ಏನೆಲ್ಲ ಸವಾಲುಗಳು ಎದುರಾದರೂ ಧೃತಿಗೆಡದ ಪರಿಸರಪ್ರೇಮಿಗಳು, ಸ್ವಾಮೀಜಿಗಳು ಹಾಗೂ ಜನರು ಧೃತಿಗೆಡದೆ ಹೋರಾಡಿ ಕೊನೆಗೂ ಕಪ್ಪತಗುಡ್ಡವನ್ನು ವನ್ಯಧಾಮವನ್ನಾಗಿ ಮಾಡಿಸಿದರು. ಹಾಗಂತ ಸುಮ್ಮನೆ ಕೂಡುವ ಕಾಲ ಇದಲ್ಲ. ಕಾರಣ, ಇದು ಅಷ್ಟಕ್ಕೇ ಮುಗಿದಿಲ್ಲ! ಹಲವರ ಹದ್ದಿನ ಕಣ್ಣುಗಳು ಇಲ್ಲಿನ ಸಂಪತ್ತು ದೋಚಲು ತೆರೆಮರೆಯಲ್ಲಿ ಸಂಚು ರೂಪಿಸುತ್ತಲೇ ಇವೆ.
ಕಪ್ಪತಗುಡ್ಡವನ್ನು ಸಂರಕ್ಷಿತ ಪ್ರದೇಶ ಅಥವಾ ವನ್ಯಧಾಮವೆಂದು ಸರ್ಕಾರ ಘೋಷಿಸಬೇಕೆಂದು ಪರಿಸರ ಪ್ರೇಮಿಗಳು ಒತ್ತಾಯ ಮಾಡಿದ್ದು ಹಲವು ಗಣಿಗಾರಿಕೆ ಮತ್ತು ಪವನ ವಿದ್ಯುತ್ ಉತ್ಪಾದಿಸುವ ಕಂಪನಿಗಳಿಗೆ ನಡುಕ ಹುಟ್ಟಿಸಿತ್ತು. ಆಗ ಕೆಲವು ಸಂಸ್ಥೆಗಳು, ಕಪ್ಪತಗುಡ್ಡ ಬರಡು ಪ್ರದೇಶವಾಗಿದ್ದು ಇಲ್ಲಿ ಯಾವುದೇ ಔಷಧೀಯ ಸಸ್ಯ, ಅಳಿವಿನಂಚಿನಲ್ಲಿರುವ ಹಾಗೂ ವಿಶೇಷ ವನ್ಯ ಜೀವಿಗಳಿಲ್ಲ ಎಂದು ಪ್ರತಿಪಾದಿಸಿದ್ದವು. ಇಲ್ಲಿ ಕರಡಿ, ಚಿರತೆಗಳಿಲ್ಲ, ಸಾರಂಗ, ನವಿಲುಗಳಿಲ್ಲ, ಇಲ್ಲಿರುವುದು ಬರೀ ಕಾಗೆ ಮತ್ತು ನಾಯಿಗಳು ಎಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿ, ಗುಡ್ಡವನ್ನು ಕೊಳ್ಳೆ ಹೊಡೆಯಲು ಯತ್ನಿಸಿದ್ದವು.
2009ರಲ್ಲಿ ಪರಿಸರ ಪ್ರೇಮಿಗಳ ತಂಡವೊಂದು ಕಪ್ಪತಗುಡ್ಡಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡಿತ್ತು. ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ.ಕೋಟ್ರೇಶ್ ಎಂಬುವವರು ಅಧ್ಯಯನ ವರದಿ ಸಲ್ಲಿಸಿದ್ದರು. 2010ರಲ್ಲಿ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಕಪ್ಪತಗುಡ್ಡವನ್ನು ವನ್ಯಧಾಮವೆಂದು ಘೋಷಿಸುವ ಬಗ್ಗೆ ನಿರ್ಣಯಿಸಲಾಗಿತ್ತು. ನಂತರ 21.02.2013ರಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಉಪಾಧ್ಯಕ್ಷರಾಗಿದ್ದ ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಮುಂಡರಗಿ ತಾಲೂಕಿನ ಡಂಬಳದಲ್ಲಿ ಸಭೆ ನಡೆಸಲಾಗಿತ್ತು. ಇದಾದ ಒಂದು ತಿಂಗಳ ಬಳಿಕ, 15.03.2013ರಂದು ರಾಜ್ಯ ವನ್ಯಜೀವಿ ಮಂಡಳಿ ಸಭೆ ಸೇರಿ ಸಮಾಲೋಚನೆ ನಡೆಸಿ, ವರದಿ ಆಧಾರದ ಮೇಲೆ ಈ ಗುಡ್ಡವನ್ನು ವನ್ಯಧಾಮವೆಂದು ಘೋಷಿಸಲು ನಿರ್ಧರಿಸಿತ್ತು. ಆದರೆ, ಸಂಚುಕೋರರ ಪ್ರಭಾವದಿಂದಾಗಿ ಆ ನಿರ್ಧಾರ ಆದೇಶವಾಗಿ ಹೊರಬೀಳಲಿಲ್ಲ.
ಮೊದಲೇ ಘೋಷಿಸಿದ್ದ ಸ್ಥಾನಮಾನವನ್ನು ಸರ್ಕಾರವು 2016 ಅಂತ್ಯದಲ್ಲಿ ಹಿಂಪಡೆಯಿತು. ತಕ್ಷಣವೇ ಗಣಿ ಕಂಪನಿಗಳ ಚಟುವಟಿಕೆಗಳು ಬಿರುಸುಗೊಂಡವು. ಇದರ ಬಗ್ಗೆ ಸರ್ಕಾರಕ್ಕೆ ಮಾಧ್ಯಮಗಳ ಮೂಲಕ ತಿಳಿಸಿದಾಗ ಪ್ರತಿಸ್ಪಂದನೆ ಸಿಗಲಿಲ್ಲ. ಜನವರಿ ಅಂತ್ಯಕ್ಕೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ ಸೂಕ್ತ ವೇದಿಕೆ ಕಲ್ಪಿಸಲು ಗದಗಿನ ಹತ್ತಿರದಲ್ಲಿರುವ ಡಂಬಳದಲ್ಲಿ ಸಭೆ ಏರ್ಪಡಿಸಲಾಯಿತು. ಅಲ್ಲಿ ಗಣಿಗಾರಿಕೆ ಸಂಸ್ಥೆಗಳ ಕೆಲ ಪ್ರತಿನಿಧಿಗಳು ಸುಳ್ಳು ದಾಖಲೆ ನೀಡಿ ಅಪಹಾಸ್ಯಕ್ಕೀಡಾದರು. ಆ ಪ್ರತಿನಿಧಿಗಳು ಕೆಲ ಸಂಘಟನೆಯ ಲೆಟರ್ ಹೆಡ್ಗಳನ್ನು ತೆಗೆದುಕೊಂಡು ಬಂದು ಅವುಗಳನ್ನೇ ದಾಖಲೆಗಳು ಹಾಗೂ ಕೆಲ ಸಂಘಟನೆಗಳು ಸ್ಥಾನಮಾನ ಬೇಡ ಎನ್ನುತ್ತಿವೆ ಎಂದು ಪ್ರತಿಪಾದಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ಆಯಾ ಸಂಘಟನೆಗಳು ಈ ಪ್ರತಿನಿಧಿಗಳು ತಮ್ಮ ಲೆಟರ್ ಹೆಡ್ಗಳನ್ನು ಸುಳ್ಳು ಹೇಳಿ ಪಡೆದುಕೊಂಡಿವೆ ಎಂದು ತಿಳಿಸಿದಾಗ, ಬಂದ ಮೂವರು ಅಧಿಕಾರಿಗಳು ಸುಮ್ಮನೆ ವಾಪಸಾದರು. ಇಷ್ಟೆಲ್ಲ ಆದರೂ ರಾಜ್ಯ ಸರ್ಕಾರ ಇದಕ್ಕೆ ಸಮ್ಮತಿಸಲಿಲ್ಲ.

ಗದಗಿನ ಪರಿಸರ ಪ್ರೇಮಿಗಳು, ಸಾಹಿತಿಗಳು, ಚಿಂತಕರು ಹಾಗೂ ಸಾರ್ವಜನಿಕರೆಲ್ಲರೂ ಸೇರಿ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಫೆಬ್ರುವರಿ 13, 2017ರಂದು 3 ದಿನಗಳ ಅಹೋರಾತ್ರಿ ಉಪವಾಸ ಕೈಗೊಂಡರು. ಹೋರಾಟದ ಕಾವು ದಿನೇದಿನೇ ಏರತೊಡಗಿತು. ಸರ್ಕಾರದ ಬಗ್ಗೆ ಅನುಮಾನ, ಅಪಸ್ವರಗಳು ಆರಂಭವಾಗತೊಡಗಿದವು. ಏಪ್ರಿಲ್ 11, 2017ರಂದು ಕೊನೆಗೂ ರಾಜ್ಯ ಸರ್ಕಾರ, 80 ಸಾವಿರ ಎಕರೆ ವಿಸ್ತೀರ್ಣದ ಕಪ್ಪತಗುಡ್ಡದ 17,872 ಹೆಕ್ಟೇರ್ ಪ್ರದೇಶವನ್ನು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಿತು.
ಅದಾದ ನಂತರ ಸೆಪ್ಟೆಂಬರ್ ತಿಂಗಳಲ್ಲಿ ಗಣಿಗಾರಿಕೆ ಕಂಪನಿಯೊಂದು ಮತ್ತೊಮ್ಮೆ ಚಿನ್ನದ ಗಣಿಗಾರಿಕೆ ಮಾಡಲು ಅರ್ಜಿ ಸಲ್ಲಿಸಿತು. ಮುಂಡರಗಿ ತಾಲೂಕಿನ ಅತ್ತಿಕಟ್ಟೆ ಗ್ರಾಮದಲ್ಲಿ ಕಂಪನಿ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದನ್ನು ಕಂಡು ಗ್ರಾಮದ ಜನರು ಆಕ್ಷೇಪ ವ್ಯಕ್ತಪಡಿಸಿದರು. ಸರ್ವೆ ನಂಬರ್ 46, 47ರಲ್ಲಿ ಅವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದನ್ನು ಕಂಡು ಗದಗಿನ ‘ಜಯ ಕರ್ನಾಟಕ’ ಸಂಘದವರು ತಕ್ಷಣವೇ ದೌಡಾಯಿಸಿ ಖಂಡಿಸಿದರು. ಈ ವಿಷಯವಾಗಿ ಸೆಪ್ಟೆಂಬರ್ 21ರಂದು ಹೈಕೋರ್ಟ್ಗೆ ಬಲ್ದೋಟಾ ಕಂಪನಿ ಅರ್ಜಿ ಸಲ್ಲಿಸಿತ್ತು. ಆಗ ಬಳ್ಳಾರಿ ಮೂಲದ ಸಂತೋಷ ಮಾರ್ಟಿನ್ ಎಂಬ ಪರಿಸರವಾದಿ ಇವರ ವಿರುದ್ಧ ಪ್ರಶ್ನಿಸಿ ಕೋರ್ಟ್ನಲ್ಲಿ ಗೆಲವು ಸಾಧಿಸಿದರು.
ಗಣಿ ಉದ್ಯಮಿಗಳ ಈ ಬಗೆಯ ಸಂಚುಗಳು ಇದೇ ಮೊದಲೇನಲ್ಲ. 105 ವರ್ಷಗಳ ಹಿಂದೆ, ಅಂದರೆ, 1912ರಲ್ಲಿ ‘ಧಾರವಾಡ ಗೋಲ್ಡ್ ಮೈನ್ಸ್ ಲಿಮಿಟೆಡ್’ ಎಂಬ ಸಂಸ್ಥೆ ಎಂಟು ವರ್ಷ ಕಪ್ಪತಗುಡ್ಡದಲ್ಲಿ ಚಿನ್ನದ ಅದಿರು ತೆಗೆದಿತ್ತು. ನಂತರ ಎಷ್ಟೋ ವರ್ಷಗಳವರೆಗೆ ಇಲ್ಲಿ ಗಣಿಗಾರಿಕೆ ಇರಲಿಲ್ಲ. ಈ ಗುಡ್ಡದ ವ್ಯಾಪ್ತಿಯಲ್ಲಿರುವ ಶಿರಹಟ್ಟಿ ತಾಲೂಕಿನ ಜಿಲ್ಲಿಗೆರೆ ಗ್ರಾಮದಲ್ಲಿ ‘ಸಾಂಗ್ಲಿ ಗೋಲ್ಡ್ ಮೈನ್ಸ್’ ಎಂಬ ಕಂಪನಿ ಒಟ್ಟು 98 ಎಕರೆ 6 ಗುಂಟೆ ಪ್ರದೇಶಕ್ಕೆ ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿ ಸಲ್ಲಿಸಿತ್ತು. ಆದರೆ, ಅರ್ಜಿ ಜೊತೆಗೆ ಮೂಲ ದಾಖಲೆಗಳು ಹಾಗೂ ನಕಾಶೆ ಇರದ ಕಾರಣ ಅರಣ್ಯ ಇಲಾಖೆ ಅರ್ಜಿಯನ್ನು ತಳ್ಳಿಹಾಕಿತ್ತು. “ಇದೇ ಪ್ರದೇಶದಲ್ಲಿ ಆರು ವರ್ಷಗಳ ಕಾಲ ಗಣಿಗಾರಿಕೆ ಮಾಡಬಹುದು. ಇಲ್ಲಿ ಮಧ್ಯಮ ಗುಣಮಟ್ಟದ ಚಿನ್ನ ಇದೆ ಹಾಗೂ ಇಲ್ಲಿ ಅಂದಾಜು 11 ಲಕ್ಷ ಟನ್ ಚಿನ್ನದ ಅದಿರು ಇದೆ,” ಎಂದು ಗಣಿ ಕಂಪನಿಯೊಂದು ಅರ್ಜಿ ಸಲ್ಲಿಸಿತ್ತು. ಇದೂ ಕೋರ್ಟ್ವರೆಗೂ ಹೋಯಿತು.
ಕಪ್ಪತಗುಡ್ಡ ಎಂಬ ಜೀವವೈವಿಧ್ಯ ತಾಣ
ಗದುಗಿನ ಬಿಂಕದಕಟ್ಟಿ ಗ್ರಾಮದಂಚಿನಿಂದ ಆರಂಭವಾಗುವ ಕಪ್ಪತಗುಡ್ಡವು ಮುಂಡರಗಿ ತಾಲೂಕಿನ ಶಿಂಗಟಾಲೂರಿನವರೆಗೆ ಚಾಚಿಕೊಂಡಿದೆ. ಈ ಗುಡ್ಡವು ಒಟ್ಟು 63 ಕಿಮೀಗಳಷ್ಟು ಉದ್ದವಿದ್ದು, 32,346.524 ಹೆಕ್ಟೇರ್ನಷ್ಟು ವಿಸ್ತಾರವಾಗಿದೆ. ಕೆಂಪು ಮಿಶ್ರಿತ ಮಣ್ಣಿನಿಂದ ಕೂಡಿರುವ ಈ ಗುಡ್ಡದ ಒಡಲಲ್ಲಿ ಹೆಮಟೈಟ್, ಲಿಮೋನೈಟ್, ತಾಮ್ರ, ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಚಿನ್ನ ಸೇರಿದಂತೆ ಹಲವು ಖನಿಜಗಳಿವೆ. ಇಲ್ಲಿ 300ಕ್ಕೂ ಅಧಿಕ ಜಾತಿಯ ಔಷಧೀಯ ಸಸ್ಯಗಳಿದ್ದು, ಚಿರತೆ, ಕರಡಿ, ತೋಳ, ನರಿ, ಪುನುಗ ಬೆಕ್ಕು, ಕಾಡು ಕುರಿ, ಚುಕ್ಕೆ ಜಿಂಕೆ, ಮುಳ್ಳು ಹಂದಿ, ಸಾರಂಗ ಹಾಗೂ 13 ಸಾವಿರಕ್ಕೂ ಹೆಚ್ಚು ನವಿಲುಗಳಿವೆ.

ಗದಗ ಜಿಲ್ಲೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಕವಲುಕವಲಾಗಿ ಹರಡಿಕೊಂಡಿರುವ ಚಿಕ್ಕ-ದೊಡ್ಡ ಗುಡ್ಡದ ಸಾಲುಗಳೇ ಕಪ್ಪತಗುಡ್ಡಗಳು. ಅದರಲ್ಲೊಂದು ಸರಣಿ ಮುಂಡರಗಿ ತಾಲೂಕಿನ ಸಿಂಗಟಾಲೂರು ಕ್ಷೇತ್ರದವರೆಗೂ ಚಾಚಿಕೊಂಡಿದೆ. ಡೋಣಿ ಗ್ರಾಮದಿಂದ 4 ಕಿಮೀಗಳಷ್ಟು ಅಂತರದಲ್ಲಿ ಬೃಹದಾಕಾರದ ಶಿಖರಗಳನ್ನೊಳಗೊಂಡ ಬೆಟ್ಟಗಳ ಸಮುಚ್ಚಯ ಮಾತ್ರವೇ ಕಪ್ಪತಗುಡ್ಡ ಎಂಬುದು ಪ್ರತೀತಿ. ಆದರೆ, ಬಹುತೇಕರಿಗೆ ಇದು ಗೊತ್ತಿಲ್ಲ. ಬಿಂಕದಕಟ್ಟಿಯಿದ ಶಿಂಗಟಾಲೂರಿನವರೆಗೆ ಇರುವ ಗಿರಿಗಳ ಸಮುಚ್ಚಯವೆಲ್ಲ ಕಪ್ಪತಗುಡ್ಡವೇ. ಹಿಂದೆ ಬಹುಸಂಖ್ಯೆಯಲ್ಲಿ ಪಾರಿವಾಳಗಳ ನೆಲೆ ಇದಾಗಿದ್ದರಿಂದ ‘ಕಪೋತಗಿರಿ’ ಎಂಬುದು ವಾಡಿಕೆಯಲ್ಲಿರುವ ಹೆಸರು. ಕಪ್ಪತಮಲ್ಲಯ್ಯ ಹಾಗೂ ನಂದಿವೇರಿ ಬಸವಣ್ಣ ಇಲ್ಲಿನ ಅಧಿದೇವತೆಗಳು.
ಕಪ್ಪತಗುಡ್ಡ ಖನಿಜ ಸಂಪತ್ತಿನ ಆಗರ. ಹಿಂದೊಮ್ಮೆ ಅಮೂಲ್ಯ ಹಾಗೂ ಅಪರೂಪದ ನೂರಾರು ಔಷಧೀಯ ಸಸ್ಯಗಳ ಬೀಡಾಗಿ, ಗಿಡಮರಗಳಿಂದ ತುಂಬಿಕೊಂಡು, ಪಶುಪಕ್ಷಿಗಳ ಸಂಕುಲ, ಕಲರವದೊಂದಿಗೆ ಪ್ರಕೃತಿಯ ರಮ್ಯ ನಿಗೂಢತೆ, ಚೆಲುವು, ಭವ್ಯತೆಯಿಂದ ಬೀಗುತ್ತ ಮಾಧುರ್ಯದ ರಸಭಕ್ಷ್ಯವನ್ನುಣಿಸುತ್ತಿದ್ದ ಈ ಬೆಟ್ಟ ಪ್ರದೇಶವು, ಕಳೆದ ಆರೆಂಟು ದಶಕಗಳಲ್ಲಿ ಶೋಷಣೆಗೀಡಾಗಿ ಬೆತ್ತಲು ಗುಡ್ಡವಾಗಿ ರಣರಣಿಸಿ ಕಂಗೆಟ್ಟು ಕಳೆದ ಶತಮಾನದ ಕೊನೆಯಲ್ಲಿ ವಿಕೃತಿಯ ಪರಾಕಾಷ್ಠೆ ತಲುಪಿ ಸೋತು ಸೊರಗಿತ್ತು. ನಂತರ ಅದು ಹಸುರಾಗಿದ್ದು ವಿಸ್ಮಯವೇ ಸರಿ.
ಅಪರೂಪದ ಸಸ್ಯ, ಮರಗಳ ಬೆಟ್ಟಶ್ರೇಣಿ
ಆಲ, ಅಂಕೇರಿ, ಅಮತಬಳ್ಳಿ, ಅರಳಿ, ಅಮಟೆ, ಅನಂತಮೂಲ, ಅಜವಾನ, ಅತ್ತಿ ಅಡಸೋಗಿ, ನಕರಿಸೊಪ್ಪು, ಚಿತ್ರಮೂಲ, ಸಂಜೀವಿನಿ, ಕಾಡು ಬಾದಾಮಿ, ರಕ್ತಚಂದನ ಕಾರಿ, ಕಕ್ಕಿ ಕವಳೆ, ಕಣಗಲ, ಬಸವನಪಾದ, ಹನಮ ಹಸ್ತ, ಕಾಡಿಗ್ಗರಗ, ಉತ್ತರಾಣಿ, ಕಾಡನಿಂಬೆ, ಗಜಗಕಾಸರಕ್, ಕೇಶ ಕೆಜೋರಾ, ಕರ್ಪೂರ, ಲೋಬಾನ, ಕರಿಎಕ್ಕ, ಬಿಳಿಎಕ್ಕ, ಗುಲಗಂಜಿ, ಚೊಗಚಿ, ಗೊರಂಟೆ, ತೇಗ, ತಪಸಿ, ಪಾಷಾಣ ಬೇದಿ, ಪಾರಿಜಾತ, ಪುಷ್ಕರ ಮೂಲ, ಬಕುಲಾಬಾಲಿ, ರುದ್ರಾಕ್ಷಿ ಸಪ್ತ ವರ್ಣ, ಮೂಚ ಪತ್ತಿ, ಶಂಕಪುಷ್ಪ ಹೊಗ್ಗೂಳ, ಹಿರೇಮದ್ದು, ಹಿಪ್ಪಲ ಸೊನಕ್ಕೆ, ಶಿಖಕಲ್ಲಿ ಸಬ್ಬಸಗಿ, ಪಚಗ, ಕಾಡು ಸಬ್ಬಸಗಿ, ಹೊಂಗೆ, ಬೇವು, ಹುಣಸಿ, ನೆಲ್ಲಿ, ತಪಸಿ, ಬಿಲ್ವಪತ್ರಿ, ಆಂಜನ, ಮುತ್ತಲ, ಬಳವಲ, ಬಾರಿ, ಅರಳಿ, ಬಸರಿ, ಬನ್ನಿ ಮುಂತಾದ ಸಸ್ಯ ಮತ್ತು ಮರಗಳಿವೆ ಇಲ್ಲಿ.
ಜನ, ಅಧಿಕಾರಿಗಳು ಏನಂತಾರೆ?

