Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಅನರ್ಹರಿಂದ `ಮಲೀನ’ವಾಗುತ್ತಿದೆ ಮಾಲಿನ್ಯ ನಿಯಂತ್ರಣ ಮಂಡಳಿ!

ಅನರ್ಹರಿಂದ `ಮಲೀನ’ವಾಗುತ್ತಿದೆ ಮಾಲಿನ್ಯ ನಿಯಂತ್ರಣ ಮಂಡಳಿ!
ಅನರ್ಹರಿಂದ `ಮಲೀನ’ವಾಗುತ್ತಿದೆ ಮಾಲಿನ್ಯ ನಿಯಂತ್ರಣ ಮಂಡಳಿ!

December 31, 2019
Share on FacebookShare on Twitter

ಈ ಜನಪ್ರತಿನಿಧಿಗಳಿಗೆ ಸರ್ಕಾರದ ಯಾವುದೇ ಆದೇಶಗಳಾಗಲೀ, ಯಾವುದೇ ನ್ಯಾಯಾಲಯ ಎಷ್ಟೇ ಕಠಿಣವಾದ ತೀರ್ಪುಗಳನ್ನು ನೀಡಲಿ ಕ್ಯಾರೇ ಎನ್ನುವುದಿಲ್ಲ. ಸರ್ಕಾರದ ಅಥವಾ ಸರ್ಕಾರದ ಒಡೆತನದಲ್ಲಿರುವ ಸಂಸ್ಥೆಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಅವರ ಕಣ್ಣಿಗೆ ಕಾಣುವುದು ಹಣ ಅಥವಾ ತಮಗೆ ಬೇಕಾದವರಿಗೆ ಶಿಫಾರಸು ಅಷ್ಟೆ. ಇನ್ನು ಕಾರ್ಯಕ್ರಮ ಜಾರಿಗೆ ತರುವ ಅಧಿಕಾರಿಗಳಲ್ಲಿ ಬಹುತೇಕ ದಪ್ಪ ಚರ್ಮದವರು. ಇವರಿಗೂ ಅಷ್ಟೆ ಕಾನೂನು ಲೆಕ್ಕಕ್ಕಿಲ್ಲ. ಇನ್ನೂ ಕೆಲವು ಅಧಿಕಾರಿಗಳು ಆಡಳಿತ ನಡೆಸುವ ರಾಜಕಾರಣಿಗಳನ್ನು ನಾವ್ಯಾಕೆ ಎದುರು ಹಾಕಿಕೊಳ್ಳಬೇಕೆಂಬ ಧೋರಣೆಯಿಂದ ರಾಜಕಾರಣಿಗಳು ಹೇಳಿದ ಕಡತಗಳಿಗೆ ಜೀ ಹುಜೂರ್ ಎಂದು ಸಹಿ ಹಾಕುತ್ತಾರೆ.

ಹೆಚ್ಚು ಓದಿದ ಸ್ಟೋರಿಗಳು

ದೇಶಪ್ರೇಮ ಅನ್ನುವುದು ಬರೀ ಹಿಂದಿಯಲ್ಲಿ ಮಾತ್ರ ಪ್ರಕಟವಾಗುವುದೇ? : ಕವಿರಾಜ್

ಸರ್ಕಾರ ನಡೀತಾ ಇಲ್ಲ ಎಂಬ ಮಾಧುಸ್ವಾಮಿ ಹೇಳಿಕೆಗೆ ಸಚಿವ ಶ್ರೀರಾಮುಲು ಅಸಮಾಧಾನ!

ಸ್ವತಂತ್ರ್ಯ ದಿನಾಚರಣೆ ಹಿನ್ನೆಲೆ ರಾಜ್ಯಾದ್ಯಂತ 81 ಕೈದಿಗಳ ಬಿಡುಗಡೆ!

ಈ ಮೂಲಕ ಸ್ವಜನಪಕ್ಷಪಾತ ಮಾಡಿ ಅರ್ಹತೆ ಇಲ್ಲದಿದ್ದರೂ ತಮಗೆ ಬೇಕಾದವರನ್ನು ನೇಮಕ ಮಾಡಿ ಸರ್ಕಾರಿ ಯಂತ್ರಗಳು ತುಕ್ಕು ಹಿಡಿಯುವಂತೆ ಮಾಡುತ್ತಾರೆ. ಕಡೆಗೆ ಆ ಇಲಾಖೆಗಳಿಗೆ ಮಸಿ ಬಳಿಯುವಂತೆ ಮಾಡುತ್ತಾರೆ.

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯದ್ದೂ ಅದೇ ಕತೆಯಾಗಿದೆ. ಇದೊಂದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಸ್ವಾಯತ್ತ ಸಂಸ್ಥೆಯಾಗಿದೆ. ಇದಕ್ಕೆ ಅಧ್ಯಕ್ಷರನ್ನಾಗಿ ಪರಿಸರದ ಬಗ್ಗೆ ಕಾಳಜಿ ಇರುವ, ಪರಿಸರ ಸಂರಕ್ಷಣೆಗಾಗಿ ದುಡಿದಿರುವ ಮತ್ತು ಶೈಕ್ಷಣಿಕವಾಗಿ ಅರ್ಹತೆ ಇರುವ ವ್ಯಕ್ತಿಗಳನ್ನೇ ನೇಮಕ ಮಾಡಬೇಕೆಂಬ ನಿಯಮವಿದೆ.

ಆದರೆ, ಈ ಕೆಟ್ಟ ರಾಜಕೀಯ ವ್ಯವಸ್ಥೆಯು ಮಾಲಿನ್ಯ ನಿಯಂತ್ರಣ ಮಾಡಬೇಕಾದ ಸಂಸ್ಥೆಯನ್ನೇ ಮಲೀನ ಮಾಡುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅನರ್ಹ ವ್ಯಕ್ತಿಗಳನ್ನೇ ನೇಮಕ ಮಾಡುವ ಕೆಟ್ಟ ಸಂಪ್ರದಾಯಕ್ಕೆ ಈ ರಾಜಕಾರಣಿಗಳು ಕೈ ಹಾಕುತ್ತಾ ಬಂದಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಾಮನ್ ಆಚಾರ್ಯ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಿತ್ತು. ಇದಾದ ಬಳಿಕ ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿ.ಜಯರಾಂ ಮತ್ತು ಡಾ.ಸುಧಾಕರ್ ಅವರನ್ನು ಕಾನೂನುಗಳನ್ನು ಗಾಳಿಗೆ ತೂರಿ ಈ ಹುದ್ದೆಗೆ ನೇಮಕ ಮಾಡಿ ಹುದ್ದೆಯ ಪಾವಿತ್ರ್ಯತೆಯನ್ನೇ ಹಾಳು ಮಾಡಿದ್ದರು.

ಈಗ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಬೆಂಗಳೂರಿನ ಸುಧೀಂದ್ರ ರಾವ್ ಎಂಬುವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ `ಕೆಟ್ಟ ಸಂಪ್ರದಾಯ’ವನ್ನು ಮುಂದುವರಿಸಿದೆ.

ಕಾನೂನು ಹೇಳುವುದೇನು?

ಅಷ್ಟಕ್ಕೂ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಷ್ಟೇ ಅಲ್ಲ, ದೇಶದ ವಿವಿಧ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಯಾರನ್ನು ನೇಮಕ ಮಾಡಬೇಕೆಂಬ ಸ್ಪಷ್ಟ ಆದೇಶಗಳನ್ನು ನ್ಯಾಯಾಲಯಗಳು ಕಾಲಕಾಲಕ್ಕೆ ನೀಡುತ್ತಾ ಬಂದಿವೆ. ಈ ಆದೇಶಗಳನ್ನು ನೀಡುವಾಗ ಸುಪ್ರೀಂ ಕೋರ್ಟ್ ಸೇರಿದಂತೆ ಹೈಕೋರ್ಟುಗಳು ಎರಡು ಕಾಯ್ದೆಗಳನ್ನು ಉಲ್ಲೇಖ ಮಾಡುತ್ತಲೇ ಬಂದಿವೆ.

ಅವುಗಳೆಂದರೆ, Water Act 1974 ಮತ್ತು Air Act 1981. ಈ ಎರಡೂ ಕಾಯ್ದೆಗಳ ಪ್ರಕಾರ ಮಾಲಿನ್ಯ ಮಂಡಳಿಯ ಅಧ್ಯಕ್ಷರಾಗುವವರು ಪರಿಸರ ರಕ್ಷಣೆ ಸಂಬಂಧ ವಿಶೇಷ ಜ್ಞಾನ ಹೊಂದಿರಬೇಕು ಮತ್ತು ಅಂತಹ ಸಂಸ್ಥೆಗಳಲ್ಲಿ ಮೊದಲು ಕೆಲಸ ಮಾಡಿರುವ ಅನುಭವ ಹೊಂದಿರಬೇಕು. ಪರಿಸರ ಕಾಳಜಿ ಕುರಿತಾದ ಕಾರ್ಯಕ್ರಮ ಅಥವಾ ಅದಕ್ಕೆ ಸಂಬಂಧಿಸಿದಂತೆ ಕನಿಷ್ಠ ಮೂರು ವರ್ಷಗಳ ಕಾಲ ದುಡಿದ ಅನುಭವ ಇರಬೇಕು ಅಥವಾ ಪರಿಸರಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

ಆದರೆ, ಇತ್ತೀಚೆಗೆ ನಡೆದಿರುವ ನಾಲ್ಕೂ ನೇಮಕಾತಿಗಳಲ್ಲಿ ಇದರಲ್ಲಿನ ಯಾವುದೇ ಒಂದು ನಿಯಮವನ್ನೂ ಪಾಲನೆ ಮಾಡಿರದಿರುವುದು ಸ್ಪಷ್ಟವಾಗುತ್ತಿದೆ.

ಅಂದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಆಗುವವರು ಪರಿಸರದ ವಿಚಾರದಲ್ಲಿ ಪಾಂಡಿತ್ಯ ಅಥವಾ ಅದರಲ್ಲಿ ಜ್ಞಾನ ಹೊಂದಿರಬೇಕು. ಮಾಲಿನ್ಯ ನಿಯಂತ್ರಣದ ಬಗ್ಗೆ ಪಿಹೆಚ್.ಡಿ ಅಥವಾ ಅದರದ್ದೇ ಪದವಿ ಪಡೆದಿರಬೇಕು. ಮಾಲಿನ್ಯ ನಿಯಂತ್ರಣ ಕೆಲಸ ಮಾಡಿದ ಅನುಭವ ಇರಬೇಕು. ಮಾಲಿನ್ಯ ನಿಯಂತ್ರಣದಲ್ಲಿ ವಿಜ್ಞಾನಿಗಳು, ಸಂಶೋಧನಾ ಸಂಸ್ಥೆಯಲ್ಲಿ, ಸಂಶೋಧಕರು, ಸಂಶೋಧನೆ ಮಾಡಿರುವ ಅನುಭವ ಇರಬೇಕು.

ನ್ಯಾಯಾಲಯಗಳು ಇದುವರೆಗೆ ಹೇಳಿರುವುದೇನು?

ಈ ವಿಚಾರಕ್ಕೆ ಸಂಬಂಧಿಸಿದಂತೆ 2017 ರಲ್ಲಿ ಸುಪ್ರೀಂಕೋರ್ಟ್, “ಅರ್ಹ ವ್ಯಕ್ತಿಗಳೇ ಇಲ್ಲ ಎಂಬುದು ಕಾಳಜಿಯ ವಿಷಯವಲ್ಲ. ದೇಶದಲ್ಲಿ ಎಷ್ಟೋ ಮಂದಿ ಪರಿಣಿತ ವ್ಯಕ್ತಿಗಳಿದ್ದಾರೆ. ಆದರೆ, ಅರ್ಹ ವ್ಯಕ್ತಿಗಳನ್ನು ಹುಡುಕಿ ಜವಾಬ್ದಾರಿ ವಹಿಸುವ ಇಚ್ಛಾಶಕ್ತಿಯ ಕೊರತೆಯಿಂದ ಪ್ರಮುಖ ಹುದ್ದೆಗಳು ಪಟ್ಟಭದ್ರ ಹಿತಾಸಕ್ತಿಯ ಸಂಪರ್ಕವಿರುವ ವ್ಯಕ್ತಿಗಳ ಪಾಲಾಗುತ್ತಿದೆ’’ ಎಂದು ಅಭಿಪ್ರಾಯಪಟ್ಟಿತ್ತು.

ಈ ಹಿಂದಿನ ಸರ್ಕಾರ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆಂಬ ಏಕೈಕ ಮಾನದಂಡದ ಆಧಾರದಲ್ಲಿ ಸಿ.ಜಯರಾಂ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆದರೆ, ಅವರಿಗೆ ಪರಿಸರ ರಕ್ಷಣೆ ವಿಚಾರದಲ್ಲಿ ಅನುಭವ ಇದೆಯೋ ಇಲ್ಲವೋ ಎಂಬುದರ ಗೋಜಿಗೇ ಹೋಗಿರಲಿಲ್ಲ. ಅವರು ಇನ್ನೇನು ಮಂಡಳಿಯ ಆಗುಹೋಗುಗಳನ್ನು ಅರ್ಥ ಮಾಡಿಕೊಳ್ಳುವುದರೊಳಗಾಗಿ ಅಂದರೆ ಕೇವಲ ಮೂರೇ ತಿಂಗಳಿಗೆ ಅವರನ್ನು ಅಧ್ಯಕ್ಷ ಪದವಿಯಿಂದ ಕೆಳಗಿಳಿಸಿತು.

ಏಕೆಂದರೆ, ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಭಿನ್ನಮತ ಶಮನ ಮಾಡಿಕೊಂಡು ಸರ್ಕಾರವನ್ನು ಸದೃಢ ಮಾಡಿಕೊಳ್ಳುವುದು ಆದ್ಯತೆಯಾಗಿತ್ತು. ಈ ಕಾರಣದಿಂದ ಸಚಿವ ಸ್ಥಾನ ಸಿಗಲಿಲ್ಲ ಎಂದು ಭಿನ್ನಮತವನ್ನು ಶುರು ಮಾಡಿಕೊಂಡಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಸುಧಾಕರ್ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತು.

ಆದರೆ, ಸುಧಾಕರ್ ಅವರಿಗೂ ಪರಿಸರ ರಕ್ಷಣೆ ಅಥವಾ ಪರಿಸರಕ್ಕೆ ಸಂಬಂಧಿಸಿದ ಯಾವುದೇ ಅರ್ಹತೆಯೂ ಇರಲಿಲ್ಲ. ಆದಾಗ್ಯೂ ಸರ್ಕಾರ ನೇಮಕಾತಿಯನ್ನು ಸಮರ್ಥನೆ ಮಾಡಿಕೊಂಡದ್ದು ಹೇಗೆಂದರೆ, ಸುಧಾಕರ್ ಅವರು ಎಂಬಿಬಿಎಸ್ ಪದವಿ ಪಡೆದಿದ್ದಾರೆ ಮತ್ತು ಪರಿಸರ ರಕ್ಷಣೆಯಲ್ಲಿ ಆಸಕ್ತಿ ಹೊಂದಿದ್ದಾರೆಂದು. ಆದರೆ, ಪರಿಸರ ರಕ್ಷಣೆಯಲ್ಲಿ ಆಸಕ್ತಿ ಹೊಂದಿದ್ದರೆ ಮಾತ್ರ ಸಾಲದು, ಅದಕ್ಕೆ ಸಂಬಂಧಿಸಿದಂತೆ ದುಡಿದಿರುವ ಅನುಭವ ಬೇಕು ಎಂಬ ಕಾನೂನಿನ ಸ್ಪಷ್ಟ ಕಲ್ಪನೆಯೂ ಸರ್ಕಾರದ ಮುಂದಿರಲಿಲ್ಲ.

ನೇಮಕಾತಿ ಕುರಿತು ನ್ಯಾಯಾಲಯಗಳ ಆದೇಶಗಳು

ಹಲವಾರು ರಾಜ್ಯಗಳಲ್ಲಿನ ಮಾಲಿನ್ಯ ಮಂಡಳಿ ಅಧ್ಯಕ್ಷರ ನೇಮಕಾತಿಯಲ್ಲಿನ ನಿಯಮ ಉಲ್ಲಂಘನೆ ಅರ್ಜಿಗಳನ್ನು ಒಟ್ಟುಗೂಡಿಸಿ ರಾಷ್ಟ್ರೀಯ ಹಸಿರು ಪೀಠ (National Green Tribunal) ಸುದೀರ್ಘ ವಿಚಾರಣೆ ನಡೆಸಿತ್ತು. ಆಗಸ್ಟ್ 24, 2016ರಂದು ಈ ಬಗ್ಗೆ ಆದೇಶ ನೀಡಿದ ಪೀಠ ಹೆಚ್ಚಿನ ರಾಜ್ಯಗಳ ಅಧ್ಯಕ್ಷರ ನೇಮಕಾತಿಯನ್ನು ರದ್ದುಗೊಳಿಸಿತ್ತು. ಅಲ್ಲದೇ, ಮಾಲಿನ್ಯ ಮಂಡಳಿಗಳ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿಯಲ್ಲಿ ಅನುಸರಿಸಲೇಬೇಕಾದ ನಿಯಮಗಳನ್ನು ರೂಪಿಸಿತ್ತು. ಆದರೆ, ಈ ಆದೇಶದ ವಿರುದ್ಧ ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದವು.

ಸೆಪ್ಟೆಂಬರ್ 2017 ರಂದು ಈ ಮನವಿಗಳ ಬಗ್ಗೆ (Civil Appeal 1359/2017) ಆದೇಶ ನೀಡಿದ ಸುಪ್ರೀಂ ಕೋರ್ಟ್, ಮಂಡಳಿಗೆ ಅಧ್ಯಕ್ಷರನ್ನು ನಿಯುಕ್ತಿಗೊಳಿಸುವಲ್ಲಿ ಹಸಿರು ಪೀಠ ನೀಡಿದ ನಿರ್ದೇಶನಗಳನ್ನು ರದ್ದುಗೊಳಿಸಿತು. ಆದರೆ, 6 ತಿಂಗಳೊಳಗೆ ಅಧ್ಯಕ್ಷರ ನೇಮಕಾತಿಗೆ ಸ್ಪಷ್ಟ ನಿಯಮಗಳನ್ನು ರೂಪಿಸುವಂತೆ ಆದೇಶ ನೀಡಿತು.

ಈ ಆದೇಶದಲ್ಲಿ ಸುಪ್ರೀಂ ಕೋರ್ಟ್ ಎಂಜಿಕೆ ಮೆನನ್ ಸಮಿತಿ ವರದಿಯನ್ನು ಹಲವಾರು ಕಡೆಗಳಲ್ಲಿ ಉಲ್ಲೇಖಿಸಿದೆ. 2003ರಲ್ಲಿ ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು (Supreme Court Monitored Committee) ರಚಿಸಿ, ಮೆನನ್ ಸಮಿತಿ ವರದಿಯಂತೆ ಮಾಲಿನ್ಯ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರ ನೇಮಕಾತಿ ನಡೆಯುವಂತೆ ನೋಡಿಕೊಳ್ಳುವ ಕಾರ್ಯ ನೀಡಿತ್ತು.

ನೇಮಕಾತಿ ಪ್ರಕ್ರಿಯೆ ಹೀಗಿರಬೇಕು

ಎರಡು ಕಾಯ್ದೆಗಳ ಅಡಿಯಲ್ಲಿ ಮಾಲಿನ್ಯ ಮಂಡಳಿ ಅಧ್ಯಕ್ಷರ ನೇಮಕಾತಿ ನಡೆಯುತ್ತದೆ – ಒಂದು Water Act 1974, ಇನ್ನೊಂದು Air Act 1981. ಈ ಎರಡೂ ಕಾಯ್ದೆಗಳ ಧ್ಯೇಯೋದ್ಧೇಶಗಳ ಪ್ರಕಾರ ಮಾಲಿನ್ಯ ಮಂಡಳಿಯ ಅಧ್ಯಕ್ಷರಾಗುವವರು ಪರಿಸರ ರಕ್ಷಣೆ ಸಂಬಂಧ ವಿಶೇಷ ಜ್ಞಾನ ಹೊಂದಿರಬೇಕು ಮತ್ತು ಅಂತಹ ಸಂಸ್ಥೆಗಳಲ್ಲಿ ಮೊದಲು ಕೆಲಸ ಮಾಡಿರುವ ಅನುಭವ ಹೊಂದಿರಬೇಕು.

ಈ ಬಗ್ಗೆ ಒಂದು ಹೆಜ್ಜೆ ಮುಂದೆ ಸಾಗಿದ್ದ ಎಂಜಿಕೆ ಮೆನನ್ ಸಮಿತಿ, ಸ್ವಾಯತ್ತೆಯನ್ನು ರಕ್ಷಿಸುವ ದೃಷ್ಟಿಯಿಂದ ಮಂಡಳಿ ಅಧ್ಯಕ್ಷರ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪವೇ ಇರಬಾರದು ಎಂದಿತ್ತು. ಹೀಗಾಗಿ, ಅಧ್ಯಕ್ಷರ ನೇಮಕಾತಿಯ ನಂತರವೂ ಮಂಡಳಿಯ ಕಾರ್ಯವೈಖರಿಯು ರಾಜಕೀಯ ಹಸ್ತಕ್ಷೇಪದಿಂದ ಹೊರತಾಗಿರಬೇಕು ಎಂದೂ ಹೇಳಿತ್ತು. ಮಂಡಳಿ ಅಧ್ಯಕ್ಷರ ಕಾರ್ಯಾವಧಿ ಐದು ವರ್ಷಗಳದ್ದಾಗಿರಬೇಕು ಎಂದು ಸಮಿತಿ ಹೇಳಿತ್ತು.

ಇವೆಲ್ಲಾ ಅಂಶಗಳನ್ನು ಗಮನದಲ್ಲಿರಿಸಿಯೇ ಸುಪ್ರೀಂ ಕೋರ್ಟ್ ತನ್ನ ಸೆಪ್ಟೆಂಬರ್ 2017 ರ ಆದೇಶದಲ್ಲಿ ರಾಜ್ಯ ಸರ್ಕಾರಗಳಿಗೆ ನಿಯಮ ರೂಪಿಸಲು 6 ತಿಂಗಳ ಗಡುವು ವಿಧಿಸಿತ್ತು. ಮತ್ತೆಯೂ ರಾಜಕೀಯ ಪ್ರೇರಿತ ನೇಮಕಾತಿ ನಡೆದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸ್ವೀಕರಿಸುವುದಾಗಿ ಎಚ್ಚರಿಸಿತ್ತು. “ಸರ್ಕಾರಗಳ ಕೇರ್ ಲೆಸ್ ಪ್ರವೃತ್ತಿಯಿಂದ ದೊಡ್ಡ ನಷ್ಟ ಅನುಭವಿಸುವುದು ದೇಶವಾಸಿಗಳು ಹಾಗೂ ಪರಿಸರ. ಕಾನೂನು ಹಾಗೂ ಪರಿಸರದ ಬಗೆಗಿನ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿಯೇ ಹಸಿರು ಪೀಠ ತಾನೇ ನಿಯಮ ರೂಪಿಸುವಲ್ಲಿ ಮುಂದಾಗಿದೆ. ಆದರೆ, ನಿಯಮಗಳನ್ನು ರೂಪಿಸುವ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದು. ಹೀಗಾಗಿ, ರಾಜ್ಯ ಸರ್ಕಾರಗಳು ಈ ಕೋರ್ಟ್ ಹೇಳಿದಂತೆ, ವಿವಿಧ ಸಮಿತಿಗಳು ಸಲಹೆ ನೀಡಿದಂತೆ, ನೇಮಕಾತಿ ನಿಯಮಗಳನ್ನು ರೂಪಿಸಬೇಕು,’’ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಕೋರ್ಟಿನ ಆದೇಶಗಳನ್ನು ಗಾಳಿಗೆ ತೂರಿದ ಸರ್ಕಾರ

ಈಗ ರಾಜ್ಯ ಸರ್ಕಾರದ ನಿರ್ಧಾರ ಸುಪ್ರೀಂ ಕೋರ್ಟ್ ನಿರ್ದೇಶನದ ಪೂರ್ಣ ತದ್ವಿರುದ್ಧ ಎಂಬುದಕ್ಕೆ ಇನ್ನೂ ಆಧಾರಗಳಿವೆ. ತನ್ನ ಸೆಪ್ಟೆಂಬರ್ 2017ರ ಆದೇಶದಲ್ಲಿ ಸುಪ್ರೀಂ ಕೋರ್ಟ್ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸ್ ನ ವರದಿಯೊಂದನ್ನು ಉಲ್ಲೇಖ ಮಾಡಿತ್ತು. 2013ರ ಆ ವರದಿಯ ಪ್ರಕಾರ ಹಲವು ರಾಜ್ಯಗಳಲ್ಲಿ ನೇಮಕಗೊಂಡ ಮಾಲಿನ್ಯ ಮಂಡಳಿ ಅಧ್ಯಕ್ಷರ ಹಿನ್ನೆಲೆ ಈಗ ರಾಜ್ಯ ಸರ್ಕಾರ ನೇಮಕಗೊಳಿಸಿದ ವ್ಯಕ್ತಿಯ ಹಿನ್ನೆಲೆಗೆ ಏನೂ ಭಿನ್ನವಾಗಿಲ್ಲ.

ಟಾಟಾ ಇನ್ಸ್ಟಿಟ್ಯೂಟ್ ವರದಿಯ ಸಾರಾಂಶ ಇಲ್ಲಿದೆ ; “ಇತ್ತೀಚೆಗೆ ಕೆಲವು ರಾಜ್ಯ ಸರ್ಕಾರಗಳು ಮಾಲಿನ್ಯ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕಗೊಳಿಸುವಲ್ಲಿ ಅನುಭವಿ, ಅರ್ಹತೆಯುಳ್ಳ, ರಾಜಕೀಯ ತಟಸ್ಥ ವ್ಯಕ್ತಿಯನ್ನು ಆರಿಸುವಲ್ಲಿ ವಿಫಲವಾಗಿರುವುದು ಸ್ಪಷ್ಟ. ಇದಕ್ಕೆ ಉದಾಹರಣೆ ಕರ್ನಾಟಕ (ಬಿಜೆಪಿ ನಾಯಕ – ಡಾ. ವಾಮನ ಆಚಾರ್ಯ), ಹಿಮಾಚಲ ಪ್ರದೇಶ (ಕಾಂಗ್ರೆಸ್ ನ ಮಾಜಿ ಶಾಸಕ), ಉತ್ತರ ಪ್ರದೇಶ (ಸಮಾಜವಾದಿ ಪಕ್ಷದ ನಾಯಕನ ಶಿಫಾರಸಿನೊಂದಿಗೆ ನೇಮಕ), ಅರುಣಾಚಲ ಪ್ರದೇಶ (ಎನ್ ಸಿ ಪಿ ಪಕ್ಷ ಶಾಸಕ) ಮಣಿಪುರ (ಶಾಸಕ), ಮಹಾರಾಷ್ಟ್ರ (ನಿವೃತ್ತ ಸರ್ಕಾರಿ ನೌಕರ; ಐಎಸ್). ಇವೆಲ್ಲವೂ ಸುಪ್ರೀಂ ಕೋರ್ಟ್ ನಿರ್ದೇಶನದ ತದ್ವಿರುದ್ಧದ ನೇಮಕಾತಿಗಳು. ಯಾವುದೇ ಅನರ್ಹ ನಿವೃತ್ತ ಅಧಿಕಾರಿ ಅಥವಾ ರಾಜಕಾರಣಿಗೆ ಕೊಡುಗೆ ನೀಡುವಂತೆ ಮಾಲಿನ್ಯ ಮಂಡಳಿಯ ಅಧ್ಯಕ್ಷರ ಹುದ್ದೆ ನೀಡುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಮತ್ತು ಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ದಕ್ಷ ಅಧಿಕಾರಿಗಳನ್ನು ಪ್ರೋತ್ಸಾಹಿಸುವುದಿಲ್ಲ.’’

ಅಧ್ಯಕ್ಷರ ನೇಮಕಾತಿಯಲ್ಲಿ ಸರ್ಕಾರ ಮಾಡಿರುವುದೇನು?

ಸುಪ್ರೀಂ ಕೋರ್ಟ್ 2017ರಲ್ಲಿ ರಾಜ್ಯ ಸರ್ಕಾರಗಳಿಗೆ ನಿಯಮ ರೂಪಿಸುವಂತೆ ಹೇಳಿತ್ತು. ಮೂಲಗಳ ಪ್ರಕಾರ ನಿಯಮಗಳ ಕರಡು ಸಿದ್ಧವಿದೆ. ಆದರೆ, ಅದರ ಅನುಷ್ಟಾನಕ್ಕೆ ರಾಜಕೀಯ ಇಚ್ಛಾ ಶಕ್ತಿಯ ಕೊರತೆಯಿದೆ. ಇದಕ್ಕೆ ಬಹು ದೊಡ್ಡ ತೊಡಕು ಬಂದಿರುವುದು ಸ್ಥಾಪಿತ ಹಿತಾಸಕ್ತಿ ವಲಯದಿಂದ. ಸುಪ್ರೀಂ ಕೋರ್ಟ್ ಹೇಳಿದಂತೆ ನಿಯಮ ರೂಪಿಸಿ ಅರ್ಹ ವ್ಯಕ್ತಿಯನ್ನು ಮಾಲಿನ್ಯ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದರೆ, ಎಲ್ಲಾ ಕಾನೂನು ಬಾಹಿರ ಕಾಮಗಾರಿಗಳಿಗೆ ನಿರಾಕ್ಷೇಪಣಾ ಪತ್ರ ಪಡೆಯುವುದು ಬಲು ದೊಡ್ಡ ಸಮಸ್ಯೆಯಾದೀತು.

ಸಿ. ಜಯರಾಂ ಅವರ ನೇಮಕಾತಿ ಸಂಬಂಧದ ಕಡತವನ್ನು ಪ್ರತಿಧ್ವನಿ ಮಾಹಿತಿ ಹಕ್ಕಿನಡಿಯಲ್ಲಿ ಕೇಳಿತ್ತು. ಮೊದಲು ನಿರಾಕರಿಸಿದ ಇಲಾಖೆ, ನಂತರ ಮನವಿಯ ಅರ್ಜಿಯಲ್ಲಿ `ಅಪೂರ್ಣ’ ಮಾಹಿತಿ ನೀಡಿತು. ಇದರ ಪ್ರಕಾರ, ಜಯರಾಂ ಅವರನ್ನು ನೇಮಕ ಮಾಡುವ ಸಂದರ್ಭ ರಾಜ್ಯ ಸರ್ಕಾರಕ್ಕೆ 8 ಅರ್ಜಿಗಳು ಸ್ವೀಕೃತವಾಗಿದ್ದವು. ಆದರೆ, ಈ ಪೈಕಿ ಮೂರು ಅರ್ಜಿಗಳು ಸ್ವಯಂ ಮನವಿಗಳಾದರೆ, ಉಳಿದವು ರಾಜಕೀಯ ವ್ಯಕ್ತಿಗಳ ಶಿಫಾರಸಿನೊಂದಿಗೆ ಸ್ವೀಕೃತವಾದವು. ಆದರೆ, ಇವುಗಳಲ್ಲಿ ಜಯರಾಂ ಅವರ ಅರ್ಜಿ ಇರಲಿಲ್ಲ. ಆದರೂ ಸರ್ಕಾರ ಇದ್ದಕ್ಕಿದ್ದಂತೆ ಮಂಡಳಿಯ ಅಧ್ಯಕ್ಷರನ್ನಾಗಿ ಜಯರಾಂ ಅವರನ್ನು ಮಾರ್ಚ್ 5ರಂದು ನೇಮಕ ಮಾಡಿತು. ಅಪೂರ್ಣ ಮಾಹಿತಿ ಒದಗಿಸಲಾದ ಹಿನ್ನೆಲೆಯಲ್ಲಿ ಮತ್ತೆ ಮಾಹಿತಿ ಹಕ್ಕಿನಡಿಯಲ್ಲಿ ಜಯರಾಂ ನೇಮಕಾತಿಯ ಪೂರ್ಣ ದಾಖಲೆ, ಟಿಪ್ಪಣಿ, ನಡೆದ ಚರ್ಚೆ, ಎಲ್ಲವನ್ನೂ ಕೇಳಿದಾಗ ಅರಣ್ಯ, ಪರಿಸರ ಇಲಾಖೆ ಒದಗಿಸಿದ್ದು 3 ಪುಟಗಳ ದಾಖಲೆ. ಒಂದು, ದಿನಾಂಕವೇ ನಮೂದಾಗದೇ ಇರುವ ಜಯರಾಂ ಅವರ ಅರ್ಜಿಯ ಒಂದು ಪ್ರತಿ, ಮಾರ್ಚ್ 5, 2019ರ ಸರ್ಕಾರದ ಆದೇಶದ ಪ್ರತಿ ಹಾಗೂ ಜಯರಾಂ ಅವರ ಬಯೊಡೆಟಾವನ್ನು ಕೊಟ್ಟು ಕೈತೊಳೆದುಕೊಂಡಿತ್ತು.

ಮೂರೇ ಮೂರು ತಿಂಗಳು ಮಾಲಿನ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಜಯರಾಂ ಅವರನ್ನು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸುಧಾಕರ್ ಅವರಿಗೆ ಮಾಲಿನ್ಯ ಮಂಡಳಿ ಬಿಟ್ಟುಕೊಟ್ಟಿದ್ದಾರೆ. ಇದೂ ಕೂಡ ಯಾವುದೇ ಯೋಚನೆ (ಪರಿಸರ ಸಂಬಂಧ!) ಇಲ್ಲದೇ ಮಾಡಿರುವ ನಿರ್ಧಾರ ಅನ್ನುವುದಕ್ಕೆ ಆದೇಶದ ಒಕ್ಕಣೆಯೇ ಸಾಕ್ಷಿ. “ಡಾ. ಕೆ ಸುಧಾಕರ್, ಮಾನ್ಯ ವಿಧಾನಸಭಾ ಸದಸ್ಯರು, ಪರೇಸಂದ್ರ ಗ್ರಾಮ ಮತ್ತು ಅಂಚೆ, ಮುಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರನ್ನು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಮುಂದಿನ ಆದೇಶದವರೆಗೆ ಈ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಿ ಆದೇಶ ಹೊರಡಿಸಿತ್ತು.

ಆದರೆ, ಬದಲಾದ ರಾಜಕೀಯ ಸನ್ನಿವೇಶಗಳು ಮತ್ತು ತಮ್ಮ ನೇಮಕಾತಿಯನ್ನು ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ಕೇಸುಗಳು ಬೀಳತೊಡಗಿದ್ದರಿಂದ ಸುಧಾಕರ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದರು.

ಇದೀಗ, ಬಿಜೆಪಿ ಸರ್ಕಾರ ಡಾ. ಎಂ.ಸುಧೀಂದ್ರ ರಾವ್ ಎಂಬುವರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಿ ಅಧಿಕೃತ ಆದೇಶವನ್ನೂ ಹೊರಡಿಸಿದೆ. ಹಾಗಾದರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕು ಮತ್ತು ಅದರಂತೆಯೇ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳನ್ನು ನೀಡಿದ್ದವು ಹಾಗೂ ಇದಕ್ಕೆ ಗಡುವನ್ನೂ ವಿಧಿಸಿದ್ದವು.

ಆದರೆ, ಇದುವರೆಗೆ ಸರ್ಕಾರ ನ್ಯಾಯಾಲಯದ ಆದೇಶಗಳನ್ವಯ ಮಾರ್ಗಸೂಚಿಗಳನ್ನೂ ಸಿದ್ಧಪಡಿಸಿಲ್ಲ. ಬದಲಿಗೆ ತಮಗೆ ಬೇಕಾದವರನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೇಮಕ ಮಾಡಿ ಮಂಡಳಿಯನ್ನು ಮತ್ತಷ್ಟು `ಮಲೀನ’ ಮಾಡುತ್ತಿರುವುದು ವಿಪರ್ಯಾಸ.

RS 500
RS 1500

SCAN HERE

[elfsight_youtube_gallery id="4"]

don't miss it !

ಈ ನೆಲದ ಕಾನೂನು ಗೌರವಿಸಲೇಬೇಕು,  ಪ್ರತಿಭಟನೆ ಹೆಸರಿನಲ್ಲಿ ದಾಂಧಲೆ ಸರಿಯಲ್ಲ : ಸಚಿವ ಸುಧಾಕರ್‌
ಕರ್ನಾಟಕ

ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ನಾಳೆ ವಿಶೇಷ ಜಾಗೃತಿ ಕಾರ್ಯಕ್ರಮ: ಸಚಿವ ಡಾ.ಕೆ.ಸುಧಾಕರ್‌

by ಪ್ರತಿಧ್ವನಿ
August 12, 2022
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ತೆರೆ; ಮೈದಾನ ಸರ್ಕಾರದ ಸ್ವತ್ತು ಎಂದು‌ ಘೋಷಣೆ
ಕರ್ನಾಟಕ

ಈದ್ಗಾ ಮೈದಾನದಲ್ಲಿ ರಾಜ್ಯ ಸರಕಾರದಿಂದಲೇ ಧ್ವಜಾರೋಹಣ!

by ಪ್ರತಿಧ್ವನಿ
August 11, 2022
ಲೇಖಕ ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆಸಿದ 24 ವರ್ಷದ ವ್ಯಕ್ತಿ ಯಾರು?
ವಿದೇಶ

ಲೇಖಕ ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆಸಿದ 24 ವರ್ಷದ ವ್ಯಕ್ತಿ ಯಾರು?

by ಪ್ರತಿಧ್ವನಿ
August 13, 2022
ಸ್ವಾತಂತ್ರ್ಯ ಸೇನಾನಿ ʼಟಿಪ್ಪು ಸುಲ್ತಾನ್‌ʼ ಬ್ಯಾನರ್‌ ಹರಿದ ಕಿಡಿಗೇಡಿಗಳು
ಕರ್ನಾಟಕ

ಸ್ವಾತಂತ್ರ್ಯ ಸೇನಾನಿ ʼಟಿಪ್ಪು ಸುಲ್ತಾನ್‌ʼ ಬ್ಯಾನರ್‌ ಹರಿದ ಕಿಡಿಗೇಡಿಗಳು

by ಪ್ರತಿಧ್ವನಿ
August 14, 2022
ಧ್ವಜ ಕೊಡೋಕೆ ನೀವ್ಯಾರು? ನಮ್ಮ ಹತ್ರನೇ ಇದೆ: ಬಿಜೆಪಿ ಕಾರ್ಯಕರ್ತರಿಗೆ ತರಾಟೆ
ವಿಡಿಯೋ

ಧ್ವಜ ಕೊಡೋಕೆ ನೀವ್ಯಾರು? ನಮ್ಮ ಹತ್ರನೇ ಇದೆ: ಬಿಜೆಪಿ ಕಾರ್ಯಕರ್ತರಿಗೆ ತರಾಟೆ

by ಪ್ರತಿಧ್ವನಿ
August 10, 2022
Next Post
ಮಂತ್ರಿಗಳಾಗದ ನಿರಾಶೆಯಲ್ಲಿ ಹೊಸ ವರ್ಷ ಸ್ವಾಗತಿಸುತ್ತಿರುವ ನೂತನ ಶಾಸಕರು

ಮಂತ್ರಿಗಳಾಗದ ನಿರಾಶೆಯಲ್ಲಿ ಹೊಸ ವರ್ಷ ಸ್ವಾಗತಿಸುತ್ತಿರುವ ನೂತನ ಶಾಸಕರು

‘ಇಂದಿನ ಮಕ್ಕಳಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಿದೆ’

‘ಇಂದಿನ ಮಕ್ಕಳಿಂದ ನಾವು ಪ್ರಜಾಪ್ರಭುತ್ವದ ಪಾಠ ಕಲಿಯಬೇಕಿದೆ’

ನ್ಯಾ.ಗೊಗೊಯ್ ಪರಂಪರೆಯೇ ಸಿಜೆಐ ಬೊಬ್ಡೆ ಅವರಿಗೆ ದೊಡ್ಡ ಸವಾಲು!

ನ್ಯಾ.ಗೊಗೊಯ್ ಪರಂಪರೆಯೇ ಸಿಜೆಐ ಬೊಬ್ಡೆ ಅವರಿಗೆ ದೊಡ್ಡ ಸವಾಲು!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist