ನೆಲ-ಜಲ- ಬದುಕಿಗೆ ಬೆದರಿಕೆ ಒಡ್ಡಿದ ವಲಸಿಗರ ವಿರುದ್ಧ ಸ್ಥಳೀಯ ಅಸ್ಸಾಮೀಯರು ದಶಕಗಳಿಂದ ನಡೆಸಿರುವ ಸಮರವನ್ನು ಹಿಂದೂ- ಮುಸ್ಲಿಮ್ ಬಣ್ಣ ಬಳಿದು ದಶಕಗಳೇ ಉರುಳಿವೆ. ಹಿಂದೂ ಮತ್ತು ಮುಸ್ಲಿಂ ಕಟ್ಟರ್ವಾದಿ ಪಕ್ಷಗಳು ಮತ್ತು ಕೋಮುವಾದಿ ಸಂಘಟನೆಗಳು ತಮ್ಮ ಸ್ವಾರ್ಥಕ್ಕಾಗಿ ಆಡತೊಡಗಿರುವ ಅಪಾಯಕಾರಿ ಆಟವಿದು. ಕೋಮುವಾದಿ ಗಲಭೆಗಳಲ್ಲಿ ನಲುಗುವವರು ಎರಡೂ ಬದಿಯ ಜನಸಾಮಾನ್ಯರು. ಆದರೆ ಈ ಗಲಭೆಗಳ ನಿವ್ವಳ ಲಾಭವನ್ನು ದೋಚುವವರು ಎರಡೂ ಕಡೆಯ ಮೂಲಭೂತವಾದಿಗಳು.
ಬ್ರಹ್ಮಪುತ್ರ ಮತ್ತು ಬರಾಕ್ ಅಸ್ಸಾಮಿನ ಎರಡು ನದೀ ಕಣಿವೆಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಶೇ.80ರಷ್ಟು ಬಂಗಾಳಿ ಜನಸಂಖ್ಯೆ ಹೊಂದಿದ್ದು, ಬಂಗಾಳಿಯೇ ಅಧಿಕೃತ ಭಾಷೆಯಾಗಿರುವ ಬರಾಕ್ ಕಣಿವೆಯನ್ನು ಅಸ್ಸಾಮಿನ ಪಾಲಿನ ‘ಕ್ಯಾನ್ಸರ್’ ಎಂದೇ ಬಗೆದಿದೆ ಬ್ರಹ್ಮಪುತ್ರ. ಬರಾಕ್ ಕಣಿವೆಯಲ್ಲಿ ಹಿಂದುಗಳ ಶೇಕಡಾವಾರು ಪ್ರಮಾಣ 50. ಮುಸಲ್ಮಾನರ ಜನಸಂಖ್ಯೆ ಶೇ.48ರಷ್ಟು. ಎರಡೂ ಕಣಿವೆಗಳ ನಡುವಣ ಮೂಲನಿವಾಸಿಗಳು ಮತ್ತು ವಲಸಿಗರು ಎಂಬ ಅಪನಂಬಿಕೆ, ಅಸಹನೆಯ ಕಂದಕ ರೂಪುಗೊಂಡಿದೆ.ಈ ಕಂದಕದ ಆಳ ಅಗಲಗಳನ್ನು ಎನ್.ಆರ್.ಸಿ. ಮತ್ತು 2016ರ ಪೌರತ್ವ ಕಾಯಿದೆ ತಿದ್ದುಪಡಿ ವಿಧೇಯಕ ಇನ್ನಷ್ಟು ಹೆಚ್ಚಿಸಿವೆ. ಎನ್.ಆರ್.ಸಿ. ಹೊರಗಿರಿಸುವ ಬಂಗಾಳಿ ಹಿಂದುಗಳಿಗೆ ಪುನಃ ಕರುಣಿಸಲಿದೆ ಪೌರತ್ವ ಕಾಯಿದೆ ತಿದ್ದುಪಡಿ ವಿಧೇಯಕ. ಹೀಗಾಗಿ ಕ್ಯಾನ್ಸರನ್ನು ಕತ್ತರಿಸಿ ಹಾಕಿ ಪ್ರತ್ಯೇಕ ರಾಜ್ಯ ಮಾಡುವುದೇ ಸರಿ ಎಂಬುದು ಬ್ರಹ್ಮಪುತ್ರ ಕಣಿವೆಯ ಆಗ್ರಹ. ಬರಾಕ್ ಕಣಿವೆಯ ವಲಸಿಗ ಮುಸಲ್ಮಾನರು ಅಲ್ಲಿನ ಹಿಂದೂ ವಲಸಿಗರಿಗಿಂತ ಹಳಬರು. ಆದರೆ ಅಸ್ಸಾಮಿಗಳಿಗೆ ಇಬ್ಬರೂ ಬೇಕಿಲ್ಲ. ಹೀಗಾಗಿ ಹಿಂದು-ಮುಸ್ಲಿಂ ಎಂದು ವಿಭಜಿಸಿ ನೋಡಲು ಅವರು ತಯಾರಿಲ್ಲ.

1996ರಲ್ಲಿ ಪ್ರತ್ಯೇಕ ಬೋಡೋ ನಾಡಿನ ಬೇಡಿಕೆ ಇಟ್ಟ ಬೋಡೋ ಬಂಡುಕೋರರ ದಾಳಿಗೆ ಗುರಿಯಾದವರು ಕೇವಲ ಮುಸ್ಲಿಮರಲ್ಲ. ಬೋಡೋ ಅಲ್ಪಸಂಖ್ಯಾತ ಸಮುದಾಯಗಳಾದ ಬಂಗಾಳಿ ಹಿಂದುಗಳು, ನೇಪಾಳಿಗಳು ಮತ್ತು ಮಧ್ಯಭಾರತದಿಂದ ಬಹು ಹಿಂದೆ ವಲಸೆ ಹೋಗಿದ್ದ ಗುಡ್ಡಗಾಡು ಜನರ ಪೀಳಿಗೆಗಳಿಗೆ ಸೇರಿದ ಆದಿವಾಸಿಗಳೂ ಸೇರಿದ್ದರು. ಈ ಘರ್ಷಣೆಗಳಲ್ಲಿ ನೆಲೆ ಕಳೆದುಕೊಂಡು ನಿರಾಶ್ರಿತರ ಪರಿಹಾರ ಶಿಬಿರಗಳ ಸೇರಿದವರು ಸಾವಿರಾರು ಮಂದಿ ಬುಡಕಟ್ಟು ಜನರೇ ವಿನಾ ಮುಸ್ಲಿಮರಲ್ಲ.
ಅಸ್ಸಾಮಿನಲ್ಲಿ ಮುಸಲ್ಮಾನರನ್ನು ವೋಟು ಬ್ಯಾಂಕ್ ನಂತೆ ನಡೆಸಿಕೊಳ್ಳುವ ರಾಜಕಾರಣದಲ್ಲಿ ತೊಡಗಿ ವಲಸಿಗರ ಸಮಸ್ಯೆಗೆ ಪರಿಹಾರವನ್ನು ಮುಂದೂಡುತ್ತ ಬಂದ ಗಂಭೀರ ಆರೋಪವನ್ನು ಕಾಂಗ್ರೆಸ್ ಪಕ್ಷ ಹೊರಲೇಬೇಕು. ನಡುವೆ ಅವಕಾಶ ದೊರೆತರೂ ಈ ಸಮಸ್ಯೆಯ ಕಣ್ಣಲ್ಲಿ ಕಣ್ಣಿಟ್ಟು ನೋಡದೆ ಹೋದ ಅಪವಾದದಿಂದ ಬಿಜೆಪಿಯೂ ಪಾರಾಗುವಂತಿಲ್ಲ.
1992ರ ಏಪ್ರಿಲ್ 10ರಂದು ಅಸ್ಸಾಮಿನ ಅಂದಿನ ಮುಖ್ಯಮಂತ್ರಿ ಹಿತೇಶ್ವರ ಸೈಕಿಯಾ ವಿಧಾನಸಭೆಯಲ್ಲಿ ನೀಡಿದ್ದ ಹೇಳಿಕೆಯ ಪ್ರಕಾರ ಅಸ್ಸಾಮಿನೊಳಕ್ಕೆ ಅಕ್ರಮವಾಗಿ ನುಸುಳಿಕೊಂಡ ಬಾಂಗ್ಲಾದೇಶೀಯರ ಸಂಖ್ಯೆ 20ರಿಂದ 30 ಲಕ್ಷ ಮಂದಿ. ಅಸ್ಸಾಮಿನ 13ರ ಪೈಕಿ 10 ಜಿಲ್ಲೆಗಳಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಬಾಂಗ್ಲಾ ವಲಸಿಗರೇ ಕಾರಣ ಎಂದೂ ಅವರು ಹೇಳಿದ್ದುಂಟು. ಸೈಕಿಯಾ ಹೇಳಿಕೆಗೆ ತಕ್ಷಣದ ಪ್ರತಿಕ್ರಿಯೆಯಾಗಿ ಅದೇ ಏಪ್ರಿಲ್ 30ರಂದು ಮುಸ್ಲಿಮ್ ವೇದಿಕೆ ಅಸ್ತಿತ್ವ ಪಡೆಯಿತು. ಕೂಡಲೆ ಸಭೆ ನಡೆಸಿ ಸೈಕಿಯಾಗೆ ಎಚ್ಚರಿಕೆ ನೀಡಿತ್ತು. “ಮುಖ್ಯಮಂತ್ರಿ ಮತ್ತು ಅವರ ಪಕ್ಷ ಇವೇ ಮುಸ್ಲಿಮ್ ಮತಗಳನ್ನು ಅವಲಂಬಿಸಿದೆ. ಸೈಕಿಯಾ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಅಸ್ಸಾಮಿನ ಮುಸ್ಲಿಮರಿಗೆ ಐದೇ ನಿಮಿಷಗಳು ಸಾಕು,’’ ಎಂದು ಆರ್ಭಟಿಸಿತ್ತು. ಮುಖ್ಯಮಂತ್ರಿ ಸ್ಪಷ್ಟೀಕರಣ ನೀಡಿದರು. ಅಖಿಲ ಅಸ್ಸಾಮ್ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಂಯೋಜನಾ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತಾಡಿದ ಅವರು, ರಾಜ್ಯದಲ್ಲಿ ಒಬ್ಬ ಅಕ್ರಮ ವಲಸೆಗಾರನೂ ಇಲ್ಲ ಎಂದು ಸಾರಿಬಿಟ್ಟರು.

ಈಶಾನ್ಯ ಭಾರತದ ಆಗು ಹೋಗುಗಳ ಕುರಿತ ”LOOKING BACK INTO THE FUTURE” ಕೖತಿಯಲ್ಲಿ ಕನ್ನಡದವರೇ ಆದ ಹಿರಿಯ ಪತ್ರಕರ್ತ ಮತ್ತು ಬರೆಹಗಾರ ಎಂ.ಎಸ್.ಪ್ರಭಾಕರ ಈ ಅಂಶದ ಮೇಲೆ ಬೆಳಕು ಚೆಲ್ಲಿದ್ದಾರೆ. 1962 ಮತ್ತು 1984ರ ನಡುವೆ ಮೂರು ಲಕ್ಷಕ್ಕೂ ಹೆಚ್ಚು ಮಂದಿ ವಲಸಿಗರನ್ನು ವಾಪಸು ಕಳಿಸಲಾಯಿತು. 1984ರಿಂದ 2003ರ ಅವಧಿಯಲ್ಲಿ ಹೀಗೆ ಕಳಿಸಲಾದ ವಲಸಿಗರ ಸಂಖ್ಯೆ 1,501ಕ್ಕೆ ಇಳಿದಿತ್ತು. ಆನಂತರದ ಕಾಯಿದೆ ಕಾನೂನು ಬದಲಾವಣೆಗಳು ವಾಪಸು ಕಳಿಸುವ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿದ್ದೇ ಈ ಕುಸಿತಕ್ಕೆ ಕಾರಣ ಎಂದು ಪ್ರಭಾಕರ ವಿಶ್ಲೇಷಿಸಿದ್ದಾರೆ.
1983ರ ಫೆಬ್ರವರಿ. ನೆಲ್ಲಿ ಸುತ್ತಮುತ್ತಲ 14 ಗ್ರಾಮಗಳ ಸುಮಾರು ಮೂರು ಸಾವಿರ ಬಂಗಾಳಿ ಭಾಷಿಕ ಮುಸ್ಲಿಮರ ನರಮೇಧ ನಡೆದಿತ್ತು. ನೆಲ್ಲಿ ನರಮೇಧ ಎಂದೇ ಪ್ರಸಿದ್ಧವಾದ ಈ ಪ್ರಕರಣದ ವಿಚಾರಣೆಗೆ ಅಸ್ಸಾಮ್ ಸರ್ಕಾರ ರಚಿಸಿದ್ದ ತ್ರಿಭುವನ್ ಪ್ರಸಾದ್ ತಿವಾರಿ ಆಯೋಗದ ವರದಿ ಈವರೆಗೂ ಕತ್ತಲಿಂದ ಹೊರಬಿದ್ದಿಲ್ಲ. ಹಿತೇಶ್ವರ ಸೈಕಿಯಾ ಸರ್ಕಾರ, ಆನಂತರ ಅಸ್ಸಾಮ್ ಗಣಪರಿಷತ್ತಿನ ಸರ್ಕಾರಗಳು ವರದಿ ಕುರಿತು ಮೌನ ತಳೆದವು. ನೆಲ್ಲಿ ನರಮೇಧದಲ್ಲಿ ಸತ್ತ ಬಹುಸಂಖ್ಯಾತರು ಮುಸ್ಲಿಮರೇ ಆಗಿದ್ದರೂ, ಅಸ್ಸಾಮ್ ಅಶಾಂತಿಯ ಬೇರುಗಳ ಸ್ವರೂಪ ಕೋಮುವಾದಿ ಅಲ್ಲ. ವಲಸಿಗರು ಮತ್ತು ನೆಲದ ಮೂಲನಿವಾಸಿಗಳ ನಡುವಣ ದ್ವೇಷ 20ನೆಯ ಶತಮಾನದ ಮೊದಲ ದಶಕದಷ್ಟು ಹಿಂದೆಯೇ ಇತ್ತು. ಆಗಾಗ ಕೋಮುವಾದಿ ಬಣ್ಣ ತಳೆದದ್ದೂ ಉಂಟು ಎನ್ನುವ ಈ ವರದಿ, ನೆಲ್ಲಿ ನರಮೇಧಕ್ಕೆ ಕೋಮುವಾದಿ ಬಣ್ಣ ಬಳಿಯುವುದನ್ನು ಒಪ್ಪುವುದಿಲ್ಲ. ಜನಮಾನಸಕ್ಕೆ ಕೋಮುವಾದಿ ವಿಷ ಎರೆಯದೆ ಇದ್ದರೆ ಅಸ್ಸಾಮಿ ಜನಸಮುದಾಯದ ಸಂಕೀರ್ಣ ಗುಣಧರ್ಮ ಹೆಮ್ಮೆ ಪಡುವ ದೊಡ್ಡ ಆಸ್ತಿ ಎನ್ನುತ್ತಾರೆ ತಿವಾರಿ.

ಕೆಲವೆಡೆಗಳಲ್ಲಿ ದಾಳಿ ಮಾಡಿದವರು ಅಸ್ಸಾಮಿಗಳು ಮತ್ತು ಬಲಿಪಶುಗಳು ಬಂಗಾಳಿ ಭಾಷಿಕರು. ಇವರ ಪೈಕಿ ಹಿಂದುಗಳು ಮತ್ತು ಮುಸ್ಲಿಮರು ಇಬ್ಬರೂ ಇದ್ದರು. ಇನ್ನು ಕೆಲವೆಡೆ ಆಕ್ರಮಣ ನಡೆಸಿದವರು ಮುಸ್ಲಿಮರು ಮತ್ತು ಹಲ್ಲೆಗೀಡಾದವರು ಅಸ್ಸಾಮಿಗಳು. ಘರ್ಷಣೆಗಳು ಅಸ್ಸಾಮಿಗಳ ನಡುವೆಯೇ ಜರುಗಿರುವುದೂ ಉಂಟು. ಕೆಲವೆಡೆ ವಲಸಿಗ ಮುಸ್ಲಿಮರ ಮೇಲೆ ನಡೆದ ದಾಳಿಯಲ್ಲಿ ಮುಸ್ಲಿಮರೂ ಕೈ ಜೋಡಿಸಿದ್ದಾರೆ ಎಂದೂ ತಿವಾರಿ ವರದಿ ವಿಶ್ಲೇಷಿಸಿದೆ. ಸ್ಥಿರಾಸ್ತಿಯನ್ನು ಹೊರಗಿನವರು ಖರೀದಿಸುವಂತಿಲ್ಲ ಮತ್ತು ಹೊರಗಿನವರಿಗೆ ಮಾರಾಟ ಮಾಡುವಂತೆಯೂ ಇಲ್ಲ ಎಂಬುದಾಗಿ ಕಾಶ್ಮೀರಕ್ಕೆ ನೀಡಿರುವ ವಿಶೇಷ ರಕ್ಷಣೆಯನ್ನು ಅಸ್ಸಾಮ್ ಗೂ ವಿಸ್ತರಿಸಬೇಕು ಎಂಬ ವರದಿಯ ಶಿಫಾರಸು ಗಂಭೀರ ಪರಿಶೀಲನೆಗೆ ಅರ್ಹ.
ಎನ್.ಆರ್.ಸಿ. ಇದೀಗ ಅತ್ಯಂತ ಸೂಕ್ಷ್ಮ ಹಂತ ಪ್ರವೇಶಿಸಿದೆ. ಹೆಸರು ಬಿಟ್ಟು ಹೋಗಿರುವ 40 ಲಕ್ಷ ಮಂದಿಯ ಪೈಕಿ ಶೇ.90ರಷ್ಟು ಜನ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಇಂತಿಂತಹವರ ಹೆಸರುಗಳನ್ನು ಎನ್.ಆರ್.ಸಿ.ಯಲ್ಲಿ ಸೇರಿಸಿದ್ದಾದರೂ ಹೇಗೆ ಎಂದು ಪ್ರಶ್ನಿಸಿರುವ ಅರ್ಜಿಗಳು 2.65 ಲಕ್ಷ. ಅಂತಿಮ ಎನ್.ಆರ್.ಸಿ. ಯಾದಿ ಪ್ರಕಟಣೆಗೆ ಸುಪ್ರೀಂ ಕೋರ್ಟ್, ಇದೇ ಜುಲೈ 31ರ ಗಡುವು ವಿಧಿಸಿದೆ. ಬೆಟ್ಟದಷ್ಟು ಕೆಲಸ ಇನ್ನೂ ಬಾಕಿ ಉಳಿದಿದೆ. ಅಂತಿಮ ಎನ್.ಆರ್.ಸಿ.ಯಲ್ಲಿ ಹೆಸರಿಲ್ಲದವರು ಭಾರತೀಯರಾಗಿದ್ದರೂ ಸೂಕ್ತ ದಾಖಲೆ ದಸ್ತಾವೇಜು ಪುರಾವೆಗಳನ್ನು ಒದಗಿಸಲಾಗದ ಕಾರಣ ರಾಜ್ಯರಹಿತ ಪ್ರಜೆಗಳಾಗಲಿದ್ದಾರೆ. ವಿದೇಶೀ ಪ್ರಜೆಗಳ ನ್ಯಾಯಾಧಿಕರಣಗಳ ಮುಂದೆ ಸಲ್ಲಿಸುವ ಮೇಲ್ಮನವಿಯೂ ತಿರಸ್ಕೃತ ಆದಲ್ಲಿ ಸೆರೆಯಾಳು ಶಿಬಿರಗಳ ಪಾಲಾಗಲಿದ್ದಾರೆ. ಅವರನ್ನು ಅಟ್ಟುವುದಾದರೂ ಯಾವ ದೇಶಕ್ಕೆ?
ಸಮಸ್ಯೆಗೆ ಮಾನವೀಯ ಅಂತ್ಯ ನೀಡುವ ದಾರಿಗಳಿವೆ ಎಂಬ ನ್ಯಾಯಾಲಯದ ಸಲಹೆಗಳತ್ತ ಆಳುವವರ ಚಿತ್ತ ಹರಿದಂತಿಲ್ಲ.