ಕಾಶ್ಮೀರಿಗಳ ಮೌನವನ್ನು ಶಾಂತಿ ಎಂದೂ ಕೆಲವು ನೂರು ಲ್ಯಾಂಡ್ ಲೈನ್ ದೂರವಾಣಿಗಳಿಗೆ ಸಂಪರ್ಕ ಕಲ್ಪಿಸಿ ಅದನ್ನು ಸಹಜ ಸ್ಥಿತಿ ಎಂದೂ ಬಣ್ಣಿಸಲಾಗುತ್ತಿದೆ. ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಅವರ ಆಟದ ಮೈದಾನಗಳಿಗೆ ಮುಳ್ಳು ತಂತಿ ಬೇಲಿಗಳನ್ನು ಜಡಿಯಲಾಗಿದೆ. ಅವರ ಮೊಬೈಲು ಫೋನುಗಳ ದನಿ ಅಡಗಿದೆ. ಐವತ್ತು ಲಕ್ಷ ಸಶಸ್ತ್ರ ಪಡೆಗಳು ಬೀಡು ಬಿಟ್ಟಿವೆ. ಶ್ರೀನಗರದ ಸೌರ, ಅಂಚಾರ್ ಮುಂತಾದ ಪ್ರದೇಶಗಳ ಜನ ಪ್ರತಿರೋಧಕ್ಕೆ ಇಳಿದಿದ್ದಾರೆ. ಪಡೆಗಳು ತಮ್ಮ ವಸತಿ ಪ್ರದೇಶ ಪ್ರವೇಶಿಸುವುದನ್ನು ತಡೆಯಲು ರಸ್ತೆಗಳಲ್ಲಿ ಆಳದ ಕಂದಕ ತೋಡಿದ್ದಾರೆ. ಹಾದಿ ಬೀದಿಗಳ ತುಂಬ ಕಲ್ಲುಗಳು ಇಟ್ಟಿಗೆಗಳು. ಗೋಡೆಗಳ ಮೇಲೆ ಆಜಾದಿ ಬೇಕೆಂಬ ಬರೆಹಗಳು. ಕೆಲವೆಡೆ ಪಾಕಿಸ್ತಾನ ಪರ ಘೋಷಣೆಗಳು. ಗಾಳಿಯಲ್ಲಿ ಬೆರೆತ ಅಶ್ರುವಾಯು, ಮೆಣಸಿನ ವಾಯುವಿನ ಗಂಧ.
ರಾಜಕೀಯ ನಾಯಕರು ಕಾಶ್ಮೀರಕ್ಕೆ ಕಾಲಿಡುವಂತಿಲ್ಲ. ರಾಹುಲ್ ಗಾಂಧಿ ಮುಂತಾದ ಪ್ರತಿಪಕ್ಷಗಳ ನಾಯಕರ ನಿಯೋಗ ಶ್ರೀನಗರ ವಿಮಾನನಿಲ್ದಾಣದಲ್ಲಿ ಇಳಿದು ಅಲ್ಲಿಂದಲೇ ದೆಹಲಿಗೆ ಮರಳಬೇಕಾಯಿತು. ಶ್ರೀನಗರದಲ್ಲಿ ಬಂಧನಕ್ಕೀಡಾಗಿ ಅಸ್ವಸ್ಥರಾಗಿದ್ದ ತಮ್ಮ ಪಕ್ಷದ ಮುಂದಾಳು ಯೂಸೂಫ್ ತರಿಗಾಮಿ ಅವರನ್ನು ಕಾಣಲು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚ್ಚೂರಿಗೆ ಸರ್ಕಾರ ಅನುಮತಿ ನೀಡಲಿಲ್ಲ. ಸುಪ್ರೀಂ ಕೋರ್ಟಿನ ಕದ ಬಡಿದು ಅನುಮತಿ ಸಂಪಾದಿಸಿಕೊಂಡು ಬರಬೇಕಾಯಿತು.
ಸೆರೆಯಲ್ಲಿರುವ ತನ್ನ ಅಮ್ಮ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯನ್ನು ಕಾಣಲು ಮಗಳು ಇಲ್ತಿಜಾ ಮುಫ್ತಿ ತಿಂಗಳಿನಿಂದ ಚಡಪಡಿಸಿದ್ದಾಳೆ. ತಾಯಿ ಮಗಳ ಮಿಲನಕ್ಕೆ ಕಡೆಗೆ ಸುಪ್ರೀಂ ಕೋರ್ಟಿನ ಅನುಮತಿಯೇ ಬೇಕಾಯಿತು. ವಿವಿಐಪಿಗಳ ಕತೆಯೇ ಹೀಗಾದರೆ ಜನಸಾಮಾನ್ಯರ ಬವಣೆ ಊಹೆಗೂ ನಿಲುಕದು. ಭಾರತೀಯ ಜನತಂತ್ರದ ಶವಪೆಟ್ಟಿಗೆಯನ್ನು 70 ಲಕ್ಷ ಮಂದಿ ಕಾಶ್ಮೀರಿಗಳು ತುಟಿ ಬಿಚ್ಚದೆ ಹೊತ್ತುಕೊಂಡಿದ್ದಾರೆ ಎಂದು ಬರೆಯುತ್ತಾರೆ ಕಾಶ್ಮೀರಿ ನಾಗರಿಕ ಮಕ್ನೂನ್ ವಾಣಿ. ಈ ಮೌನವು ಜ್ವಲಿಸುವ ಪ್ರತಿರೋಧದ ಮುನ್ಸೂಚನೆ. ನಮ್ಮ ಪ್ರಾಣಗಳನ್ನು ಕಡೆಗಣಿಸಿ ಕೇವಲ ನೆಲವನ್ನು ವಶಪಡಿಸಿಕೊಳ್ಳುವ ಹಪಾಹಪಿ ಬೆತ್ತಲೆ ಕುಣಿಯತೊಡಗಿದೆ. ನಮ್ಮ ಮೌನ ಕಿವಿ ಗಡಚಿಕ್ಕುತ್ತಿದೆ. ಆದರೆ ಕಿವುಡು ಕಿವಿಗಳಿಗೆ ಅದು ಕೇಳುತ್ತಿಲ್ಲ.

ಪರೋಕ್ಷ ಮಿಲಿಟರಿ ಆಡಳಿತದಲ್ಲಿದೆ ಕಾಶ್ಮೀರ. ನೂರಾರು ರಾಜಕೀಯ ನಾಯಕರನ್ನು ಸೆರೆಗೆ ನೂಕಲಾಗಿದೆ. ಅಪ್ರಾಪ್ತ ವಯಸ್ಕರೂ ಸೇರಿದಂತೆ ಸಾವಿರಾರು ಕಾಶ್ಮೀರಿಗಳು ಮುನ್ನೆಚ್ಚರಿಕೆಯ ದಸ್ತಗಿರಿಗೆ ಒಳಗಾಗಿದ್ದಾರೆ. ವೈದ್ಯರು ಆಸ್ಪತ್ರೆಗಳನ್ನು ತಲುಪಲಾಗುತ್ತಿಲ್ಲ. ಔಷಧಿಗಳ ಕೊರತೆ ಉದ್ಭವಿಸಿದೆ. ಭಾರತದ ಭೂಪಟದಿಂದ ರಾಜ್ಯವೊಂದು ಅಳಿಸಿ ಹೋಗಿ ಕೇಂದ್ರಾಡಳಿತ ಪ್ರದೇಶ ಹುಟ್ಟಿತು. ಇಂದು ನಮ್ಮ ಅಸ್ಮಿತೆಯನ್ನು ಕಿತ್ತುಕೊಂಡಿದ್ದಾರೆ. ನಾಳೆ ನಮ್ಮ ನೆಲವನ್ನು ಕಸಿದುಕೊಳ್ಳಲು ಲಗ್ಗೆ ಇಡಲಿದ್ದಾರೆ. ನಾವು ಸುಮ್ಮನೆ ಕುಳಿತುಕೊಳ್ಳಬೇಕೇ ಎಂಬುದು ಕಾಶ್ಮೀರಿಗಳ ಬೇಗುದಿ.
ದಶಕಗಳಷ್ಟು ಹಳೆಯ ಕದನ ಉಂಟು ಮಾಡಿರುವ ಗಾಯಗಳಿಗೆ ಮುಲಾಮು ಹಚ್ಚಿ ವಾಸಿ ಮಾಡಬೇಕಿತ್ತು. ಅದನ್ನು ಬಿಟ್ಟು ಇಡೀ ರಾಜ್ಯದ ಜನರನ್ನು ಇನ್ನಷ್ಟು ದೂರ ಮಾಡಿಕೊಂಡು, ರಾಜ್ಯವನ್ನು ಬಂಧನದ ಅಧೀನತೆಗೆ ನೂಕಿರುವುದು ಗಂಭೀರ ಕೃತ್ಯ. ಎಡೆಬಿಡದ ಸುದೀರ್ಘ ಘರ್ಷಣೆಯು ಕಾಶ್ಮೀರದಲ್ಲಿ ಮಾನಸಿಕ ಆರೋಗ್ಯದ ಬಿಕ್ಕಟ್ಟು ಸುರುಳಿ ಬಿಚ್ಚಿದೆ. ಶೇ. 41ರಷ್ಟು ಕಾಶ್ಮೀರಿ ಜನ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಶೇ. 26ರಷ್ಟು ಮಂದಿಯನ್ನು ಉದ್ವಿಗ್ನತೆ ಕಾಡಿದೆ. ಶೇ.19 ಮಂದಿ ಸಂಭವನೀಯ ಯಾತನೋತ್ತರ ಒತ್ತಡ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ಸ್ವಾಸ್ಥ್ಯ ನಿಯತಕಾಲಿಕ ಲ್ಯಾನ್ಸೆಟ್ ಅಧ್ಯಯನ ನಡೆಸಿ ಹೇಳಿದೆ.
ಶ್ರೀನಗರದ ಪ್ರಕ್ಷುಬ್ದ ನೆರೆಹೊರೆ ಅಂಚಾರ್ ನ ಯುವಕರ ಒಡಲುಗಳು ಸಶಸ್ತ್ರ ಪಡೆಗಳ ಪೆಲೆಟ್ ಗನ್ ಗಳಿಂದ ತೂತುಗಳಿಂದ ತುಂಬಿವೆ. ಹಣೆ, ಕಣ್ಣು, ಕಿವಿ, ಕೈ- ಕಾಲು, ಮುಖ, ಎದೆ, ಬೆನ್ನು, ಹೊಟ್ಟೆ ಎಲ್ಲೆಂದರಲ್ಲಿ ಹೊಕ್ಕಿರುವ ಪೆಲೆಟ್ ಗಳನ್ನು ತೆಗೆಯಿಸಿ ಚಿಕಿತ್ಸೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋದರೆ ಪೊಲೀಸರು ಹಿಡಿದು ಜೈಲಿಗೆ ಹಾಕುವುದು ನಿಶ್ಚಿತ. ಮನೆಯಲ್ಲೇ ಚಿಮಟವನ್ನೋ ಇಕ್ಕಳವನ್ನೋ ಬಳಸಿ ಪೆಲೆಟ್ ಗಳನ್ನು ತಾವೇ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಮೇಲ್ಮೈಯನ್ನು ಬೇಧಿಸಿ ಆಳಕ್ಕೆ ಇಳಿದು ನೆಲೆಸಿರುವ ಪೆಲೆಟ್ ಗಳ ತೆಗೆಯಲು ಸಣ್ಣ ಶಸ್ತ್ರ ಚಿಕಿತ್ಸೆಯೇ ಆಗಬೇಕು. ಅದಕ್ಕೆ ಆಸ್ಪತ್ರೆಯೇ ಬೇಕು. ತಿಂಗಳೊಪ್ಪತ್ತಿನಿಂದ ಇಂತಹ ಸಂಕಟ ಎದುರಿಸಿರುವ ಯುವಕರ ಸಂಖ್ಯೆ 200ರ ಆಸುಪಾಸು. ಆಗಸ್ಟ್ 30ರ ಘರ್ಷಣೆಯಲ್ಲಿ ಪೆಲೆಟ್ ಗಾಯಗೊಂಡವರ ಸಂಖ್ಯೆಯೇ ಇಪ್ಪತ್ತು ದಾಟಿದೆ.

ಕತ್ತಲ ರಾತ್ರಿ ಪೊಲೀಸರ ಕಣ್ತಪ್ಪಿಸಿ ಅರೆ ವೈದ್ಯನೊಬ್ಬನ ಬಳಿ ತೆರಳಿದ ನಜೀಬ್ ಎಂಬ ಯುವಕನ ದೇಹದಿಂದ 20 ಪೆಲೆಟ್ ಗಳನ್ನು ತೆಗೆಯಲಾಯಿತು. ಹಲವು ಪೆಲೆಟ್ ಗಳು ಆಳಕ್ಕೆ ನಾಟಿವೆ. ಅವುಗಳನ್ನು ಶಸ್ತ್ರಚಿಕಿತ್ಸೆಯಿಂದಲೇ ತೆಗೆಯಬೇಕಾಗುತ್ತದಂತೆ ಎನ್ನುವ ನಜೀಬ್ ಎರಡು ಮಕ್ಕಳ ತಂದೆ. ಕೂಲಿನಾಲಿ ಮಾಡಿ ಹೊಟ್ಟೆ ಹೊರೆಯುವ ಸಾಮಾನ್ಯ ವ್ಯಕ್ತಿ.
ಕಾಶ್ಮೀರದ ಆತ್ಮ ಬಲು ದೀರ್ಘಕಾಲದಿಂದ ಘಾಸಿಗೊಂಡಿದೆ. ಕಾಶ್ಮೀರ ಕಣಿವೆಗಳ ಸೌಂದರ್ಯವನ್ನು ಮಾತ್ರವೇ ಕಾಣುವವರಿಗೆ, ಅಲ್ಲಿ ಜಮೀನು ಖರೀದಿಸಿ ಮನೆ ಕಟ್ಟಿಕೊಳ್ಳುವ ಲಾಲಸೆ ಪಿಪಾಸೆಯನ್ನು ಸಲಹಿಕೊಂಡು ಬಂದಿರುವವರು, ಅಲ್ಲಿನ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುವ ಖೂಳರಿಗೆ ಆ ನೆಲದ ನೋವು ತಿಳಿಯುವುದಾದರೂ ಹೇಗೆ? ಮಾನವೀಯತೆ ಕಡೆಯುಸಿರೆಳೆಯಿತೇ? ಆಗಸ್ಟ್ ಐದರಿಂದ ಇಲ್ಲಿಯ ತನಕ ಪ್ರದರ್ಶನ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ ಐವರು ನಾಗರಿಕರು ಘರ್ಷಣೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ಮೂಲಗಳೇ ಸಾರಿವೆ. ಮೂಕ ಶೋಕ ಮುಂದೊಂದು ದಿನ ಆಕ್ರೋಶಕ್ಕೆ ತಿರುಗುವ ಸ್ಥಿತಿ ತರಬಾರದು. ಯಾತನೆಗಳು ಎಂದೂ ಮಾಯದ ಗಾಯಗಳಾಗದಿರಲಿ. ಹಸಿರು ಕಾಶ್ಮೀರ ಕೆಂಪಾಗದಿರಲಿ.