳ ಕಾರ್ಯ ನಿರ್ವಹಿಸುವ ಕರ್ನಾಟಕ ನೀರಾವರಿ ನಿಗಮ ಅಧಿಕಾರಿಗಳ ಪ್ರಕಾರ, ಇನ್ನೊಂದು ಹರತಾಳ ಎನ್ನುವ ಉಪನದಿಯಲ್ಲಿಯೂ ನೀರನ್ನು ಸಂಗ್ರಹಿಸುವ ಕೆಲಸ ಮಾಡಬೇಕಿದೆ. ಹರತಾಳದ ಹೆಸರನ್ನು ಮೊದಲು ಬಾರಿ ಈ ವಿವಾದ ಶುರುವಾದ ಮೇಲೆ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ, ಕಳಸಾ-ಬಂಡೂರಿಗಳಿಂದ ನ್ಯಾಯಾಧಿಕರಣ ನಮಗೆ ಕೊಟ್ಟಷ್ಟು ನೀರು ಸಿಗುವದಿಲ್ಲವೇ?
ಎರಡನೆಯದಾಗಿ, ಈ ಎಲ್ಲ ಕೆಲಸಗಳನ್ನು ಪ್ರಾರಂಭಿಸುವ ಮುನ್ನ ಕೇಂದ್ರ ಪರಿಸರ ಇಲಾಖೆಯ ಅನುಮತಿ ಅತ್ಯವಶ್ಯ. ಈ ಎಲ್ಲ ಸ್ಥಳಗಳಲ್ಲಿ ಆಣೆಕಟ್ಟು ಕಟ್ಟಬೇಕು ಮತ್ತು ಅವುಗಳನ್ನು ಒಂದಕ್ಕೊಂದು ಜೋಡಿಸುವ ಕಾಲುವೆ ಕಟ್ಟಬೇಕು. ಮೂರನೆಯದಾಗಿ, ಇವೆಲ್ಲವುಗಳಿಗೆ ಸುಮಾರು 500 ಹೆಕ್ಟೇರ್ ಅರಣ್ಯ ಪ್ರದೇಶ (ಅದರಲ್ಲಿ 400 ಹೆಕ್ಟೇರ್ ಮುಳುಗುತ್ತದೆ) ಒಳಗೊಂಡ 730 ಹೆಕ್ಟೇರ್ ಭೂಮಿ ಬೇಕು. ಆದರೆ, ಇದುವರೆಗೆ ಆದ ವಿಳಂಬದ ಪರಿಣಾಮವಾಗಿ, 2013ರಲ್ಲಿ ವೆಚ್ಚವನ್ನು ಸುಮಾರು ನೂರು ಕೋಟಿ ಎಂದು ಅಂದಾಜು ಮಾಡಿದ್ದರೆ, ಈಗ 1,000 ಕೋಟಿಗಿಂತ ಹೆಚ್ಚಾಗುವ ಸಂಭವವಿದೆ. ಪರಿಸರ ಇಲಾಖೆಯ ಅನುಮತಿ ಸುಲಭವಾಗಿ ಸಿಗುತ್ತದೆಎಂದು ಹೇಳುವ ಹಾಗಿಲ್ಲ. ಹೀಗಾಗಿ, ಕಳಸಾ ಬಂಡೂರಿ (ಈಗ ಹರತಾಳದ) ನೀರು ಎಂದಿಗೆ ಹರಿಯುವುದೋ ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ.
ಅಂಕಣಕಾರರು ಹಿರಿಯ ಪತ್ರಕರ್ತರು